ಸಮವಸ್ತ್ರ ಕಡ್ಡಾಯವಿಲ್ಲದಿದ್ದರೂ ವಸ್ತ್ರಸಂಹಿತೆ ನಿಗದಿ; ಹಿಜಾಬ್‌ ಪ್ರಕರಣದಲ್ಲಿ ನಿರ್ದೇಶಕರ ಸೂಚನೆ ಉಲ್ಲಂಘನೆ

PHOTO CREDIT; TheNewsMinute

ಬೆಂಗಳೂರು; ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮವಸ್ತ್ರವನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿಲ್ಲ. ಆದರೂ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳು ತಮ್ಮ ಸಂಸ್ಥೆಯ ಹಂತದಲ್ಲಿ ಸಮವಸ್ತ್ರ ಮತ್ತು ವಸ್ತ್ರಸಂಹಿತೆಯನ್ನು ನಿಗದಿಗೊಳಿಸಿ ಅನೇಕ ವರ್ಷಗಳಿಂದ ಅನುಷ್ಠಾನಗೊಳಿಸುತ್ತಿವೆ.

 

ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿದ ಕಾರಣಕ್ಕೆ ತರಗತಿಗಳಿಗೆ ಪ್ರವೇಶ ನಿರಾಕರಿಸಿರುವ ಪ್ರಕರಣದ ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಸ್ತ್ರಸಂಹಿತೆ ಮತ್ತು ಸಮವಸ್ತ್ರ ಕುರಿತು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಅಧಿಕೃತವಾಗಿ ನಿರ್ದೇಶನ ನೀಡಲು ಮುಂದಾಗಿರುವ ಆದೇಶದಲ್ಲಿ ಪದವಿಪೂರ್ವ ಕಾಲೇಜುಗಳಲ್ಲಿ ಯಾವುದೇ ಸಮವಸ್ತ್ರ, ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂಬ ಅಂಶವೂ ಪ್ರಸ್ತಾಪವಾಗಿದೆ.

 

ಹಿಜಾಬ್‌ ಧರಿಸುವ ಬಗೆಗಿನ ನಿರ್ದೇಶನ ನೀಡುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯು ಸಿದ್ಧಪಡಿಸಿರುವ ಆದೇಶದ (ಇಪಿ; 14 ಎಸ್‌ಎಚ್‌ಎಚ್‌ 2022) ಕರಡು ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಯಾವುದೇ ಪದವಿಪೂರ್ವ ಕಾಲೇಜುಗಳಲ್ಲಿ ಯಾವುದೇ ಹೊಸ ನೀತಿಯ ವಸ್ತ್ರ ಸಂಹಿತೆಯನ್ನು ಅಳವಡಿಸಬಾರದು ಮತ್ತು ಸಂಸ್ಥೆಯ ಹಂತದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಿಗದಿಗೊಳಿಸಿರುವ ಸಮವಸ್ತ್ರ, ವಸ್ತ್ರಸಂಹಿತೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶ ಹೊರಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.

 

‘ಇದೇ ರೀತಿಯ ಪ್ರಕರಣಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಪದವಿಪೂರ್ವ ಕಾಲೇಜುಗಳಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು. ಹಾಗೆಯೇ ಯಾವುದೇ ಹೊಸ ನೀತಿಯ ವಸ್ತ್ರಸಂಹಿತೆಯನ್ನು ಅಳವಡಿಸದೇ ಯಥಾಸ್ಥಿತಿಯನ್ನು ಮುಂದುವರೆಸಬೇಕು,’ ಎಂದು ಆದೇಶದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಸರ್ಕಾರವು ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿರುವುದಿಲ್ಲ ಎಂದು ಸರ್ಕಾರವು ಆದೇಶದಲ್ಲಿ ಹೇಳಿದೆಯಾದರೂ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಮ್ಮದೇ ಆಯ್ಕೆಯ ವಸ್ತ್ರ ಧರಿಸಿ ಬರಲು ಒತ್ತಾಯಿಸುತ್ತಾ ಗೊಂದಲ ಸೃಷ್ಟಿಸುತ್ತಿದೆ ಎಂದೂ ಅದೇಶದಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.

 

ಉಡುಪಿ ಜಿಲ್ಲೆಯ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರ ಮತ್ತು ಹಿಜಾಬ್‌ ಧರಿಸುವ ಬಗೆಗೆ ನಿರ್ದೇಶನ ನೀಡುವ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಅವರು 2022ರ ಜನವರಿ 17ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯು ಸಭೆ ನಡೆಸಿದೆ.

 

ಹಿಜಾಬ್‌ ಧರಿಸುವುದು ಮತ್ತು ಸಮವಸ್ತ್ರದ ಕುರಿತು ‘ಪದವಿಪೂರ್ವ ಶಿಕ್ಷಣ ಇಲಾಖೆ 2021-22ರ ದಾಖಲಾತಿ ಮಾರ್ಗಸೂಚಿಯ ಅಧ್ಯಾಯ 4ರ ಪ್ರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ. ಆದ್ದರಿಂದ ಈ ಕೂಡಲೇ ವಿದ್ಯಾರ್ಥಿನಿಯರನ್ನು ತರಗತಿಗೆ ಸೇರ್ಪಡೆಗೊಳಿಸಲು ಸೂಚಿಸಿದೆ. ಒಂದು ವೇಳೆ ತರಗತಿಗಳಿಗೆ ಸೇರ್ಪಡೆಗೊಳಿಸದಿದ್ದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು,’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಸೂಚನೆ ಮೇರೆಗೆ ಉಡುಪಿ ಜಿಲ್ಲೆಯ ಉಪ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ಕಾಲೇಜಿನ ಪ್ರಾಂಶುಪಾಲರು ಪಾಲಿಸಿರಲಿಲ್ಲ ಎಂಬ ಅಂಶವನ್ನು ಆದೇಶದ ನಡವಳಿಯಲ್ಲಿ ಉಲ್ಲೇಖಿಸಿರುವುದು ಕರಡು ಆದೇಶದಿಂದ ತಿಳಿದು ಬಂದಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶವನ್ನು ಪ್ರಾಂಶುಪಾಲರು ಪಾಲಿಸದೇ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದೇ ಅವರ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಇಲಾಖೆಯು ನಿರ್ದೇಶಕರ ಆದೇಶವನ್ನು ಪಾಲಿಸಲು ಮತ್ತು ವಿದ್ಯಾರ್ಥಿನಿಯರನ್ನು ತರಗತಿಗಳಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್‌ ಎನ್‌ ಅವರು ನಿರ್ದೇಶನ ನೀಡಿರುವುದು ಆದೇಶದಿಂದ ಗೊತ್ತಾಗಿದೆ.

