ಎಂಜಿನಿಯರಿಂಗ್‌ ಸೀಟುಗಳು ಮಾರಾಟ; ಸಾಕ್ಷ್ಯ, ಪುರಾವೆ ಸಮೇತ ದೂರಿದ್ದರೂ ಕ್ರಮಕೈಗೊಳ್ಳದ ಸರ್ಕಾರ

ಬೆಂಗಳೂರು; ಇಂಜಿನಿಯರಿಂಗ್‌ ಸೀಟುಗಳನ್ನು ಅರ್ಹತೆ (ಮೆರಿಟ್‌) ಆಧಾರದ ಮೇಲೆ ವಿತರಿಸದೇ ಏಜೆಂಟರ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಪಡೆದು ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ ಎಂದು ಬೆಂಗಳೂರಿನ ಪ್ರತಿಷ್ಟಿತ ಬಿಎಂಎಸ್ ಶಿಕ್ಷಣ ದತ್ತಿಯ ನಾಲ್ಕು ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಸಲಹಾ ಸಂಸ್ಥೆಯಾಗಿರುವ ಜಿ ಕೆ ಅಸೋಸಿಯೇಟ್ಸ್‌ ವರ್ಷದ ಹಿಂದೆ ಪುರಾವೆಗಳ ಸಮೇತ ನೀಡಿದ್ದ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಸಿಸಿಬಿ ಪೊಲೀಸರು ಇದುವರೆಗೂ ಗಂಭೀರ ಕ್ರಮ ಕೈಗೊಂಡಿಲ್ಲ.

 

ಬಿಎಂಎಸ್‌ ಶಿಕ್ಷಣ ದತ್ತಿಯನ್ನು ಖಾಸಗೀಕರಣಗೊಳಿಸಿದ್ದ ಬಿಜೆಪಿ ಸರ್ಕಾರದ ಮುಖವಾಡವನ್ನು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಬಹಿರಂಗಗೊಳಿಸುತ್ತಿದ್ದಂತೆ ಇದೇ ಶಿಕ್ಷಣ ದತ್ತಿಯ ಇಂಜನಿಯರಿಂಗ್‌ ಕಾಲೇಜು ಸೀಟು ಹಂಚಿಕೆಯಲ್ಲಿಯೂ ಅವ್ಯವಹಾರ ಮಾಡಿದೆ ಎಂದು ಸಲ್ಲಿಕೆಯಾಗಿದ್ದ ದೂರು ಸಹ ಮುನ್ನೆಲೆಗೆ ಬಂದಿದೆ.

 

ಸಿಸಿಬಿ ಪೊಲೀಸರ ವಿಳಂಬ ಧೋರಣೆಯನ್ನು ಪ್ರಶ್ನಿಸಿರುವ ಜಿ ಕೆ ಅಸೋಸಿಯೇಟ್ಸ್‌ ಈ ಸಂಬಂಧ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ಸಿಸಿಬಿ ಪೊಲೀಸರ ತನಿಖೆಯು ಮಂದಗತಿಯಲ್ಲಿರುವ ಕಾರಣ ಪ್ರಕರಣದಲ್ಲಿ ಆರೋಪಕ್ಕೀಡಾಗಿರುವ ಸಂಬಂಧಿಸಿದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಈ ಜಾಲದ ಹಿಂದಿರುವ ಏಜೆಂಟರುಗಳು ಸೀಟುಗಳನ್ನು ಮಾರಾಟ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಜಿ ಕೆ ಆಸೋಸಿಯೇಟ್ಸ್‌ ಡಿಜಿಐಜಿಪಿಗೆ ನೀಡಿರುವ ದೂರಿನಲ್ಲಿ ವಿವರಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಸಂಬಂಧ ಏಜೆಂಟರುಗಳು ಮತ್ತು ಪ್ರವೇಶಾತಿ ಆಕಾಂಕ್ಷಿಗಳೊಂದಿಗೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಧ್ವನಿಮುದ್ರಣ ಮತ್ತು ಶಿಕ್ಷಣ ಸಂಸ್ಥೆಯು ಕಾನೂನುಬಾಹಿರವಾಗಿ ನೀಡಿರುವ ತಾತ್ಕಾಲಿಕ ಪ್ರವೇಶಾತಿ ಪತ್ರವನ್ನೂ ಸಿಸಿಬಿ ಪೊಲೀಸರಿಗೆ ದೂರು ನೀಡಿತ್ತು.

 

ಅಲ್ಲದೇ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಐಸಿಟಿಇ ನಿಗದಿಪಡಿಸಿದ್ದ ಕೊನೆ ದಿನಾಂಕದ ನಂತರ ಸುಮಾರು 85 ವಿದ್ಯಾರ್ಥಿಗಳಿಗೆ ಹಿಂದಿನ ದಿನಾಂಕವನ್ನು (2021ರ ಡಿಸೆಂಬರ್‌ 31)ದಿನಾಂಕವನ್ನು ನಮೂದಿಸಲಾಗಿತ್ತು.

 

ಹಾಗೆಯೇ ಪಾರದರ್ಶಕವಾಗಿ ಅರ್ಹತಾ ಪಟ್ಟಿಯನ್ನು ತಯಾರಿಸದೆಯೇ ಗುಪ್ತವಾಗಿ 2022ರ ಫೆಬ್ರುವರಿ-ಮಾರ್ಚ್‌ನಲ್ಲಿ ಅಕ್ರಮವಾಗಿ ಪ್ರವೇಶಾತಿ ನೀಡಲಾಗಿದೆ ಎಂಬ ಕುರಿತು ಪುರಾವೆಗಳನ್ನು ಸಿಸಿಬಿಗೆ ನೀಡಿತ್ತು.

 

 

ಆದರೂ ಪೊಲೀಸ್‌ ಇಲಾಖೆಯು ಗಂಭೀರವಾಗಿ ಪರಿಗಣಿಸದಿರುವುದು ಆಡಳಿತ ಮಂಡಳಿ ಮತ್ತು ಏಜೆಂಟರುಗಳಿಗೆ ವರದಾನವಾದಂತಾಗಿದೆ.

 

‘ಸರ್ಕಾರ ಅನುಮೋದನೆ ಮತ್ತು ಅನುಮತಿ ಇಲ್ಲದೆಯೇ ಅಪಾರ ಪ್ರಮಾಣದಲ್ಲಿ ವಸೂಲು ಮಾಡುತ್ತಿರುವ ಬೋಧನಾ ಶುಲ್ಕವನ್ನು ಬಿಎಂಎಸ್‌ ಸಂಸ್ಥೆಯು ಶಿಕ್ಷಣ ದತ್ತಿಯ ಲೆಕ್ಕದಲ್ಲಿ ಕಾನೂನುಬಾಹಿರವಾಗಿ ತೆಗೆದುಕೊಳ್ಳುತ್ತಿದೆ. ಸೀಟು ಹಂಚಿಕೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪುಗಳು, ಎಐಸಿಟಿಯು,ಯುಜಿಸಿ ನಿಯಮಗಳನ್ನು ಪಾಲನೆ ಮಾಡದೇ ಅಪರಾಧ ಎಸಗಲಾಗಿದೆ,’ ಎಂದು ಜಿ ಕೆ ಅಸೋಸಿಯೇಟ್ಸ್‌ ದೂರಿನಲ್ಲಿ ವಿವರಿಸಿದೆ.

 

ಅಲ್ಲದೆ ‘ಇಲ್ಲಿ ಸಾರ್ವಜನಿಕರ ಶೋಷಣೆ ಹಾಗೂ ಮೋಸವಾಗುತ್ತಿದೆ. ಯಾವದೇ ಅರ್ಜಿ ಸಂಖ್ಯೆ,, ಅರ್ಜಿ ಕೊಟ್ಟ ಬಗ್ಗೆ ಹಾಗೂ ಸ್ವೀಕೃತಿ ದಿನಾಂಕ, ಪ್ರವೇಶ ಸಮಿತಿಯ ಅನುಮೋದನೆ ಸಂಖ್ಯೆ, ಮೆರಿಟ್ ಲಿಸ್ಟ್ ಸಂಖ್ಯೆಯನ್ನು ನಮೂದಿಸುತ್ತಿಲ್ಲ. ಹಾಗೆಯೇ ಗುಪ್ತವಾಗಿ , ಕಾನೂನು ಬಾಹಿರವಾಗಿ, ತಾತ್ಕಾಲಿಕ ಪ್ರವೇಶ ಪತ್ರಗಳನ್ನು,, ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಾಗೂ ಬೇರೆ ಬೇರೆ ವಿದ್ಯಾರ್ಥಿಗಳಿಂದ, ವಿಭಿನ್ನ ಬೋಧನಾ ಶುಲ್ಕ ವನ್ನು ವಸೂಲಿ ಮಾಡಲಾಗುತ್ತಿದೆ,’ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

 

ಜೂನ್ 2022 ರಿಂದ ಈ ಶಿಕ್ಷಣ ಸಂಸ್ಥೆಯ ನಾಲ್ಕು ಕಾಲೇಜು ಗಳಲ್ಲಿ ಮಾಡಿದ ಪ್ರವೇಶಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಿದ್ದ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿಲ್ಲ. ಈ ಪ್ರವೇಶಗಳ ವಿಷಯದಲ್ಲಿ ಕಾನೂನು ಪಾಲನೆಯಾಗದಿದ್ದಲ್ಲಿ ಅಕ್ಷಮ್ಯ ಅಪರಾಧಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

ಅಕ್ರಮ ಸೀಟು ಮಾರಾಟ ಅಪರಾಧ ಎಸಗಿದ್ದಾರೆ ಎಂದು ದೂರಿರುವ ಜಿ ಕೆ ಅಸೋಸಿಯೇಟ್ಸ್‌ ಸಂಸ್ಥೆಯು ಪ್ರೊ.ಹೆಚ್‌ ಎಸ್‌ ಜಗದೀಶ್‌, ಬಿಎಂಎಸ್‌ನ ಟ್ರಸ್ಟಿ ರಾಗಿಣಿ ನಾರಾಯಣ, ಅವಿರಾಮ್‌ ಶರ್ಮಾ, ರವಿವೆಂಕಟೇಸಮ್‌, ದಯಾನಂದ ಪೈ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಐಎಎಸ್‌ ಅಧಿಕಾರಿ ಪ್ರದೀಪ್‌ ಪ್ರಭಾಕರ್‌, ಸರ್ಕಾರದ ನಾಮನಿರ್ದೇಶಿತ ಟ್ರಸ್ಟಿ, ಬಿಎಂಎಸ್‌ನ ಇಂಜಿನಿಯರಿಂಗ್‌, ಬಿಎಂಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌, ಬಿಎಂಎಸ್‌ ಆರ್ಕಿಟೆಕ್ಚರ್‌ ಕಾಲೇಜಿನ ಪ್ರಾಂಶುಪಾಲರನ್ನೂ ಹೆಸರಿಸಿರುವುದು ದೂರಿನಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts