ಇ-ಚಲನ್‌ ದಂಡ ಪಾವತಿಗೆ 3ನೇ ಬಾರಿಗೆ ವಿನಾಯಿತಿ; 637 ಕೋಟಿ ನಷ್ಟ, ಸಾರಿಗೆಗೆ ಆರ್ಥಿಕ ಆಘಾತ ‘ಗ್ಯಾರಂಟಿ’

ಬೆಂಗಳೂರು; ರಾಜ್ಯದಲ್ಲಿ ಪೊಲೀಸ್‌ ಇಲಾಖೆಯವರು ಸಂಚಾರಿ ಇ-ಚಲನ್‌ ಮೂಲಕ ವಿಧಿಸಿದ ದಂಡದ ಮೊತ್ತ ಪಾವತಿ ಸಂಬಂಧ ಮತ್ತೊಮ್ಮೆ ಶೇ.50ರಷ್ಟು ವಿನಾಯಿತಿಯನ್ನು ವಿಸ್ತರಿಸಬಾರದು ಎಂದು ಆರ್ಥಿಕ ಇಲಾಖೆಯ ಕೆಳಹಂತದ ಅಧಿಕಾರಿಗಳು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿರುವ ಸಾರಿಗೆ ಇಲಾಖೆಯು ಮೂರನೇ ಬಾರಿಗೆ ವಿನಾಯಿತಿ ನೀಡಿ ಹೊರಡಿಸಿರುವ ಆದೇಶದಿಂದಾಗಿ ಸರ್ಕಾರಕ್ಕೆ 637 ಕೋಟಿ ರು. ನಷ್ಟವುಂಟಾಗಿರುವುದನ್ನು ಇದೀಗ ‘ದಿ ಫೈಲ್‌’ ಹೊರಗೆಡವುತ್ತಿದೆ.

 

ಪೊಲೀಸ್‌ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ ಪ್ರಸಕ್ತ ಹಣಕಾಸು ಪರಿಸ್ಥಿತಿಯಲ್ಲಿ ಸಹಮತಿ ನೀಡುವುದು ಸೂಕ್ತವಾಗಿರುವುದಿಲ್ಲ ಎಂದು ಆರಂಭದಲ್ಲಿ ನಿಲುವು ತಳೆದಿದ್ದ ಆರ್ಥಿಕ ಇಲಾಖೆಯು 15 ದಿನದೊಳಗೇ ತನ್ನ ಅಭಿಪ್ರಾಯ ಬದಲಿಸಿತ್ತು. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ 637 ಕೋಟಿ ರು. ನಷ್ಟ ಸಂಭವವಕ್ಕೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಪರೋಕ್ಷವಾಗಿ ಕಾರಣರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಗೃಹ ಇಲಾಖೆ ಸಚಿವ ಡಾ ಜಿ ಪರಮೇಶ್ವರ್ ಮತ್ತು ಸಾರಿಗೆ ಸಚಿವ ಆರ್‍‌ ರಾಮಲಿಂಗಾರೆಡ್ಡಿ ಅವರಿಬ್ಬರೂ ಈ ಪ್ರಸ್ತಾವನೆಗಳಿಗೆ ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

 

ಈಗಾಗಲೇ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲದ ಮೂಲಕ ಅನುದಾನ ಒದಗಿಸಲು ಕಾಂಗ್ರೆಸ್‌ ಸರ್ಕಾರವು ತಿಣುಕಾಡುತ್ತಿರುವ ಹೊತ್ತಿನಲ್ಲೇ ಇ-ಚಲನ್‌ ಮೂಲಕ ವಿಧಿಸಿರುವ ದಂಡದ ಮೊತ್ತ ಪಾವತಿಸಲು ಶೇ.50ರ ವಿನಾಯಿತಿಯನ್ನು ವಿಸ್ತರಿಸಿ 637 ಕೋಟಿ ರು. ನಷ್ಟಕ್ಕೆ ದಾರಿಮಾಡಿಕೊಟ್ಟಿರುವುದು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಗಳು ಮತ್ತು ಸರ್ಕಾರವು 2023ರ ಜುಲೈ 5ರಂದು ಹೊರಡಿಸಿರುವ ಆದೇಶವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮತ್ತೊಂದು ವಿಶೇಷವೆಂದರೆ ಇ-ಚಲನ್‌ ಮೂಲಕ ವಿಧಿಸಿರುವ ದಂಡದ ಮೊತ್ತವನ್ನು ಪಾವತಿ ಪೈಕಿ ಶೇ.50ರಷ್ಟು ವಿನಾಯಿತಿ ನೀಡಿ ಪಾವತಿ ಅವಧಿಯನ್ನು ವಿಸ್ತರಿಸಲು ಆರ್ಥಿಕ ಇಲಾಖೆಯು 2023ರ ಜೂನ್‌ 23ರಂದೇ ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೆ ಸರ್ಕಾರದ ಒತ್ತಡಕ್ಕೆ ಮಣಿದಿರುವ ಆರ್ಥಿಕ ಇಲಾಖೆಯು ತನ್ನ ನಿರ್ಧಾರದಿಂದ ಹಿಂದೆ ಸರಿದು ವಿನಾಯಿತಿ ನೀಡುವ ಪ್ರಸ್ತಾವನೆಗೆ 2023ರ ಜುಲೈ 4ರಂದು ಸಹಮತಿ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆ ಮತ್ತು ಆದೇಶದಿಂದ ತಿಳಿದು ಬಂದಿದೆ.

 

ಇಲಾಖೆಯ ಪ್ರಸ್ತಾವನೆಯಲ್ಲಿ 2023ರ ಫೆ11ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಪೊಲೀಸ್‌ ಇಲಾಖೆಯ ಸಂಚಾರ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 2023ರ ಜುಲೈ 8ರವರೆಗೆ ಕಾಲಾವಕಾಶ ನೀಡಲು ಕೋರಿತ್ತು ಎಂದು ಗೊತ್ತಾಗಿದೆ.

 

ಜೂನ್‌ 23ರಂದು ನೀಡಿದ್ದ ಅಭಿಪ್ರಾಯದಲ್ಲೇನಿತ್ತು?

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಈಗಾಗಲೇ ಈ ಕುರಿತು ಎರಡು ಸಲ 15 ದಿನಗಳ ಕಾಲಾವಕಾಶ ನೀಡಿ ಶೇ. 50ರಷ್ಟು ಕಡಿಮೆ ಮಾಡಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಈಗ ಮತ್ತೆ ಅದೇ ಅವಧಿಗೆ ಅಂದರೆ 11.02.2023ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಅನ್ವಯವಾಗುವಂತೆ ಅವಕಾಶ ನೀಡಲು ಕೋರಲಾಗಿದೆ. ನಡವಳಿಗಳ ಅನುಸಾರ 1,274.00 ಕೋಟಿ ರು. ಬಾಕಿ ಇರುವುದಾಗಿ ತಿಳಿಸಲಾಗಿರುತ್ತದೆ. ಆಡಳಿತ ಇಲಾಖೆಯ ಕೋರಿಕೆಯಂತೆ ಶೇ.50 ವಿನಾಯಿತಿ ನೀಡಿದ್ದಲ್ಲಿ ಸರ್ಕಾರಕ್ಕೆ 637.00 ಕೋಟಿ ರು ಮೊತ್ತ ನಷ್ಟ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಗೆ ಪ್ರಸಕ್ತ ಹಣಕಾಸು ಪರಿಸ್ಥಿತಿಯಲ್ಲಿ ಸಹಮತಿ ನೀಡುವುದು ಸೂಕ್ತವಾಗಿರುವುದಿಲ್ಲ,’ ಎಂದು 2023ರ ಜೂನ್‌ 23ರಂದು ಆರ್ಥಿಕ ಇಲಾಖೆಯ ಅಧಿಕಾರಿ ಶ್ರೀಕೃಷ್ಣ ಬುಗ್ಯಟಾಗೋಳ ಅವರು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿದ್ದರು. ಇದನ್ನು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‍‌ ಅವರು 2023ರ ಜೂನ್‌ 25ರಂದು ಅನುಮೋದಿಸಿದ್ದರು (FD/52/EX11/2023-EXP 11-FINANCE DEPT (COMPUTER NUMBER 1001755) ಎಂದು ಗೊತ್ತಾಗಿದೆ.

 

ಇದೇ ಪ್ರಸ್ತಾವನೆಯನ್ನು ಪುರಸ್ಕರಿಸಿದ್ದ ಆರ್ಥಿಕ ಇಲಾಖೆಯು ಒಂದು ಬಾರಿಯ ಕ್ರಮವಾಗಿ ಮಾತ್ರ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿತ್ತು. ಅ ನಂತರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 2023ರ ಜೂನ್‌ 14ರಂದು ನಡೆದ ಸಭೆಯ ನಡವಳಿಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡಲು ಕ್ರಮ ಕೈಗೊಳ್ಳುವಂತೆ ಕೋರಿತ್ತು.

 

ಜೂನ್‌ನಲ್ಲಿ ನಡೆದ ಸಭೆಯ ನಿರ್ಣಯದಂತೆ 2023ರ ಫೆ.11ರೊಳಗಿನ ದಾಖಲಾಗಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 2023ರ ಜುಲೈ 8ರೊಳಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಲು ಕೋರಲಾಗಿತ್ತು. ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸರ್ಕಾರವು 2023ರ ಜುಲೈ 5ರಂದು ಆದೇಶ ಹೊರಡಿಸಿದೆ.

 

‘ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆ11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇ.50ರಷ್ಟ ರಿಯಾಯಿತಿ ನೀಡಿ ಆಧೇಶಿಸಿದೆ. ಈ ರಿಯಾಯಿತಿಯು 2023ರ ಸೆ.9ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತವೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ;ಆ ಇ 52 ವೆಚ್ಚ-11/2023 (ಇ) 2023ರ ಜುಲೈ 4ರಲ್ಲಿ ನೀಡಿರುವ ಸಹಮತಿ ಅನ್ವಯ ಹೊರಡಿಸಿರುವುದು ಆದೇಶದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts