‘ಮಂತ್ರಿಗಳು ಸುಮ್ನೆ ಉಳ್ಸಲ್ಲಾ, ಅಲ್ಲೀವರ್ಗೂ ಕೊಟ್ಕೊಂಡು ಹೋಗ್ಬೇಕು’; ಅಧಿಕಾರಿ, ನೌಕರರ ಆಡಿಯೋ ಸೋರಿಕೆ

ಬೆಂಗಳೂರು; ‘ಇದೆಲ್ಲಾ ಹ್ಯಂಗ್‌ ಗೊತ್ತೇನ್ರಿ….ಎಡಿಆರ್‌ ಅಗಿ ನಾನ್‌ ಹ್ಯಂಗ್‌ ಉಳ್ಕೋಂಡೀದಿನಿ ಅಂದ್ರೆ ಪುಕ್ಸಟ್ಟೆ ಉಳ್ಕೊಂಡಿಲ್ಲ… ರೀ… ಕೇಳಪ್ಪಾ ಇಲ್ಲಿ……ನಾನೂನು ಎಲ್ಲಾ ವ್ಯವಸ್ಥೆ ಮಾಡಿನೇ ಉಳ್ಕೊಂಡಿರೋದು… ಮಂತ್ರಿಗಳು ಸುಮ್ನೆ ಉಳ್ಸಲ್ಲಾ……ಅವೆಲ್ಲಾ ಮಾಡ್ಕೊಂಡು ಹೋಗ್ಬೇಕಪ್ಪಾ….ಅಲ್ಲಿಂದ ಮಾಹಿತಿ ಬಂದಿದೆ. ನಾವು ಇಲ್ಲಿಂದ ಅಲ್ಲೀವರೆಗೂ ಕೊಟ್ಕೊಂಡು ಹೋಗ್ಬೇಕು… ನಾವು ಮಾಡ್ತೀವಿ ಅಪ್ಪಾ….ಪುಕ್ಸಟ್ಟೆ ಉಳ್ಕೊಳ್ಲೋಲ್ಲಾ…..,’

 

ಹೀಗೆಂದು ಹೊರಗುತ್ತಿಗೆ ನೌಕರರೊಬ್ಬರೊಂದಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಮಾತನಾಡಿರುವ ಸಂಭಾಷಣೆ ಸೋರಿಕೆ ಆಗಿದೆ. ಗುತ್ತಿಗೆದಾರಿಂದ ಶೇ. 40ರಿಂದ 50ರಷ್ಟು ಪರ್ಸೆಂಟೇಜ್‌ಗೆ ಸಚಿವರು ಮತ್ತು ಅಧಿಕಾರಿಗಳು ಬೇಡಿಕೆ ಇಡುತ್ತಿರುವ ಕುರಿತು ಗುತ್ತಿಗೆದಾರರ ಸಂಘವು ಮಾಡುತ್ತಿರುವ ಆರೋಪಗಳನ್ನು ಸೋರಿಕೆ ಆಗಿರುವ ಈ ಸಂಭಾಷಣೆಯು ಬಲಪಡಿಸಿವೆ.

 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕರುಗಳ ಗುಂಪೊಂದು ಹೊರಗುತ್ತಿಗೆ ನೌಕರರನ್ನು ಬಳಸಿಕೊಂಡು ಲಕ್ಷಾಂತರ ರುಪಾಯಿ ವಸೂಲಿ ಮಾಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸೋರಿಕೆ ಆಗಿರುವ ಸಂಭಾಷಣೆಯು ಕೃಷಿ ಇಲಾಖೆಯಲ್ಲಿನ ಲಂಚ ಪ್ರಪಂಚವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ. ಸೋರಿಕೆ ಆಗಿರುವ ಆಡಿಯೋ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆಡಿಯೋದಲ್ಲೇನಿದೆ?

 

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಹೊರಗುತ್ತಿಗೆ ನೌಕರರೊಬ್ಬರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಮಾತುಕತೆಯನ್ನು ಇಲ್ಲಿ ಕೊಡಲಾಗಿದೆ.

 

ಎಲ್ಲಿದ್ದೀಯಪ್ಪಾ….ಈಗ ನೋಡಪ್ಪಾ ಜೆಡಿ ಆಫೀಸ್‌ನಲ್ಲಿ ನಿಮ್ದೆಲ್ಲಾ ಅಬ್ಜೆಕ್ಷನ್ ಹಾಕಿದಾರೆ. ನೀವು ಸುಮ್ನೆ ಕಳ್ಸಿ ಅಂದರೆ ಹೆಂಗ್ಯಾಗುತ್ತೆ ಅದು…ಫಾರ್ಮಾಲಿಟಿಸ್‌ ಮಾಡಪ್ಪಾ….ಅದನ್ನು…ನನಗೆ ಏನೂ ಗೊತ್ತಿಲ್ಲ…. ಎಲ್ಲಾ ಎಡಿಆರ್‌ಗಳನ್ನು ಕರೆದು ಮಾತಾಡು….ಅದೆಲ್ಲಾ ಮಾತಾಡು…ಉಮೇಶ್‌ ಅವರನ್ನೆಲ್ಲ ಕೇಳ್ತಿದಾರೆ….ಪಾಪ ಅವನೇನು ಮಾಡ್ತಾನೆ….

 

ಬೇರೆ ತಾಲೂಕುಗಳಲ್ಲಿ ಮಾಡಿದಾರೆ ಅಂತ. ರೀ…..ನೀನೊಳ್ಳೆ… ನೀನೊಳ್ಳೆ… ನೀನು…ಕೇಳ್ಕೊಂಡು ಮಾಡು.. ಹೋಗ್ಲಿ…..ನೀನು ಒಬ್ನೇ ಬರಬೇಡ… ಕರೆದು ಮಾತಾಡಿ ಕ್ಲೀನಾಗಿ ಫಾರ್ಮಾಲಿಟಿಸ್‌ ಫುಲ್‌ ಫಿಲ್‌ ಮಾಡು…ಆಗಿಲ್ಲ ಅಂದರೆ ವಾಪಾಸ್‌ ಬರುತ್ತೇ ನೋಡಿ… ಸರಿ ಮಾಡ್ರಯ್ಯಾ…..ಅಲ್ಲಾ ರೀ ಅವೆಲ್ಲಾ ಇರ್ತಾವೆ……

 

ಕೇಳಿದ್ರೆ ಮಾಡೋದಾ ನೀವು….ಇಲ್ಲಾಂದ್ರೆ ಮಾಡಾಲ್ವಾ….ನಮ್‌ ಆಫೀಸ್‌ ಕ್ಲರ್ಕ್‌ ಗಳಿಗೆಲ್ಲಾ ಏನು ಕೊಟ್ರಿ… ನೀವು…ರಿನೀವಲ್‌ಗೆ…ಎಫ್‌ಡಿಎ, ಸೂಪರಿಟೆಂಡೆಂಟ್‌.. ಇಲ್ಲೂ ಏನೂ ಕೊಡ್ಲಿಲ್ಲ…ಅಲ್ಲೂ ಏನೂ ಕೊಡ್ಲಿಲ್ಲ….ಹ್ಯಂಗ್ರೀ……

 

ಇದೆಲ್ಲಾ ಹ್ಯಂಗೆ ಗೊತ್ತೇನ್ರಿ….ಎಡಿಆರ್‌ ಅಗಿ ನಾನ್‌ ಹ್ಯಂಗ್‌ ಉಳ್ಕೋಂಡಿದೇನಿ ಅಂದ್ರೆ ಪುಕ್ಸಟ್ಟೆ ಉಳ್ಕೊಂಡಿಲ್ಲ…ರೀ…ಕೇಳಪ್ಪಾ ಇಲ್ಲಿ……ನಾನೂನು ಎಲ್ಲಾ ವ್ಯವಸ್ಥೆ ಮಾಡಿನೇ ಉಳ್ಕೊಂಡಿರೋದು…ಮಂತ್ರಿಗಳು ಸುಮ್ನೆ ಉಳ್ಸಲ್ಲಾ……ಅವೆಲ್ಲಾ ಮಾಡ್ಕೊಂಡು ಹೋಗ್ಬೇಕಪ್ಪಾ….ಅಲ್ಲಿಂದ ಮಾಹಿತಿ ಬಂದಿದೆ…. ಏನೂ ಮಾಡ್ಲಿಲ್ಲಾ……ತುರುವೇಕೇರೆ ಮಾಡಿದರೆ ಅಂತ…..ಎಲ್ಲಾ ತಾಲೂಕಲ್ಲಿ ಮಾಡಿದಾರೆ…..ನೀವೇ ಏನೂ ಮಾಡಿಲ್ಲಾ ಅಂತ ನೋಡಪ್ಪಾ

 

 

ಒಂದ್‌ ವಿಚಾರ ತಿಳ್ಕೊಳ್ಳಿ………ಯಾರಿಗೂ ಬರ್ಡನ್‌ ಇಲ್ಲಾ…..ಎಲ್ಲಾ ಚೆನ್ನಾಗಿ ಎಂಜಾಯ್‌ ಮಾಡಿದಾರೆ…ನಾವು ಏನೂ ಕಾಮೆಂಟ್‌ ಮಾಡ್ದೇ ಮಾಡಿದೀವಿ….ಅದೇನು ಮಾಡ್ಕೊಳ್ರಿ….ಜೆಡಿ ಆಫೀಸ್‌ನಲ್ಲಿ ಪ್ರತಿಭಾ… ಕೇಳಿದ್ರಂತೆ….ಅನಿಲ್‌ ಕೈ ಎತ್ತಿದ್ರಂತೆ…. ಕರೀರಿ ಕರ್ದು ಮಾಡ್ರಿ…..ನಿಮ್ದು ಸೇರ್ಸಿ ಕೊಡ್ರಿ….ನಾವು ಇಲ್ಲಿಂದ  ಅಲ್ಲೀವರೆಗೂ ಕೊಟ್ಕೊಂಡು ಹೋಗ್ಬೇಕು… ನಾವುಮಾಡ್ತೀವಿ ಅಪ್ಪಾ….ಪುಕ್ಸಟ್ಟೆ ಉಳ್ಕೊಳ್ಲೋಲ್ಲಾ…..

 

ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರ ಮೂಲಕ ಸಚಿವ ಬಿ ಸಿ ಪಾಟೀಲ್‌ ಅವರು 50 ಸಾವಿರದಿಂದ 1 ಲಕ್ಷ ರು.ವರೆಗೆ ಲಂಚ ಸಂಗ್ರಹ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಸಲ್ಲಿಕೆಯಾಗಿರುವ  ಹತ್ತಾರು ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಾಗೃತ ಕೋಶದ ಹೆಚ್ಚುವರಿ ನಿರ್ದೇಶಕರಿಗೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2022ರ ಮೇ 25ರಂದು ಪತ್ರ ಮುಖೇನ ನಿರ್ದೇಶನ ನೀಡಿದ್ದರು.   ಈ ಕುರಿತು ‘ದಿ ಫೈಲ್‌’ ಮತ್ತು ವಾರ್ತಾಭಾರತಿ 2022ರ ಮೇ 30ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

 

ಸಚಿವ ಬಿ ಸಿ ಪಾಟೀಲ್‌ರಿಂದ ಲಂಚ ಸಂಗ್ರಹ ಆರೋಪ; ವಸೂಲಿಗಿಳಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ

 

ತುಮಕೂರು ಜಿಲ್ಲೆಯ ಪಾವಗಡ, ಚಿಕ್ಕನಾಯಕನಹಳ್ಳಿ, ತಿಪಟೂರು ಸೇರಿದಂತೆ ವಿವಿಧೆಡೆ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಸಚಿವ ಬಿ ಸಿ ಪಾಟೀಲ್‌ ಅವರಿಗೆ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಮಂಡ್ಯ ತಾಲೂಕಿನ ಎಂ ಡಿ ಕೇಶವಮೂರ್ತಿ ಎಂಬುವರು ದೂರು ಸಲ್ಲಿಸಿದ್ದರು.

