ಬೆಂಗಳೂರು; ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 ಮತ್ತು 2 ರ ಪ್ರಕರಣಗಳನ್ನು ಚರ್ಚೆಗೆ ಕೈಗೆತ್ತಿಕೊಂಡಿರುವ ಶಾಸಕ ಹಂಪನಗೌಡ ಬಾದರ್ಲಿ ಅವರ ಅಧ್ಯಕ್ಷತೆಯಲ್ಲಿರುವ ಅಂದಾಜುಗಳ ಸಮಿತಿ ಶಾಖೆಯ ಅಧಿಕಾರಿಗಳು ಸಭೆಯ ನಡವಳಿಗಳ ಪುಟಗಳನ್ನೇ ಬದಲಾಯಿಸಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಅಂದಾಜು ಸಮಿತಿಯ ನಡವಳಿಗಳ ಪುಟಗಳನ್ನು ಬದಲಾಯಿಸಿ ಪ್ರತ್ಯೇಕವಾಗಿ ಬೆರಳಚ್ಚು ಮಾಡಿರುವ ಹಾಳೆಗಳನ್ನು ಸೇರಿಸಿದ್ದಾರೆ. ವಿಚಾರಣೆ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸದೇ ಇದ್ದರೂ ‘ಕೈ ಬಿಡಲಾಗಿದೆ’ ಎಂದು ಪ್ರತ್ಯೇಕ ಹಾಳೆಯನ್ನು ಮೂಲ ನಡವಳಿಯಲ್ಲೇ ಸೇರ್ಪಡೆಗೊಳಿಸಿದ್ದಾರೆ. ಸಮಿತಿಯು ಕೈಗೊಂಡಿದ್ದ ತೀರ್ಮಾನಗಳನ್ನು, ಸಭೆಯ ಗಮನಕ್ಕೆ ತಾರದೆಯೇ ಬದಲಾಯಿಸುತ್ತಿರುವ ಪ್ರಕರಣಗಳು, ಶಾಸಕಾಂಗ ಸಮಿತಿಗಳ ಬಗೆಗಿನ ವಿಶ್ವಾಸಕ್ಕೇ ಧಕ್ಕೆ ತಂದಂತಾಗಿದೆ.
ಈ ಸಂಬಂಧ ಕಡತದ (ಕವಿಸಸ/54/ಅಂಸ/2025) ಕೆಲವು ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಂದಾಜು ಸಮಿತಿಯು ಜಲಸಂಪನ್ಮೂಲ ಇಲಾಖೆಗೆ ಸಂಂಧಿಸಿದಂತೆ 2025ರ ಏಪ್ರಿಲ್ 4 ಮತ್ತು ಮೇ 9ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 ಮತ್ತು 2 ರ ಪ್ರಕರಣಗಳ ಕುರಿತು ಸಮಿತಿಯು ಚರ್ಚೆ ನಡೆಸಿತ್ತು. 2025ರ ಏಪ್ರಿಲ್ 4ರಂದು ನಡೆದಿದ್ದ ಸಭೆಯಲ್ಲಿನ ಚರ್ಚೆಯ ಅಂಶಗಳನ್ನು ನಡವಳಿಯಲ್ಲಿ ದಾಖಲಿಸಲಾಗಿತ್ತು.
ಅಂತಿಮ 2 ಪುಟಗಳಲ್ಲಿ ಚರ್ಚಿಸಿದ್ದೇನು?
ಸಮಿತಿಯ ಸದಸ್ಯ ಡಾ ಶಿವರಾಜ್ ಪಾಟೀಲ್ ಅವರು ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 (1ರಿಂದ 15) ಮತ್ತು ಪ್ಯಾಕೇಜ್ 2 (16ರಿಂದ 18) ತನಿಖಾ ಪ್ರಕರಣಗಳ ಎರಡೂ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯಲ್ಲಿ ನಮೂದಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪೈಕಿ ಕೆಲವು ಪ್ರಕರಣಗಳು ಕೋರ್ಟ್ನಲ್ಲಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅಂಥವುಗಳನ್ನು ಸಮಿತಿಯಲ್ಲಿ ಚರ್ಚೆಗೆ ತೆಗೆದುಕೊಳ್ಳುವುದು ಬೇಡ ಎಂದು ಅಭಿಪ್ರಾಯಿಸಿದ್ದರು.
ಇದಕ್ಕೆ ಸಮಿತಿಯ ಮತ್ತೊಬ್ಬ ಸದಸ್ಯ ಅಪ್ಪಾಜಿಗೌಡ ನಾಡಗೌಡ ಅವರು ‘We Wait for the Court Orders. ಏನೇನಾಗಿದೆ ಎಂದು ಮಾಹಿತಿ ಕೊಡಲಿ. ಕೋರ್ಟ್ ಅಥವಾ ಟ್ರಿಬ್ಯೂನಲ್ ಮುಂದೆ ರಿವ್ಯೂ ಆಗಿದ್ದರೇ ಆ ರಿಪೋರ್ಟ್ನ್ನು ಕಮಿಟಿ ಮುಂದೆ ಪ್ಲೇಸ್ ಮಾಡಲಿ. ಅದರ ಮೆಲೆ ಚರ್ಚೆ ಮಾಡೋಣ, ಇಲ್ಲದೇ ಹೋದರೆ ಈ ಸಮಿತಿಯ ಅಧಿಕಾರವನ್ನು ಕಸಿದುಕೊಂಡಂತೆ ಆಗುತ್ತದೆ. ಜಸ್ಟೀಸ್ ನಾಗಮೋಹನ್ ದಾಸದ್ ಆಯೋಗದ ವರದಿ ಬಂದಿದ್ದರೇ ಮೊದಲು ಅಸೆಂಬ್ಲಿಯಲ್ಲಿ ಪ್ಲೇಸ್ ಆಗಲಿ, ನಂತರ ಸಮಿತಿಗೆ ಬರಲಿ. ನಾವು ಚರ್ಚೆ ಮಾಡೋಣ,’ ಎಂದು ಹೇಳಿದ್ದರು. ಅಲ್ಲಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯು ಅಲ್ಲಿಗೆ ಮುಕ್ತಾಯವಾಗಿತ್ತು.
ಈ ವಿಷಯಗಳ ಕುರಿತು ನಡೆದಿದ್ದ ಚರ್ಚೆಯ ಅಂಶಗಳು ವರದಿಗಾರರ ಶಾಖೆಯಿಂದ ಸಲ್ಲಿಸಿರುವ ಮೂಲ ನಡವಳಿಯಲ್ಲಿಯೂ ಇದ್ದವು. ಆದರೆ ಅಂದಾಜು ಸಮಿತಿ ಶಾಖೆಯ ಕೆಳ ಹಂತದ ಅಧಿಕಾರಿಯವರು ಸಲ್ಲಿಸಿದ್ದ ಕಡತದಲ್ಲಿನ ನಡವಳಿಯಲ್ಲಿನ ಕೊನೆಯ ಎರಡು ಪುಟಗಳು ಉದ್ದೇಶಪೂರ್ವಕವಾಗಿ ಹೆಚ್ಚುವರಿಯಾಗಿ ಬೆರಳಚ್ಚು ಮಾಡಿಸಲಾಗಿತ್ತು. ಅಲ್ಲದೇ ನಡವಳಿಯಲ್ಲಿ ವ್ಯತ್ಯಾಸವೂ ಕಂಡು ಬಂದಿತ್ತು ಎಂದು ಗೊತ್ತಾಗಿದೆ.
ಬೆರಳಚ್ಚು ಮಾಡಿದ್ದ ಹಾಳೆಯಲ್ಲೇನಿತ್ತು?
‘ಸರ್ಕಾರವು ಈಗಾಗಲೇ ನಾರಾಯಣಪುರ ಬದಲಂಡೆ ಕಾಲುವೆಯ ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 (1ರಿಂದ 15 ಮತ್ತು ಪ್ಯಾಕೇಜ್ 2, (16ರಿಂದ 18) ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತನಿಖಾ ಆಯೋಗವನ್ನು ರಚಿಸಿದ್ದು ಆಯೋಗವು ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ. ಈ ಎರಡೂ ಪ್ರಸ್ತಾವನೆಗಳನ್ನು ಸಮಿತಿಯಿಂದ ಕೈಬಿಡಲಾಗಿದೆ ಎಂದು ಸಮಿತಿಯು ಈ ಹಂತದಲ್ಲಿ ತೀರ್ಮಾನಿಸಿತು,’ ಎಂದು ಬೆರಳಚ್ಚು ಮಾಡಿದ್ದ ಹಾಳೆಯಲ್ಲಿ ಸೇರಿಸಿರುವುದು ತಿಳಿದು ಬಂದಿದೆ.
ನಡವಳಿಯ ಮೂಲ ಪ್ರತಿಯನ್ನೇ ಬದಲಾಯಿಸಿದರೇ?
ಈ ಎರಡೂ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನವೂ ಆಗಿರಲಿಲ್ಲ. ಆದರೂ ನಡವಳಿಯಲ್ಲಿ ಈ ಎರಡೂ ಪ್ರಕರಣಗಳನ್ನು ಕೈ ಬಿಡಲಾಗಿದೆ ಎಂದು ಸೇರಿಸಿದ್ದು ಸಂಶಯಗಳಿಗೆ ಕಾರಣವಾಗಿತ್ತು. ಈ ಕುರಿತು ಮೂಲ ನಡವಳಿ ಮತ್ತು ಸೇರ್ಪಡೆ ಮಾಡಿರುವ ನಡವಳಿಗಳನ್ನು ಚರ್ಚೆ ಸಂಪಾದನೆ ಶಾಖೆಯಿಂದ ತರಿಸಿಕೊಳ್ಳಲಾಗಿತ್ತು. ಅದರಲ್ಲಿ ಎರಡು ಪ್ರಸ್ತಾವನೆಗಳನ್ನು ಕೈ ಬಿಟ್ಟಿರುವ ಬಗ್ಗೆ ಯಾವುದೇ ಉಲ್ಲೇಖವೇ ಇರಲಿಲ್ಲ. ಹಾಗೂ ನಡವಳಿಯ ಕೊನೆಯ ಎರಡು ಪುಟಗಳನ್ನು ಬದಲಾಯಿಸಿ ಪ್ರತ್ಯೇಕವಾಗಿ ಬೆರಳಚ್ಚು ಮಾಡಿ ನಡವಳಿಯಲ್ಲಿ ಸೇರಿಸಲಾಗಿತ್ತು.
ಅಂದಾಜು ಸಮಿತಿಯ ಕೆಳ ಹಂತದ ಅಧಿಕಾರಿಗಳ ಈ ಲೋಪದ ಬಗ್ಗೆ ಸಮಿತಿಯ ಹಿರಿಯ ಅಧಿಕಾರಿಗಳು ಕಡತದಲ್ಲಿಯೇ ( ಕವಿಸಸ/54/ಅಂಸ/2025) ವಿಧಾಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರ ಗಮನಕ್ಕೆ ತಂದಿದ್ದರು. ಆದರೆ ಈ ಬಗ್ಗೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಲೋಪವೆಸಗಿರುವ ಕೆಳ ಹಂತದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.
ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ನಾರಾಯಣಪುರ ಬಲದಂಡೆ ಪ್ರಕರಣವೇನು?
ರಾಯಚೂರು ಜಿಲ್ಲೆಯ ಲಿಂಗಸೂಗೂರು ಹಾಗೂ ದೇವದುರ್ಗ ನಾರಾಯಣಪುರ ಬಲದಂಡೆ ನಾಲೆಯ ಉಪ ಕಾಲುವೆ ಆಧುನೀಕರಣದ ಕಾಮಗಾರಿಯಲ್ಲಿ ಕಾಮಗಾರಿ ಮಾಡದೇ ಬಿಲ್ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆಧುನೀಕರಣದ ಕಾಮಗಾರಿಯ ಮೊದಲ ಪ್ಯಾಕೇಜ್ ಅನ್ನು 828.40 ಕೋಟಿ ರೂ.ಗೆ ಎನ್ಡಿ ವಡ್ಡರ್ ಅಂಡ್ ಕಂಪನಿಗೆ ನೀಡಲಾಗಿತ್ತು. ಒಟ್ಟು ಎರಡು ಪ್ಯಾಕೇಜ್ಗಳನ್ನು 1,619 ಕೋಟಿ ರೂ. ಮೊತ್ತದ ಪಡೆದುಕೊಂಡಿದ್ದ ಈ ಕಂಪನಿಯು ಕಳಪೆ ಕಾಮಗಾರಿ ನಡಸಿತ್ತು. ಈಗಾಗಲೇ ಮೊದಲ ಪ್ಯಾಕೇಜ್ ನಲ್ಲಿ 282 ಕೋಟಿಯಷ್ಟು ಹಾಗೂ ಎರಡನೇ ಪ್ಯಾಕೇಜ್ ನಲ್ಲಿ 143 ಕೋಟಿ ರೂ. ಪಾವತಿಯಾಗಿತ್ತು. ಆದರೆ ಕಾಮಗಾರಿ ಮಾಡದೆ ಬಿಲ್ ತೆಗೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಆರೋಪಿಸಿದ್ದರು.
ಕಾಂಗ್ರೆಸ್ ಸರ್ಕಾರವು ಸದನಕ್ಕೆ ನೀಡಿದ್ದ ಉತ್ತರದಲ್ಲೇನಿದೆ?
ಈ ಪ್ರಕರಣಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು 2025ರ ಮಾರ್ಚ್ 6ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದ್ದರು.
ಈ ಉತ್ತರದ ಪ್ರಕಾರ ನಾರಾಯಣಪುರ ಬಲದಂಡೆ ಮುಖ್ಯಕಾಲುವೆಯ 0.00 ರಿಂದ 95.00 ವರೆಗಿನ ಆದುನೀಕರಣ ಪ್ಯಾಕೇಜ್ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಈ ಸತ್ಯಶೋಧನಾ ಸಮಿತಿಯ ಸಮಿತಿ ಶಿಫಾರಸ್ಸುಗಳ ಅನ್ವಯ (ಸರ್ಕಾರದ ಆದೇಶ ಸಂಖ್ಯೆ ಜಸಂಇ 146 ಸೇ.ಇವಿ 2020 ದಿನಾಂಕ 05.07.2021) ಗುತ್ತಿಗೆದಾರರಾದ ಡಿ ವೈ ಉಪ್ಪಾರ್ ಮತ್ತು ಸನ್ಸ್ ಅವರಿಂದ ಒಟ್ಟು 42.785 ಕೋಟಿ ರು ಮೊತ್ತವನ್ನು ವಸೂಲಾತಿಯನ್ನು ಈಗಾಗಲೇ ಮಾಡಲಾಗಿದೆ.
ಲೋಕಾಯುಕ್ತರು ಸಹ ಈ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯ ಪ್ರಕಣವನ್ನು 2022ರ ಜನವರಿ 10ರ ಅಂತಿಮ ಪರಿಶೀಲನಾ ವರದಿ ಅನ್ವಯ ಮುಕ್ತಾಯಗೊಳಿಸಿದೆ.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಅಡ್ಡಲಾಗಿ ನಿರ್ಮಿಸಿರುವ 1ರಿಂದ 15ರವರೆಗಿನ ವಿತರಣಾ ಕಾಲುವೆ, ಉಪ/ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್ 1 ಕಾಮಗಾರಿ ಹಾಗೂ 16ರಿಂದ 18ರವರೆಗಿನ ವಿತರಣಾ ಕಾಲುವೆ, ಉಪ, ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್ 2 ಕಾಮಗಾರಿಗಳ ಮೇಲೆ ಆಪಾದನೆ ಮಾಡಲಾಗಿತ್ತು. ಈ ಆಪಾದನೆಗಳಿಗೆ, ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರ್ಕಾರದ ಆದೇಶ (ಸಂಖ್ಯೆ; ಜಸಂಇ 301 ಕೆಬಿಎನ್ 2023 ದಿನಾಂಕ 04/01/2024) ಅನ್ವಯ ಈ ಹಿಂದೆ ರಚನೆಗೊಂಡಿದ್ದ ತಾಂತ್ರಿಕ ತಜ್ಞರ ಸಮಿತಿಯನ್ನು ಹಿಂಪಡೆಯಲಾಗಿತ್ತು.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಹೆಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದ ವಿಚಾರಣೆ ಆಯೋಗಕ್ಕೆ ವಹಿಸಿ ಆದೇಶಿಸಲಾಗಿತ್ತು. ಈ ಪ್ಯಾಕೇಜ್ ಕಾಮಗಾರಿಗಳ ತನಿಖೆಯು ವಿಚಾರಣೆ ಹಂತದಲ್ಲಿರುತ್ತದೆ ಎಂದು ಮಾಹಿತಿ ಒದಗಿಸಿದ್ದರು.
2022ರ ಸೆ.28ರಂದು ಹಾಗೂ 2023ರ ಫೆ.9ರಂದು ನಡೆದ ಅಂದಾಜು ಸಮಿತಿ ಸಭೆಯಲಲಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ವಿತರಣೆ ಕಾಲುವೆ ಸಂಖ್ಯೆ 1ರಿಂದ 15ರವರೆಗಿನ ಪ್ಯಾಕೇಜ್ 1 ಹಾಗೂ ವಿತರಣಾ ಕಾಲುವೆ ಸಂಖ್ಯೆ 16ರಿಂದ 18ರವರೆಗಿನ ಪ್ಯಾಕೇಜ್ 2 ಕಾಮಗಾರಿಗಳ ಉಪ ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್ಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾಗಿರುವ ಬಿಲ್ಗಳು ಬಾಕಿ ಇದ್ದವು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿತ್ತು.
ಗುಣಮಟ್ಟದ ಕಾಮಗಾರಿಗೆ ಪೂರ್ಣ ಪ್ರಮಾಣದ ಬಿಲ್ನ್ನು ಪಾವತಿಸಬಹುದೆಂದು ನೀರಾವರಿ ಇಲಾಖೆಯ ಮುಖ್ಯಸ್ಥರಾದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು. ಬಾಕಿ ಉಳಿದಿರುವ ಬಿಲ್ನ ಮೊತ್ತವನ್ನು ಪಾವತಿಸುವ ಕುರಿತು ಸೂಕ್ತ ನಿರ್ದೇಶನವನ್ನು ನೀಡವಂತೆ ಸರ್ಕಾರಕ್ಕೆ ಕೋರಲಾಗಿತ್ತು. ಹಾಗಾಗಿ ಸರ್ಕಾರದ ಪತ್ರದಲ್ಲಿ ಅಂದಾಜು ಸಮಿತಿಯು ಲೋಕಾಯುಕ್ತ ಸಂಸ್ಥೆಯವರು ನೀಡುವ ವರದಿಯನ್ನು ಸಮಿತಿಗೆ ಒಪ್ಪಿಸುವಂತೆ ಸೂಚಿಸಲಾಗಿರುವ ಅಂಶಗಳ ಬಗ್ಗೆ ಚರ್ಚಿಸಲಾಗಿತ್ತು.
ತಾಂತ್ರಿಕ ತಜ್ಞರ ಸಮಿತಿಯು ಸಲ್ಲಿಸಲಾಗುವ ವರದಿಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳ ಪ್ರಗತಿಯ ಹಿತದೃಷ್ಟಿಯಿಂದ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯ ಪ್ಯಾಕೇಜ್ 1ರಿಂದ 15ರವರರೆಗೆ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಬಿಲ್ನ ಮೊತ್ತವನ್ನು ಪಾವತಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶಿಸಲಾಗಿತ್ತು.
ಈ ಪ್ಯಾಕೇಜ್ ಕಾಮಗಾರಿಗಳು 2021ರ ಜುಲೈ 23ರಂದು ಪ್ರಾರಂಭಗೊಂಡಿವೆ. ಇದುವರೆಗೂ ಪ್ಯಾಕೇಜ್ ಕಾಮಗಾರಿಗಳಿಗೆ ಹಣ ಪಾವತಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದರು.
