ಮತಾಂತರ ನಿಷೇಧ ವಿಧೇಯಕ; ಗೃಹ ಇಲಾಖೆಯಲ್ಲಿ ಮಾಹಿತಿಯೇ ಇಲ್ಲ

ಬೆಂಗಳೂರು; ಮತಾಂತರ ನಿಷೇಧ ಮಸೂದೆ ಮಂಡನೆಗೂ ಮುನ್ನ ಮಸೂದೆ ಜಾರಿಯಿಂದಾಗುವ ಸಾಮಾಜಿಕ ಪರಿಣಾಮ, ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಬಲವಂತದ ಮತಾಂತರ ಪ್ರಕರಣಗಳ ಅಂಕಿ ಸಂಖ್ಯೆ ಸೇರಿದಂತೆ ವಿವಿಧ ಆಯಾಮಗಳಿಂದಲೂ ಗೃಹ ಇಲಾಖೆಯಲ್ಲಿ ಚರ್ಚೆಗಳೇ ನಡೆದಿಲ್ಲ!

ರಾಜ್ಯದಲ್ಲಿ ಬಲವಂತ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿರುವುದರಿಂದಲೇ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಸಮರ್ಥಿಸಿಕೊಂಡಿದ್ದಾರಾದರೂ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಈ ವಿಧೇಯಕ ಕುರಿತಂತೆ ಯಾವ ಮಾಹಿತಿಯೂ ಲಭ್ಯವಿಲ್ಲ.

ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಕುರಿತಂತೆ ಒಳಾಡಳಿತ ಇಲಾಖೆಯಲ್ಲಿ ಅಧಿಕಾರಿಗಳೊಂದಿಗೆ ನಡೆದಿರುವ ಚರ್ಚೆಗಳು, ಸಭೆಗಳು ಸೇರಿದಂತೆ ಒಟ್ಟಾರೆ ಇಡೀ ಪ್ರಕ್ರಿಯೆ ಕುರಿತು ತೆರೆದಿರುವ ಸಮಗ್ರ ಕಡತಕ್ಕಾಗಿ ‘ದಿ ಫೈಲ್‌’ 2021ರ ಡಿಸೆಂಬರ್‌ 23ರಂದು ಸಲ್ಲಿಸಿದ್ದ ಆರ್‌ಟಿಐಗೆ ಉತ್ತರಿಸಿರುವ ಇಲಾಖೆಯ ಕಾನೂನು ಸುವ್ಯವಸ್ಥೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ ಜೆ ಅವರು ‘ತಾವು ಕೋರಿರುವ ಮಾಹಿತಿಯು ಕಾನೂನು ಮತ್ತು ಸುವ್ಯವಸ್ಥೆ ಶಾಖೆಯಲ್ಲಿ ಪರಿಶೀಲಿಸಲಾಗಿ ಯಾವುದೇ ಮಾಹಿತಿಯು ಲಭ್ಯವಿರುವುದಿಲ್ಲ,’ ಎಂದು 2022 ಜನವರಿ 14ರಂದು ಉತ್ತರಿಸಿದ್ದಾರೆ.

‘ರಾಜ್ಯದ ವಿವಿಧ ಭಾಗಗಳಲ್ಲಿ ಆಮಿಷಗಳು, ಬಲ ಪ್ರಯೋಗ, ದುಮಾರ್ಗಗಳ ಮೂಲಕ ಮತಾಂತರ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆದಿರುವ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುತ್ತವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗಲಿದೆ. ಇದು ಸಾರ್ವಜನಿಕ ರಕ್ಷಣೆ ಹೊತ್ತಿರುವ ಸಿಬ್ಬಂದಿಗಳಿಗೆ ಸವಾಲಿನ ಕೆಲಸವೂ ಆಗಿರುತ್ತದೆ,’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟಿಪ್ಪಣಿ ಹೊರಡಿಸಿದ್ದರು.

ಸಾಮಾಜಿಕ ಕ್ಷೋಭೆ, ಕಾನೂನು, ಸುವ್ಯವಸ್ಥೆ, ಸಮಾಜದ ಶಾಂತಿಗೆ ಧಕ್ಕೆ ಉಂಟಾಗಲಿದೆ ಎಂದು ಮತಾಂತರ ನಿಷೇಧ ಮಸೂದೆಯನ್ನು ಪ್ರಸ್ತಾವನೆ ಸಲ್ಲಿಸಿರುವ ಒಳಾಡಳಿತ ಇಲಾಖೆಯಲ್ಲಿಯೇ ಈ ಸಂಬಂಧ ಯಾವುದೇ ಮಾಹಿತಿ ಇಲ್ಲವೆಂದು ಕಾನೂನು ಸುವ್ಯವಸ್ಥೆ ಶಾಖೆಯೇ ಉತ್ತರಿಸಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ರಾಜ್ಯದಲ್ಲಿ ದೊಡ್ಡಪ್ರಮಾಣದಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿದೆ ಎಂದು ಹೇಳುತ್ತಿರುವ ಸರ್ಕಾರವು ಈ ಬಗ್ಗೆ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮತ್ತು ಸಾಮಾಜಿಕ ಕ್ಷೋಭೆಗೆ ಕಾರಣವಾಗಿದೆಯೇ, ಸಮಾಜದಲ್ಲಿ ಅಶಾಂತಿ ಉಂಟಾಗಿದೆಯೆ ಎಂಬ ಕುರಿತು ಅಧಿಕಾರಿಗಳೊಂದಿಗೆ, ಪೊಲೀಸ್‌ ಮಹಾನಿರ್ದೇಶಕರು, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಗಳೂ ಒಳಾಡಳಿತ ಇಲಾಖೆಯಲ್ಲಿ ನಡೆದಿಲ್ಲ ಎಂಬುದಕ್ಕೆ ಸರ್ಕಾರ ಕೊಟ್ಟಿರುವ ಉತ್ತರವೇ ಉತ್ತಮ ನಿದರ್ಶನವಾಗಿದೆ.

ರಾಜ್ಯದಲ್ಲಿ 2018, 2019, 2020, 2021ರ ಫೆಬ್ರುವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿದೆ. ವಿಶೇಷವೆಂದರೆ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ತರಲು ವಿಧಾನಸಭೆ ಅಧಿವೇಶನದಲ್ಲಿ ಕೂಗೆಬ್ಬಿಸಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು 2021ರ ಫೆಬ್ರುವರಿ 2ರಂದು ಕೇಳಿದ್ದ ಪ್ರಶ್ನೆಗೆ ಅಂದಿನ ಗೃಹ ಸಚಿವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅಂಕಿ ಅಂಶಗಳನ್ನು ಸದನಕ್ಕೆ ಉತ್ತರಿಸಿದ್ದರು.

ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕಳೆದ 10, 15 ವರ್ಷಗಳಿಂದ ಬಲವಂತವಾಗಿ ಜನರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಸದನಲ್ಲಿ ಎತ್ತರಿಸಿದ ದನಿಯಲ್ಲಿ ಮಾತನಾಡಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಗೂಳಿಹಟ್ಟಿ ಶೇಖರ್‌ ಅವರ ಸ್ವಕೇತ್ರ ಹೊಸದುರ್ಗ ತಾಲೂಕಿನಲ್ಲಿ ಯಾವುದೇ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರವನ್ನು ಮಾಡಿದ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಲಿಖಿತ ಉತ್ತರ ನೀಡಿದ್ದನ್ನು ಸ್ಮರಿಸಬಹುದು.

ಮತಾಂತರ ಪ್ರಕರಣಗಳ ವಿವರ

2018ರಲ್ಲಿ 3, 2019ರಲ್ಲಿ 7, 2020ರಲ್ಲಿ 5, 2021ರಲ್ಲಿ 1 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2018ರಲ್ಲಿ 1, 2019ರಲ್ಲಿ 1, 2020ರಲ್ಲಿ 2 ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಈ ಮೂರೂ ವರ್ಷದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಮೈಸೂರು ಜಿಲ್ಲೆಯಲ್ಲಿ 2020ರಲ್ಲಿ 1 ಪ್ರಕರಣ ಮಾತ್ರ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2019ರಲ್ಲಿ 1, 2020ರಲ್ಲಿ 2 ಮತ್ತು 2021ರಲ್ಲಿ 1 ಪ್ರಕರಣ, ರಾಮನಗರದಲ್ಲಿ 2019ರಲ್ಲಿ 2, ಹಾಸನ ಜಿಲ್ಲೆಯಲ್ಲಿ 2018ರಲ್ಲಿ 2, ಧಾರವಾಡದಲ್ಲಿ 2019ರಲ್ಲಿ 1, ಉಡುಪಿಯಲ್ಲಿ 2019ರಲ್ಲಿ 1 ಪ್ರಕರಣವು ದಾಖಲಾಗಿದೆ ಎಂಬುದು ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದರು.

the fil favicon

SUPPORT THE FILE

Latest News

Related Posts