ಕ್ಯಾಪಿಟೇಷನ್‌ ಶುಲ್ಕ ವಸೂಲಿ ಆರೋಪ; ಬಿಎಂಎಸ್‌ಗೆ ನೋಟೀಸ್‌ ಜಾರಿಗೊಳಿಸಿದ ಶುಲ್ಕ ನಿಯಂತ್ರಣ ಸಮಿತಿ

photo credit;deccan hearald

ಬೆಂಗಳೂರು; ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕ್ಯಾಪಿಟೇಷನ್‌ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸಲ್ಲಿಕೆಯಾಗಿದ್ದ ಅನೇಕ ದೂರುಗಳನ್ನು ಉನ್ನತ ಶಿಕ್ಷಣ ಇಲಾಖೆಯು ಕಸದ ಬುಟ್ಟಿಗೆ ಎಸೆದಿದ್ದರೇ ಇತ್ತ ಶುಲ್ಕ ನಿಯಂತ್ರಣ ಸಮಿತಿಯು ಕ್ಯಾಪಿಟೇಷನ್‌ ಶುಲ್ಕ ವಸೂಲು ಮಾಡುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೂ ನೋಟೀಸ್‌ ಜಾರಿ ಮಾಡಿದೆ.

 

ರಾಜ್ಯದ ಪ್ರತಿಷ್ಟಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಒಡೆತನದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಮಧ್ಯವರ್ತಿಗಳ ಮೂಲಕ ಕಾನೂನುಬಾಹಿರವಾಗಿ ಲಕ್ಷಾಂತರ ರುಪಾಯಿಗಳನ್ನು ಸಂಗ್ರಹಿಸುತ್ತಿವೆ ಮತ್ತು ಇದರಿಂದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಸೀಟು ದೊರಕದೇ ವಂಚನೆಗೊಳಾಗುತ್ತಿದ್ದಾರೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಉಪ ಲೋಕಾಯುಕ್ತ ಸುಭಾಷ್‌ ಆಡಿ ಅವರ ಅಧ್ಯಕ್ಷತೆಯಲ್ಲಿರುವ  ಶುಲ್ಕ ನಿಯಂತ್ರಣ ಸಮಿತಿಯು 2023ರ ಜೂನ್‌ 2ರಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ಗೆ ನೋಟೀಸ್‌ ಜಾರಿಗೊಳಿಸಿದೆ. ಈ ನೋಟೀಸ್‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಿಎಂಎಸ್‌ ಇಂಜನಿಯರಿಂಗ್‌ ಕಾಲೇಜಿನಲ್ಲಿ ಕಾನೂನುಬಾಹಿರವಾಗಿ ಕ್ಯಾಪಿಟೇಷನ್‌ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಜೀಕೆ ಅಸೋಸಿಯೇಟ್ಸ್‌ ತಾಂತ್ರಿಕ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿತ್ತಾದರೂ ಇಲಾಖೆಯು ಆ ದೂರನ್ನು ನಿರ್ಲಕ್ಷ್ಯಿಸಿತ್ತು. ಹೀಗಾಗಿ ಈ ಸಂಸ್ಥೆಯು ಶುಲ್ಕ ನಿಯಂತ್ರಣ ಸಮಿತಿಗೆ ದೂರು ಸಲ್ಲಿಸಿತ್ತು. ಈ ದೂರಿನಲ್ಲಿ ನಿರ್ದಿಷ್ಟ ಪ್ರಕರಣವನ್ನೂ ಉಲ್ಲೇಖಿಸಿತ್ತು.

 

2022-23ನೇ ಸಾಲಿನಲ್ಲಿ ಐಶ್ವರ್ಯ ಓಜಿ ಎಂಬ ವಿದ್ಯಾರ್ಥಿನಿಯಿಂದ ಬಿಎಂಎಸ್‌ ಶಿಕ್ಷಣ ಸಂಸ್ಥೆಯು 4 ಲಕ್ಷ ರು.ಗಳನ್ನು ಕ್ಯಾಪಿಟೇಷನ್‌ ಶುಲ್ಕ ವಸೂಲು ಮಾಡಿತ್ತು. ಇಂಜನಿಯರಿಂಗ್‌ ಸೀಟು ಹಂಚಿಕೆಯಾಗುವ ಮುನ್ನವೇ ಮುಂಗಡವಾಗಿ ಹಣ ವಸೂಲು ಮಾಡಿತ್ತು. ಆ ನಂತರ ಆ ಸೀಟನ್ನು ಎನ್‌ಆರ್‌ಐ ಕೋಟಾದಡಿಯಲ್ಲಿ ಹಂಚಿಕೆ ಮಾಡಿತ್ತು  ಎಂಬ ಸಂಗತಿಯು ಜೀಕೆ ಅಸೋಸಿಯೇಟ್ಸ್‌ ಸಂಸ್ಥೆಯು ಸಲ್ಲಿಸಿರುವ ದೂರಿನಿಂದ ತಿಳಿದುಬಂದಿದೆ.

 

ಈ  ಬಗ್ಗೆ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ನಿವೃತ್ತ ಉಪ ಲೋಕಾಯುಕ್ತರ ಅಧ್ಯಕ್ಷತೆಯಲ್ಲಿರುವ ಶುಲ್ಕ ನಿಯಂತ್ರಣ ಸಮಿತಿಯು ಬಿಎಂಎಸ್‌ಗೆ ನೋಟೀಸ್‌ ಜಾರಿಗೊಳಿಸಿದೆ. ನೋಟೀಸ್‌ ತಲುಪಿದ 10 ದಿನದೊಳಗೇ ಸಂಸ್ಥೆಯು ಹಂಚಿಕೆ ಮಾಡಿರುವ ತಾತ್ಕಾಲಿಕ ಪಟ್ಟಿಯನ್ನು ಸಮಿತಿಗೆ ಹಾಜರುಪಡಿಸಬೇಕು ಎಂದು ಸೂಚಿಸಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

 

2022-23ನೇ ಶೈಕ್ಷಣಿಕ ವರ್ಷದಲ್ಲಿಯೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಎನ್‌ಆರ್‌ಐ ಕೋಟಾ ಮತ್ತು ಆಡಳಿತ ಮಂಡಳಿ ಕೋಟಾದಡಿಯಲ್ಲಿನ ಸೀಟುಗಳನ್ನು ಲಕ್ಷಾಂತರ ರುಪಾಯಿಗಳಿಗೆ ಮಾರಾಟ ಮಾಡುತ್ತಿವೆ. ಈ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದೆ ಎಂದು ಜಿ ಕೆ ಅಸೋಸಿಯೇಟ್ಸ್‌ನ ರಮೇಶ್‌ನಾಯಕ್ ಮತ್ತಿತರರು ದಾಖಲೆ ಸಮೇತ ಸಲ್ಲಿಸಿರುವ ದೂರುಗಳನ್ನು ಕಸದಬುಟ್ಟಿಗೆ ಎಸೆದಿತ್ತು. ಅಲ್ಲದೆ ಹಿಂದಿನ   ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್‌ನಾರಾಯಣ್‌ ಅವರು ಸಹ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

 

ಸೀಟ್‌ ಮ್ಯಾಟ್ರಿಕ್ಸ್‌, ಕಾಮೆಡ್‌ ಕೆ, ಆಡಳಿತ ಮಂಡಳಿ ಕೋಟಾದ ಸೀಟು ಹಂಚಿಕೆ, ಬೋಧನಾ ಶುಲ್ಕ ಸಂಗ್ರಹದ ಬಗ್ಗೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮತ್ತು ಎಐಸಿಟಿಯು ಹಲವು ಸುತ್ತೋಲೆ, ಅಧಿಸೂಚನೆಗಳನ್ನು ಹೊರಡಿಸಿದ್ದರೂ ಯಾವುದನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಜಿ ಕೆ ಅಸೋಸಿಯೇಟ್ಸ್‌ನ ರಮೇಶ್‌ ನಾಯಕ್‌ ಮತ್ತಿತರರು ಪ್ರವೇಶಾತಿ ಮೇಲ್ವಿಚಾರಣೆ ಸಮಿತಿ ಮತ್ತು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಜುಲೈ 28ರಂದು ದೂರು ಸಲ್ಲಿಸಿದ್ದರು.

 

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಕ್ಷಾಂತರ ರುಪಾಯಿ ವಸೂಲಿ, ಅಕ್ರಮ ಹಣವರ್ಗಾವಣೆ ಆರೋಪ

ಖಾಸಗಿ ಕಾಲೇಜುಗಳಲ್ಲಿ ಸೀಟುಗಳಿಗೆ ಪ್ರವೇಶ ನೀಡುವ ಸಂಬಂಧ ಮಧ್ಯವರ್ತಿಗಳು ಅಂತರ್ಜಾಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಸೀಟು ಹಂಚಿಕೆ ಸಂಬಂಧ ಅರ್ಹತಾ ಪಟ್ಟಿ ತಯಾರಿಸದೇ ಮತ್ತು ಪ್ರಕಟಿಸದೆಯೇ ಮಧ್ಯವರ್ತಿಗಳ ಮೂಲಕ ಕ್ಯಾಪಿಟೇಷನ್‌ ಶುಲ್ಕವನ್ನೂ ಸಂಗ್ರಹಿಸುತ್ತಿದೆ. ಆಡಳಿತ ಮಂಡಳಿ ಮತ್ತು ಎನ್‌ಆರ್‌ಐ ಕೋಟಾದಡಿಯಲ್ಲಿ ಲಭ್ಯವಿರುವ ಸೀಟುಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ರಮೇಶ್‌ನಾಯಕ್‌ ಅವರು ದೂರಿನಲ್ಲಿ ವಿವರಿಸಿದ್ದರು.

 

ಎಂ ಎಸ್‌ ರಾಮಯ್ಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಆರ್‌ ವಿ ಇಂಜಿನಿಯರಿಂಗ್ ಕಾಲೇಜು, ಸರ್‌ ಎಂ ವಿಶ್ವೇಶ್ವರಾಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬಿಎನ್‌ಎಂ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಯಾನಂದ ಸಾಗರ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಬೆಂಗಳೂರು ಇನ್ಸಿಟಿಟ್ಯುಟ್‌ ಆಫ್‌ ಟೆಕ್ನಾಲಜಿ, ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಅಫ್‌ ಟೆಕ್ನಾಲಜಿ, ಮೈಸೂರು, ಅಚಾರ್ಯ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಪಿಇಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜುಗಳ ಹೆಸರುಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

 

ಅರ್ಹತಾ ಪಟ್ಟಿ ಪ್ರಕಟಿಸದೆಯೇ ಏಜೆಂಟರ ಮೂಲಕ ಮತ್ತು ನೇರವಾಗಿ ಟ್ರಸ್ಟಿಗಳ ಮೂಲಕ ಅಕ್ರಮವಾಗಿ ಲಕ್ಷಾಂತರ ರುಪಾಯಿಗಳನ್ನು ನಗದು ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಕೆಲವು ವಿದ್ಯಾರ್ಥಿಗಳಿಂದ ಹೆಚ್ಚಿನ ಬೋಧನಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಎಂದು ರಮೇಶ್‌ನಾಯಕ್‌ ಅವರು ದೂರಿದ್ದರು.

 

2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಬೋಧನಾ ಶುಲ್ಕ ಮತ್ತು ಪ್ರವೇಶ ನೀತಿಯನ್ನು ರೂಪಿಸಿಲ್ಲ. ಖಾಸಗಿ ಕಾಲೇಜುಗಳು ಯಾವುದೇ ಅರ್ಹತಾ ಪಟ್ಟಿಯನ್ನು ತಯಾರಿಸಿಲ್ಲ. ಎಐಸಿಟಿಇ, ಯುಜಿಸಿ ಮಾನದಂಡಗಳನ್ನು ಅನುಸರಿಸಿರಲಿಲ್ಲ. ಸ್ವೀಕರಿಸಿದ ಅರ್ಜಿಗಳಿಗೆ ಸ್ವೀಕೃತಿಯನ್ನೂ ನೀಡಿಲ್ಲ. ಹೀಗಾಗಿ 2022-23ನೇ ಶೈಕ್ಷಣಿಕ ವರ್ಷದ ಆಯ್ಕೆಪಟ್ಟಿಯೇ ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಎಂಜಿನಿಯರಿಂಗ್‌ ಸೀಟುಗಳು ಮಾರಾಟ; ಸಾಕ್ಷ್ಯ, ಪುರಾವೆ ಸಮೇತ ದೂರಿದ್ದರೂ ಕ್ರಮಕೈಗೊಳ್ಳದ ಸರ್ಕಾರ

ಬಿಎಂಎಸ್‌ ಶೈಕ್ಷಣಿಕ ಟ್ರಸ್ಟ್ ನಿರ್ವಹಿಸುವ 4 ಕಾಲೇಜುಗಳಲ್ಲಿ ಬಿಇ, ಮತ್ತು ಬಿಇ ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ಜೂನ್ ಮೊದಲನೇ ವಾರದಿಂದ ತಾತ್ಕಾಲಿಕ ಸೀಟು ಹಂಚಿಕೆ ಪತ್ರಗಳನ್ನು ನೀಡಲಾಗುತ್ತಿದೆ. ಪಾರದರ್ಶಕವಾಗಿ ಮೆರಿಟ್ ಪಟ್ಟಿಯನ್ನು ತಯಾರಿಸದೆಯೇ ಅಕ್ರಮ ಬೋಧನಾ ಶುಲ್ಕವನ್ನು ಬಿಎಂಎಸ್‌ ಶೈಕ್ಷಣಿಕ ಖಾತೆಗೆ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

 

‘ಮೆರಿಟ್ ಲಿಸ್ಟ್ ಮಾಡದೆ ಸೀಟು ಹಂಚಿಕೆ ಮಾಡಲು ಏಜೆಂಟರ ಮೂಲಕ ಮತ್ತು ನೇರವಾಗಿ ಟ್ರಸ್ಟಿಗಳ ಮೂಲಕ ಅಕ್ರಮವಾಗಿ ಲಕ್ಷ ರೂಪಾಯಿ ನಗದು ಸಂಗ್ರಹಿಸಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳಿಂದ ಹೆಚ್ಚಿನ ಬೋಧನಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಬಿಎಂಎಸ್‌ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ವಾರ್ಷಿಕ 9.5 ಲಕ್ಷ ರೂ. ಬೋಧನಾ ಶುಲ್ಕ ಮತ್ತು ನಗದು ರೂ. 14 ಲಕ್ಷ., ಅದೇ ಸೀಟಿಗೆ ಬೋಧನಾ ಶುಲ್ಕವನ್ನು ಅಂದಾಜು 2.25 ಲಕ್ಷ ರು. ನಿಗದಿಪಡಿಸಲಾಗಿದೆ. ಆದರೆ 28 ಲಕ್ಷ ರು.ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ಮೂಲಕ ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ವಿವಿಧ ಆದೇಶಗಳು, ಎಐಸಿಟಿಯು, ಯುಜಿಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ,’ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

 

ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ತಯಾರಿಸದೆಯೇ ಆಡಳಿತ ಮಂಡಳಿ ಮತ್ತು ಎನ್‌ಆರ್‌ಐ ಕೋಟಾದಡಿಯಲ್ಲಿ ಲಕ್ಷಗಟ್ಟಲೆ ರೂಪಾಯಿ ನಗದು ಸಂಗ್ರಹಿಸಿ ಅಕ್ರಮವಾಗಿ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ರಮೇಶ್‌ನಾಯಕ್‌ ಅವರು ಸರ್ಕಾರದಿಂದ ಅನುಮೋದನೆಯಿಲ್ಲದೆಯೇ ಬೋಧನಾ ಶುಲ್ಕವನ್ನು ಸಂಗ್ರಹಿಸಿ ಅಪರಾಧ ಎಸಗುತ್ತಿದೆ. ವಿಟಿಯು ಉಪ ಕುಲಪತಿ ಮತ್ತು ರಾಜಕೀಯ ಮುಖಂಡರ ಶಿಫಾರಸ್ಸುಗಳಿಗೆ ಹಲವು ಸೀಟುಗಳನ್ನು ನೀಡಲಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದರು.

the fil favicon

SUPPORT THE FILE

Latest News

Related Posts