ಪ್ಯಾಕೇಜ್ 1 (1ರಿಂದ 15ರವರೆಗೆ) ಎನ್ ಡಿ ವಡ್ಡರ್ ಅಂಡ್ ಕಂಪನಿಗೆ ಒಪ್ಪಂದದ ಪ್ರಕಾರ 977.51 ಕೋಟಿ 51 ಲಕ್ಷ ರು ನೀಡಬೇಕಿತ್ತು. ಕಡೆಗೆ ಬಿಲ್ ಮೊತ್ತವನ್ನು 867.66 ಕೋಟಿರೆ ಇಳಿಸಿತ್ತು. ಈ ಪೈಕಿ 590.10 ಕೋಟಿ ರು ಪಾವತಿಯಾಗಿದೆ. ಇನ್ನೂ 277.56 ಕೋಟಿ ರುಗಳನ್ನು ತಡೆಹಿಡಿಯಲಾಗಿದೆ.
ಅದೇ ರೀತಿ ಪ್ಯಾಕೇಜ್ 2 (16ರಿಂದ 18ವರೆಗೆ) ಇದೇ ಎನ್ ಡಿ ವಡ್ಡರ್ ಅಂಡ್ ಕಂಪನಿಗೆ 909.23 ಕೋಟಿ ರು ಒಪ್ಪಂದವಾಗಿತ್ತು. ಕಡೆಗೆ ಇದನ್ನು 636.58 ಕೋಟಿಗೆ ಇಳಿಸಿತ್ತು. ಈ ಪೈಕಿ 377.71 ಕೋಟಿ ರು ಪಾವತಿಯಾಗಿತ್ತು. 258.87 ಕೋಟಿ ರುಗಳನ್ನು ತಡೆಹಿಡಿಯಲಾಗಿತ್ತು. ಒಟ್ಟಾರೆ 1886.74 ಕೋಟಿ ರು ಒಪ್ಪಂದವಾಗಿದ್ದರ ಪೈಕಿ 1504.24 ಕೋಟಿಗೆ ಇಳಿಸಲಾಗಿತ್ತು. ಈ ಪೈಕಿ 967.81 ಕೋಟಿ ಪಾವತಿಯಾಗಿದೆ. ಇನ್ನೂ 536.43 ಕೋಟಿ ರು ಪಾವತಿಗೆ ತಡೆಹಿಡಿಯಲಾಗಿದೆ.
ಈ ಮಧ್ಯೆ ಗುತ್ತಿಗೆದಾರರಾದ ಎನ್ ಡಿ ವಡ್ಡರ ಅಂಡ್ ಕಂಪನಿ, ಏಜೆನ್ಸಿಯವರು ಅವರು ತಮ್ಮ ಬಿಲ್ನ್ನು ತಡೆ ಹಿಡಿದಿರುವುದಕ್ಕೆ ಮತ್ತು ನಾಗಮೋಹನ್ ದಾಸ್ ವಿಚಾರಣೆ ಆಯೋಗವನ್ನುರ ರದ್ದುಪಡಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯು ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ಒದಗಿಸಿದ್ದರು.
ಅಂದಾಜು ಸಮಿತಿ ಸದಸ್ಯರ ಮೇಲೆ ಗೂಂಡಾಗಿರಿ ಪ್ರಕರಣ; ‘ದಿ ಫೈಲ್’ ವರದಿ ಬೆನ್ನಲ್ಲೇ ದನಿ ಎತ್ತಿದ ಸಿದ್ದರಾಮಯ್ಯ
ನಾರಾಯಣಪುರ ಬಲದಂಡೆ ಕಾಲುವೆಯಲ್ಲಿನ ಕಾಮಗಾರಿಗಳನ್ನು ಅಂದಾಜು ಸಮಿತಿಯು ಸ್ಥಳಕ್ಕೆ ತೆರಳಿತ್ತು. ಆ ವೇಳೆಯಲ್ಲಿ ಸಮಿತಿಯ ಸದಸ್ಯರ ಮೇಲೆಯೇ ಗುತ್ತಿಗೆದಾರರ ಗುಂಪೊಂದು ಮುಗಿಬಿದ್ದಿತ್ತು. ಈ ಕುರಿತು ‘ದಿ ಫೈಲ್’, ವರದಿ ಪ್ರಕಟಿಸುತ್ತಿದ್ದಂತೆ ಪ್ರತಿಪಕ್ಷದಲ್ಲಿದ್ದ ಸಿದ್ದರಾಮಯ್ಯ ಅವರು ದನಿ ಎತ್ತಿದ್ದನ್ನು ಸ್ಮರಿಸಬಹುದು.