ಪದ್ಮ ಪ್ರಶಸ್ತಿಗೆ ಮಧುಪಂಡಿತ್‌ದಾಸ್‌, ತರಳಬಾಳುಶ್ರೀ, ಕಣವಿ, ಸಿದ್ದಲಿಂಗಯ್ಯ ಸೇರಿ ಹಲವರ ಹೆಸರು ಶಿಫಾರಸ್ಸು

ಬೆಂಗಳೂರು; 2022ನೇ ಸಾಲಿನ ಪದ್ಮಶ್ರೇಣಿ ಪ್ರಶಸ್ತಿಗೆ ಇಸ್ಕಾನ್‌ನ ಮಧು ಪಂಡಿತ್‌ ದಾಸ್‌, ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ದಿವಂಗತ ಡಾ ಸಿದ್ದಲಿಂಗಯ್ಯ, ನಾಡೋಜ ಚನ್ನವೀರ ಕಣವಿ, ಶಿವಮೊಗ್ಗ ಸುಬ್ಬಣ್ಣ, ನಟ ಅನಂತ್‌ನಾಗ್‌ , ಶಿವರಾಜ್‌ಕುಮಾರ್‌ ಸೇರಿದಂತೆ ಹಲವು ಸಾಧಕರ ಹೆಸರುಗಳನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಅಮಿತಾ ಪ್ರಸಾದ್‌ ಅಧ್ಯಕ್ಷತೆಯಲ್ಲಿ 2021ರ ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಸಾಧಕರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಶಿಫಾರಸ್ಸಾಗಿರುವ ಪಟ್ಟಿಯನ್ನು ‘ದಿ ಫೈಲ್‌’ ಆರ್‌ಟಿಐ ಮೂಲಕ 2021ರ ಡಿಸೆಂಬರ್‌ 24ರಂದು ಪಡೆದುಕೊಂಡಿದೆ.

ವಿಶೇಷವೆಂದರೆ 2021ರ ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ ಸಾಹಿತ್ಯ ವಿಭಾಗದಿಂದ ಸಾಹಿತಿ ಎಸ್‌ ಎಲ್‌ ಬೈರಪ್ಪ ಮತ್ತು ಡಾ ಎಚ್‌ ಸುದರ್ಶನ್‌ ಅವರ ಹೆಸರು ಇದೆಯಾದರೂ ಕೇಂದ್ರ ಸರ್ಕಾರಕ್ಕೆ 2021ರ ಸೆಪ್ಟಂಬರ್‌ 17ರಂದು ಶಿಫಾರಸ್ಸು ಮಾಡಿರುವ ಪಟ್ಟಿಯಲ್ಲಿ ಅವರಿಬ್ಬರ ಹೆಸರು ಇಲ್ಲದಿರುವುದು ಲಭ್ಯವಿರುವ ಪಟ್ಟಿಯಿಂದ ತಿಳಿದು ಬಂದಿದೆ.

ಸೆಪ್ಟಂಬರ್‌ 17ರಂದು ಕೇಂದ್ರ ಸರ್ಕಾರಕ್ಕೆ ಕಳಿಸಿರುವ ಶಿಫಾರಸ್ಸು ಪಟ್ಟಿಯಲ್ಲಿ ಒಟ್ಟು 19 ಹೆಸರುಗಳು ಇವೆ. ಈ ಪೈಕಿ ಪದ್ಮಭೂಷಣ ಪ್ರಶಸ್ತಿಗೆ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಇಸ್ಕಾನ್‌ನ ಮಧುಪಂಡಿತ್‌ ದಾಸ್‌ ಅವರ ಹೆಸರುಗಳನ್ನು ಕ್ರಮವಾಗಿ ಶಿಕ್ಷಣ ಮತ್ತು ಸಮಾಜಸೇವೆ ವಿಭಾಗದಿಂದ ಶಿಫಾರಸ್ಸು ಮಾಡಲಾಗಿದೆ. ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಒಟ್ಟು 36 ಮಂದಿ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. 2016ರಲ್ಲಿ ಮಧುಪಂಡಿತ್‌ ದಾಸ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಈ ಬಾರಿಯೂ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಿರುವುದು ವಿಶೇಷ.

ಕಳೆದೆರಡು ಸಾಲಿನಿಂದಲೂ ಬೆಂಗಳೂರಿನ ವೆಂಕಟಾಚಲಪತಿ (ಶಿಲ್ಪಕಲೆ), ಕೋಲಾರದ ಹರಿಕಥಾ ವಿದ್ವಾಂಸರಾದ ಎನ್‌ ಆರ್‌ ಜ್ಞಾನಮೂರ್ತಿ, ಯಕ್ಷಗಾನ ಭಾಗವತ ತುಮಕೂರಿನ ಕಲ್ಮನೆ ನಂಜಪ್ಪ, ಡಾ ಲಕ್ಷ್ಮಣದಾಸ್‌, ಸಾಹಿತ್ಯ ವಿಭಾಗದಿಂದ ಎಚ್‌ ಎಸ್‌ ವೆಂಕಟೇಶ್‌ಮೂರ್ತಿ, ದಕ್ಷಿಣ ಕನ್ನಡದ ಡಾ ಮೋಹನ್‌ ಆಳ್ವ,(ವೈದ್ಯಕೀಯ, ಶಿಕ್ಷಣ) ವೈ ಕೆ ಮುದ್ದುಕೃಷ್ಣ (ಸುಗಮಸಂಗೀತ) , ಡಾ ಸಿ ರಾಮಚಂದ್ರ(ವೈದ್ಯಕೀಯ) ಅವರ ಹೆಸರುಗಳನ್ನು ಪದ್ಮ ಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತಿರುವುದು ಪಟ್ಟಿಯಿಂದ ಗೊತ್ತಾಗಿದೆ.

ಪದ್ಮಶ್ರೀ ಪ್ರಶಸ್ತಿ ಶಿಫಾರಸ್ಸಿನ ಪಟ್ಟಿ; ಡಾ ವಿಜಯಲಕ್ಷ್ಮಿ ಬಾಳೇಕುಂದ್ರಿ (ಸಮಾಜಸೇವೆ) ಅಬ್ದುಲ್‌ ಖಾದರ್‌ ಇಮಾಂಸಾಬ್ ನಾಡಕಟ್ಟೀನ್‌ ಧಾರವಾಡ (ವಿಜ್ಞಾನ, ಇಂಜಿನಿಯರಿಂಗ್‌) ವಿನಯ್‌ ಹೆಗಡೆ ಮಂಗಳೂರು (ಶಿಕ್ಷಣ) ಡಾ ರಾಮಚಂದ್ರ ಚೌಡಪ್ಪ (ವೈದ್ಯಕೀಯ) ಡಾ ಪಿ ದಯಾನಂದ ಪೈ (ಶಿಕ್ಷಣ), ಅನಂತ್‌ನಾಗ್‌ (ಕಲೆ) ನಾಡೋಜ ಚನ್ನವೀರ ಕಣವಿ (ಸಾಹಿತ್ಯ), ಡಾ ಮೋಹನ್‌ ಆಳ್ವ (ವೈದ್ಯಕೀಯ, ಸಾಹಿತ್ಯ), ಶಿವಮೊಗ್ಗ ಸುಬ್ಬಣ್ಣ (ಇತರೆ), ಏರ್‌ ಮಾರ್ಷಲ್‌ ಕೆ ಸಿ ಕಾರಿಯಪ್ಪ (ಸಮಾಜ ಸೇವೆ), ಡಾ ಮುಹಮದ್‌ ಮಜೀದ್‌ (ವೈದ್ಯಕೀಯ), ವಾಣಿ ಗಣಪತಿ (ಕಲೆ) ನಾಡೋಜ ಜಿ ಎಸ್‌ ಖಂಡೇರಾವ್ (ಕಲೆ)ಶಿವರಾಜಕುಮಾರ್‌ (ಕಲೆ), ವಿರೂಪಾಕ್ಷ ಕಲ್ಯಾಣದೇವರು (ಕಲೆ), ಬಸವಲಿಂಗ ಪಟ್ಟದದೇವರು (ಸಾಹಿತ್ಯ, ಶಿಕ್ಷಣ), ಡಾ ಸಿದ್ದಲಿಂಗಯ್ಯ (ಸಾಹಿತ್ಯ) ಹೆಸರು ಅಂತಿಮಗೊಳಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಇನ್ನು 2021ರ ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಪದ್ಮಶ್ರೇಣಿ ಪ್ರಶಸ್ತಿಗೆ ಒಟ್ಟು 38 ಮಂದಿಯನ್ನು ಅಂತಿಮಗೊಳಿಸಲಾಗಿತ್ತು. ಪದ್ಮಭೂಷಣ ಪ್ರಶಸ್ತಿಗೆ ಮಧುಪಂಡಿತ್‌ ದಾಸ್‌, ಡಾ ಎಚ್‌ ಸುದರ್ಶನ್‌ ಹೆಸರನ್ನು ಅಖೈರುಗೊಳಿಸಲಾಗಿತ್ತು. ಅದೇ ರೀತಿ ಪದ್ಮಶ್ರೀ ಪ್ರಶಸ್ತಿಗೆ 36 ಮಂದಿ ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡಲು ಸಭೆಯಲ್ಲಿ ಅಂತಿಮಗೊಳಿಸಲಾಗಿತ್ತು.

ಪದ್ಮಶ್ರೀಗೆ ಶಿಫಾರಸ್ಸು ಮಾಡಲು ಅಂತಿಮಗೊಂಡಿದ್ದ ಹೆಸರುಗಳಿವು; ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯಾರ್‌ (ಜನಪದ ಕಲೆ), ಚನ್ನಬಸಯ್ಯ ಗುಬ್ಬಿ (ಕಲೆ), ವಿ ಜಿ ಅಂದಾನಿ (ನವ್ಯ), ನಾಡೋಜ ಜಿ ಎಸ್‌ ಖಂಡೇರಾವ್‌, ವೆಂಕಟಾಚಲಪತಿ, ರಾಣಿ ಮಾಚಯ್ಯ (ಉಮ್ಮತ್ತಾಟ್‌), ವಿರೂಪಾಕ್ಷ ಕಲ್ಯಾಣ ದೇವರು, ವೈಜನಾಥ್‌ ಬಿರಾದಾರ್‌ (ಕಲೆ-ನಟನೆ),, ಎನ್‌ ಆರ್‌ ಜ್ಞಾನಮೂರ್ತಿ, ಬಸವಲಿಂಗಪಟ್ಟದೇವರು, ಪಂ. ಸೋಮನಾಥ ಮರಡೂರ (ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ), ಶಿವರಾಜ ಕುಮಾರ್‌, ಜಿ ಆರ್‌ ಚನ್ನಬಸಪ್ಪ (ಸಾಹಿತ್ಯ), ಎಸ್‌ ಎಲ್‌ ಬೈರಪ್ಪ (ಸಾಹಿತ್ಯ), ಕಲ್ಮನೆ ನಂಜಪ್ಪ, ಯೆನೆಪೋಯಾ ಅಬ್ದುಲ್ಲಾ ಕುಂಚಿ (ಸಮಾಜಸೇವೆ), ನರಸಿಂಹಲು ವಡವಾಟಿ (ಹಿಂದೂಸ್ತಾನಿ ಸಂಗೀತ), ಗಂಗಮ್ಮ ಕೇಶವಮೂರ್ತಿ (ಗಮಕ), ಡಾ ಲಕ್ಷ್ಮಣದಾಸ್‌, ನಾಡೋಜ ಚನ್ನವೀರ ಕಣವಿ, ಎಚ್‌ ಎಸ್‌ ವೆಂಕಟೇಶ ಮೂರ್ತಿ, ಡಾ ಮೋಹನ್‌ ಆಳ್ವ, ವೈ ಕೆ ಮುದ್ದುಕೃಷ್ಣ ಅವರ ಹೆಸರುಗಳನ್ನು ಅಖೈರುಗೊಳಿಸಲಾಗಿತ್ತು.

ಶಿವಮೊಗ್ಗ ಸುಬ್ಬಣ್ಣ, ಡಾ ಶಂಕರ (ಜಾದೂಗಾರ), ಅಂಬಾತನಯ ಮುದ್ವಾಡಿ (ಕೇಶವ ಶೆಟ್ಟಿಗಾರ್‌) (ಸಾಹಿತ್ಯ), ಎಚ್‌ ವಿ ನಾಗರಾಜರಾವ್‌ (ಸಂಸ್ಕೃತ ಸಾಹಿತ್ಯ), ಏರ್‌ ಮಾರ್ಷಲ್‌ ಕೆ ಸಿ ಕಾರಿಯಪ್ಪ, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಕೆ ಗಣಪತಿ (ಸಂಪಾದಕ, ಮೈಸೂರು ಮಿತ್ರ), ಡಾ ಸಿ ರಾಮಚಂದ್ರ, ಡಾ ಎಸ್‌ ಐಯಪ್ಪನ್‌ (ಕೃಷಿ), ಅನಂತ್‌ನಾಗ್‌, ಡಾ ಸಿ ಆರ್‌ ಜಯಂತಿ (ವೈದ್ಯಕೀಯ), ಡಾ ಬಿ ಎಲ್‌ ಸುಜಾತ ರಾಥೋಡ್‌ (ವೈದ್ಯಕೀಯ), ಸಿದ್ದಲಿಂಗಯ್ಯ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಲು ಅಂತಿಮಗೊಳಿಸಿರುವುದು ನಡವಳಿಯಿಂದ ಗೊತ್ತಾಗಿದೆ.

2022ನೇ ಸಾಲಿಗೆ 38 ಸಾಧಕರ ಪೈಕಿ ಪದ್ಮಶ್ರೇಣಿ ಪ್ರಶಸ್ತಿಗೆ ರಾಜ್ಯ ಸರ್ಕಾರವು ಒಟ್ಟು 19 ಮಂದಿಯನ್ನು ಶಿಫಾರಸ್ಸು ಮಾಡಿದೆ. 2021ರ ಸೆ.17ರಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಶಿಫಾರಸ್ಸು ಪಟ್ಟಿಯನ್ನು ರವಾನಿಸಲಾಗಿದೆ.

the fil favicon

SUPPORT THE FILE

Latest News

Related Posts