Wednesday | May 6, 2026 |

ಬ್ಯಾಂಕ್‌ಗಳಲ್ಲಿ 4,167 ನಕಲಿ ಕಂಪನಿಗಳ ಹೂಡಿಕೆ; ಗಮನಕ್ಕೇ ಬಂದಿಲ್ಲವೆಂದು ಸದನದ ದಾರಿತಪ್ಪಿಸಿದ ಸಚಿವ

ಬೆಂಗಳೂರು; ರಾಜ್ಯದ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167 ಹೆಚ್ಚು ನಕಲಿ ಕಂಪನಿಗಳು ವಹಿವಾಟು ನಡೆಸಿವೆ ಎಂದು ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಸಹಕಾರ ಇಲಾಖೆಯೇ ಮಾಹಿತಿ ಒದಗಿಸಿದ್ದರೂ ಇದೀಗ ರಾಜ್ಯ ಸರ್ಕಾರದ ಗಮನಕ್ಕೇ ಬಂದಿಲ್ಲ ಎಂದು ಸಹಕಾರ ಇಲಾಖೆ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸದನದ ದಾರಿತಪ್ಪಿಸಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೆ ರಾಜ್ಯ ಸರ್ಕಾರದ ಗಮನಕ್ಕೆ ಬರದೆಯೇ 4,167ಕ್ಕೂ ಹೆಚ್ಚು ನಕಲಿ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಈ ಯಾವ ವ್ಯವಹಾರಗಳೂ ತನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸುವ ಮೂಲಕ ರಾಜ್ಯ ಸರ್ಕಾರದ ಸಹಕಾರ ಇಲಾಖೆಯೇ ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಗೆ ಮಂಡಿಸಿದ್ದ ಕಾರ್ಯಸೂಚಿ ಮತ್ತು ವಿವರಣೆಯನ್ನು ತಳ್ಳಿ ಹಾಕಿದೆ.

 

ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪನಿಗಳು ವ್ಯವಹಾರ ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಮತ್ತು ಸಹಕಾರಿ ಬ್ಯಾಂಕ್‌ಗಳು ಬೇನಾಮಿ ಕಂಪನಿಗಳಿಂದ 4,754 ಕೋಟಿಗೂ ಹೆಚ್ಚು ಮೊತ್ತ ಠೇವಣಿ ಸ್ವೀಕರಿಸಿರುವ ಕುರಿತು ಸರ್ಕಾರದ ನಿಲುವಿನ ಕುರಿತು ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ವಿಧಾನಪರಿಷತ್‌ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.

 

ಇದಕ್ಕೆ ಉತ್ತರಿಸಿರುವ ಎಸ್‌ ಟಿ ಸೋಮಶೇಖರ್‌ ಅವರು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ 4,167ಕ್ಕೂ ಹೆಚ್ಚು ನಕಲಿ ಕಂಪನಿಗಳು ವ್ಯವಹಾರ ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

 

 

ನಗರ ಸಹಕಾರ ಬ್ಯಾಂಕ್‌ಗಳು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆ 1959ರ ಅಡಿ ನೋಂದಣಿಯಾಗಿ ಆರ್‌ಬಿಐನಿಂದ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ. ಈ ಬ್ಯಾಂಕ್‌ಗಳ ವ್ಯವಹಾರಗಳನ್ನು ವಾರ್ಷಿಕ ಲೆಕ್ಕ ಪರಿಶೋಧನೆ ಹಾಗೂ ಆರ್‌ಬಿಐ ಪರಿವೀಕ್ಷಣೆ ನಡೆಸುತ್ತಿದೆ. ಈ ವರದಿಗಳಲ್ಲಿ ಆರ್ಥಿಕ ಅವ್ಯವಹಾರಗಳು ಕಂಡುಬಂದಲ್ಲಿ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಕಾಯ್ದೆ 1949 ಹಾಗೂ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರ ಅವಕಾಶಗಳನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿರುವ ಎಸ್ ಟಿ ಸೋಮಶೇಖರ್‌ ಅವರು ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿನ ಟಿಪ್ಪಣಿಯನ್ನೇ ಮುಚ್ಚಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸಮನ್ವಯ ಸಮಿತಿ ಸಭೆಗೆ ಮಂಡಿಸಿದ್ದ ವಿವರಣೆಯಲ್ಲೇನಿತ್ತು?

 

ನಕಲಿ ಕಂಪನಿಗಳು ಆದಾಯ ತೆರಿಗೆ ಕುರಿತಾದ ವಿವರಗಳನ್ನು ಸಲ್ಲಿಸದಿರುವ ಕುರಿತು ಕಾರ್ಯಸೂಚಿ ಪಟ್ಟಿಯಲ್ಲಿ ಸೇರಿಸಿತ್ತು. ಕಂಪನಿಗಳ ನೋಂದಣಿ ಇಲಾಖೆ (ಆರ್‌ಒಸಿ) ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಆಸ್ತಿಗಳನ್ನು ಅಡಗಿಸಿಡುವುದಕ್ಕೆ ಪೂರಕವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಗುರುತಿಸಲಾಗಿರುವ ಒಟ್ಟು ನಕಲಿ (ಶೆಲ್‌) ಕಂಪನಿಗಳ ಪೈಕಿ 4,167 ಕಂಪನಿಗಳು ವಾರ್ಷಿಕ ರಿಟರ್ನ್ಸ್‌ ಸಲ್ಲಿಸಿರಲಿಲ್ಲ. ಅಲ್ಲದೆ ಈ ನಕಲಿ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಖಾತೆ ತೆರೆದು ಕೋಟ್ಯಂತರ ವಹಿವಾಟು ನಡೆಸಿವೆ ಎಂಬ ಸಂಗತಿಯು ರಾಜ್ಯಮಟ್ಟದ ಸಮನ್ವಯ ಸಮಿತಿಯು 2022ರ ಜೂನ್‌ 27ರ ಇಂದು ನಡೆದಿದ್ದ 56ನೇ ಸಭೆಗೆ ಸಲ್ಲಿಸಿರುವ ಕಾರ್ಯಸೂಚಿ ಪಟ್ಟಿಯಲ್ಲಿ ವಿವರಣೆ ಒದಗಿಸಿತ್ತು. ಈ ಕುರಿತು ‘ದಿ ಫೈಲ್‌’ 2022ರ ಜುಲೈ 4ರಂದೇ ವರದಿ ಪ್ರಕಟಿಸಿತ್ತು.

 

4,167 ನಕಲಿ ಕಂಪನಿಗಳಿಂದ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಹೂಡಿಕೆ; ಕೋಟ್ಯಂತರ ರು.ವಹಿವಾಟು

 

ಹಲವು ನಕಲಿ ಕಂಪನಿಗಳು ಹೊಂದಿದ್ದ ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಲಾಗಿದ್ದರೂ ಇನ್ನೂ ಬಹುತೇಕ ಕಂಪನಿಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. ರಿಜಿಸ್ಟ್ರರ್‌ ಆಫ್‌ ಕಂಪನೀಸ್‌ ಮಾಹಿತಿ ಪ್ರಕಾರ ಶೆಲ್‌ ಕಂಪನಿಗಳು ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತಗೆ ತೆರೆದಿವೆ. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌, ನಗರ ಸಹಕಾರಿ ಬ್ಯಾಂಕ್‌ಗಳಿಂದ ಮಾಹಿತಿಯನ್ನು ಬಯಸಿದೆ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿತ್ತು.

 

ಎಸ್‌ಎಲ್‌ಸಿಸಿ (ಸ್ಟೇಟ್‌ ಲೆವೆಲ್‌ ಕೋ ಆರ್ಡಿನೇಷನ್ ಕಮಿಟಿ)ಯ 54ನೇ ಸಭೆಯಲ್ಲಿ ಕಂಪನಿಗಳ ಕೆವೈಸಿ ವಿವರಗಳ ಕ್ರೋಢೀಕೃತ ಮಾಹಿತಿ ಒದಗಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಆರ್‌ಬಿಐನೊಂದಿಗೆ ಹಂಚಿಕೊಂಡಿರಲಿಲ್ಲ.

 

ಅಲ್ಲದೆ 55ನೇ ಎಸ್‌ಎಲ್‌ಸಿಸಿ ಸಭೆಯಲ್ಲಿ ಸೆಬಿಯ ಯಾವೊಬ್ಬ ಪ್ರತಿನಿಧಿಯು ಹಾಜರಿರಲಿಲ್ಲ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ಗೊತ್ತಾಗಿದೆ. ಅಲ್ಲದೆ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಕಂಪನಿಗಳು ಹೂಡಿಕೆ ಮಾಡಿವೆ ಎಂದು ಆರ್‌ಬಿಐ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಈ ಕುರಿತು ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

ಸಂಸತ್‌ ಅಧಿವೇಶನದಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕಂಪನಿ ವ್ಯವಹಾರಗಳ ಕೇಂದ್ರ ಸಚಿವಾಲಯವು ನೀಡಿದ್ದ ಮಾಹಿತಿ ಪ್ರಕಾರ ಆರ್‌ಒಸಿ ಬೆಂಗಳೂರು ವ್ಯಾಪ್ತಿಯಲ್ಲಿಯೇ 11,185 ಶೆಲ್‌ ಕಂಪನಿಗಳಿದ್ದವು. ಅಲ್ಲದೆ ದೇಶದಲ್ಲಿ 2018ರಿಂದ 2021ರ ಅವಧಿಯಲ್ಲಿ 2,38,223 ಶೆಲ್‌ ಕಂಪನಿಗಳಿವೆ ಎಂದು ಕೇಂದ್ರ ಸರ್ಕಾರವು ಗುರುತಿಸಿದ್ದನ್ನು ಸ್ಮರಿಸಬಹುದು.

Hot this week

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

ಒಂದೇ ಜಾಗದಲ್ಲಿ ಎರಡು ಫ್ಲೈ ಓವರ್, ಶೇ.50ರಷ್ಟು ಕಾಮಗಾರಿಯಾಗಿದ್ದರೂ ಪೂರ್ಣ ಪಾವತಿ; ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲಿಲ್ಲ, ಗುತ್ತಿಗೆದಾರರಿಗೆ ಲಾಭ, ಬಿಬಿಎಂಪಿ ನಿಧಿಗೆ ನಷ್ಟ

ಬೆಂಗಳೂರು;  ಈಜಿಪುರ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್  ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ  ಪೂರ್ಣಗೊಳಿಸದ...

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...
Please Scan to make Your Contribution

Topics

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...

ವೈಟ್‌ ಟ್ಯಾಪಿಂಗ್‌ ಗೋಲ್ಮಾಲ್‌; ಅಗತ್ಯವಿರದಿದ್ದರೂ ಕಾಮಗಾರಿ, ತಾಂತ್ರಿಕ ಪರಿಶೀಲನೆಯಿಲ್ಲದಿದ್ದರೂ ಹೆಚ್ಚುವರಿ ವೆಚ್ಚ, ಗುತ್ತಿಗೆದಾರರಿಗೆ ಲಾಭ

ಬೆಂಗಳೂರು;  ವೈಟ್‌ ಟ್ಯಾಪಿಂಗ್ ಅಗತ್ಯವಿಲ್ಲದಿದ್ದರೂ  ಕಾಮಗಾರಿ ಆರಂಭಿಸಿದ ನಂತರ ತಾಂತ್ರಿಕ ಮಂಜೂರಾತಿ...

Related Articles

Popular Categories

error: Content is protected !!