Friday | March 27, 2026 |

ಬಿಎಂಐಸಿ; ಅರಣ್ಯ ಭೂಮಿ ವಶಕ್ಕೆ ಪಡೆಯುವ ಕ್ರಮಕ್ಕೆ ನೈಸ್‌ ಆಕ್ಷೇಪ, ವರದಿ ಸಲ್ಲಿಸಲು ಸರ್ಕಾರ ಸೂಚನೆ

Support THE-FILE

spot_img

ಬೆಂಗಳೂರು; ಬೆಂಗಳೂರು ಮೈಸೂರು ಮೂಲ ಸೌಕರ್ಯ ಕಾರಿಡಾರ್‌ ಯೋಜನೆಯ ಅನುಷ್ಠಾನಕ್ಕಾಗಿ ಬೆಂಗಳೂರು ಉತ್ತರ, ಕೆಂಗೇರಿ ಹೋಬಳಿ, ಬಿ ಎಂ ಕಾವಲ್‌ ವ್ಯಾಪ್ತಿಯಯಲ್ಲಿ ವರ್ಗಾಯಿಸಿದ್ದ ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆಯಬಾರದು ಎಂದು ನೈಸ್‌ ಸಂಸ್ಥೆಯು ಸರ್ಕಾರವನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.

 

ಗುತ್ತಿಗೆ ಫಲಾನುಭವಿಯಿಂದ ವಿವರಣೆ ಪಡೆಯದೆ, ನಡೆಯುತ್ತಿರುವ ಯೋಜನೆಯ ಪ್ರಸ್ತುತ ಸ್ಥಿತಿಯನ್ನು ಪರಿಗಣಿಸದೆ ಮತ್ತು ಕರ್ನಾಟಕ ಸರ್ಕಾರದಿಂದ ಪೂರ್ವ ವರದಿಯನ್ನು ಪಡೆಯದೆ ಭೂಮಿಯನ್ನು ಹಿಂಪಡೆಯುವಂತೆ ನಮಗೆ ಪತ್ರ ಹೊರಡಿಸುವುದು ಸರಿಯಾದ ಕ್ರಮವಲ್ಲ. ಮತ್ತು ಇದರಲ್ಲಿ ಮಾಡಿರುವ ಅವಲೋಕನಗಳು ಸಹ ಆಧಾರರಹಿತವಾಗಿವೆ ಎಂದು ನೈಸ್‌ ಕಂಪನಿಯು ಹೇಳಿದೆ.

 

ಅಲ್ಲದೇ ರಸ್ತೆ ಮಾರ್ಗಗಳನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವಿತ ಕ್ರಮವು ಇಡೀ ಯೋಜನೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿರುವ ನೈಸ್‌ ಕಂಪನಿಯು,  ಗುತ್ತಿಗೆ ಪಡೆದ ಭೂಮಿಯನ್ನು ವಾಪಸ್ ಪಡೆಯುವ ಪ್ರಸ್ತಾವನೆಯನ್ನು ಕೈಬಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಕೋರಿದೆ.

 

ಬಹುವಿವಾದಿತ ನೈಸ್‌ ಸಂಸ್ಥೆಗೆ ನೀಡಲಾಗಿದ್ದ ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುತ್ತಿದೆ. ಈ ಕಂಪೆನಿ ಕೈಗೆತ್ತಿಕೊಂಡ ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯ ನಿರ್ವಹಣೆ ಮತ್ತು ಇತರ ವಿಷಯಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಸಂಬಂಧ ಸರಕಾರವು ಸಚಿವ ಸಂಪುಟ ಉಪಸಮಿತಿ ರಚಿಸಿರುವ ಬೆನ್ನಲ್ಲೇ ನೈಸ್‌ ಕಂಪನಿಯು ಸರ್ಕಾರಕ್ಕೆ ಬರೆದಿರುವ 6 ಪುಟಗಳ ಪತ್ರ ಮತ್ತು ಅದರಲ್ಲಿರುವ ಹಲವು ಸಂಗತಿಗಳು ಮುನ್ನೆಲೆಗೆ ಬಂದಿದೆ.

 

ನೈಸ್‌ ಕಂಪನಿಯು ಸಚಿವ ಈಶ್ವರ್ ಖಂಡ್ರೆ ಅವರಿಗೆ 2025ರ ಮಾರ್ಚ್ 18ರಂದೇ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪತ್ರವನ್ನಾಧರಿಸಿ ವರದಿ ಸಲ್ಲಿಸಬೇಕು ಎಂದು ಸಚಿವ ಈಶ್ವರ್‌ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2025ರ ಮಾರ್ಚ್‌ 26ರಂದು ಟಿಪ್ಪಣಿ ಹೊರಡಿಸಿದ್ದಾರೆ ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಚಿವರ ಟಿಪ್ಪಣಿಯಲ್ಲೇನಿದೆ?

 

ಬೆಂಗಳೂರು ಉತ್ತರ, ಕೆಂಗೇರಿ ಹೋಬಳಿ, ಬಿ ಎಂ ಕಾವಲ್‌ ಗ್ರಾಮದ ಸರ್ವೆ ನಂಬರ್‌ 11, 24, 52 ಮತ್ತು 53ರಲ್ಲಿ ಹಾಗೂ ಹಂಡಿಗುಂಡಿ ಅರಣ್ಯ ಮತ್ತು ಸರ್ವೆ ನಂಬರ್‌ 1ರ ಚಿಕ್ಕಮಣ್ಣಗುಡ್ಡೆ ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆಯ ಅನುಷ್ಟಾನಕ್ಕಾಗಿ ವರ್ಗಾಯಿಸಲಾದ ಅರಣ್ಯ ಭೂಮಿಯನ್ನು ಇಲಾಖಾ ವಶಕ್ಕೆ ಪಡೆಯದಂತೆ ನೈಸ್‌ ಕಂಪನಿಯು ಕೋರಿದೆ. ಈ ವಿಷಯವನ್ನು ಪರಿಶೀಲಿಸಿ ವರದಿಯೊಂದಿಗೆ ಕಡತದೊಂದಿಗೆ ಮಂಡಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿರುವುದು ಗೊತ್ತಾಗಿದೆ.

 

 

ಬೆಂಗಳೂರು ಮೈಸೂರು ಕಾರಿಡಾರ್‍‌ ರಸ್ತೆ ಯೋಜನೆ (ಬಿಎಂಐಸಿ)ಗಾಗಿ ಸರ್ಕಾರವು ವಿಧಿಸಿದ್ದ ಷರತ್ತುಗಳ ಪ್ರಕಾರ ನೈಸ್‌ ಕಂಪನಿಯು 125 ಹೆಕ್ಟೇರ್‍‌ನಲ್ಲಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಇಲಾಖೆಗೆ 67.75 ಲಕ್ಷ ರು.ಗಳನ್ನು ಜಮಾ ಮಾಡಿತ್ತು. ಪರಿಹಾರಾತ್ಮಕ ನೆಡುತೋಪು ಬೆಳೆಸಲು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್‍‌ 87 ಮತ್ತು 88ರಲ್ಲಿ 125 ಹೆಕ್ಟೇರ್‍‌ನಲ್ಲಿ ಅರಣ್ಯೇತರ ಭೂಮಿಯನ್ನು ಗುರುತಿಸಿತ್ತು.

 

ಇದಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್‌ ಮತ್ತು ಆರ್‍‌ಟಿಸಿಯನ್ನು ಇಲಾಖೆ ಪರ ಪಡೆದಿತ್ತು. ಪರಿಹಾರಾತ್ಮಕ ನೆಡುತೋಪು ಹಣವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ( 8782 ಫಾರೆಸ್ಟ್‌ ರೆಮಿಟೆನ್ಸ್‌ )ನಲ್ಲಿ ಜಮಾ ಮಾಡಿತ್ತು. ಈ ಹಣವನ್ನು ಸರ್ಕಾರವು ಬಿಡುಗಡೆ ಮಾಡಬೇಕು ಎಂದು ತಿಳಿಸಿತ್ತು.

 

ಕೇಂದ್ರ ಸರ್ಕಾರವು ವಿಧಿಸಿದ್ದ ಈ ಷರತ್ತುಗಳನ್ನು ಪೂರೈಸಿದ್ದರಿಂದ ಯೋಜನೆಗೆ ಅರಣ್ಯ ಭೂಮಿಯನ್ನು ವಹಿಸಿಕೊಡುವ ಬಗ್ಗೆ ನಿರ್ದೇಶನ ಕೋರಿತ್ತು. ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಅರಣ್ಯೇತರ ಭೂಮಿಯಲ್ಲಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ 2002ರಲ್ಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು.

 

 

ಈ ಎಲ್ಲಾ ಅಂಶಗಳನ್ನು ನೈಸ್‌ ಸಂಸ್ಥೆಯು ಸರ್ಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

ನೈಸ್‌ ಕಂಪನಿಯ ಪತ್ರದಲ್ಲೇನಿದೆ?

 

ಅರಣ್ಯ ಇಲಾಖೆಗೆ ಅರಣ್ಯೀಕರಣ ಮತ್ತು ನಿವ್ವಳ ಪ್ರಸ್ತುತ ಮೌಲ್ಯ 4.85 ಕೋಟಿ ರೂ.ಗಳನ್ನು ನೀಡಿದೆ. ಮತ್ತು ಆ ಮೂಲಕ ಅಗತ್ಯವಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದೆ. ಬಿಎಂಐಸಿಪಿಗಾಗಿ ಅರಣ್ಯ ಭೂಮಿಯನ್ನು ಬಳಸದಿರುವ ಬಗ್ಗೆ ಡಿಐಜಿಎಫ್ (ಕೇಂದ್ರ) ದ ಮೇಲ್ವಿಚಾರಣಾ ವರದಿಯಲ್ಲಿ ಮಾಡಿರುವ ಹಲವು ಅವಲೋಕನಗಳನ್ನು ನೈಸ್‌ ಕಂಪನಿಯು ತನ್ನ ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಬಿಎಂಐಸಿಪಿಯು ಬೆಂಗಳೂರು ಮತ್ತು ಮೈಸೂರು ನಗರದ ನಡುವಿನ ಸುಮಾರು 20,193 ಎಕರೆ ಭೂಮಿಯನ್ನು ಒಳಗೊಂಡ ನಡೆಯುತ್ತಿರುವ ಯೋಜನೆಯಾಗಿದೆ. ಅರಣ್ಯ ಇಲಾಖೆಯಿಂದ ಯೋಜನೆಗೆ ವರ್ಗಾಯಿಸಲಾದ ಅರಣ್ಯ ಭೂಮಿಯನ್ನು ಬಿಎಂಸಿಐಪಿ ಎಕ್ಸ್‌ಪ್ರೆಸ್‌ವೇಯ ರಸ್ತೆ ಭಾಗಗಳಿಗೆ ಮೀಸಲಿಡಲಾಗಿದೆ. ಅಸ್ತಿತ್ವದಲ್ಲಿರುವ ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಸಂಪರ್ಕಿಸಲು ಈ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಬಹಳ ನಿರ್ಣಾಯಕವಾಗಲಿದೆ ಎಂದು ಪತ್ರದಲ್ಲಿ ವಿವರಿಸಿದೆ.

 

ಈ ಸಂಪರ್ಕ ವ್ಯವಸ್ಥೆಯು ಬೆಂಗಳೂರು ನಗರದ ಕಡೆಗೆ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಮತ್ತು ದಕ್ಷಿಣ ಬೆಂಗಳೂರು ರಸ್ತೆಗಳಲ್ಲಿನ ಸಂಚಾರ ಹೊರೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿರುವ ನೈಸ್‌ ಕಂಪನಿಯು ಇದಕ್ಕೆ ಪೂರಕವಾಗಿ ನೈಸ್ ರಸ್ತೆಯನ್ನು ಮೈಸೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ಪ್ರಸ್ತಾವನೆ ಮತ್ತು ಲೋಕೋಪಯೋಗಿ ಇಲಾಖೆಯ ಸಭೆಯ (22.03.2024) ನಡಾವಳಿಗಳನ್ನು ರೇಖಾಚಿತ್ರವನ್ನು ಸರ್ಕಾರಕ್ಕೆ ಒದಗಿಸಿರುವುದು ತಿಳಿದು ಬಂದಿದೆ.

 

 

ಸರ್ಕಾರವು 2000 ಫೆ 13 ಮತ್ತು 26ರಂದು ಹೊರಡಿಸಿದ್ದ ಆದೇಶದ ಪ್ರಕಾರ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸಿ ಬಿಎಂಐಸಿ ಯೋಜನೆಗೆ ವರ್ಗಾಯಿಸಲಾಗಿದೆ. ಮತ್ತು ವರ್ಗಾವಣೆಯು ಇತರ ಷರತ್ತುಗಳಲ್ಲಿ ಒಂದರ ಅಡಿಯಲ್ಲಿದೆ ಎಂದು ಹೇಳಲಾಗಿದೆ. ಇದನ್ನು ಶಾಶ್ವತ ಗುತ್ತಿಗೆ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು. ಈ ಭೂಮಿಯನ್ನು ನಿಗದಿತ ಉದ್ದೇಶಕ್ಕಾಗಿ ಬಳಸದಿದ್ದರೆ ಅಥವಾ ಅದು ಇನ್ನು ಮುಂದೆ ನಿಗದಿತ ಉದ್ದೇಶಕ್ಕಾಗಿ ಅಗತ್ಯವಿಲ್ಲದಿದ್ದಾಗ, ಆ ಪ್ರದೇಶವು ಸ್ವಯಂಚಾಲಿತವಾಗಿ ಅರಣ್ಯ ಇಲಾಖೆಗೆ ಹಿಂತಿರುಗುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಶಾಶ್ವತ ಗುತ್ತಿಗೆಯ ಮೇಲೆ ವರ್ಗಾಯಿಸಲಾದ ಉದ್ದೇಶಗಳಿಗೆ ಅನುಗುಣವಾಗಿಯೇ ಭೂಮಿಯನ್ನು ಬಳಸಲಾಗುತ್ತದೆ. ಡಿಐಜಿಎಫ್‌ನ ಮೇಲ್ವಿಚಾರಣಾ ವರದಿಯಲ್ಲಿ ಸೂಚಿಸಿರುವಂತೆ ಮತ್ತು ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಲಾದ ಯಾವುದೇ ಷರತ್ತೂ ಉಲ್ಲಂಘನೆಯಾಗಿಲ್ಲ ಎಂದು ನೈಸ್‌ ಕಂಪನಿಯು ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿರುವುದು ತಿಳಿದು ಬಂದಿದೆ.

 

 

ಬಿಎಂಐಸಿ ಯೋಜನೆಯ ಎಕ್ಸ್‌ಪ್ರೆಸ್‌ವೇ ರಸ್ತೆಯ ನಿರ್ಮಾಣಕ್ಕೆ ಭೂಮಿಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಮತ್ತು ಪ್ರಸ್ತಾವಿತ ರಸ್ತೆ ನಿರ್ಮಾಣಕ್ಕೆ ಅಡೆತಡೆಗಳು ಉದ್ದೇಶಿತ ಎಕ್ಸ್‌ಪ್ರೆಸ್‌ವೇ ರಸ್ತೆಯ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ಎನ್ಎಚ್ 275 ಗೆ ಸಂಪರ್ಕವನ್ನು ಸಂಪೂರ್ಣವಾಗಿ ಅಡ್ಡಿಪಡಿಸುತ್ತದೆ. ಅಲ್ಲದೇ ಈ ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ, ಎನ್‌ಎಚ್ 275 ಅನ್ನು ಸಂಪರ್ಕಿಸುವ ರಸ್ತೆ ಜೋಡಣೆಗೆ ಸಂಬಂಧಿಸಿದಂತೆ ರೇಖಾಚಿತ್ರವನ್ನು ಪರಿಶೀಲಿಸಬೇಕು ಎಂದು ನೈಸ್‌ ಕಂಪನಿಯು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 87 ಮತ್ತು 88 ರಲ್ಲಿ ಅರಣ್ಯೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನೈಸ್‌ ಕಂಪನಿಯು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 87 ಮತ್ತು 88 ರ ರೂಪಾಂತರ ಮತ್ತು ಆರ್‌ಟಿಸಿಯನ್ನು ಈಗಾಗಲೇ ಅರಣ್ಯ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ ಎಂದು 2002ರಲ್ಲಿನ ಪತ್ರವು ಸೂಚಿಸುತ್ತದೆ.

 

ಇದಲ್ಲದೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (18.06.2020) ರ ವಾರ್ಷಿಕ ವರದಿಯನ್ನು ಸರ್ಕಾರದ ಗಮನ ಸೆಳೆದಿದೆ. ಹೊಸಹಳ್ಳಿ ಗ್ರಾಮದ ಸದರಿ ಸರ್ವೆ ಸಂಖ್ಯೆ 87 ಮತ್ತು 88 ರಲ್ಲಿ ಅರಣ್ಯೀಕರಣ ಮಾಡಲಾಗಿದೆ. ಮತ್ತು ಅದೇ ರೀತಿ ನಿರ್ವಹಿಸಲಾಗುತ್ತಿದೆ ಎಂದು ವರದಿಯಲ್ಲಿಯೂ ವಿವರಿಸಿದೆ. ಅರಣ್ಯೀಕರಣ ಭೂಮಿಯನ್ನು ಸಂರಕ್ಷಿತ/ಮೀಸಲು ಅರಣ್ಯ ಎಂದು ಘೋಷಿಸುವ ಕುರಿತು ಅಧಿಸೂಚನೆ ಹೊರಡಿಸಿದ್ದರೂ, ರಾಜ್ಯ ಸರ್ಕಾರವು ಇನ್ನೂ ಅಂತಹ ಅಧಿಸೂಚನೆಗಳನ್ನು ಹೊರಡಿಸಿಲ್ಲ. ಆದ್ದರಿಂದ, ಡಿಐಜಿಎಫ್‌ನ ಮೇಲ್ವಿಚಾರಣಾ ವರದಿಯನ್ನು ಮರುಪರಿಶೀಲಿಸಬಹುದಾಗಿದೆ ಎಂದೂ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

 

ಇದಲ್ಲದೆ, ಬಿಎಂಐಸಿ ಯೋಜನೆಗೆ ಮೀಸಲಿಟ್ಟ ಭೂಮಿಗಳು ಮತ್ತು ಸ್ವಾಧೀನಗಳು ಮತ್ತು ಅವುಗಳ ಭೂ ವರ್ಗಾವಣೆಯನ್ನು ರಾಜ್ಯ ಭೂ ವರ್ಗಾವಣೆ ಸೇರಿದಂತೆ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಎತ್ತಿಹಿಡಿದಿವೆ. ಮತ್ತು ಬಿಎಂಐಸಿ ಯೋಜನೆಯನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಸಮಗ್ರ ಮೂಲಸೌಕರ್ಯ ಯೋಜನೆಯಾಗಿ ಗುರುತಿಸಿವೆ.

 

ಸರ್ವೋಚ್ಚ ನ್ಯಾಯಾಲಯವು 2006 ರ ತನ್ನ ತೀರ್ಪಿನಲ್ಲಿ, ವಿಷಯಗಳನ್ನು ಅಂಗೀಕರಿಸಿದ್ದ ರಾಜ್ಯ ಸರ್ಕಾರ ಮತ್ತು ಅದರ ಇಲಾಖೆಗಳು, ಸಾಧನಗಳು ಮತ್ತು ಯೋಜನಾ ಕಂಪನಿಗಳಿಗೆ ಬಿಎಂಐಸಿ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದೆ ಎಂದು ಸರ್ಕಾರದ ಗಮನಸೆಳೆದಿದೆ.

 

2011ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನೂ ಸಹ ನೈಸ್‌ ಕಂಪನಿಯು ವಿಸ್ತೃತವಾಗಿ ತನ್ನ ಪತ್ರದಲ್ಲಿ ವಿವರಿಸಿದೆ.

 

ಬಿಎಂಐಸಿಪಿಗಾಗಿ ಭೂಸ್ವಾಧೀನವನ್ನು ಎತ್ತಿಹಿಡಿದಿದ್ದರೂ, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಯಾವುದೇ ಭೂಮಿಯನ್ನು ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ.

 

 

ರಾಜ್ಯ ಸರ್ಕಾರವು ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ಈ ಯೋಜನೆಯಡಿಯಲ್ಲಿ ಸ್ವಾಧೀನಪಡಿಸಿಕೊಂಡ ಯಾವುದೇ ಭೂಮಿಯನ್ನು ಬಿಡುಗಡೆ ಮಾಡುವುದು ಸೇರಿದಂತೆ ಏನನ್ನೂ ಮಾಡಬಾರದು ಎಂದು ಈ ನ್ಯಾಯಾಲಯ ಸ್ಪಷ್ಟಪಡಿಸಿದೆ. ಏಕೆಂದರೆ ಅನೇಕ ಭೂಮಿಗಳು ಯೋಜನೆಯ ಪೂರ್ಣಗೊಳಿಸುವಿಕೆಗೆ ಅಡ್ಡಿಯಾಗುತ್ತವೆ. ಮತ್ತು ವಿಶಾಲ ಸಾರ್ವಜನಿಕ ಹಿತಾಸಕ್ತಿಗೆ ಹೊಂದಿಕೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅವಲೋಕಿಸಿರುವುದನ್ನೂ ಪತ್ರದಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

ಬಿಎಂಐಸಿಪಿಗಾಗಿ ಸ್ವಾಧೀನಪಡಿಸಿಕೊಳ್ಳಲು ಸೂಚಿಸಲಾದ ಯಾವುದೇ ಭೂಮಿಯನ್ನು ಡಿ-ನೋಟಿಫೈ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮುಂದೆ ವಾಗ್ದಾನ ಮಾಡಿರುವುದನ್ನೂ ನೈಸ್‌ ಕಂಪನಿಯು ರಾಜ್ಯ ಸರ್ಕಾರವನ್ನು ನೆನಪಿಸಿದೆ. ಒಡಿಪಿ 2004 ರ ಪ್ರಕಾರ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ದಿಷ್ಟ ನಿರ್ದೇಶನವನ್ನು ನೀಡಿರುವುದನ್ನೂ ಸಹ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಈ ಎಲ್ಲವನ್ನೂ ಸರ್ಕಾರವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪತ್ರದಲ್ಲಿ ಕೋರಿರುವ ನೈಸ್‌ ಕಂಪನಿಯು, ನ್ಯಾಯಾಲಯದ ಅನುಮತಿಯಿಲ್ಲದೆ ಬಿಎಂಐಸಿ ಯೋಜನೆಗೆ ವರ್ಗಾಯಿಸಲಾದ ಯಾವುದೇ ಭೂಮಿಯನ್ನು ಬಿಡುಗಡೆ ಮಾಡಲು/ಹಿಂತೆಗೆದುಕೊಳ್ಳಲು ಪ್ರಾರಂಭಿಸುವ ಯಾವುದೇ ಕ್ರಮವು ಸರ್ವೋಚ್ಚ ನ್ಯಾಯಾಲಯದ ಮೇಲಿನ ಆದೇಶಗಳಿಗೆ ವಿರುದ್ಧವಾಗಿರುತ್ತದೆ. ಸುಪ್ರೀಂ ಕೋರ್ಟ್‌ ನೀಡಿರುವ ಈ ನಿರ್ದೇಶನಗಳು ಇಡೀ ಯೋಜನೆಗೆ ಸಂಬಂಧಿಸಿವೆ ಎಂದು ಹೇಳಿರುವುದು ಗೊತ್ತಾಗಿದೆ.

 

ಈ ಪ್ರದೇಶದ ಭೂಮಿಗಳು ತುಂಬಾ ಅವಶ್ಯಕವಾಗಿವೆ. ರಸ್ತೆ ಕೆಲಸವನ್ನು ಪ್ರಾರಂಭಿಸಲಾಗಿದೆ. ಮತ್ತು ಯೋಜನೆಗೆ ಅಗತ್ಯವಿರುವ ಎಲ್ಲಾ ಭೂಮಿಯನ್ನು ಕೆಐಎಡಿಬಿ ಮೂಲಕ ಯೋಜನಾ ಕಂಪನಿಗೆ ವರ್ಗಾಯಿಸಿದ ನಂತರ ಅದು ಪೂರ್ಣಗೊಳ್ಳುತ್ತದೆ. ಅರಣ್ಯ ಭೂಮಿಯನ್ನು ವರ್ಗಾವಣೆ ಮಾಡುವ ಎಲ್ಲಾ ಇತರ ಷರತ್ತುಗಳನ್ನು ಪಾಲಿಸಲಾಗಿದೆ. ಇದರಲ್ಲಿ ಗುತ್ತಿಗೆ ಬಾಡಿಗೆಗಳನ್ನು ಸಕಾಲಿಕವಾಗಿ ಪಾವತಿಸುವುದು ಸೇರಿದೆ. ನಿಯಮಗಳ ಪ್ರಕಾರ ಅಗತ್ಯವಿರುವ ಎಲ್ಲಾ ಗುತ್ತಿಗೆ ಬಾಡಿಗೆಗಳನ್ನು ಪಾವತಿಸುವುದನ್ನು ಮುಂದುವರಿಸುತ್ತೇವೆ ಎಂದು ನೈಸ್‌ ಕಂಪನಿಯು ಒತ್ತಿ ಹೇಳಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಯೋಜನೆಯ ಬಹುಪಾಲು ಭಾಗ ಪೂರ್ಣಗೊಂಡಿದೆ. ಸಾವಿರಾರು ಪ್ರಯಾಣಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಾಣೆಯಾಗಿರುವ ಕೆಲವು ಸಂಪರ್ಕಗಳು ಮತ್ತು ಆಯಾ ಪ್ರದೇಶದ ಭೂಮಿಯನ್ನು ಒಳಗೊಂಡಂತೆ ರಸ್ತೆಯ ಸಣ್ಣ ಭಾಗವನ್ನು ಪೂರ್ಣಗೊಳಿಸಬೇಕಾಗಿದೆ. ಕೆಐಎಡಿಬಿಯಿಂದ ಉಳಿದ ಜಮೀನಿನ ಸಣ್ಣ ಭಾಗವು ದೊರೆತ ಕೂಡಲೇ ಕಂಪನಿಯು ಈ ವಿಸ್ತರಣೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಚಿಂತಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Topics

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Related Articles

Popular Categories

error: Content is protected !!