ಪಿಎಂಎವೈ; ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಬಳಕೆಯಾಗದ ಕೇಂದ್ರದ ಅನುದಾನ

ಬೆಂಗಳೂರು; ಪ್ರಧಾನಮಂತ್ರಿ ಆವಾಸ್‌ (ಗ್ರಾಮೀಣ) ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗುವುದರಲ್ಲಿ ವಿಳಂಬವಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕೃತವಾಗಿ ಒಪ್ಪಿಕೊಂಡಿದೆ.

 

ಅಲ್ಲದೇ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು  ಉಪಯೋಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆ  ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬವೇ ಮೂಲ ಕಾರಣ ಎಂದು ಬೊಟ್ಟು ಮಾಡಿದೆ. ಅಲ್ಲದೇ ಇದರಿಂದ ಯೋಜನೆಯ ಮಾರ್ಗಸೂಚಿ ಉಲ್ಲಂಘನೆ ಆಗುತ್ತಿದೆ ಎಂದು ಹೇಳಿದೆ.

 

ಗ್ಯಾರಂಟಿ ಯೋಜನೆಗಳಿಂದಾಗಿ ಚಾಲ್ತಿಯಲ್ಲಿರುವ ಹಲವು ಕಾರ್ಯಕ್ರಮ, ಯೋಜನೆಗಳಿಗೆ ಅನುದಾನ ಲಭ್ಯವಾಗುತ್ತಿಲ್ಲ ಎಂದು ಶಾಸಕರು ಈಚೆಗಷ್ಟೇ ಕಾಂಗ್ರೆಸ್‌ನ ವರಿಷ್ಠರ ಮುಂದೆ ಗೋಳು ತೋಡಿಕೊಂಡಿದ್ದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೂ ಸಹ ಗ್ಯಾರಂಟಿ ಬೇಡ ಎಂದರೆ ರಸ್ತೆ ಮಾಡಿಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು.

 

ಈ ಹೇಳಿಕೆಗಳನ್ನು ರಾಜಕೀಯವಾಗಿ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷವು ಕಾಂಗ್ರೆಸ್‌ ಸರ್ಕಾರವು ದಿವಾಳಿಯಾಗಿದೆ ಎಂದು ಪ್ರಚಾರ ಮಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ) ಫಲಾನುಭವಿಗಳ ಅನುದಾನ ಬಿಡುಗಡೆಯಲ್ಲಿ ಆಗಿರುವ ವಿಳಂಬ ಮತ್ತು ಇದರಿಂದಾಗಿರುವ ಪರಿಣಾಮಗಳ ಬಗ್ಗೆ ಖುದ್ದು ವಸತಿ ಇಲಾಖೆಯೇ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಕುರಿತು ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರೊಂದಿಗೆ ವಸತಿ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ವಿವಿಧ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗುರಿ ಮುಟ್ಟಿಲ್ಲ ಎಂದು ‘ದಿ ಫೈಲ್‌’, ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿ ಅನ್ಬುಕುಮಾರ್ ಅವರು  ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದಾರೆ.

 

2025ರ ಜುಲೈ 5ರಂದು ಬರೆದಿರುವ ಅರೆ ಸರ್ಕಾರಿ ಪತ್ರವು (ಅ.ಸ.ಪತ್ರ ಸಂಖ್ಯೆ; DOH 23 HAM 2025 DATED 05.07.2025)  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ)ಯ ಮೊದಲನೇ ಕಂತಿನ ಅನುದಾನವನ್ನು ಮುಂಗಡವಾಗಿ ಬಿಡುಗಡೆ ಮಾಡುವ ಕುರಿತು ಅರೆ ಸರ್ಕಾರಿ ಪತ್ರದಲ್ಲಿ ಪ್ರಸ್ತಾವಿಸಿದೆ. ಹಾಗೆಯೇ ಅನುದಾನ ಬಿಡುಗಡೆಯಲ್ಲಿ ಆಗಿರುವ ವಿಳಂಬ ಮತ್ತು ಕೇಂದ್ರದ ಅನುದಾನ ಬಳಕೆ ಆಗದಿರುವ ಕುರಿತೂ ಇದೇ ಅರೆ ಸರ್ಕಾರಿ ಪತ್ರದಲ್ಲಿ ಪ್ರಸ್ತಾವವಾಗಿದೆ.

 

‘ಫಲಾನುಭವಿಗಳ ಅನುದಾನ ಬಿಡುಗಡೆಯಲ್ಲಿ ವಿಳಂಬ ಆಗುತ್ತಿರುವುದರಿಂದ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಯೋಜನೆಯ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ. ಇದಕ್ಕೆ ಅನುಷ್ಠಾನಾಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ,’ ಎಂದೂ ವಸತಿ ಇಲಾಖೆಯು ಎಚ್ಚರಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ) 2024-25ನೇ ಸಾಲಿಗೆ ರಾಜ್ಯಕ್ಕೆ   7,02,731 ಮನೆಗಳ ಗುರಿಯನ್ನು ಮಂಜೂರು ಮಾಡಿತ್ತು. ಈ ಗುರಿಗೆ ಆದ್ಯತೆ ಮೇರೆಗೆ ಅಸ್ತಿತ್ವದಲ್ಲಿರುವ ಆವಾಸ್‌ ಪ್ಲಸ್‌ 2018ರ  ಪಟ್ಟಿಯಿಂದ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಅನುಷ್ಠಾನಗೊಳಿಸಲು ನಿರ್ದೇಶಿಸಿತ್ತು.

 

2025ರ ಜುಲೈ 5ರ ಅಂತ್ಯಕ್ಕೆ ಈ ಗುರಿಗೆ ಎದುರಾಗಿ 2,54,671 ಮನೆಗಳ ಗುರಿಗೆ ಮಂಜೂರಾತಿಗೆ ಆದೇಶ ನೀಡಿದೆ. ಮತ್ತು ಈ ಪೈಕಿ 1,76,384 ಫಲಾನುಭವಿಗಳಿಗೆ ಮಾತ್ರ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡಿದೆ ಎಂಬ ವಿವರಗಳು ಈ ಅರೆ ಸರ್ಕಾರಿ ಪತ್ರದಲ್ಲಿರುವುದು ಗೊತ್ತಾಗಿದೆ.

 

ಪ್ರಧಾನಮಂತ್ರಿ ಆವಾಸ್‌ ಯೋಜನೆಯ (ಗ್ರಾಮೀಣ) ಮಾರ್ಗಸೂಚಿಗಳ ಅನ್ವಯ ಯೋಜನೆಯಡಿ ಫಲಾನುಭವಿ ಆಯ್ಕೆಯಾದ 7 ದಿನದೊಳಗೆ ಪ್ರಥಮ ಕಂತಿನ ಸಹಾಯ ಧನವನ್ನು ಮುಂಗಡವಾಗಿ ನೀಡಬೇಕು. ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಅರೆ ಸರ್ಕಾರಿ ಪತ್ರ ಬರೆದಿರುವ ವಸತಿ ಇಲಾಖೆಯು ಫಲಾನುಭವಿಗಳಿಗೆ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲು ನಿರ್ದೇಶಿಸಿದೆ.

 

ಈ ಯೋಜನೆಯಡಿ ಮನೆ ಮಂಜೂರಾತಿಯಾದ ಕೂಡಲೇ ತಾಲೂಕು ಪಂಚಾಯ್ತಿಯಿಂದ ಫಲಾನುಭವಿಗಳ ಆರ್ಡರ್‍‌ ಶೀಟ್‌ ತಯಾರಿಸಲು ಕ್ರಮವಹಿಸಬೇಕು. ತಾಲೂಕು ಪಂಚಾಯ್ತಿಯ 1st Signagory loginನಲ್ಲಿ  FTO ತಯಾರಿಸಿ ಡಿಎಸ್‌ಸಿ ಕೀ ಮುಖಾಂತರ 1st Signagory ಮಾಡಬೇಕು. ಜಿಲ್ಲಾ ಪಂಚಾಯ್ತಿಗಳ ಮುಖ್ಯ ಲೆಕ್ಕಾಧಿಕಾರಿಗಳು ಡಿಎಸ್‌ಸಿ ಕೀ ಮುಖಾಂತರ 2nd Signagory ಮಾಡಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

‘ಈ ಎಲ್ಲದರ ಕುರಿತು ವೈಯಕ್ತಿಕ ಗಮನಹರಿಸಿ ತಮ್ಮ ಜಿಲ್ಲೆಯಲ್ಲಿ ಮಂಜೂರಾತಿ ನೀಡಲಾದ ಫಲಾನುಭವಿಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸಲು ಕೂಡಲೇ ಕ್ರಮವಹಿಸಬೇಕು,’  ಎಂದು ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿ ಅನ್ಬುಕುಮಾರ್‍‌ ಅವರು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್‌ ಜೈನ್‌ ಅವರಿಗೆ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಆವಾಸ್‌  ಮತ್ತು ವಿವಿಧ ವಸತಿ ಯೋಜನೆಗಳಡಿಯಲ್ಲಿ ನಗರ ಮತ್ತು ಗ್ರಾಮೀಣ ನಿವೇಶನ ಯೋಜನೆಯಡಿ ರಾಜ್ಯದ ಹಲವು ಜಿಲ್ಲೆಗಳು ನಿರೀಕ್ಷಿತ ಪ್ರಗತಿಯನ್ನು ಸಾಧಿಸಿಲ್ಲ. ವಿಶೇಷವಾಗಿ  ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗುರಿಯನ್ನೇ ತಲುಪಿರಲಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆಯಡಿ ಒಟ್ಟಾರೆ ಶೇ. 26ರಷ್ಟು ಮಾತ್ರ ಪ್ರಗತಿ ಸಾಧಿಸಿತ್ತು.

 

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ, ಪಶು ಸಂಗೋಪನೆ ಸಚಿವ ಕೆ ವೆಂಕಟೇಶ್‌ ಅವರ ತವರು  ಮೈಸೂರು ಜಿಲ್ಲೆಯಲ್ಲಿಯಲ್ಲಿಯೇ ಶೇ. 28ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ವಸತಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್ ಅವರ ತವರು ಕ್ಷೇತ್ರವನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೂನ್ಯ ಸಂಪಾದನೆ ಆಗಿದೆ. ಅದೇ ರೀತಿ  ಜಮೀರ್‍‌ ಅಹ್ಮದ್‌ ಖಾನ್‌ ಅವರು ಉಸ್ತುವಾರಿ ಹೊಂದಿರುವ ವಿಜಯನಗರ ಜಿಲ್ಲೆಯಲ್ಲಿ ಶೇ. 58ರಷ್ಟು ಪ್ರಗತಿ ಸಾಧಿಸಿತ್ತು.

 

ವಸತಿ ಇಲಾಖೆಯಡಿಯಲ್ಲಿನ ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಅಳಂದ ಶಾಸಕ ಬಿ ಆರ್ ಪಾಟೀಲ್‌ ಅವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಶೇ.34ರಷ್ಟು ಮಾತ್ರ ಪ್ರಗತಿ ಸಾಧಿಸಿತ್ತು.

 

ಪ್ರಧಾನಮಂತ್ರಿ ಆವಾಸ್‌ಗೆ ಆಯ್ಕೆ; ನಿಗದಿತ ಗುರಿ ಮುಟ್ಟದ ವಸತಿ ಇಲಾಖೆ, ಕಳಪೆ ಸಾಧನೆ, ಶೇ.26ರಷ್ಟು ಪ್ರಗತಿ

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ 2025ರ ಮೇ 30, 31 ರಂದು ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ವಸತಿ ಇಲಾಖೆಯು ಈ ಕುರಿತಾದ ಸಮಗ್ರ ವಿವರ, ಮಾಹಿತಿಗಳನ್ನು ನೀಡಿತ್ತು. ಈ ಮಾಹಿತಿ ಮತ್ತು ವಿವರಗಳ ಪ್ರಕಾರ ವಸತಿ ಇಲಾಖೆಯು ವಿವಿಧ ನಿವೇಶನ ಯೋಜನೆಗಳಡಿಯಲ್ಲಿ ಕನಿಷ್ಟ ಪ್ರಗತಿ ಸಾಧಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ವಿವಿಧ ವಸತಿ ಯೋಜನೆ; 6.29 ಲಕ್ಷ ಮನೆಗಳ ಪೈಕಿ 2.66 ಲಕ್ಷ ಮನೆಗಳಿಗಷ್ಟೇ ಮೊದಲ ಕಂತು ಬಿಡುಗಡೆ

 

ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಶೇ.26ರಷ್ಟು ಪ್ರಗತಿ

 

ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ರಾಜ್ಯದ 31 ಜಿಲ್ಲೆಗಳಲ್ಲೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಸತಿ ಇಲಾಖೆಯು, ಪ್ರತೀ ಜಿಲ್ಲೆಗೂ ಗುರಿ ನಿಗದಿಪಡಿಸಿತ್ತು. ಇದರ ಪ್ರಕಾರ ರಾಜ್ಯದ 31 ಜಿಲ್ಲೆಗಳಿಗೆ 7,02,731 ಗುರಿ ನಿಗದಿಪಡಿಸಿತ್ತು. ಈ ಪೈಕಿ ವಸತಿ ಇಲಾಖೆಯು ಈ ಯೋಜನೆಗೆ ಆಯ್ಕೆ ಮಾಡಿದ್ದು 1,80,571 ಮಾತ್ರ. ಈ ಯೋಜನೆಗೆ ಇನ್ನೂ 5,22,160 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿತ್ತು.

 

ಉಡುಪಿ ಜಿಲ್ಲೆಗೆ 4,566, ಬೆಂಗಳೂರು ನಗರ ಜಿಲ್ಲೆಗೆ 1,857 ಗುರಿ ನಿಗದಿಪಡಿಸಿತ್ತು. ಆದರೆ ಇಲಾಖೆಯು ಆಯ್ಕೆ ಮಾಡಿದ್ದು ಕೇವಲ ಒಬ್ಬರನ್ನು ಮಾತ್ರ. ಉಡುಪಿ ಜಿಲ್ಲೆಯಲ್ಲಿ 4,565, ಬೆಂಗಳೂರು ನಗರ ಜಿಲ್ಲೆಯಲ್ಲಿ 1,856 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇದೆ. ಈ ದತ್ತಾಂಶದ ಪ್ರಕಾರ ಈ ಎರಡೂ ಜಿಲ್ಲೆಗಳಲ್ಲಿ ಶೂನ್ಯ ಸಂಪಾದಿಸಿತ್ತು.

 

ಜಿಲ್ಲಾವಾರು ಪಟ್ಟಿ

 

ಕೊಡಗು ಜಿಲ್ಲೆಗೆ 8,862 ಗುರಿ ನಿಗದಿಪಡಿಸಿತ್ತು. ಈ ಪೈಕಿ 73 ಮಂದಿ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 8,789 ಮಂದಿಯನ್ನು ಆಯ್ಕೆ ಮಾಡಲು ಬಾಕಿ ಇದೆ. ಶೇ. 1ರಷ್ಟು ಮಾತ್ರ ಪ್ರಗತಿ ಆಗಿದೆ. ದಕ್ಷಿಣ ಕನ್ನಡಕ್ಕೆ 1,948 ಗುರಿ ನಿಗದಿಪಡಿಸಿತ್ತು. ಆದರೆ ಕೇವಲ 33 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 1,915 ಬಾಕಿ ಇದೆ. ಶೇ. 2ರಷ್ಟು ಪ್ರಗತಿ ಸಾಧಿಸಿದೆ. ರಾಮನಗರ ಜಿಲ್ಲೆಯಲ್ಲಿ 1,008 ನಿಗದಿಪಡಿಸಿದ್ದರೇ ಆಯ್ಕೆ ಮಾಡಿದ್ದು ಕೇವಲ 86 ಮಾತ್ರ. ಶೇ.9ರಷ್ಟು ಮಾತ್ರ ಪ್ರಗತಿ ಸಾಧಿಸಿತ್ತು.

 

ಚಿತ್ರದುರ್ಗಕ್ಕೆ ನಿಗದಿಪಡಿಸಿದ್ದ  40,461 ಗುರಿ ಪೈಕಿ 4,733 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 35,728 ಬಾಕಿ ಇದೆ. ಮಂಡದಲ್ಲಿ 24,610 ಗುರಿ ಪೈಕಿ 3,536 ಮಾತ್ರ ಆಯ್ಕೆ ಮಾಡಿದೆ. ಆಯ್ಕೆಗಿನ್ನೂ 21,074 ಬಾಕಿ ಇತ್ತು. ಹಾಸನದಲ್ಲಿ 30,689 ಗುರಿ ಪೈಕಿ 4,842 ಮಾತ್ರ ಆಯ್ಕೆ ಮಾಡಿ  ಇನ್ನೂ 25,847 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿದೆ. ಬೆಳಗಾವಿಯಲ್ಲಿ 67,627 ಗುರಿ ನಿಗದಿಪಡಿಸಿತ್ತು. ಈ ಪೈಕಿ 10,758 ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಇಲಾಖೆಯು ಇನ್ನೂ 56,869 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಉಳಿಸಿಕೊಂಡಿತ್ತು.

 

ಸರ್ಕಾರಕ್ಕೆ 751 ಕೋಟಿ ವಾಪಾಸ್‌; ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸಲು ವಿಫಲವಾಯಿತೇ?

 

ಉತ್ತರ ಕನ್ನಡದಲ್ಲಿ 14,351 ರ ಪೈಕಿ2,350 ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 12,001 ಬಾಕಿ ಇದೆ. ತುಮಕೂರು ಜಿಲ್ಲೆಯಲ್ಲಿ 32,603 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು. ಆದರೆ 5,416 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 27,187 ಬಾಕಿ ಉಳಿಸಿಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ  26,477 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದ ವಸತಿ ಇಲಾಖೆಯು 4,493 ಮಾತ್ರ ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 21,984 ಬಾಕಿ ಇರಿಸಿಕೊಂಡಿತ್ತು.

 

 

ಬಳ್ಳಾರಿ ಜಿಲ್ಲೆಗೆ 24,749 ಗುರಿ ನಿಗದಿಪಡಿಸಿತ್ತು. 4,275 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 20,474 ಫಲಾನುಭವಿಗಳು ಕಾಯುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 40,225 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿಯಾಗಿದ್ದು 8,355 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಗೆ  ಆಯ್ಕೆಯಾಗಲು ಇನ್ನೂ 31,870 ಮಂದಿ ಎದುರು ನೋಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 3,016 ಗುರಿ ನಿಗದಿಪಡಿಸಿದ್ದು ಈ ಪೈಕಿ  694 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. 2,322 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇತ್ತು.

 

ವಸತಿ ಇಲಾಖೆಯ 6,516 ಕೋಟಿ ಟೆಂಡರ್‌ನಲ್ಲಿ ಅವ್ಯವಹಾರ?; ಭ್ರಷ್ಟರ ‘ಕೊಳಗೇರಿ’ ಮಂಡಳಿ

 

ಗದಗ್‌ ಜಿಲ್ಲೆಯಲ್ಲಿ 20,554 ಗುರಿ ನಿಗದಿಪಡಿಸಿತ್ತು. ಇದರಲ್ಲಿ 4,828 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 15,726 ಬಾಕಿ ಇತ್ತು. ಧಾರವಾಡದಲ್ಲಿ 22,816 ಗುರಿ ನಿಗದಿಯಾಗಿದೆ. ಈ ಪೈಕಿ 5,377 ಮಾತ್ರ ಆಯ್ಕೆ ಮಾಡಿದೆ. 17,439 ಮಂದಿ ಆಯ್ಕೆ ಪಟ್ಟಿ ಸೇರಲು ಕಾಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ 12,695 ಗುರಿ ನಿಗದಿಪಡಿಸಿದೆ. 3,139 ಆಯ್ಕೆ ಮಾಡಿತ್ತು. ಆಯ್ಕೆಗೆ ಇನ್ನೂ 9,556 ಬಾಕಿ ಇದೆ.  ಶಿವಮೊಗ್ಗ ಜಿಲ್ಲೆಯಲ್ಲಿ 7,507 ಗುರಿ ಪೈಕಿ 2,011 ಮಾತ್ರ ಆಯ್ಕೆ ಮಾಡಲಾಗಿದೆ. 5,496 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇತ್ತು.

 

ಮೈಸೂರು ಜಿಲ್ಲೆಗೆ 30,366 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು. 8,377 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 21,989 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಈ ಜಿಲ್ಲೆಯಲ್ಲಿ ಶೇ. 28ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಬಾಗಲಕೋಟೆಯಲ್ಲಿ 27,681 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದ ವಸತಿ ಇಲಾಖೆಯು 8,256 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. 19,425 ಫಲಾನುಭವಿಗಳು ಆಯ್ಕೆಪಟ್ಟಿಯಲ್ಲಿ ಸೇರಿರಲಿಲ್ಲ.

 

6,516 ಕೋಟಿ ಟೆಂಡರ್‌ ಅವ್ಯವಹಾರ ಪ್ರಕರಣದ ಬೆನ್ನು ಬಿದ್ದ ಸಿದ್ದರಾಮಯ್ಯ; ಮಾಹಿತಿ ಮುಚ್ಚಿಟ್ಟಿತೇ?

 

ರಾಯಚೂರು ಜಿಲ್ಲೆಯಲ್ಲಿ 52,530 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಿತ್ತು. 15,784 ಫಲಾನುಭವಿಗಳು ಆಯ್ಕೆ ಮಾಡಲಾಗಿದೆ. 36,746 ಫಲಾನುಭವಿಗಳು ಆಯ್ಕೆಗೆ ಎದುರು ನೋಡುತ್ತಿದ್ದಾರೆ. ಕಲ್ಬುರ್ಗಿ ಜಿಲ್ಲೆಯಲ್ಲಿ 48,811 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನೀಡಿತ್ತು. ಈ ಪೈಕಿ 16,818 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 31,993 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿತ್ತು.

 

ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆ; ಬೋಸ್ಟನ್‌ನೊಂದಿಗೆ ಆಂತರಿಕ ಸಭೆ, ಖಾಸಗಿ ಬಿಲ್ಡರ್ಸ್‌, ಡೆವಲಪರ್ಸ್‌ಗಳಿಗೆ ಮಣೆ

ಕೋಲಾರದಲ್ಲಿ 10,345 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿ ಮಾಡಿತ್ತಾದರೂ 3,736 ಫಲಾನುಭವಿಗಳನ್ನಷ್ಟೇ ಆಯ್ಕೆ ಮಾಡಿತ್ತು. 6,609 ಫಲಾನುಭವಿಗಳು ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಲು ಬಾಕಿ ಇದ್ದಾರೆ. ಕೊಪ್ಪಳದಲ್ಲಿ 29,170 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನೀಡಲಾಗಿತ್ತು. 10, 896 ಫಲಾನುಭವಿಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. 18,274 ಫಲಾನುಭವಿಗಳು ಆಯ್ಕೆಗೆ ಎದುರು ನೋಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರಕ್ಕೆ ಕೇವಲ 861 ಮಾತ್ರ ಗುರಿ ನಿಗದಿಪಡಿಸಿತ್ತು. ಇದರಲ್ಲಿ 331 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 528 ಮಂದಿಯನ್ನು ಆಯ್ಕೆ ಮಾಡಬೇಕಿತ್ತು.

 

ಬಿಜೆಪಿ ಅವಧಿಯ ವಸತಿ ಯೋಜನೆಗಳಲ್ಲಿ ಬಹುಕೋಟಿ ಭ್ರಷ್ಟಾಚಾರ; ವಾಸ್ತವಾಂಶ ವರದಿ ಸಲ್ಲಿಕೆಗೆ ನಿರ್ದೇಶನ

 

ಚಿಕ್ಕಬಳ್ಳಾಪುರದಲ್ಲಿ 6,093 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದು 2,439 ಮಾತ್ರ ಆಯ್ಕೆ ಮಾಡಿತ್ತು.  3,654 ಫಲಾನುಭವಿಯನ್ನು ಆಯ್ಕೆ ಮಾಡಲು ಬಾಕಿ ಇತ್ತು. ಬೀದರ್‍‌ನಲ್ಲಿ 42,750 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತಾದರೂ 17,121 ಮಂದಿ ಮಾತ್ರ ಆಯ್ಕೆ ಮಾಡಲಾಗಿದೆ. 25,629 ಫಲಾನುಭವಿಗಳು ಆಯ್ಕೆ ಪಟ್ಟಿ ಸೇರಲು ಬಾಕಿ ಇದ್ದಾರೆ. ಯಾದಗಿರಿಯಲ್ಲಿ 27,275 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಿತ್ತು. 11,064 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 16,211 ಮಂದಿ ಆಯ್ಕೆ ಪಟ್ಟಿ ಸೇರಲು ಬಾಕಿ ಇದ್ದರು.

 

ವಿಜಯಪುರದಲ್ಲಿ 36,364 ಫಲಾನುಭವಿಗಳ ಆಯ್ಕೆಗೆ ಗುರಿ ನೀಡಿದ್ದರೂ ಸಹ 18,666 ಮಂದಿಯನ್ನಷ್ಟೇ ಆಯ್ಕೆ ಮಾಡಲಾಗಿದೆ. 17,968 ಮಂದಿ ಆಯ್ಕೆಪಟ್ಟಿ ಸೇರಲು ಕಾದು ಕುಳಿತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 3,594 ಗುರಿ ಪೈಕಿ 2,080 ಮಂದಿಯನ್ನಷ್ಟೇ ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 1,514 ಮಂದಿ ಬಾಕಿ ಇತ್ತು.

SUPPORT THE FILE

Latest News

Related Posts