 

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌, ಡಬ್ಯ್ಲೂಡಿಸಿ, ಐಡಬ್ಲ್ಯೂಎಂಪಿ, ಕೆಡಬ್ಲ್ಯೂಡಿಪಿ, ಎನ್‌ಎಂಎಸ್‌ಎ, ಆರ್‌ಎಡಿ ಮತ್ತು ನಾಲಾ ಬದು ಕಾಮಗಾರಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೆಯೇ ಅವ್ಯವಹಾರ, ಅಕ್ರಮ ಎಸಗಿ ಕಳಪೆ ಕಾಮಗಾರಿ ನಡೆಸಲಾಗಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನೂ ಲಪಟಾಯಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

 

‘ಸಚಿವ ಬಿ ಸಿ ಪಾಟೀಲ್‌ ಅವರಿಗೆ 50 ಸಾವಿರ ರು.ಗಳಿಂದ 1 ಲಕ್ಷ ರು.ವರೆಗೆ ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿಬಿಐ, ಸಿಒಡಿ, ಇಡಿ, ಎಸಿಬಿ, ಲೋಕಾಯುಕ್ತ ತನಿಖೆ ನಡಸಬೇಕು. ಅಲ್ಲದೆ ಮಹಾಲೇಖಪಾಲರಿಂದ ಲೆಕ್ಕ ಪರಿಶೋಧನೆ ನಡೆಸಿ ಮೊಕದ್ದಮೆ ದಾಖಲಿಸಬೇಕು,’ ಎಂದು ಕೇಶವಮೂರ್ತಿ ಅವರು ದೂರಿನಲ್ಲಿ ವಿವರಿಸಿದ್ದರು.

 

ತುಮಕೂರು ಜಿಲ್ಲೆಯ ಉಪ ನಿರ್ದೇಶಕ ಅಶೋಕ ಟಿ ಎನ್‌, ಡಿ ಉಮೇಶ್‌, ತಿಪಟೂರು ತಾಲೂಕಿನ ಸಹಾಯಕ ನಿರ್ದೇಶಕ ಬಿ ಜಿ ಜಯಪ್ಪ, ಜಗನ್ನಾಥಗೌಡ, ಎನ್‌ ಕೆಂಗೇಗೌಡ, ಪಾವಗಡ ತಾಲೂಕಿನ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ (ಪ್ರಭಾರ), ಎನ್‌ ವಿಜಯಮೂರ್ತಿ, ಕೊರಟಗೆರೆ ತಾಲೂಕಿನ ಅಧಿಕಾರಿ ರಾಮಹನುಯ್ಯ, ಎಚ್‌ ನಾಗರಾಜು, ಚಿಕ್ಕನಾಯಕಹಳ್ಳಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌ ಹೊನ್ನದಾಸೇಗೌಡ, ಡಿ ಅರ್‌ ಹನುಮಂತರಾಜು, ಶಿರಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌ ರಂಗರಾಜು, ರಂಗನಾಥ್‌, ಮಧುಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಪರಶುರಾಮ್‌, ಹನುಮಂತಪ್ಪ, ತುರುವೆಕೆರೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ, ಪ್ರಮೋದ್‌ ಕುಮಾರ್‌, ಬಿ ಪೂಜಾ, ಮಂಡ್ಯ ವಿಭಾಗದ ಡಿಡಿ ಪ್ರತಿಭ ಎಚ್‌ ಜಿ ಅವರ ಹೆಸರನ್ನು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts