ಅಮಾನವೀಯ ಅಂತ್ಯ ಸಂಸ್ಕಾರ; ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದರೂ ಚಾಟಿ ಬೀಸದ ಆಯೋಗ

ಬೆಂಗಳೂರು; ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡುತ್ತಿರುವ ಪ್ರಕರಣಗಳು ಸಂಭವಿಸುತ್ತಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗ ತನ್ನ ಭಂಡ ನಿರ್ಲಕ್ಷ್ಯವನ್ನು ಪ್ರದರ್ಶಿಸಿದೆ.


ಗೌರವಯುತ ಅಂತ್ಯ ಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳು. ಇವುಗಳನ್ನು ರಾಜ್ಯದಲ್ಲಿ ದಿನನಿತ್ಯ ಉಲ್ಲಂಘಿಸಲಾಗುತ್ತಿದೆ. ಅಮಾನವೀಯ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಸರ್ಕಾರದ ವಿರುದ್ಧ ಈವರೆವಿಗೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.


ಅದಷ್ಟೇ ಅಲ್ಲ, ಕೊರೊನಾ ಸೋಂಕಿತರಿಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಅಂಬುಲೆನ್ಸ್‌ಗಳ ಕೊರತೆ ತೀವ್ರವಾಗಿವೆಯಲ್ಲದೆ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನ ವಿಳಂಬವಾಗುತ್ತಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್‌ ಸಿಗದ ಕಾರಣ ಮನೆ ಬಾಗಿಲಲ್ಲೇ ಹಲವರು ಮೃತಪಟ್ಟಿದ್ದಾರೆ. ಅಂಬುಲೆನ್ಸ್‌ಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಾನವ ಹಕ್ಕುಗಳ ಆಯೋಗ ಚಾಟಿಯನ್ನೂ ಬೀಸಿಲ್ಲ.


ಆಯೋಗದ ಅಧ್ಯಕ್ಷರಾಗಿರುವ ಡಿ ಎಚ್‌ ವಘೇಲಾ ಅವರು ಈ ಹಿಂದೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು. ಅದೇ ರೀತಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ರೂಪಕ್‌ ಕುಮಾರ್‌ ದತ್ತ ಅವರು ಆಯೋಗದಲ್ಲಿ ಸದಸ್ಯರಾಗಿದ್ದವರು. ಕಾನೂನು ಸುವ್ಯವಸ್ಥೆ ಮತ್ತು ನ್ಯಾಯಾಂಗದಲ್ಲಿ ಉನ್ನತ ಸ್ಥಾನದಲ್ಲಿದ್ದವರೇ ಆಯೋಗದಲ್ಲಿದ್ದರೂ ಅಮಾನವೀಯ ರೀತಿಯಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೂ ಆಯೋಗದ ಕಚೇರಿಯಿಂದ ಹೊರಬರುತ್ತಿಲ್ಲ. ಕನಿಷ್ಠ ತುಟಿ ಬಿಚ್ಚುತ್ತಿಲ್ಲ, ಮುಖ್ಯ ಕಾರ್ಯದರ್ಶಿಗೆ ನೋಟೀಸ್‌ ಕೂಡ ಜಾರಿ ಮಾಡಿಲ್ಲ.


ಮೃತ ಅಂತ್ಯ ಸಂಸ್ಕಾರ ನಡೆಸುವ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ಇವುಗಳು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ. ಮಾರ್ಗಸೂಚಿಗಳ ಪಾಲನೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಿಲ್ಲ. ಆದರೂ ಸರ್ಕಾರದಿಂದ ಈ ಕುರಿತು ವರದಿ ನೀಡುವಂತೆ ಆಯೋಗ ನಿರ್ದೇಶನ ನೀಡಿಲ್ಲ ಎಂದು ಗೊತ್ತಾಗಿದೆ.


ಆರೋಗ್ಯ ಸಚಿವ ಬಿ ಶ್ರೀರಾಮುಲು ತವರು ಜಿಲ್ಲೆ ಬಳ್ಳಾರಿಯಲ್ಲಿ ಮೃತಪಟ್ಟಿದ್ದ ಸೋಂಕಿತರ ಶವಗಳನ್ನು ವೈದ್ಯಕೀಯ ಸಿಬ್ಬಂದಿ ಗುಂಡಿಯಲ್ಲಿ ಬಿಸಾಡಿದ್ದರು. ಒಂದೇ ಗುಂಡಿಯಲ್ಲಿ ಹಲವು ಮೃತ ದೇಹಗಳನ್ನು ಮುಚ್ಚಿ ಹಾಕಿದ ಘಟನೆಗಳೂ ನಡೆದಿವೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಸೋಂಕಿತನ ಶವವನ್ನು ಜೆಸಿಬಿ ಯಂತ್ರದ ಮೂಲಕ ಮಣ್ಣು ಮಾಡಲಾಗಿತ್ತು. ಮಂಗಳೂರಿನಲ್ಲಿ ಸೋಂಕಿತನ ಶವದ ಅಂತ್ಯ ಸಂಸ್ಕಾರಕ್ಕೆ ಅಡ್ಡಿಯುಂಟಾಗಿತ್ತು. ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಸೋಂಕಿತನ ಶವ ಸಾಗಿಸಲು ಅಂಬುಲೆನ್ಸ್‌ ಸಿಗದ ಕಾರಣ ಮನೆ ಮುಂಬಾಗಿಲಲ್ಲೇ ಹಲವು ಗಂಟೆಗಳ ಕಾಲ ಇರಿಸಲಾಗಿತ್ತು. ಶವಗಳನ್ನು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದ ಕಾರಣ ನಾಯಿಗಳು ತಿಂದು ಹಾಕಿದ್ದ ಪ್ರಕರಣ ದಾವಣಗೆರೆ ನಗರದಲ್ಲಿ ವರದಿಯಾಗಿತ್ತು. ಬಸ್‌ ತಂಗುದಾಣವೊಂದರಲ್ಲಿ ಮೃತ ಶರೀರ ಬಿಟ್ಟು ಹೋಗಿದ್ದ ಪ್ರಕರಣ ವರದಿಯಾಗಿತ್ತು.

 

ಇಷ್ಟೆಲ್ಲಾ ಅಮಾನವೀಯ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗ ಗಮನಿಸಿಲ್ಲ. ಅಮಾನವೀಯ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts