ಒಂದು ಎ.ಸಿ. ಹುದ್ದೆಗೆ ಮೂವರು ಕೆಎಎಸ್‌ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು; ಬಿಕರಿಯಾದವೇ ಸಿಎಂ ಟಿಪ್ಪಣಿ?

ಬೆಂಗಳೂರು; ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗದ ಉಪವಿಭಾಗಾಧಿಕಾರಿ ಹುದ್ದೆಗೂ ಮೂವರು ಕೆಎಎಸ್‌ ಅಧಿಕಾರಿಗಳಿಗೂ ಶಿಫಾರಸ್ಸಿನ ಟಿಪ್ಪಣಿ ಪತ್ರ ಹೊರಡಿಸಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಒಂದೇ ಹುದ್ದೆಗೆ ನಾಲ್ಕು ಮಂದಿಯನ್ನು ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು “ಪಂಚಗ್ಯಾರಂಟಿಗಳ ಕಾಂಗ್ರೆಸ್‌ ಸರ್ಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು; ʼಕಾಸಿಗಾಗಿ ಪೋಸ್ಟಿಂಗ್ʼ ಹೆಸರಿನಲ್ಲಿ ‘ದಿ ಫೈಲ್‌’ ವರದಿಯನ್ನು ತಮ್ಮ ಟ್ವಿಟರ್‍‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ ಮಾಡಿದ್ದರ ಬೆನ್ನಲ್ಲೇ ಇದೀಗ ಹೊಸಪೇಟೆ ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆಗೂ ಮೂವರು ಕೆಎಎಸ್‌ ಅಧಿಕಾರಿಗಳಿಗೆ ನೀಡಿರುವ ಶಿಫಾರಸ್ಸು ಟಿಪ್ಪಣಿಗಳು ಮುನ್ನೆಲೆಗೆ ಬಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಿ ಮಾಡಿರುವ ಟಿಪ್ಪಣಿ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. 

 

ಹೊಸಪೇಟೆ ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆಗೆ 2023ರ ಜೂನ್‌ 16, 28,  ಮತ್ತು 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಮೂವರು ಕೆಎಎಸ್‌ ಅಧಿಕಾರಿಗಳಿಗೆ ಶಿಫಾರಸ್ಸಿನ ಟಿಪ್ಪಣಿಗಳನ್ನು ಹೊರಡಿಸಿದ್ದಾರೆ. ಹೀಗಾಗಿ ಒಂದೇ ಹುದ್ದೆಗೆ ಮೂವರು ಕೆಎಎಸ್‌ ಅಧಿಕಾರಿಗಳು ಪೈಪೋಟಿಗೆ ಬಿದ್ದಂತಾಗಿದೆ. ಅಲ್ಲದೇ ಒಂದೇ ಹುದ್ದೆಗೆ ಮೂರ್ನಾಲ್ಕು ಮಂದಿಗೆ ಶಿಫಾರಸ್ಸು ಟಿಪ್ಪಣಿ ಪತ್ರ ನೀಡುತ್ತಿರುವುದರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯನ್ನು ಪೇಚಿಗೆ ಸಿಲುಕಿಸಿದಂತಾಗಿದೆ.

 

 

ರಾಯಚೂರು ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ಮಹಿಬೂಬ ಜೀಲಾನ್‌ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಉಪ ವಿಭಾಗಕ್ಕೆ ವರ್ಗಾಯಿಸಬೇಕು ಎಂದು 2023ರ ಜೂನ್‌ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸಿನ ಟಿಪ್ಪಣಿ ಪತ್ರವೊಂದನ್ನು ಹೊರಡಿಸಿದ್ದಾರೆ.

 

ಈ ಟಿಪ್ಪಣಿ ಪತ್ರ ಹೊರಡಿಸಿದ 12 ದಿನಗಳ ನಂತರ ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ವಿವೇಕಾನಂದ ಪಿ ಅವರನ್ನು ಹೊಸಪೇಟೆ ವಿಭಾಗದ ಉಪ ವಿಭಾಗಾಧಿಕಾರಿಯನ್ನಾಗಿ ವರ್ಗಾಯಿಸಬೇಕು ಎಂದು 2023ರ ಜೂನ್‌ 28ರಂದು ಸಿದ್ದರಾಮಯ್ಯ ಅವರು ಸೂಚಿಸಿರುವುದು ಶಿಫಾರಸ್ಸಿನ ಟಿಪ್ಪಣಿ ಪತ್ರದಿಂದ ತಿಳಿದು ಬಂದಿದೆ.

 

ಆ ನಂತರ ಹೊಸಪೇಟೆಯ ಕಾಂಗ್ರೆಸ್‌ ಶಾಸಕ ಹೆಚ್‌ ಆರ್‍‌ ಗವಿಯಪ್ಪ ಅವರು ಹೊಸಪೇಟೆ ವಿಭಾಗಕ್ಕೆ ಯಾದಗಿರಿ ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ಶಾಲಂ ಹುಸೇನ್‌ ಅವರನ್ನು ವರ್ಗಾಯಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನು ಪುರಸ್ಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಂ ಹುಸೇನ್‌ ಅವರನ್ನು ಹೊಸಪೇಟೆ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿಯನ್ನಾಗಿ ವರ್ಗಾಯಿಸಬೇಕು ಎಂದು 2023ರ ಜೂನ್‌ 30ರಂದು ಶಿಫಾರಸ್ಸಿನ ಟಿಪ್ಪಣಿ ಪತ್ರ ಹೊರಡಿಸಿದ್ದಾರೆ.

 

ಅದೇ ರೀತಿ ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ಸಹ ಹೊಸಪೇಟೆ ಉಪ ವಿಭಾಗಕ್ಕೆ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ಕಲ್ಯಾಣಿ ವೆಂಕಟೇಶ್‌ ಕಾಂಬ್ಳೆ ಎಂಬುವರನ್ನು ವರ್ಗಾಯಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕೋರಿಕೆ ಸಲ್ಲಿಸಿರುವುದು ಗೊತ್ತಾಗಿದೆ.

 

ಮತ್ತೊಂದು ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಿ ಮಾಡಿರುವ ಟಿಪ್ಪಣಿಗಳಲ್ಲಿ ಕೆಲವೆಡೆ ದಿನಾಂಕಗಳೇ ನಮೂದಾಗದೇ ವರ್ಗಾವಣೆಗೆ ಶಿಫಾರಸ್ಸಿನ ಟಿಪ್ಪಣಿ ಪತ್ರಗಳನ್ನು ಹೊರಡಿಸಲಾಗುತ್ತಿದೆ. ಮೈಸೂರು-ಮಡಿಕೇರಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ  ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ಹರ್ಷವರ್ಧನ್‌ ಎಸ್‌ ಜೆ ಎಂಬುವರನ್ನು ಮಂಗಳೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಯನ್ನಾಗಿ ವರ್ಗಾಯಿಸಬೇಕು ಎಂದು ಸೂಚಿಸಿ ಮುಖ್ಯ ಕಾರ್ಯದರ್ಶಿಗಳಿಗೆ ಸಿದ್ದರಾಮಯ್ಯ ಅವರು ಹೊರಡಿಸಿರುವ ಟಿಪ್ಪಣಿಯಲ್ಲಿ ದಿನಾಂಕವೇ ನಮೂದಾಗಿಲ್ಲ ಎಂಬುದು ಟಿಪ್ಪಣಿ ಪತ್ರದಿಂದ ತಿಳಿದು ಬಂದಿದೆ.

 

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಶಿಫಾರಸ್ಸಿನ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್‌ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

 

 

‘ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ”. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ವಿರುದ್ಧವೂ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಎಂದು ಎಚ್‌ ಡಿ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಆರೋಪಿಸಿದ್ದರು.

 

“ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ʼಹುಂಡಿʼ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಸಿಎಂಒ ಎಂದರೆ ಸಿಎಂ ಆಫ್‌ ಕರ್ನಾಟಕವೋ ಅಥವಾ ಕರಪ್ಷನ್‌ ಆಫ್‌ ಕರ್ನಾಟಕವೋ” ಎಂದೂ ಪ್ರಶ್ನಿಸಿದ್ದರು.

 

“ನಾಲ್ಕು ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು? ಮೂರೊಪ್ಪತ್ತೂ ಶಿಫಾರಸು ಪತ್ರಗಳನ್ನು ಟೈಪಿಸಿ, ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್‌ ಕೋಟಾ ನಿಯಂತ್ರಣ ಮಾಡುತ್ತಿರುವ ಆ ʼರಿಮೋಟ್‌ ಕಂಟ್ರೋಲ್‌ʼ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ” ಎಂದು ಟ್ವೀಟ್‌ ಮಾಡುವ ಮೂಲಕ ಆರೋಪಿಸಿದ್ದರು.

 

“ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ ಶುರುವಾಗಿದೆ. ʼಸರ್ಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರ್ಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ” ಎಂದು ಕಿಡಿಕಾರಿದ್ದರು.

 

ಅದೇ ರೀತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೂ ಸಹ ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿರುವ ಮುಖ್ಯಮಂತ್ರಿಗಳು! ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಸಿದ್ದರಾಮಯ್ಯನವರು ನಾಲ್ಕು ಅಧಿಕಾರಿಗಳನ್ನು ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ. ಯಾರ ಒತ್ತಡ? ಯಾವ ಕಾಣದ “ಕೈ” ಸಿದ್ದರಾಮಯ್ಯನವರ ಸಹಿ ಮಾಡಿಸುತ್ತಿದೆ ಎಂದು ‘ದಿ ಫೈಲ್‌’ ಪ್ರಕಟಿಸಿರುವ ದಾಖಲೆಗಳನ್ನು ಟ್ವೀಟ್‌ ಮಾಡಿದ್ದರು.

 

ಈ ಎಟಿಎಂ ಸರ್ಕಾರದಲ್ಲಿ ಸ್ವತಃ ಮುಖ್ಯಮಂತ್ರಿರವರೇ ವ್ಯವಹಾರಕ್ಕೆ ಇಳಿದುಬಿಟ್ಟಿದ್ದಾರೆ. ಮೋಸ ಮಾಡುವುದಕ್ಕೇ ನಿಂತ ಏಜೆಂಟರು ಒಂದೇ ಸೈಟನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡುವಂತೆ, ಸಿಎಂ ಸಿದ್ದರಾಮಯ್ಯ ಹಾಗೂ #ShadowCM ಯತೀಂದ್ರ ಅವರು ಒಂದೇ ಹುದ್ದೆಗೆ ನಾಲ್ಕು ಮಂದಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಶಿಫಾರಸ್ಸು ಪತ್ರಗಳ ಹೊಸ ದಂಧೆ ಆರಂಭಿಸಿದೆ ಎಂದು ಬಿಜೆಪಿ ಕರ್ನಾಟಕವು ಸಹ ‘ದಿ ಫೈಲ್‌’ ವರದಿಯನ್ನು ಹಂಚಿಕೊಳ್ಳುವ ಮೂಲಕ  ಟ್ವೀಟ್‌ ಮಾಡಿತ್ತು.

 

ಏನದು ಪ್ರಕರಣ?

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ್ದರು.

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಒಂದು ವರ್ಷ 4 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯೋಜನಾ ಮುಖ್ಯಸ್ಥರು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು ಸಹ ಇವರ ಹುದ್ದೆಗೆ ನಾಲ್ವರು ಲೆಕ್ಕಪರಿಶೋಧನಾಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿರುವುದು ನಾಲ್ವರು ಅಧಿಕಾರಿಗಳ ಮಧ್ಯೆಯೇ ಪೈಪೋಟಿ ಸೃಷ್ಟಿಸಿದಂತಾಗಿತ್ತು.

 

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದಲೇ ಅಧಿಕಾರಿ ನೌಕರರ ವರ್ಗಾವಣೆಗೆ ಶಿಫಾರಸ್ಸು ಪತ್ರಗಳು ಹೊರಬೀಳುತ್ತಿವೆ ಮತ್ತು ಗೃಹ ಕಚೇರಿಯನ್ನು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರು ನಿಯಂತ್ರಿಸುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅಧಿಕಾರಿಗಳ ಪೈಪೋಟಿಗೆ ಕಾರಣವಾಗಿರುವ ಮುಖ್ಯಮಂತ್ರಿಗಳ ಟಿಪ್ಪಣಿ ಪತ್ರಗಳು ಮುನ್ನೆಲೆಗೆ ಬಂದಿದ್ದವು.

 

ಇರುವ ಒಂದು ಹುದ್ದೆಗೆ ನಾಲ್ವರ ವರ್ಗಾವಣೆಗೆ ಶಿಫಾರಸ್ಸು

 

ಬಿಬಿಎಂಪಿಯಲ್ಲಿ ಲೆಕ್ಕ ಪರಿಶೋಧನಾಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ ಕೆ ಜಗದೀಶ್‌ ಅವರನ್ನು ರಾಜ್ಯ ರಸ್ತೆ ಅಭಿವೃದ್ದಿ ನಿಗಮದಲ್ಲಿ ಎಂ ಜಿ ಮಂಜುನಾಥ್ ಇವರ ಸ್ಥಳಕ್ಕೆ ವರ್ಗಾಯಿಸಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಿಂದ ಟಿಪ್ಪಣಿ ಹೊರಡಿಸಲಾಗಿತ್ತು.

 

ಇದೇ ಹುದ್ದೆಗೆ ಬಿಬಿಎಂಪಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಲೆಕ್ಕಪರಿಶೋಧನಾಕಾರಿ ಕೆ ಎಚ್‌ ಶ್ರೀನಿವಾಸ್‌ ಅವರನ್ನು ಎಂ ಜಿ ಮಂಜುನಾಥ್‌ ಅವರ ಹುದ್ದೆಯ ಜಾಗಕ್ಕೆ ವರ್ಗಾಯಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಇದನ್ನು ಪರಿಗಣಿಸಿ ಎಂದು ಷರಾ ಬರೆದಿದ್ದರು.

 

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಅದೇ ರೀತಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ ನಾಗರಾಜು ಅವರು ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಮಂಜುನಾಥ್‌ ಅವರ ಜಾಗಕ್ಕೆ ಪರಿಗಣಿಸಿ ಎಂದು 2023ರ ಜೂನ್‌ 8ರಂದು ಷರಾ ಬರೆದಿದ್ದರು.

 

ಅದೇ ರೀತಿ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಎಸ್‌ ಪ್ರತಿಭ ಅವರನ್ನೂ ಮಂಜುನಾಥ ಜಿ ಇವರ ಸ್ಥಳಕ್ಕೆ ನಿಯುಕ್ತಿಗೊಳಿಸಲು ಸಿದ್ದರಾಮಯ್ಯ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು.

 

ಆದರೆ ಮಂಜುನಾಥ್‌ ಅವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಯೋಜನಾ ಮುಖ್ಯಸ್ಥರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇವರ ವರ್ಗಾವಣೆ ಸುಳಿವು ಹಿಡಿದ ಯೋಜನಾ ಮುಖ್ಯಸ್ಥರು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ 2023ರ ಜೂನ್‌ 23ರಂದು ಪತ್ರವನ್ನೂ ಬರೆದಿದ್ದರು.

 

ಪತ್ರದಲ್ಲೇನಿದೆ?

 

ಇಲಾಖೆಯಲ್ಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರನ್ನು ಇದೇ ಹುದ್ದೆ ಮತ್ತು ಇದೇ ಕಚೇರಿಯಲ್ಲಿಯೇ ಮುಂದುವರೆಸಬೇಕು. ಇವರು ಕಳೆದ 1 ವರ್ಷ 4 ತಿಂಗಳಿನಿಂದ ಲೆಕ್ಕಾಧಿಕಾರಿಯಾಗಿ ಈ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

ಇವರು ಯೋಜನೆಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಪರಿಣಿತಿ ಹೊಂದಿರುವದುರಿಂದ ಹಾಗೂ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಅಡಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಕಾ:ಲಬದ್ಧ ಯೋಜನೆಯ ಕಾಮಗಾರಿಗಳನ್ನು ಪರಿಣಾಮಕಗಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿರುತ್ತದೆ.

 

ಈ ಕಚೇರಿ ವ್ಯಾಪ್ತಿಯ ಹಂತ 1,ಹಂತ 2 ಮತ್ತು ಹಂತ 3ರ ಕಾಮಗಾರಿಗಳ ಅಂತಿಮ ಬಿಲ್‌ಗಳನ್ನು ತೀರುವಳಿಗೊಳಿಸಲು ಹಂತ 4 ಘಟ್ಟ 1 ಮತ್ತು ಘಟ್ಟ 2 ರ ಗುತ್ತಿಗೆ ಬಿಲ್‌ಗಳನ್ನು ಪಾವತಿಸಲು ಇವರ ಸೇವೆಯು ಈ ಕಚೇರಿಗೆ ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಮುಖ್ಯ ಯೋಜನಾಧಿಕಾರಿಯವರ ಅವರನ್ನು ಯೋಜನಾ ಅನುಷ್ಠಾನ ಘಟಕದಲ್ಲಿಯೇ ಮುಂದುವರೆಸಲು ಈ ಮೂಲಕ ತಮ್ಮಲ್ಲಿ ಕೋರಿದೆ ಎಂದು ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದರು.

the fil favicon

SUPPORT THE FILE

Latest News

Related Posts