ದರ್ಪ; ಪೌರಾಯುಕ್ತರ ಸಮ್ಮುಖದಲ್ಲೇ ರಿಜಿಸ್ಟರ್‍‌, ಕಡತ, ದಾಖಲೆಗಳ ಹೊತ್ತೊಯ್ದರೇ ಮಾಜಿ ಸಚಿವರ ಅಳೀಮಯ್ಯ?

ಬೆಂಗಳೂರು; ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟ್ರರ್‍‌ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂಬ ಗುರುತರವಾದ ಆರೋಪವು ಮಾಜಿ ಸಚಿವ ಆನಂದ್‌ಸಿಂಗ್‌ ಅವರ ಅಳಿಯ ಮತ್ತಿತರರ ವಿರುದ್ಧ ಕೇಳಿ ಬಂದಿದೆ.

 

ಈ ಕುರಿತು ಹೊಸಪೇಟೆ ನಗರಸಭೆಯ ದ್ವಿತೀಯ ದರ್ಜೆ ಗುಮಾಸ್ತ ಸುರೇಶ್‌ಬಾಬು ಡಿ ಹೆಚ್‌ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ , ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹೊಸಪೇಟೆ ನಗರಸಭೆ ಆಯುಕ್ತರ ಸಮ್ಮುಖದಲ್ಲಿಯೇ ಮಹತ್ವದ ದಾಖಲೆಗಳನ್ನು ಹೊತ್ತೊಯ್ದಿರುವ ಬಗ್ಗೆ ದಾಖಲೆಗಳ ಸಂಖ್ಯೆಯೊಂದಿಗೆ ದೂರು ಸಲ್ಲಿಸಿದ್ದರೂ ಇದುವರೆಗೂ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಂಡಿಲ್ಲ.

 

‘ಮಾಜಿ ಸಚಿವ ಆನಂದ್‌ ಸಿಂಗ್‌ ಹಾಗೂ ಅವರ ಕುಟುಂಬ ಸದಸ್ಯರು ರಾಜಕೀಯ ದರ್ಪದಿಂದ ಅಕ್ರಮವಾಗಿ ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟರ್‍‌ಗಳು, ಕೆಎಂಎಫ್‌ 24 ರಿಜಿಸ್ಟರ್‍‌ಗಳು, ಎಂ ಆರ್‍‌ 19 ರಿಜಿಸ್ಟರ್‍‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್‌ ರಿಜಿಸ್ಟರ್‍‌ಗಳ ಕಡತಗಳನ್ನು ಪೌರಾಯುಕ್ತ ಮನೋಹರ್‍‌ ಅವರ ಸಮ್ಮುಖದಲ್ಲಿಯೇ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮರಾಗಳನ್ನು ಬಂದ್‌ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ,’ ಎಂದು ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ್‌ಬಾಬು ಎಂಬುವರು ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ನಗರಸಭೆಯ ಹಾಲಿ ಸದಸ್ಯರು ಮತ್ತು ಮಾಜಿ ಸದಸ್ಯ ವೇಣುಗೋಪಾಲ್‌ ಮತ್ತಿತರರು , ನಗರಸಭೆಯ ಈ ಹಿಂದಿನ ಪೌರಾಯುಕ್ತರಾದ ವಿ ರಮೇಶ್‌, ಮನ್ಸೂರ್‍‌ ಅಹ್ಮದ್‌, ಕಂದಾಯ ಅಧಿಕಾರಿಗಳಾದ ಸುಬ್ರಮಣ್ಯ ಶೆಟ್ಟಿ, ಅಜಿತ್‌ ಸಿಂಗ್‌, ದ್ವಿತೀಯ ದರ್ಜೆ ಸಹಾಯಕರಾದ ನೂರ್‍‌ ಅಹಮ್ಮದ್‌, ಸುರೇಶ್‌, ವ್ಯವಸ್ಥಾಪಕ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್‍‌ ಯಲ್ಲಪ್ಪ, ರಾಮಪ್ಪ, ಶಂಕರ್‍‌ ಮತ್ತಿತರರು ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ಈ ಅಕ್ರಮಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

‘ಕಡತಗಳನ್ನು ತೆಗೆದುಕೊಂಡು ಹೋಗಿದ್ದರೂ ಇದುವರೆಗೂ ಅವುಗಳನ್ನು ವಾಪಸ್‌ ತಂದುಕೊಟ್ಟಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಪೌರಾಯುಕ್ತರ ಗಮನಕ್ಕೆ ತಂದರೂ ಸಹ ನನಗೆ ಬೈದು ನೀನು ಸುಮ್ಮನೆ ಇದ್ದುಬಿಡು. ಸಾರ್ವಜನಿಕರು ಏನು ಕೇಳಿದರೂ ನನ್ನಹತ್ತಿರ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳು ಎಂದು ಪೌರಾಯುಕ್ತರು ಹೇಳಿದ್ದರು,’ ಎಂದು ದೂರಿನಲ್ಲಿ ಹೇಳಲಾಗಿದೆ.

 

ವಾರ್ಡ್‌ ನಂಬರ್‍‌ 35ರಲ್ಲಿ ಎಂ ಆರ್‍‌ 19, ವ್ಯಾಲಂ ನಂ -2, 03, 05, 06, ವಾರ್ಡ್‌ ನಂಬರ್‍‌ 35 ಜಂಬುನಾಥನಹಳ್ಳಿ ಎಂ ಆರ್‍‌ 26 ವ್ಯಾಲಂ ನಂ 05, ಕೆಎಂಎಫ್‌ ವ್ಅಲಂ ನಂ 32, 33, 34,35, 36, 38, 39, ವಾರ್ಡ್ ನಂಬರ್‍‌ 8ರಲ್ಲಿ ಎಂ ಆರ್‍‌ 26 ವ್ಯಾಲಂ ನಂ 03, 18, 21, 82, 93, ರೆಜ್ಯೂಲೇಷನ್‌ ರಿಜಿಸ್ಟರ್‍‌ 1990-91ರಿಂದ 1992-93, ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಡಿಮ್ಯಾಂಡ್‌ ರಿಜಿಸ್ಟರ್‍‌ ವ್ಯಾಲಂ 01, 04, 02, ಸಂಕ್ಲಾಪುರ ರಿಜಿಸ್ಟರ್‍‌ ವ್ಯಾಲಂ ನಂ 02, ಅಮರಾವತಿ ಪುರಸಭೆ ಎಂ ಆರ್‍‌ ನಂ 19, ವ್ಯಾಲಂ ನಂ 01,02 ಹಳೇ ವಾರ್ಡ್‌ ನಂ 6, ವ್ಯಾಲಂ 01 ಸೇರಿದಂತೆ ಒಟ್ಟು 49 ಕಡತಗಳು, ರಿಜಿಸ್ಟರ್‍‌ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸುರೇಶ್‌ ಬಾಬು ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಆನಂದ್‌ ಸಿಂಗ್‌ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts