ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಜೇಷ್ಠತೆ ಅಥವಾ ಹಿರಿತನ ಆಧಾರದಲ್ಲಿ ಬಿಲ್ ಪಾವತಿಸುತ್ತಿಲ್ಲ. ಬದಲಿಗೆ ಶೇ. 60ರಷ್ಟು ಲಂಚ ನೀಡಿದರೇ ಎಲ್ಲಾ ಹಿರಿತನ ಅಥವಾ ಜೇಷ್ಟತೆಯನ್ನು ಬದಿಗೊತ್ತಿ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹೆಸರಿನಲ್ಲಿ ವಸೂಲು ಮಾಡುತ್ತಿರುವ ಲಂಚದ ಪ್ರಮಾಣವನ್ನು ಕಡಿಮೆ ಮಾಡಿಸಬೇಕು ಎಂದು ಗುತ್ತಿಗೆದಾರರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಅಲವತ್ತುಕೊಂಡಿದ್ದಾರೆ.
ನಗರಾಭಿವೃದ್ದಿ ಇಲಾಖೆಯಲ್ಲಿ ಲಂಚದ ಹಾವಳಿ ಮತ್ತು ಕಮಿಷನ್ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಈಚೆಗಷ್ಟೇ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನೇರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ದೂರು ನೀಡಿತ್ತು. ಅಲ್ಲದೇ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಗುತ್ತಿಗೆದಾರರೊಬ್ಬರು ಗುತ್ತಿಗೆ ಬಾಕಿ ಮೊತ್ತವನ್ನು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.
ಈ ಬೆಳವಣಿಗೆಗಳ ನಡುವೆಯೇ ಇದೀಗ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿಯೂ ಲಂಚ ಮತ್ತು ಕಮಿಷನ್ಗಾಗಿ ಗುತ್ತಿಗೆದಾರರ ಮುಂದೆ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಮತ್ತು ಲಂಚದ ಪ್ರಮಾಣವನ್ನು ಕಡಿಮೆ ಮಾಡಿಸಬೇಕು ಎಂದು ಮಾಡಿರುವ ಕೋರಿಕೆಯು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಗುತ್ತಿಗೆದಾರರಾದ ಕೆಂಪೇಗೌಡ ಎಂಬುವರು 2025ರ ಜೂನ್ 26ರಂದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ದೂರು ಸಲ್ಲಿಸಿ 10 ತಿಂಗಳಾದರೂ ಸಹ ಯಾವುದೇ ಕ್ರಮವಹಿಸಿಲ್ಲ. ಕೆಂಪೇಗೌಡ ಎಂಬುವರು ನೀಡಿದ್ದ ದೂರಿನ ಕುರಿತು ಕ್ರಮ ವಹಿಸಲು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿಯವರು ಸೂಚಿಸಿದ್ದರು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ ಎಚ್ ಅವರು 2025ರ ಸೆ.16ರಂದು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಿಂದ ವರದಿ ಕೋರಿದ್ದರು. ಆದರೆ ಇದುವರೆಗೂ ಈ ವರದಿ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ಕಡತವು ತೆವಳುತ್ತಿದೆ.
ಗುತ್ತಿಗೆದಾರ ನೀಡಿದ್ದ ದೂರಿನಲ್ಲೇನಿದೆ?
ಮೈಸೂರಿನಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾಗಿ ಕೆಎಎಸ್ ಅಧಿಕಾರಿ ದೇವರಾಜು ಎ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಪೂರ್ಣಿಮಾ ಮತ್ತು ಟಿ ವೆಂಕಟೇಶ್ ಅವರು ಈಗ ಐಎಎಸ್ ಅಧಿಕಾರಿಗಳಾಗಿದ್ದಾರೆ. ಇವರಿಗಿಂತಲೂ ಮೊದಲು ಇಲಾಖೆಯ ಹಿಂದಿನ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ ಎನ್ ಮಂಜುಳ ಅವರು ಗುತ್ತಿಗೆದಾರರಿಂದ ಕೇವಲ 2 ಪರ್ಸೆಂಟ್ ಸಂಗ್ರಹಿಸುತ್ತಿದ್ದರು ಎಂದು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

ಪೂರ್ಣಿಮಾ ಮತ್ತು ವೆಂಕಟೇಶ್ ಅವರು ಇಲಾಖೆಯ ಆಯುಕ್ತರಾದ ನಂತರ ಲಂಚದ ಮೊತ್ತವನ್ನು ಶೇ. 5ಕ್ಕೇರಿಸಿದ್ದರು. ಆದರೆ ಕಳೆದ 2 ವರ್ಷದಿಂದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳ ಹೆಸರಿನಲ್ಲಿ ಶೇ. 2, ಸಚಿವರ ಹೆಸರಿನಲ್ಲಿ ಶೇ. 3 ಹೀಗೆ ಒಟ್ಟು ಶೇ. 10ರಷ್ಟು ಸಂಗ್ರಹಿಸುತ್ತಿದ್ದಾರೆ ಎಂದು ದೂರಿನಲ್ಲಿ ಕೆಂಪೇಗೌಡ ಅವರು ಆಪಾದಿಸಿರುವುದು ತಿಳಿದು ಬಂದಿದೆ.
‘ಆದರೆ ಈಗ ಪ್ರಸ್ತುತ ಆರ್ಥಿಕ ವರ್ಷದಿಂದ ತಮ್ಮ ಹೆಸರಿನಲ್ಲಿ ಶೇ. 2ರಷ್ಟು ಸಂಗ್ರಹಿಸುತ್ತಿದ್ದಾರೆ. ಒಟ್ಟಾರೆ ಶೇ. 12ರಷ್ಟು ಲಂಚ ವಸೂಲು ಮಾಡುತ್ತಿದ್ದಾರೆ. ಇಲ್ಲದಿದ್ದರೆ ಇವರು ಯಾವುದೇ ಕಾಮಗಾರಿಯ ಬಿಲ್ಗಳನ್ನು ಹಿರಿತನದಲ್ಲಿ ಬಿಲ್ ಪಾಸ್ ಮಾಡುವುದಿಲ್ಲ. ಯಾರು ಶೇ.12ರಷ್ಟು ಲಂಚ ಕೊಡುತ್ತಾರೋ ಅವರಿಗೆ ಮಾತ್ರ ಬಿಲ್ ಪಾಸ್ ಮಾಡಿಕೊಡುತ್ತಾರೆ,’ ಎಂದು ಆರೋಪಿಸಿರುವುದು ದೂರಿನಿಂದ ಗೊತ್ತಾಗಿದೆ.
‘ಇದಲ್ಲದೇ ಜಿಎಸ್ಟಿ ಶೇ. 18, ಎಇಇಗೆ ಶೆ. 10, ಜೆಇಗೆ ಶೇ. 10, ಲೆಕ್ಕಾಧಿಕಾರಿಗಳಿಗೆ ಶೇ.1, ಇತರೆ ಹಾಗೂ ಟ್ರೆಜರಿಗೆ ಸೇರಿ ಶೇ.1. ಒಟ್ಟು ಶೇ. 52ರಷ್ಟು ಆಗುತ್ತದೆ. ನಮ್ಮ ಲಾಭಾಂಶ ಶೇ.8 ಎಂದರೂ ಒಟ್ಟಾರೆ ಶೇ. 60ರಷ್ಟು ಆಗುತ್ತದೆ. ಆದ್ದರಿಂದ ದಯವಿಟ್ಟು ತಮ್ಮದು ಸೇರಿ ಲಂಚದ ಪ್ರಮಾಣವನ್ನು ಕಡಿಮೆ ಮಾಡಿಸಬೇಕು,’ ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

ಈ ದೂರಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಅವರು ವರದಿ ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಕೋರಿದ್ದರು.

ಸದ್ಯ ಈ ಕಡತವು 2026ರ ಮಾರ್ಚ್ 27ರಿಂದಲೂ ಪ್ರವಾಸೋದ್ಯಮ ಇಲಾಖೆಯ ಶಾಖಾಧಿಕಾರಿ ಚಂದ್ರಶೇಖರ್ ಅವರ ಲಾಗಿನ್ನಲ್ಲಿರುವುದು ಗೊತ್ತಾಗಿದೆ.


ಹಾಗೆಯೇ ಇಲಾಖೆಯ ಆಯುಕ್ತ ದೇವರಾಜು ಎ ಅವರ ಲಂಚಗುಳಿತನ ಬಗ್ಗೆ ಶ್ರೀರಂಗಪಟ್ಟಣದ ಜಯರಾಮ ಎಂಬುವರೂ 2025ರ ನವೆಂಬರ್ 15ರಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಟೆಂಡರ್ ಗೋಪಾಲಕೃಷ್ಣ ಎಂಬುವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇವರು ಕಚೇರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದರೆ ಇಲಾಖಾ ಮುಖ್ಯಸ್ಥರಾದ ದೇವರಾಜು ಮತ್ತು ಪತ್ರಾಂಕಿತ ಸಹಾಯಕರಾದ ಮಂಜುನಾಥ್ ಎಂ ಅವರು ಗೋಪಾಲಕೃಷ್ಣ ಅವರನ್ನು ತಿಂಗಳಿಗೊಮ್ಮೆ ಕಚೇರಿಗೆ ಕರೆಯಿಸಿಕೊಂಡು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿಸಿ ವೇತನ ಪಾವತಿಸುತ್ತಿದ್ದಾರೆ.

ಇದರಲ್ಲಿಯೂ ಶೇ. 30ರಷ್ಟು ಭಾಗವನ್ನು ಲಂಚವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದು ಜಯರಾಮ ಎಂಬುವರು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
13 ಪರ್ಸೆಂಟ್ ಕಮಿಷನ್ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್ ಕದ ತಟ್ಟಿದ ಗುತ್ತಿಗೆದಾರರು
ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಸಹ ಅಧಿಕಾರಿ ವರ್ಗವು ಶೇ.13ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ನೇರವಾಗಿ ಆರೋಪಿಸಿತ್ತು. ಈ ಕುರಿತು ‘ದಿ ಫೈಲ್‘ 2026ರ ಏಪ್ರಿಲ್ 9ರಂದೇ ವರದಿ ಪ್ರಕಟಿಸಿತ್ತು.