 

ಆದೇಶದಲ್ಲಿರುವುದೇನು?

 

ಸರ್ಕಾರವು ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ, ಕಡ್ಡಾಯಗೊಳಿಸಿರುವುದಿಲ್ಲ. ಆದರೂ ಸರ್ಕಾರಿ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳು ತಮ್ಮ ಸಂಸ್ಥೆಯ ಹಂತದಲ್ಲಿ ಸದುದ್ದೇಶ ಮತ್ತು ಶೈಕ್ಷಣಿಕ ಹಿತದೃಷ್ಟಿಗಳಿಂದ ಸಮವಸ್ತ್ರ/ವಸ್ತ್ರಸಂಹಿತೆಯನ್ನು ನಿಗದಿಗೊಳಿಸಿ ಅನೇಕ ವರ್ಷಗಳಿಂದ ಅನುಷ್ಠಾನಗೊಳಿಸುತ್ತಿವೆ ಎಂದು ಆದೇಶದಲ್ಲಿ ಪ್ರಸ್ತಾಪಿಸಿದೆ.

 

‘ಕೆಲವು ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ವಸ್ತ್ರವನ್ನು ತೊಡಲು ಅವಕಾಶ ಕಲ್ಪಿಸಲು ಒತ್ತಾಯ ಮಾಡುತ್ತಾ ಕಾಲೇಜಿನಲ್ಲಿ ಅನಗತ್ಯವಾದ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಈ ರೀತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮದೇ ಆಯ್ಕೆಯ ವಸ್ತ್ರವನ್ನು ಧರಿಸಲು ಅವಕಾಶ ನೀಡಲು ಒತ್ತಾಯಿಸಿದ್ದಲ್ಲಿ ಮತ್ತುಅದನ್ನು ಕಾಲೇಜುಗಳು ಒಪ್ಪಿಕೊಂಡಲ್ಲಿ ಕಾಲೇಜುಗಳಲ್ಲಿ ಗೊಂದಲ, ಅಶಿಸ್ತುಗಳು ಹೆಚ್ಚಾಗುತ್ತದೆ. ಇದು ಕೆಲವೊಮ್ಮೆ ವಿದ್ಯಾರ್ಥಿಗಳು ಸಭ್ಯತೆಯನ್ನು ಮೀರಿದ ಉಡುಗೆಗಳನ್ನು ತೊಡಲು ಪ್ರಚೋದಿಸುವ ಸಾಧ್ಯತೆಯೂ ಇರುತ್ತದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಅಲ್ಲದೆ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿರುವ ಜೊತೆ ಇತರೆ ಎಲ್ಲಾ ವಿದ್ಯಾರ್ಥಿಗಳ ಬೋಧನೆ-ಕಲಿಕಾ ಚಟುವಟಿಕೆಗಳಿಗೆ ತೊಂದರೆಯಾಗಬಹುದು ಎಂದೂ ಆದೇಶದಲ್ಲಿ ಹೇಳಲಾಗಿದೆ.

 

 

ತಮ್ಮದೇ ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡಲು ಒತ್ತಾಯಿಸುತ್ತಿರುವ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ಪಡೆಯುವ ವೇಳೆಯಲ್ಲಿಯೇ ಕಾಲೇಜು ನಿಗದಿಗೊಳಿಸಿದ್ದ ಸಮವಸ್ತ್ರ/ವಸ್ತ್ರಸಂಹಿತೆಯ ಕುರಿತು ಮಾಹಿತಿ ಇತ್ತು. ಅದನ್ನು ಒಪ್ಪಿಯೇ ಸ್ವ ಇಚ್ಛೆಯಿಂದ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ. ಆದರೆ ಇಷ್ಟು ದಿನಗಳು ಇಲ್ಲದ ಗೊಂದಲವನ್ನು ಈಗ ಹೊಸದಾಗಿ ಸೃಷ್ಟಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳಿತಲ್ಲ ಎಂದು ಆದೇಶದ ನಡವಳಿಯಲ್ಲಿ ವಿವರಿಸಲಾಗಿದೆ.

 

ಹಿಜಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರ ಹಾಕಿರುವುದು ಖಂಡನೀಯ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಮುಕ್ತವಾಗಿ ಧರ್ಮ ಪ್ರತಿಪಾದಿಸುವ, ಆಚರಿಸುವ ಹಕ್ಕು ನೀಡಲಾಗಿದೆ. ಮುಸ್ಲಿಂ ಮಹಿಳೆ ಹಿಜಾಬ್ ಧರಿಸುವುದು ಧಾರ್ಮಿಕ ನಂಬಿಕೆಯಾಗಿದ್ದು, ಹಕ್ಕನ್ನು ಕಸಿದುಕೊಳ್ಳಬಾರದು’ ಎಂದು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts