Tuesday | June 30, 2026 |

ಕೋವಿಡ್‌-19; ಆರೋಗ್ಯ ಇಲಾಖೆಗೆ ಬಿಡುಗಡೆಯಾದ ಅನುದಾನ ಖರ್ಚಿನ ಲೆಕ್ಕ ಕೇಳಿದ ಅಂದಾಜು ಸಮಿತಿ

ಬೆಂಗಳೂರು; ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲಾದ ವಿಶೇಷ ಅನುದಾನದಲ್ಲಿ ಖರ್ಚು ಮಾಡಿರುವುದು ಮತ್ತು ಉಳಿಕೆ ಅನುದಾನದ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ವಿಧಾನಸಭೆಯ ಸದಸ್ಯ ಸಿ ಎಂ ಉದಾಸಿ ಅವರ ಅಧ್ಯಕ್ಷತೆಯಲ್ಲಿರುವ ಅಂದಾಜು ಸಮಿತಿ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ  ಸೂಚಿಸಿದೆ.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಆಗಿದೆ ಎನ್ನಲಾಗಿರುವ ಗಂಭೀರ ಸ್ವರೂಪದ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಶೇಷ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಸಿಎಜಿಗೆ ಪತ್ರ ಬರೆದಿರುವ ಬೆನ್ನಲ್ಲೇ ಇದೀಗ ಅಂದಾಜು ಸಮಿತಿ ಕೂಡ ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರ್ಚು ಮಾಡಿರುವ ಹಣದ ಲೆಕ್ಕ ಕೇಳಲಾರಂಭಿಸಿದೆ.

ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ 2020ರ ಆಗಸ್ಟ್‌ 12ರಂದು ಪತ್ರ ಬರೆದಿದ್ದಾರೆ. ಈ ಕುರಿತು 15 ಪ್ರಶ್ನಾವಳಿಗಳನ್ನು ನೀಡಿರುವ ಅವರು ಇದೇ 19ರಂದು ನಡೆಯಲಿರುವ ಸಭೆಗೆ ಮಾಹಿತಿ ಒದಗಿಸಬೇಕು ಎಂದು ನಿರ್ದೇಶಿಸಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೆಚ್ಚಿನ ಉತ್ತೇಜನ ನೀಡಲು ಒದಗಿಸಲಾದ ವಿಶೇಷ ಅನುದಾನದಡಿ ಖರ್ಚಾದ ಹಾಗೂ ಬಾಕಿ ಉಳಿದಿರುವ ಅನುದಾನದ ಇತ್ತೀಚಿನ ಪೂರ್ಣ ಮಾಹಿತಿ ಒದಗಿಸಬೇಕು,’ ಎಂದು ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

ಕಳೆದ 3 ವರ್ಷಗಳಲ್ಲಿ ಮೂಲ ಆಯವ್ಯಯ ಅನುದಾನವನ್ನು ಮತ್ತು ಪೂರಕ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಬೇಡಿಕೆ ಎಷ್ಟು, ಅನುದಾನ ಬೇಡಿಕೆಯ ಪ್ರಸ್ತಾವನೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ನೀಡಿದ ಸಮರ್ಥನೆಗಳ ವಿವರಗಳು, ಇದೇ ಅವಧಿಯಲ್ಲಿ ಮೂಲ ಅನುದಾನ, ಪೂರಕ ಅನುದಾನ ಬಿಡುಗಡೆ, ವೆಚ್ಚ, ಹೆಚ್ಚುವರಿ ವೆಚ್ಚ , ಉಳಿತಾಯಗಳಿಗೆ ಕಾರಣಗಳು, ಕೇಂದ್ರದ ಅನುದಾನದ ಲೆಕ್ಕ ಶೀರ್ಷಿಕೆವಾರು ಯೋಜನೆವಾರು ವಿವರಗಳನ್ನು ಒದಗಿಸಬೇಕು ಎಂದು ಕಾರ್ಯದರ್ಶಿ ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

ಹಾಗೆಯೇ ಇಲಾಖೆಯ ಆಯವ್ಯಯದಲ್ಲಿ ಒದಗಿಸಲಾದ ಅನುದಾನದ ಸದ್ಬಳಕೆ, ಮಿತವ್ಯಯ, ಆರ್ಥಿಕ ಶಿಸ್ತು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಆಡಳಿತದಲ್ಲಿ ದಕ್ಷತೆ, ಸುಧಾರಣೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಪೂರ್ಣ ವಿವರವನ್ನೂ ಒದಗಿಸಲು ನಿರ್ದೇಶಿಸಿರುವುದು ತಿಳಿದು ಬಂದಿದೆ.

ಇಲಾಖೆಯಲ್ಲಿರುವ ಸ್ವಂತ ವಾಹನಗಳ ಸಂಖ್ಯೆ, ಇಂಧನ ನಿರ್ವಹಣೆ, ದುರಸ್ತಿಗೆ ವಾರ್ಷಿಕ ವೆಚ್ಚದ ಮೊತ್ತ, ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ವಾಹನಗಳು ಮತ್ತು ನೀಡುತ್ತಿರುವ ಬಾಡಿಗೆ ಮೊತ್ತದ (ಕಳೆದ 3 ವರ್ಷಗಳ ಮಾಹಿತಿ) ವಿವರ ಒದಗಿಸಲು ಸೂಚಿಸಿದ್ದಾರೆ.

ಅಂದಾಜು ಸಮಿತಿಯಲ್ಲಿ ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ಯಾಪುರ, ಕೆ ಎಂ ಶಿವಲಿಂಗೇಗೌಡ, ಸಿ ಎನ್‌ ಬಾಲಕೃಷ್ಣ, ಸೋಮಶೇಖರರೆಡ್ಡಿ, ಸಿ ಎಸ್‌ ನಿರಂಜನಕುಮಾರ್‌, ಮಹೇಶ್‌ ಕುಮಠಳ್ಳಿ, ವೀರಣ್ಣ ಚರಂತಿಮಠ್‌, ಶರಣಬಸಪ್ಪ ದರ್ಶಾನಪುರ ಸೇರಿದಂತೆ ಒಟ್ಟು 18 ಮಂದಿ ಸದಸ್ಯರಿದ್ದಾರೆ.

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯು ವೈದ್ಯಕೀಯ ಸಲಕರಣೆ ವೆಚ್ಚ/ವೈದ್ಯಕೀಯ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಒಟ್ಟು 316.43 ಕೋಟಿ ರು ಖರ್ಚು ಮಾಡಿದೆ. ಇದರಲ್ಲಿ ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ 103.27 ಕೋಟಿ, ಎಸ್‌ಡಿಆರ್‌ಎಫ್‌ ಅಡಿ 50.00 ಕೋಟಿ, ವೈದ್ಯಕೀಯ ಸೇವೆ, ಟೆಲಿ ಮೆಡಿಸಿನ್‌ಗಾಗಿ ಎಸ್‌ಡಿಆರ್‌ಎಫ್‌ ಅಡಿ 20.00 ಕೋಟಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ 109.10 ಕೋಟಿ, ಕೆಡಿಎಲ್‌ಡಬ್ಲ್ಯಎಸ್‌ ಅಡಿ 104.33 ಕೋಟಿಯೂ ಒಳಗೊಂಡಿದೆ.

ಕೋವಿಡ್‌-19ರ ನಿರ್ವಹಣೆಗಾಗಿ ಆರೋಗ್ಯ ಇಲಾಖೆಯು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿ ಮೂಲಕ ದುಬಾರಿ ದರದಲ್ಲಿ ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್ಸ್‌, ಗ್ಲೋವ್ಸ್‌, ಆರ್‌ಟಿಪಿಸಿಆರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

Hot this week

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...
Please Scan to make Your Contribution

Topics

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...

Related Articles

Popular Categories

error: Content is protected !!