Monday | June 15, 2026 |

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ  ಹಂಚಿಕೆಯಾಗಿದ್ದ 1,200 ಕೋಟಿ ರುಪಾಯಿ ಅನುದಾನದ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ.

 

ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯ ಸರ್ಕಾರಗಳಿಗೆ 2026ರ ಫೆಬ್ರುವರಿ 6ರಂದೇ ಈ ಕುರಿತು ಪತ್ರ ಬರೆದಿದೆ. ಈ 12 ರಾಜ್ಯಗಳಿಗೆ ತಲಾ 100 ಕೋಟಿ ರು ನಂತೆ 1,200 ಕೋಟಿ ರುಪಾಯಿ ಅನುದಾನ ಹಂಚಿಕೆ ಮಾಡಿತ್ತು. ಆದರೆ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪತ್ರ ಬರೆದಿದೆ.

 

ಈ ಪತ್ರವನ್ನಾಧರಿಸಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್‌ ಮಹಾನಿರ್ದೇಶಕರಿಗೆ 2026ರ ಫೆ.26ರಂದು ಪತ್ರ ಬರೆದಿದೆ.  ಅಗ್ನಿಶಾಮಕ ಇಲಾಖೆಗೆ ಪತ್ರ ಬರೆಯುವ ಮುನ್ನ ಅಧಿಕಾರಿಗಳು ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ವಿಪತ್ತು ನಿರ್ವಹಣೆ ಮತ್ತು ಕೇಂದ್ರದಿಂದ ಬಂದಿದ್ದ ಅನುದಾನ, ಅದರ ಬಳಕೆ ಕುರಿತು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ  ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.

 

ಕಂದಾಯ ಇಲಾಖೆಯ ವಿಪತ್ತು  ನಿರ್ವಹಣೆ ವಿಭಾಗವು ಬರೆದಿರುವ  ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳಿಗೆ ಎನ್‌ಡಿಆರ್‍ಎಫ್‌ರಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ಸ್ವಯಂ ಸೇವಕರ ತರಬೇತಿ, ಇಆರ್‍‌ಕೆಗಳ ಸಂಗ್ರಹಣೆ, ಯುವ ಆಪದ್ ಮಿತ್ರ ಯೋಜನೆ ಅನುಷ್ಠಾನ, ಎಂಐಎಸ್ ನವೀಕರಣ, ವಿಮಾ ರಕ್ಷಣೆ ಒಪ್ಪಂದಗಳಿಗೆ ಸಹಿ ಹಾಕುವುದು ಸೇರಿದಂತೆ ಪ್ರಮುಖ ಕಾರ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ ಮೂರನೇ ಕಂತಿನ ಅನುದಾನ ಹಂಚಿಕೆ ಮಾಡಬೇಕಿದೆ. ಅಂತಿಮ ಕಂತಿನ ಬಿಡುಗಡೆಗೆ ಅನುವು ಮಾಡಿಕೊಡಲು 2026ರ ಮಾರ್ಚ್‌ 15ರೊಳಗೇ ಎನ್‌ಡಿಎಂಎಗೆ ಬಾಕಿ ಇರುವ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಸೂಚಿಸಿದೆ.

 

 

ವಿಪತ್ತುಗಳ ಅಪಾಯವನ್ನು ತಡೆಗಟ್ಟಲುಕಡಿಮೆ ಮಾಡಲು ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಸ್ಥಾಪಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಎನ್‌ಡಿಆರ್‌ಎಫ್ ಜೊತೆಗೆ ವಿಶೇಷವಾಗಿ ತಗ್ಗಿಸುವಿಕೆಯ ಯೋಜನೆಗಳಿಗಾಗಿ ಈ ಪ್ರತ್ಯೇಕ ನಿಧಿಯನ್ನು ರಚಿಸಿದೆ.

 

15 ನೇ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಪರಿಹಾರ ನಿಧಿಗಳನ್ನು ಸ್ಥಾಪಿಸಲು ಶಿಫಾರಸುಗಳನ್ನು ಮಾಡಿತ್ತು. ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಂಚಿಕೆಗಳನ್ನು ಸೂಚಿಸಿತ್ತು. ಹಣಕಾಸು ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಕೇಂದ್ರ ಸರ್ಕಾರವು 2021-22 ರಿಂದ 2025-26 ರ ಅವಧಿಗೆ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಗೆ 13,693 ಕೋಟಿ ರೂ. ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಗೆ 32,030.60 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು.

 

 

15 ನೇ ಹಣಕಾಸು ಆಯೋಗದ ಮಧ್ಯಂತರ ಶಿಫಾರಸುಗಳ ಆಧಾರದ ಮೇಲೆ 2020-21 ರ ಅವಧಿಗೆ ಎಸ್‌ಡಿಎಂಎಫ್‌ಗೆ 5,796.60 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.

 

2021-22ರಲ್ಲಿ ಎನ್‌ಡಿಆರ್‍‌ಎಂಎಫ್‌ ಅಡಿಯಲ್ಲಿ 12,390 ಕೋಟಿ ಮತ್ತು ಎನ್‌ಡಿಎಂಎಫ್‌ಗೆ 2,478.00 ಕೋಟಿ ರು., 2022-23ರಲ್ಲಿ ಎನ್‌ಡಿಆರ್‍‌ಎಂಎಫ್‌ಗೆ 13,010 ಕೋಟಿ, ಎನ್‌ಡಿಎಂಎಫ್‌ಗೆ 2,602 ಕೋಟಿ, 2023-24ರಲ್ಲಿ ಎನ್‌ಡಿಆರ್‍‌ಎಂಎಫ್‌ಗೆ 13,660 ಕೋಟಿ, ಎನ್‌ಡಿಎಂಎಫ್‌ಗೆ 2,732 ಕೋಟಿ, 2024-25ರಲ್ಲಿ ಎನ್‌ಡಿಆರ್‍‌ಎಂಎಫ್‌ಗೆ 14,343 ಕೋಟಿ, ಎನ್‌ಡಿಎಂಎಫ್‌ಗೆ 2,869 ಕೋಟಿ, 2025-26ರಲ್ಲಿ ಎನ್‌ಡಿಎಆರ್‍‌ಎಂಎಫ್‌ಗೆ 15,060 ಕೋಟಿ ಸೇರಿ ಒಟ್ಟಾರೆ 68,463 ಕೋಟಿ ರು ಅನುದಾನ ಹಂಚಿಕೆ ಮಾಡಿತ್ತು.

 

 

ಅದೇ ರೀತಿ ಎನ್‌ಡಿಎಂಎಫ್‌ಗೆ 2026-26ರಲ್ಲಿ 3,012 ಕೋಟಿ ಸೇರಿ ಒಟ್ಟಾರೆ 13,693 ಕೋಟಿ ರುಪಾಯಿ ಹಂಚಿಕೆ ಮಾಡಿತ್ತು.

 

 

 

ಅಲ್ಲದೇ ಬರ ಪೀಡಿತ ಕರ್ನಾಟಕ, ಬಿಹಾರ, ಗುಜರಾತ್, ಜಾರ್ಖಂಡ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಒಟ್ಟು 12 ರಾಜ್ಯಗಳಿಗೆ ತಲಾ 100 ಕೋಟಿಯಂತೆ ಒಟ್ಟಾರೆ 1,200 ಕೋಟಿ ರುಪಾಯಿಗಳನ್ನು ಬರ ತಗ್ಗಿಸುವಿಕೆ ನಿಧಿಯಡಿ 2021-26ರವರೆಗೆ ಹಂಚಿಕೆಮಾಡಿದೆ.

 

 

ಅದೇ ರೀತಿ ಭೂಕಂಪ ಮತ್ತು ಭೂ ಕುಸಿತಗಳನ್ನು ತಡೆಗಟ್ಟಲು 2021-22ರಿಂದ 2025-26ರವರೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಈಶಾನ್ಯ ರಾಜ್ಯಗಳಿಗೆ ತಲಾ 250 ಕೋಟಿಯಂತೆ ಒಟ್ಟಾರೆ 750 ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಿದೆ.

 

 

ಹಾಗೆಯೇ ಬೆಂಗಳೂರು ನಗರ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ರಾಜ್ಯಕ್ಕೆ ವಾರ್ಷಿಕವಾಗಿ 500 ಕೋಟಿ ರು ಹಂಚಿಕೆ ಮಾಡಿತ್ತು. 2021-26ರ ಅವಧಿಯಲ್ಲಿ ಈ ನಗರಗಳಿಗೆ ಒಟ್ಟಾರೆ 2,500 ಕೋಟಿ ರುಪಾಯಿ ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಬೆಂಗಳೂರು ನಗರಕ್ಕೆ ವಾರ್ಷಿಕ 50 ಕೋಟಿಯಂತೆ 2021-26ರವರೆಗೆ 250 ಕೋಟಿ ರುಪಾಯಿ ಹಂಚಿಕೆ ಮಾಡಿದೆ.

 

 

 

 

ಮೊದಲ ಬಾರಿಗೆ ಸರ್ಕಾರವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿಪತ್ತು ಅಪಾಯಗಳನ್ನು ತಗ್ಗಿಸಲು ಮಾತ್ರ ಹಣವನ್ನು ಹಂಚಿಕೆ ಮಾಡಿತ್ತು. ಇದು ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡಲು ತಗ್ಗಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸಹಾಯ ಮಾಡಲಿದೆ. ಕೇಂದ್ರ ಸರ್ಕಾರವು ಎಸ್‌ಡಿಎಂಫ್‌ಎಫ್‌ನಲ್ಲಿ ಕೇಂದ್ರದ ಪಾಲಾಗಿ ಎಲ್ಲಾ ರಾಜ್ಯಗಳಿಗೆ ಶೇ 75 (ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ಶೇ 90) ಕೊಡುಗೆ ನೀಡುತ್ತಿದೆ.

 

 

2013-14ರಿಂದ 2022-23ರವರೆಗೆ ರಾಜ್ಯದಲ್ಲಿ ಕಂದಾಯ ಇಲಾಖೆಯು ನೀಡಿದ್ದ ಒಟ್ಟು 43.37 ಕೋಟಿ ರು.ಗಳಲ್ಲಿ 23.68 ಕೋಟಿ ರು ಖರ್ಚಾಗಿದೆ. ಎನ್‌ಡಿಆರ್‍‌ ಪೋರ್ಸ್‌ನಲ್ಲಿ 7.69 ಕೋಟಿ ರು ಉಳಿದಿತ್ತು. ಆದರೆ 2022-23ರಲ್ಲಿ ಹಂಚಿಕೆಯಾಗಿದ್ದ  ನಿಧಿಯ ಒಟ್ಟು 12.00 ಕೋಟಿ ರುಪಾಯಿ ಕಳೆದು ಹೋಗಿದೆ ಎಂದು ಗಮನಿಸಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಸಾವು, ಗಾಯ, ವರ್ಗಗಳ ಆಧಾರದ ಮೇಲೆ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಕೈಗಾರಿಕೆಗಳು, ರಸ್ತೆಗಳು, ಸೇತುವೆಗಳು, ಕಟ್ಟಡಗಳಂತಹ ನಿರ್ಣಾಯಕ ಮೂಲಸೌಕರ್ಯಗಳ, ಸಾಂಸ್ಕೃತಿಕ ಪರಂಪರೆಗಳು ಮತ್ತಿತರೆ ಕ್ಷೇತ್ರಗಳಲ್ಲಿನ ಆರ್ಥಿಕ ನಷ್ಟಗಳ ಕುರಿತು ರಾಜ್ಯ ಅಧಿಕಾರಿಗಳು, ಆಯಾ ಜಿಲ್ಲೆಗಳು ತಮ್ಮ ಸ್ಥಳೀಯ ವಿಪತ್ತುಗಳ ಕುರಿತು ದತ್ತಾಂಶವನ್ನು ನಮೂದಿಸಬೇಕು. ಆದರೆ ಇಂತಹ ಜವಾಬ್ದಾರಿಯು ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿತ್ತು.

 

ಹೆಸರಿಗಷ್ಟೇ ಆಪ್ತಮಿತ್ರ!

 

ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ(2016-17)  ಕೇಂದ್ರ ಸರ್ಕಾರವು ಆಪ್ತಮಿತ್ರ ಯೋಜನೆಯನ್ನು ಅನುಮೋದಿಸಿತ್ತು. ಆದರೆ ಈ ಯೋಜನೆಯಡಿಯಲ್ಲಿ ತರಬೇತಿ ಪಡೆದಿದ್ದ ಸ್ವಯಂ ಸೇವಕರಿಗೆ ತುರ್ತು ಪ್ರತಿಸ್ಪಂದಕ ಕಿಟ್‌ಗಳನ್ನೇ ನೀಡಿರಲಿಲ್ಲ. ಹೀಗಾಗಿ ಈ  ಯೋಜನೆಯು ಹೆಸರಿಗಷ್ಟೇ ಆಪ್ತಮಿತ್ರವಾಗಿತ್ತು.

 

ಈ ಯೋಜನೆಯಡಿಯಲ್ಲಿ 2022ರ ಜೂನ್‌ನಿಂದ ಆಗಸ್ಟ್‌ವರೆಗೆ 11 ಜಿಲ್ಲೆಗಳಲ್ಲಿ 3,400 ಸ್ವಯಂ ಸೇವಕರಿಗೆ ತರಬೇತಿ ನೀಡಿತ್ತು. ಇದಕ್ಕಾಗಿ 4.14 ಕೋಟಿ ರು ವೆಚ್ಚವಾಗಿತ್ತು ಎಂದು ದಾಖಲೆಗಳಲ್ಲಿ ತೋರಿಸಿತ್ತು. ಆದರೆ ತುರ್ತು ಪ್ರತಿಸ್ಪಂದಕ ಕಿಟ್‌ಗಳನ್ನು ಖರೀದಿಸಿ ಯಾವುದೇ ಪ್ರಶಿಕ್ಷಣಾರ್ಥಿಗಳಿಗೆ ವಿತರಿಸಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಅಲ್ಲದೇ ತರಬೇತಿ ಪಡೆದಿದ್ದ ಸ್ವಯಂ ಸೇವಕರ ಸೇವೆಯನ್ನು ಅಪಾಯದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಸೂಚಿಸುವ ಯಾವುದೇ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ ಯಾವುದೇ ದಾಖಲೆಗಳೂ ಲಭ್ಯವಿಲ್ಲ ಎಂದು ಸಿಎಜಿ ವರದಿಯು ಪತ್ತೆ ಹಚ್ಚಿತ್ತು.

Hot this week

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...
Please Scan to make Your Contribution

Topics

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

Related Articles

Popular Categories

error: Content is protected !!