702 ಕೋಟಿ ಖರ್ಚಾಗಿರುವುದು ಗೊತ್ತಿಲ್ಲವೆಂದರೆ ಏನರ್ಥ?;’ದಿ ಫೈಲ್‌’ ವರದಿ ಬೆನ್ನಲ್ಲೇ ತರಾಟೆ

ಬೆಂಗಳೂರು; ‘ಸರ್ಕಾರದ ಅನುಮೋದನೆಯಿಲ್ಲದೆಯೇ ತುಂಗಾ ಮೇಲ್ದಂಡೆ ಯೋಜನೆಗೆ 702 ಕೋಟಿ ರು. ಹೆಚ್ಚುವರಿ ಖರ್ಚು ಮಾಡಿರುವ ಕುರಿತಂತೆ ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸುತ್ತಿದ್ದಂತೆ ಎಐಸಿಸಿಯ ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಅವರು  ಮತ್ತೊಂದು ದಿನ ಮತ್ತೊಂದು ಹಗರಣ ಎಂದು ಟ್ವೀಟ್‌ ಮಾಡಿದ್ದಾರೆ.

 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ 702 ಕೋಟಿ ರು. ಖರ್ಚಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

 

ಸುರ್ಜೆವಾಲಾ ಟ್ವೀಟ್‌ನಲ್ಲೇನಿದೆ?

 

ಮತ್ತೊಂದು ದಿನ ಮತ್ತೊಂದು ಹಗರಣ. ಶೇ.40ರಷ್ಟು ಕಮಿಷನ್‌ ಸರ್ಕಾರ ಲೂಟಿ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಯಾರಾದರೂ 702 ಕೋಟಿ ರು.ಗಳನ್ನು ಅನುಮೋದನೆ ಇಲ್ಲದೆಯೇ ಖರ್ಚು ಮಾಡಿರುವುದನ್ನು  ಯಾರಾದರೂ ಕೇಳಿದ್ದೀರಾ  ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಅವರು 702 ಕೋಟಿ ಖರ್ಚಾಗಿರುವುದು ಸರ್ಕಾರಕ್ಕೆ ಗೊತ್ತಿಲ್ಲ ಎಂದರೇ ಏನರ್ಥ ಎಂದೂ  ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

 

ಇದಕ್ಕೆ ಉತ್ತರಿಸಿರುವ ಬಸವರಾಜ ಬೊಮ್ಮಾಯಿ ಅವರು 702 ಕೋಟಿ ಖರ್ಚಾಗಿರುವುದು ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ ಕೆ ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

 

ಪ್ರಕರಣದ ಹಿನ್ನೆಲೆ

 

ತುಂಗಾ ಮೇಲ್ದಂಡೆ ಯೋಜನೆಗೆ ಹೆಚ್ಚುವರಿಯಾಗಿ 702.12 ಕೋಟಿ ವೆಚ್ಚ ಮಾಡಿರುವ ಕರ್ನಾಟಕ ನೀರಾವರಿ ನಿಗಮವು ಬಹುದೊಡ್ಡ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿತ್ತು. ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದ್ದ ಸಮಗ್ರ ದಾಖಲಾತಿಗಳ ಆಧಾರದ ಮೇರೆಗೆ ವರದಿ ಪ್ರಕಟಿಸಿತ್ತು.

 

‘ಒಟ್ಟಾರೆಯಾಗಿ ಸರ್ಕಾರದ ಅನುಮೋದನೆ ಪಡೆಯದೇ/ಸರ್ಕಾರದ ಗಮನಕ್ಕೆ ತರದೇ ಹೆಚ್ಚುವರಿಯಾಗಿ 702.12 ಕೋಟಿಗಳ ವೆಚ್ಚ ಮಾಡಿರುವುದು ನಿಗಮದ ಕರ್ತವ್ಯ ಲೋಪವಾಗಿರುತ್ತದೆ,’ ಎಂದು ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿಯು 2022ರ ಜೂನ್‌ 16ರಂದೇ ಲಿಖಿತವಾಗಿ ದಾಖಲಿಸಿದ್ದನ್ನು ಟಿಪ್ಪಣಿ ಹಾಳೆ ಸಮೇತ ವರದಿ ಪ್ರಕಟಿಸಿತ್ತು.

 

ತುಂಗಾ ಮೇಲ್ದಂಡೆ ಯೋಜನೆ; ಅನುಮೋದನೆಯಿಲ್ಲದೆಯೇ 702 ಕೋಟಿ ಹೆಚ್ಚುವರಿ ವೆಚ್ಚ

 

ನಾರಾಯಣಪುರ ಎಡದಂಡೆ ಕಾಲುವೆಗಳ ಆಧುನೀಕರಣ, ವಿಸ್ತರಣೆಗೆ ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗೆ ಗುತ್ತಿಗೆ ನೀಡಿರುವ ಬೆನ್ನಲ್ಲೇ ತುಂಗಾ ಮೇಲ್ದಂಡೆ ಯೋಜನೆಗೆ 702.12 ಕೋಟಿ ರು.ಗಳನ್ನು ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ ವೆಚ್ಚ ಮಾಡಿದ್ದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

 

‘ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ 3,264.00 ಕೋಟಿಗಳ ವೆಚ್ಚ ಭರಿಸಲಾಗಿದೆ ಎಂದು ತಿಳಿಸಲಾಗಿದೆ. ಅದರಂತೆ ಅನುಮೋದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಭರಿಸಿರುವ 702.12 ಕೋಟಿ ರು.ಗಳಿಗೆ karnataka government transaction of business rules 1977ರ 17ರಂತೆ ಸಕ್ಷಮ ಪ್ರಾಧಿಕಾರ (ಸಚಿವ ಸಂಪುಟ)ದ ಅನುಮೋದನೆ ಇಲ್ಲದೆಯೇ ವೆಚ್ಚ ಮಾಡಿರುವ ಕುರಿತು ಸ್ಪಷ್ಟೀಕರಣ ನೀಡಲು ಆರ್ಥಿಕ ಇಲಾಖೆ ಹೇಳಿತ್ತು.

 

ಲೋಕೋಪಯೋಗಿ ಇಲಾಖೆಯ ಸಂಹಿತೆ ಪ್ಯಾರಾ 191ರ ಅನ್ವಯ ಮೂಲ ಅಂದಾಜಿನಲ್ಲಿ ಶೇ.5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದಲ್ಲಿ ಅಂದಾಜನ್ನು ಪರಿಷ್ಕೃತಗೊಳಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಾಗಿರುತ್ತದೆ. ಅದರಂತೆ ಕ್ರಮ ಕೈಗೊಳ್ಳದೇ ಇರುವ ಕುರಿತು ಮಾಹಿತಿ ಒದಗಿಸಬೇಕು,’ ಎಂದು 2022ರ ಜನವರಿ 19ರಂದೇ ಜಲಸಂಪನ್ಮೂಲ ಇಲಾಖೆಯು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರದಲ್ಲಿ ನಿರ್ದೇಶಿಸಿತ್ತು.

the fil favicon

SUPPORT THE FILE

Latest News

Related Posts