ಬೆಂಗಳೂರು; ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿ ಹುದ್ದೆಯಿಂದ ಪ್ರಶಾಂತ್ ಕುಮಾರ್ ಠಾಕೂರ್ ಅವರು ವರ್ಗಾವಣೆಗೊಂಡಿದ್ದರೂ ಸಹ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರ ಪತ್ನಿ ಶೋಭಾ ಪಾಟೀಲ್ ವಿರುದ್ಧದ ದೂರಿಗೆ ಸಂಬಂಧಿಸಿದ ಕಡತವನ್ನು ತಮ್ಮ ವಶದಲ್ಲೇ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ಪತ್ನಿ ಶೋಭಾ ಪಾಟೀಲ್ ಅವರ ವಿರುದ್ಧ ಜನಾಧಿಕಾರ ಸಂಘರ್ಷ ಸಮಿತಿಯು ಗಂಭೀರ ಸ್ವರೂಪದ ಆರೋಪ ಹೊರಿಸಿ ದೂರು ಸಲ್ಲಿಸಿತ್ತು. ಈ ದೂರಿನ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಎಡಿಜಿಪಿ ಆಗಿದ್ದ ಠಾಕೂರ್ ಅವರು ಯಾವುದೇ ಕ್ರಮ ವಹಿಸಿರಲಿಲ್ಲ. ಅಲ್ಲದೇ ಎಡಿಜಿಪಿ ಹುದ್ದೆಯಿಂದ ವರ್ಗಾವಣೆಗೊಂಡ ನಂತರವೂ ಇದೇ ಕಡತವನ್ನು ತಮ್ಮ ಬಳಿ ಇರಿಸಿಕೊಂಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಶೋಭಾ ಪಾಟೀಲ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಏನು ಕ್ರಮಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಲೋಕಾಯುಕ್ತ ಪೊಲೀಸ್ ವಿಭಾಗವು ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಎಚ್ ಎಂ ವೆಂಕಟೇಶ್ ಅವರು ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗದ ಮಾಹಿತಿ ಹಕ್ಕು ಅಧಿಕಾರಿಯಾದ ಎಸ್ಪಿ ಅಂಜಲಿ ಅವರು ಕಡತವು ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರ ಬಳಿಯೇ ಇದೆ ಎಂದು ಆಯೋಗದ ಮುಂದೆ ಹೇಳಿಕೆ ನೀಡಿರುವುದು ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
‘ಕಡತವು ಹಿಂದಿನ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರ ವಶದಲ್ಲೇ ಇದೆ. ಮತ್ತು ಕಡತವನ್ನು ಹಿಂದಿರುಗಿಸಬೇಕು ಎಂದು ಒಂದು ವರ್ಷದಿಂದಲೂ ಅವರಿಗೆ ಲೋಕಾಯುಕ್ತ ಪೊಲೀಸ್ ವಿಭಾಗವು ಪತ್ರ ಬರೆದಿದೆ. ಆದರೂ ಸಹ ಕಡತದ ಮಾಹಿತಿಯು ಬಾಕಿ ಇದೆ,’ ಎಂದು ಆಯೋಗಕ್ಕೆ ಎಸ್ ಪಿ ಅಂಜಲಿ ಹೇಳಿಕೆ ನೀಡಿರುವುದು ಗೊತ್ತಾಗಿದೆ.
‘ಮಾಹಿತಿಯ ಪಾಲಕರಾದ (custodian) ಪ್ರಶಾಂತ್ ಕುಮಾರ್ ಠಾಕೂರ್ ಅವರಿಂದ ದೂರಿನ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯು ಬರುವುದು ಬಾಕಿ ಇದ್ದು ಉತ್ತರ ದೊರಕಿದ್ದಲ್ಲಿ ಆಯೋಗಕ್ಕೆ ಕೂಡಲೇ ಸಲ್ಲಿಸಲಾಗುವುದು. ಹಾಗೂ ಪಿಐಒ ಆದ ನಾನು ಈ ದೂರು, ಮಾಹಿತಿಯ (custodian) ಪಾಲಕರಾಗಿಲ್ಲ. ಮೇಲ್ಮನವಿದಾರರು ಆಯೋಗದ ಎಲ್ಲಾ ವಿಚಾರಣೆಗಳಲ್ಲಿ ಪಿಇಓ ದೂರನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುತ್ತಾರೆ ಎಂದು ಮೌಖಿಕವಾಗಿ ಮಾಡುವ ಆರೋಪಗಳು ಸಮಂಜಸವಲ್ಲ,’ ಎಂದು ಆಯೋಗಕ್ಕೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಲ್ಲದೇ ಎಚ್ ಎಂ ವೆಂಕಟೇಶ್ ಅವರು ಕೋರಿದ್ದ ಮಾಹಿತಿಯು ಲೋಕಾಯುಕ್ತ ಎಡಿಜಿಪಿ ಆಪ್ತ ಶಾಖೆ, ಐಜಿ ಆಪ್ತ ಶಾಖೆ, ಎಸ್ ಪಿ (ಆಡಳಿತ), ಪೊಲೀಸ್ ವಿಭಾಗದ ಯಾವ ಶಾಖೆಯಲ್ಲಿಯೂ ಈ ಸಂಬಂಧ ಮಾಹಿತಿ ಮತ್ತು ದಾಖಲಾತಿಗಳು ಲಭ್ಯವಿಲ್ಲ. ಈ ಮಾಹಿತಿ ಮತ್ತು ಸಂಬಂಧಿತ ಕಡತವು ಎಡಿಜಿಪಿಯಾಗಿದ್ದ ಪ್ರಶಾಂತ ಕುಮಾರ್ ಠಾಕೂರ್ ಅವರಿಗೆ ರವಾನಿಸಲಾಗಿತ್ತು. ಅಲ್ಲದೇ ಈ ಮಾಹಿತಿ ಮತ್ತು ಕಡತದ ಕಸ್ಟೋಡಿಯನ್ ಕೂಡ ಅವರೇ ಆಗಿದ್ದರು.
ಲೋಕಾಯುಕ್ತ ಪೊಲೀಸ್ ವಿಭಾಗದ ಮಾಹಿತಿ ಹಕ್ಕು ಅಧಿಕಾರಿ ಎಸ್ ಪಿ ಅಂಜಲಿ ಅವರು ಮಾಹಿತಿ ಕೋರಿ ಠಾಕೂರ್ ಅವರಿಗೂ ಪತ್ರ ಬರೆದಿದ್ದರು. ಆದರೆ ಠಾಕೂರ್ ಅವರು ಈ ಸಂಬಂಧಿತ ಯಾವುದೇ ಮಾಹಿತಿ ಮತ್ತು ಕಡತವನ್ನೂ ಹಿಂದಿರುಗಿಸಿಲ್ಲ ಎಂದು ತಿಳಿದು ಬಂದಿದೆ.
ಪತ್ರದಲ್ಲೇನಿತ್ತು?
‘ಹೆಚ್ ಎಂ ವೆಂಕಟೇಶ್ ಅವರಿಗೆ ಸಂಬಂಧಿಸಿದ ದೂರು ಅರ್ಜಿಯನ್ನು ಐಜಿಪಿ ಅವರ ಕಚೇರಿಯು ಎಡಿಜಿಪಿ ಅವರಿಗೆ ಖುದ್ದಾಗಿ ನೀಡಿದೆ. ಆದರೆ ಎಡಿಜಿಪಿ ಕಚೇರಿಯು ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದೆ. ಮತ್ತು ಈ ಬಗ್ಗೆ ಟಪಾಲು ವಹಿಯನ್ನೂ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಈ ಅರ್ಜಿಯನ್ನು ಆಪ್ತ ಶಾಖೆಯಲ್ಲಿ ಸ್ವೀಕರಿಸಿರುವ ಬಗಗೆ ನಮೂದು ಇರುವುದಿಲ್ಲ,’ ಎಂದು ತಿಳಿಸಿದ್ದಾರೆ ಎಂದು ಎಸ್ ಪಿ ಅಂಜಲಿ ಅವರು ಠಾಕೂರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮತ್ತು ಹೆಚ್ ಎಂ ವೆಂಕಟೇಶ್ ಅವರು ಸಲ್ಲಿಸಿದ ದೂರು ಅರ್ಜಿಯ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಹಕ್ಕುಕ ಆಯೋಗಕ್ಕೆ ಮಾಹಿತಿ ನೀಡಬೇಕಾಗಿದೆ. ಈ ಅರ್ಜಿಯ ಕುರಿತು ತಾವು ಕೈಗೊಂಡ ಕ್ರಮದ ಕುರಿತು ಮಾಹಿತಿಯನ್ನು ತುರ್ತಾಗಿ ನೀಡಬೇಕು ಎಂದು ಎಸ್ ಪಿ ಅಂಜಲಿ ಅವರು 2025ರ ಜನವರಿ 2ರಂದು ಠಾಕೂರ್ ಅವರಿಗೆ ಪತ್ರ ಬರೆದಿದ್ದರು.
ಪ್ರಕರಣದ ವಿವರ
ಕರ್ನಾಟಕದ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರ ಕುಟುಂಬ ಸದಸ್ಯರು ಲೋಕಾಯುಕ್ತ ಕಚೇರಿಯ ಮೂಲಕ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆ ಮತ್ತು ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದಾರೆ ಎಂದು ಗುರುತರ ಆರೋಪ ಮಾಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಖೋಡೆ ಕುಟುಂಬದ ಕೆಲವು ಸದಸ್ಯರು ಪತ್ರದ ಮೂಲಕ ದೂರು ಸಲ್ಲಿಸಿದ್ದರು.
ಖೋಡೆ ಕುಟಂಬ ಸದಸ್ಯರಾದ ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಮತ್ತು ಸಹೋದರ ಎಂ ಎಂ ಅನಂತಮೂರ್ತಿ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ 2022ರ ಡಿಸೆಂಬರ್ 12ರಂದು ಪತ್ರ ಬರೆದಿದ್ದು, ಲೋಕಾಯುಕ್ತರಾದ ಬಿ ಎಸ್ ಪಾಟೀಲ್ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಗಂಭೀರವಾಗಿ ಆರೋಪಿಸಿದ್ದರು.
ಇದಲ್ಲದೆ ವೃತ್ತಿ ದುರ್ನಡತೆಯ ಕುರಿತಾಗಿ ಪಾಟೀಲ್ ಅವರ ಪತ್ನಿ, ವಕೀಲೆ ಶೋಭಾ ಮತ್ತು ಪುತ್ರ, ವಕೀಲ ಸೂರಜ್ ಪಾಟೀಲ್ ಅವರ ವಿರುದ್ಧ ಪ್ರತ್ಯೇಕವಾಗಿ ರಾಜ್ಯ ವಕೀಲರ ಪರಿಷತ್ನ (ಕೆಎಸ್ಬಿಸಿ) ಶಿಸ್ತು ಸಮಿತಿಗೂ ದೂರು ಸಲ್ಲಿಸಿದ್ದರು.
ಖೋಡೆ ಕುಟುಂಬಕ್ಕೆ ಸೇರಿದ ಸಾವಿರಾರು ಕೋಟಿ ಚರ ಮತ್ತು ಸ್ಥಿರ ಆಸ್ತಿ ಇದ್ದು, ಬಿಲ್ಡರ್ ಮತ್ತು ಡೆವಲಪರ್ಗಳ ಅಕ್ರಮ ಕೂಟು ರಚಿಸಿಕೊಂಡು ಖೋಡೆ ಕುಟುಂಬದ ಪುರುಷರು ಕಾನೂನುನಾತ್ಮಕವಾಗಿ ತಮಗೆ ದಕ್ಕಬೇಕಾದ ಆಸ್ತಿಯ ವಿವಾದವನ್ನು ನ್ಯಾಯಾಲಯದಲ್ಲಿ ವಿಳಂಬಗೊಳಿಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲದಲ್ಲಿನ ಅಸಲು ದಾವೆಯಲ್ಲಿ 16ನೇ ಪ್ರತಿವಾದಿಯಾಗಿರುವ ಸೋದರ ಮಾವ ಕೆ ಎಲ್ ಸ್ವಾಮಿ ಅವರ ಹತ್ತಿರದ ಸಂಬಂಧಿ ಮಹಿಮಾ ಪಟೇಲ್ ಅವರ ಜೊತೆ ನಿಕಟ ಸಂಪರ್ಕ ಹೊಂದಿರುವುದನ್ನು ಹಾಗೂ ಪ್ರೆಸ್ಟೀಜ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಹೊಂದಿರುವ ಸಂಬಂಧವನ್ನು ದಾವೆ ಮುನ್ನಡೆಸುವುದಕ್ಕೂ ಮುನ್ನ ಶೋಭಾ ಅವರು ತಮಗೆ ಬಹಿರಂಗಪಡಿಸಿರಲಿಲ್ಲ.
ಆಸ್ತಿಯಲ್ಲಿ ನಮ್ಮ ಪಾಲು ಪಡೆದುಕೊಡುವುದಕ್ಕೆ ಬದಲಾಗಿ, ಈ ದಾವೆಯಿಂದ ಅಕ್ರಮ ಸಂಪಾದನೆ ಮಾಡಿಕೊಳ್ಳುವ ಕ್ರೂರ ಉದ್ದೇಶವನ್ನು ಬಿ ಎಸ್ ಪಾಟೀಲ್ ಕುಟುಂಬ ಸದಸ್ಯರು ಹೊಂದಿದ್ದರು. ಸಾಂದರ್ಭಿಕ ಘಟನೆಗಳು ಮೇಲೆ ಉಲ್ಲೇಖಿಸಿದ ವ್ಯಕ್ತಿ ಮತ್ತು ಸಂಸ್ಥೆಯ ಜೊತೆಗಿನ ನಂಟನ್ನು ಬಹಿರಂಗಪಡಿಸಿದೆ ಎಂದು ಪತ್ರದಲ್ಲಿ ಆರೋಪಿಸಿದ್ದರು.
ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಅವರು ಕುಟುಂಬದ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದು, ಕುಟುಂಬದ ಇತರ ಸದಸ್ಯರ ಕಿರುಕುಳದಿಂದ ಬೇಸತ್ತಿದ್ದೇವೆ. ನ್ಯಾಯ ಪಡೆಯುವ ಭಾಗವಾಗಿ ಬಿ ಎಸ್ ಪಾಟೀಲ್ ಅವರ ಪತ್ನಿ ಶೋಭಾ ಪಾಟೀಲ್ ಅವರನ್ನು ಸಂಪರ್ಕಿಸಲಾಗಿತ್ತು. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿಯಿರುವ ದಾವೆಯ ದಾಖಲೆಯಲ್ಲಿನ ವಕೀಲರಾದ ಶೋಭಾ ಮತ್ತು ಸೂರಜ್ ಪಾಟೀಲ್ ಅವರು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸೋದರ ಸಂಸ್ಥೆಗಳ ಜೊತೆ ಕೈಜೋಡಿಸಿದರು ಎಂದು ದೂರಲಾಗಿತ್ತು.
ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರತಿಷ್ಠಿತ ಖೋಡೆ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎನ್ನಲಾದ ಆಡಿಯೋದಲ್ಲಿದ್ದ ಧ್ವನಿಯು, ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ಪತ್ನಿ ಶೋಭಾ ಪಾಟೀಲ್ ಅವರದ್ದೇ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣಾ ವರದಿಯು ಸಾಬೀತುಪಡಿಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಧಿಕಾರ ಸಂಘರ್ಷ ಪರಿಷತ್ ಈಗಾಗಲೇ ಫೋರೆನ್ಸಿಕ್ ಲ್ಯಾಬ್ ವರದಿಯೊಂದಿಗೆ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ದಾಖಲಿಸಿತ್ತು. ಈ ದೂರು ಸಲ್ಲಿಕೆಯಾಗಿ 5 ತಿಂಗಳಾದರೂ ಲೋಕಾಯುಕ್ತ ಪೊಲೀಸ್ ವಿಭಾಗದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿರಲಿಲ್ಲ. ಅಲ್ಲದೇ ಈ ದೂರಿನ ಕುರಿತು ಕೈಗೊಂಡ ಕ್ರಮಗಳ ಕುರಿತು ಐಜಿಪಿ ಕಚೇರಿಯೂ ಯಾವುದೇ ಮಾಹಿತಿ ಒದಗಿಸಿರಲಿಲ್ಲ.
ಲೋಕಾಯುಕ್ತರ ಪತ್ನಿ ವಿರುದ್ಧ ಪ್ರಕರಣ; ದೂರರ್ಜಿ ಮೇಲೆ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸದ ಐಜಿ ಕಚೇರಿ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಆಡಿಯೋದಲ್ಲಿದ್ದ ಧ್ವನಿಯು ಶೋಭಾ ಪಾಟೀಲರದ್ದೇ ಅಥವಾ ಅಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಜನಾಧಿಕಾರ ಸಂಘರ್ಷ ಪರಿಷತ್ ಕ್ಲೂ 4 ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಸಂಸ್ಥೆಯ ಮೊರೆ ಹೊಕ್ಕಿತ್ತು. ಧ್ವನಿ ವಿಶ್ಲೇಷಣೆಗೆ ಧ್ವನಿ ಮುದ್ರಿಕೆ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ 2022ರ ಮೇ 2ರಂದು ಶೋಭಾ ಪಾಟೀಲ್ ಅವರು ಭಾಗವಹಿಸಿದ್ದ ವನಿತಾ ವಿಹಾರ ಕಾರ್ಯಕ್ರಮದ ಭಾಗವೊಂದನ್ನು ಯೂ ಟ್ಯೂಬ್ನಿಂದ ಪಡೆದು ವಿಶ್ಲೇಷಣೆಗೆ ಒಳಪಡಿಸಲು ನೀಡಿತ್ತು.
ಫೋರೆನ್ಸಿಕ್ ಲ್ಯಾಬ್ ವರದಿಯಲ್ಲೇನಿತ್ತು?
ಆಡಿಯೋ 1
ಸ್ಪೆಕ್ಟ್ರಮ್ ಮತ್ತು ವೇವ್ ಫಾರ್ಮ್ ಪರಿಶೀಲನೆಯಲ್ಲಿ ಹಲವಾರು ಕಡೆ ಎಲೆಕ್ಟ್ರಾನಿಕ್ ಸಿಗ್ನಲ್ಗಳಲ್ಲಿ ಥಟ್ಟನೆ ಬದಲಾವಣೆಗಳಿರುವುದು ಟೈಮ್ ಡೊಮೈನ್ ವೇವ್ ಫಾರ್ಮ್ನಲ್ಲಿ ಕಂಡು ಬಂದಿರುತ್ತದೆ. ಈ ಬದಲಾವಣೆಗಳು ಸ್ಪೆಟ್ರೋಗ್ರಾಮ್ ವಿಶ್ಲೇಷಣೆಯಲ್ಲಿಯೂ ಕೂಡ ಎಲೆಕ್ಟ್ರಾನಿಕ್ ಸಿಗ್ನಲ್ಗಳು ಕಂಡು ಬಂದಿದೆ. ಈ ಧ್ವನಿಮುದ್ರಿಕೆಯು ಸೃಷ್ಟಿಸಿರುವುದು ಮತ್ತು ತಿದ್ದಲಾಗಿದೆ ಎಂದು ಮೊದಲ ವರದಿಯಲ್ಲಿ (C4E/REP/22-2368, 10Th MARCH 2023) ಹೇಳಿದೆ.
ಶೋಭಾ ಪಾಟೀಲ್ ಧ್ವನಿ ಪರೀಕ್ಷೆ
2022ರ ಮೇ 2ರಂದು ಶೋಭಾ ಪಾಟೀಲ್ ಅವರು ಬೆಂಗಳೂರು ಆಕಾಶವಾಣಿ ಕೇಂದ್ರವು ಆಯೋಜಿಸಿದ್ದ ವನಿತಾ ವಿಹಾರದಲ್ಲಿ ಭಾಗವಹಿಸಿದ್ದರು. ಈ ಧ್ವನಿ ಮುದ್ರಿಕೆಯು ಕನ್ನಡ ಮತ್ತು ಇಂಗ್ಲೀಷ್ನಿಂದ ಕೂಡಿದೆ. ಇದನ್ನು ಪರಿಶೀಲಿಸಿರುವ ಫೋರೆನ್ಸಿಕ್ ಲ್ಯಾಬ್ ತಂಡವು ಎರಡೂ ಧ್ವನಿ ಮುದ್ರಿಕೆಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ವಿಶ್ಲೇಷಿಸಿತ್ತು.
ಕಡೆಯಲ್ಲಿ ಈ ಎರಡೂ ಧ್ವನಿಗಳೂ ಒಂದೇ ಎಂಬ ಅಭಿಪ್ರಾಯವನ್ನು ನೀಡಿರುವುದು (On the Cumulative effect of all the above observations taken together, the characteristics of the speaker in the sample referred as Q were observerd to be similar in the samples referrd as K. Hence it is highly probable that the voice of the female speaker in Q and the Voice OF THE female speaker in K belong to the same person) ವರದಿಯಲ್ಲಿ ಹೇಳಲಾಗಿತ್ತು.
ಆಸ್ತಿ ವ್ಯಾಜ್ಯ ಪ್ರಕರಣ; ಆಡಿಯೋದಲ್ಲಿದ್ದ ಧ್ವನಿ, ಲೋಕಾಯುಕ್ತರ ಪತ್ನಿಯದ್ದು ಎಂದ ಫೋರೆನ್ಸಿಕ್
ಜನಾಧಿಕಾರ ಸಂಘರ್ಷ ಪರಿಷತ್ 2023ರ ಮೇ 8ರಂದು ರಾಜ್ಯ ಡಿಜಿಐಜಿಪಿಗೂ ನೀಡಿದ್ದ ದೂರಿನಲ್ಲಿಯೂ ಸುಮಾರು 6 ನಿಮಿಷ 54 ಸೆಕೆಂಡು ಅವಧಿಯ ಧ್ವನಿಮುದ್ರಿಕೆಯ ಬಗ್ಗೆ ಪ್ರಸ್ತಾಪಿಸಿತ್ತು. ಈ ಧ್ವನಿಮುದ್ರಿಕೆಯನ್ನು ಕ್ಲೂ4 ಎವಿಡೆನ್ಸ್ ಫೋರೆನ್ಸಿಕ್ ಇನ್ವೆಸ್ಟಿಗೇಷನ್ಸ್ ಪ್ರೈ ಲಿಮಿಟೆಡ್ನಿಂದ ಪರೀಕ್ಷಿಸಲಾಗಿದೆ. ಅದರ ಆಧಾರದ ಮೇಲೆ ದೂರು ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದನ್ನು ಸ್ಮರಿಬಹುದು.