ಪ್ರಧಾನಿಯ ಶ್ಲಾಘನೆಗೊಳಗಾದರೂ ಕಾಮೇಗೌಡರ ಕುರಿತಾದ ವರದಿ ವರ್ಷ ಕಳೆದರೂ ಸಲ್ಲಿಕೆಯಾಗಿಲ್ಲ

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್‌ ಕಿ ಬಾತ್‌ನಲ್ಲಿ ಶ್ಲಾಘನೆಗೊಳಗಾಗಿದ್ದ ಮಂಡ್ಯ ಜಿಲ್ಲೆಯ ರೈತ ಮತ್ತು ಜಲ ಕ್ರಾಂತಿ ರೂವಾರಿ ಕಾಮೇಗೌಡ ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ ಸೇರಿದಂತೆ ಮತ್ತಿತರೆ ವಿವರಗಳನ್ನೊಳಗೊಂಡ ವರದಿಯು ಕಳೆದ 2 ವರ್ಷದಿಂದಲೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ತಮ್ಮ ಜಮೀನು ಮತ್ತು ಸಮೀಪದ ಜಾಗದಲ್ಲಿ 16 ಸಣ್ಣ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ನಂತರ ಅವರ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ, ಮತ್ತಿತರೆ ವಿವರಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವರದಿ ಕೇಳಿ ಮಂಡ್ಯ ಜಿಲ್ಲಾಧಿಕಾರಿಗೆ 2020 ಮತ್ತು 2021ರಲ್ಲಿ ಒಟ್ಟು 5 ಅರೆ ಸರ್ಕಾರಿ ಪತ್ರಗಳನ್ನು ಬರೆದಿತ್ತು.

ಪತ್ರ ಬರೆದು 2 ವರ್ಷವಾದರೂ ಮಂಡ್ಯ ಜಿಲ್ಲಾಧಿಕಾರಿ ಈ ಸಂಬಂಧ ಯಾವುದೇ ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು 2021 ಡಿಸೆಂಬರ್‌ನಲ್ಲಿ 6ನೇ ಅರೆ ಸರ್ಕಾರಿ ಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಅವರಿಗೆ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಾಮೇಗೌಡರ ಅವರು ಕೈಗೊಂಡಿರುವ ಪರಿಸರ ಪೂರಕ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಅವರ ಮತ್ತು ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ, ಮತ್ತಿತರೆ ವಿವರಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಕಳಿಸಿಕೊಡಬೇಕು ಎಂದು 2020ರ ಆಗಸ್ಟ್‌ 3, ಸೆ.21, ನವೆಂಬರ್‌ 21, 2021ರ ಜನವರಿ 5 ಮತ್ತು ಮಾರ್ಚ್ 20ರಂದು ಅರೆ ಸರ್ಕಾರಿ ಪತ್ರಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಕೋರಿದ್ದರು. ಆದರೆ 2021ರ ಡಿಸೆಂಬರ್‌ ಅಂತ್ಯದವರೆಗೂ ಮಂಡ್ಯ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ವರದಿಯನ್ನೇ ಸಲ್ಲಿಸಿರಲಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಪತ್ರ ಬರೆದಿದ್ದರು.

‘ಪ್ರಧಾನಮಂತ್ರಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಉಲ್ಲೇಖಿಸಲ್ಪಟ್ಟ ವ್ಯಕ್ತಿಯ ಬಗ್ಗೆ ಸರ್ಕಾರದ ಹಂತದಲ್ಲಿ ಮುಂದಿನ ಪರಿಶೀಲನೆಯ ಸಲುವಾಗಿ ಅವಶ್ಯವಿರುವ ವರದಿಯನ್ನು ನೀಡಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಸ್ಪಂದಿಸದಿರುವುದು ವಿಷಾದಕರ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಅಲ್ಲದೆ ‘ಈಗಲಾದರೂ ಸರ್ಕಾರದಿಂದ ಕೋರಿರುವ ವರದಿಯನ್ನು ಒಂದು ವಾರದೊಳಗೆ ನೀಡಲು ನಿಮ್ಮ ವೈಯಕ್ತಿಕ ಗಮನವನ್ನು ಹರಿಸುವಂತೆ ತಿಳಿಯಲಿಚ್ಛಿಸುತ್ತೇನೆ. ಇಲ್ಲವಾದಲ್ಲಿ ವರದಿಯು ಸ್ವೀಕೃತವಾಗದ ಮಾಹಿತಿಯನ್ನು ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ,’ ಎಂದೂ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ 83 ವರ್ಷದ ಕಾಮೇಗೌಡ ಅವರ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಮನದ ಮಾತು’ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಮಾತನಾಡಿದ ಅವರು, ಕಾಮೇಗೌಡರ ಕೆಲಸವನ್ನು ಕೊಂಡಾಡಿದ್ದರು.

ಮೋದಿ ಹೇಳಿದ್ದೇನು?

ಕರ್ನಾಟಕದ ಮಂಡ್ಯದಲ್ಲಿ 80-85 ವಯೋಮಾನದ ಒಬ್ಬ ಹಿರಿಯರಿದ್ದಾರೆ. ಅವರು ಕಾಮೇಗೌಡ, ಅವರೊಬ್ಬ ಸಾಮಾನ್ಯ ರೈತ. ಆದರೆ ಅವರ ವ್ಯಕ್ತಿತ್ವ ಅಸಾಧಾರಣ. ಅವರು ಮಾಡಿರುವ ಕೆಲಸವನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. 80-85 ವರ್ಷದ ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಆದರೆ, ಜತೆಜತೆಗೇ ತಮ್ಮ ಜಮೀನಿನಲ್ಲಿ ಹೊಸ ಕೆರೆಯೊಂದನ್ನು ನಿರ್ಮಿಸುವ ಕೈಂಕರ್ಯವನ್ನೂ ಮಾಡುತ್ತಾರೆ.

ಅವರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಬಯಸುತ್ತಾರೆ. ಜಲ ಸಂರಕ್ಷಣೆಗಾಗಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸುವ ಕಾಯಕದಲ್ಲಿ ಅವರು ತಲ್ಲೀನರಾಗಿರುತ್ತಾರೆ. 80-85 ವಯೋಮಾನದ ಕಾಮೇಗೌಡರು ಇಲ್ಲಿಯವರೆಗೆ ಸುಮಾರು 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಇವೆಲ್ಲವನ್ನೂ ಅವರು ತಮ್ಮ ಪ್ರಯತ್ನದಿಂದ, ಪರಿಶ್ರಮದಿಂದಲೇ ನಿರ್ಮಿಸಿದ್ದಾರೆ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು. ಇವರ ಕೆರೆಗಳಿಂದ ಇಂದು ಆ ಇಡೀ ಪ್ರದೇಶಕ್ಕೆ ಹೊಸ ಜೀವನ ಸಿಕ್ಕಿದೆ ಎಂದು ಅಭಿನಂದಿಸಿದ್ದರು.

‘ನೀರಿನ ಕೊರತೆಯನ್ನು ನೀಗಿಸಲು ಗೌಡರು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಲು ಶುರು ಮಾಡಿದರು. ಕಠಿಣ ಪರಿಶ್ರಮದ ಮೂಲಕ ತಮ್ಮ ಬೆವರು ಹರಿಸಿದರು. ಈ ಮೂಲಕ ಬೃಹತ್ ಪ್ರಮಾಣದ ನೀರು ಸಂಗ್ರಹಿಸಿದರು. ಅವರು ನಿರ್ಮಿಸಿದ ಕೆರೆಗಳು ಗಾತ್ರದಲ್ಲಿ ಚಿಕ್ಕವಾದರೂ, ಅವರ ಪರಿಶ್ರಮ ಮಾತ್ರ ದೊಡ್ಡದು. ಅವರ ಈ ಯತ್ನದಿಂದ ಇಡೀ ಪ್ರದೇಶದ ಸ್ವರೂಪವೇ ಬದಲಾಗಿದೆ’ ಎಂದು ಪ್ರಧಾನಿ ಶ್ಲಾಘಿಸಿದ್ದನ್ನು ಸ್ಮರಿಸಬಹುದು.

‘ಕುರಿಗಳಿಗೆ ನೀರಿನ ಅಭಾವ ಕಾಡಿತು. ಕಾಮೇಗೌಡರು ಕುರಿಗಳಿಗಾಗಿ ಕೆರೆ ಕಟ್ಟಿಸಲು ಮುಂದಾದರು. ಮಳೆಯಿಂದ ಅವು ತುಂಬಿದವು. ಬರಗಾಲದಲ್ಲೂ ಕೆರೆಗಳು ನೀರಿನಿಂದ ಕಂಗೊಳಿಸುತ್ತಿವೆ. ನಮ್ಮ ಪುಟ್ಟ ಸಹಾಯ ಪರಿಸರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದು. ದೇಶದ ಹಲವು ಜನರು ಇಂತಹ ಅಭೂತಪೂರ್ವ ಕೆಲಸಗಳನ್ನು ಮಾಡುತ್ತಿದ್ದಾರೆಎಂದು ಜಲಕ್ರಾಂತಿ ಉಂಟಾದ ಬಗೆಯನ್ನು ಪ್ರಧಾನಿ ವಿವರಿಸಿದ್ದರು.

ಅಲ್ಲದೆ ಈ ಕುರಿತು ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಟ್ವೀಟ್‌ ಕೂಡ ಮಾಡಿದ್ದರು. ‘ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅರದು ಅಪರೂಪದ ಪರಿಸರ ಕಾಳಜಿ. 80ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದದು. ಕಾಮೇಗೌಡರು ಕುಂದಿನಿ ಬೆಟ್ಟದಲ್ಲಿ ನಿರ್ಮಿಸಿರುವ 14 ಕೆರೆಗಳೇ ಅವರ ನಿಸ್ವಾರ್ಥ ಸೇವೆಯನ್ನು ಸಾರುತ್ತವೆ,’ ಎಂದು ಟ್ವೀಟ್‌ನಲ್ಲಿ ಅಭಿನಂದಿಸಿದ್ದರು.

ಹಾಗೆಯೇ ‘ ಈ ಕೆರೆಗಳಿಂದ ಬೆಟ್ಟದಲ್ಲಿ ಹಸಿರು ಸದಾ ಉಳಿದಿದೆ. ಗೌಡರು ತಮಗೆ ಸಿಕ್ಕ ಪ್ರಶಸ್ತಿಗಳ ಹಣವೆನ್ನೆಲ್ಲ ಕೆರೆಗಳ ನಿರ್ಮಾಣಕ್ಕೆ ಬಳಸುತ್ತಾ ಬಂದಿದ್ದಾರೆ,’ ಎಂದೂ ಮೆಚ್ಚುಗೆ ಸೂಚಿಸಿದ್ದರು. ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈಗಾಗಲೇ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts