ಶರಣರ ವಿರುದ್ಧದ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಮನವಿ; ಪೋಕ್ಸೋ ತನಿಖೆ ಮೇಲೆ ಪ್ರಭಾವ!

ಪ್ರಾತಿನಿಧಿಕ ಚಿತ್ರ

ಬೆಂಗಳೂರು; ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

 

ಚಿತ್ರದುರ್ಗದ ಮುರುಘರಾಜೇಂದ್ರ ಮಠವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ಮಠವಾಗಿದೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರುಗಳು, ಪೊಲೀಸ್‌ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಿಜ್ಞಾನಿಗಳು, ಪತ್ರಕರ್ತರು, ಚಿತ್ರರಂಗ, ಸಾಂಸ್ಕೃತಿಕ ರಂಗ ಹೀಗೆ ವಿವಿಧ ರಂಗಗಳಲ್ಲಿನ ಗಣ್ಯಾತಿ ಗಣ್ಯರು ಈ ಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮೇಲೆ ಈ ಎಲ್ಲರೂ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಡೀ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಭಾರತೀಯ ನಾಗರಿಕ ಸಮಿತಿಯು ಮನವಿಯಲ್ಲಿ ಒತ್ತಾಯಿಸಿದೆ. ಮನವಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಈ ಮಠದ ಮುಖ್ಯಸ್ಥರಾದ ಡಾ ಶಿವಮೂರ್ತಿ ಶರಣರ ಮೇಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣವಾಗಿರುವ ಕಾರಣ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಈ ಮಠದೊಂದಿಗೆ ಸಂಬಂಧವಿಟ್ಟುಕೊಂಡ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಮಾಜದ ಇತರ ಗಣ್ಯ ವ್ಯಕ್ತಿಗಳು ಈ ಪ್ರಕರಣದ ಮೇಲೆ ಪ್ರಭಾವ ಬೀರಬಹುದು,’ ಎಂದು ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌, ಹೆಚ್ ಜಿ ರಮೇಶ್, ಪ್ರದೀಪ್ ಮೆಂಡೋ, ಹಂದ್ರಾಳ ನಾಗಭೂಷಣ್‌, ತಿಪ್ಪೇಸ್ವಾಮಿ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಾಥಮಿಕ ತನಿಖೆ ವೇಳೆಯಲ್ಲಿಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿರುವ ಹೇಳಿಕೆಯು ದೌರ್ಜನ್ಯಕ್ಕೆ ಒಳಗಾಗಿ ನೊಂದಿರುವ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗುವ ವಿಶ್ವಾಸವೂ ಇಲ್ಲವಾಗಿದೆ. ‘ಹೀಗಾಗಿ ಪೋಕ್ಸೋ ಕಾಯಿದೆಯ ಪ್ರಕರಣವನ್ನು ಕರ್ನಾಟಕ ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಬೇಕು. ಅಲ್ಲಿನ ತನಿಖೆ ಸಂಸ್ಥೆಗೆ ವಿಚಾರಣೆ ಹೊಣೆಯನ್ನು ನೀಡಿ ಅಲ್ಲಿನ ನ್ಯಾಯಾಲಯದಲ್ಲಿ ತನಿಖೆ ಮತ್ತು ವಿಚಾರಣೆ ನಡೆದಲ್ಲಿ ಪ್ರಕರಣದ ಸತ್ಯತೆಯು ಪ್ರಾಮಾಣಿಕವಾಗಿ ಹೊರಬರುವುದರಲ್ಲಿ ಸಂಶಯವಿಲ್ಲ,’ ಎಂದು ಮನವಿಯಲ್ಲಿ ಕೋರಿದೆ.

 

ಸಾಮಾಜಿಕ ಹೋರಾಟಗಾರರು ಈ ಮೈಲ್ ಮೂಲಕ ಸಲ್ಲಿಸಿರುವ ಮನವಿ ಪ್ರತಿ

 

ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ದ ದಾಖಲಾಗಿದ್ದ ಗಂಭೀರ ಪ್ರಕರಣದ ವಿಚಾರಣೆಯನ್ನು ತಮಿಳುನಾಡನ್ನು ಹೊರತುಪಡಿಸಿ ಕರ್ನಾಟಕದ ಬೆಂಗಳೂರಿನಲ್ಲಿ ವಿಚಾರಣೆ ನಡೆದಿತ್ತು. ಆಗ ಸಮರ್ಪಕವಾದ ತೀರ್ಪು ಪ್ರಕಟವಾಗಿತ್ತು. ಅತ್ಯಂತ ಪ್ರಭಾವಿಗಳಾದ ಡಾ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಕಾಯ್ದೆಯ ಪ್ರಕರಣವನ್ನು ಹೊರ ರಾಜ್ಯದಲ್ಲಿ ವಿಚಾರಣೆ, ತನಿಖೆ ನಡೆದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದೂ ಮನವಿಯಲ್ಲಿ ವಿವರಿಸಲಾಗಿದೆ.

 

‘ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿರುವಂತೆ ಶಿವಮೂರ್ತಿ ಮುರುಘಾ ಶರಣರು ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ನಡೆದ ದೈಹಿಕ ದೌರ್ಜನ್ಯಕ್ಕೆ ಸಂಧಾನ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಸಾಮಾಜಿಕ ಹೋರಾಟಗಾರರು ಪ್ರಕರಣವನ್ನು ಹೊರಾಜ್ಯಕ್ಕೆ ವರ್ಗಾವಣೆ ಮಾಡುವುದೇ ಒಳಿತು ಎಂದು ಮನವಿಯಲ್ಲಿ ಅಭಿಪ್ರಾಯಿಸಿದ್ದಾರೆ.

 

ಈ ಪ್ರಕರಣದಲ್ಲಿ ಪಾರದರ್ಶಕವಾದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವ ಇಚ್ಚಾಶಕ್ತಿ ಇರಬೇಕು. ಪ್ರಕರಣವನ್ನು ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಸಾಧ್ಯವಾಗದೇ ಇದ್ದಲ್ಲಿ ಕೊನೆಯ ಪಕ್ಷ ಚಿತ್ರದುರ್ಗದಿಂದ ಮೈಸೂರು ಜಿಲ್ಲೆಗೆ ಪ್ರಕರಣವನ್ನು ವರ್ಗಾವಣೆ ಮಾಡಿ ವಿದ್ಯಾರ್ಥಿನಿಯರ ಆಶೋತ್ತರಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸಾಮಾಜಿಕ ಹೋರಾಟಗಾರರು ಕೋರಿದ್ದಾರೆ.

the fil favicon

SUPPORT THE FILE

Latest News

Related Posts