ಕಿಕ್‌ಬ್ಯಾಕ್‌ ಆರೋಪಿ ಅಧಿಕಾರಿ ಪರ ಅಖಾಡಕ್ಕಿಳಿದ ಮಾಜಿ ಪ್ರಧಾನಿ; ಅಧಿಕಾರಾವಧಿ 2 ವರ್ಷ ವಿಸ್ತರಣೆಗೆ ಪತ್ರ

photo credit;scroll

ಬೆಂಗಳೂರು; ಹೇಮಾವತಿ ಮತ್ತು ಗೊರೂರು ವಲಯದಲ್ಲಿ ಅನುಷ್ಠಾನಗೊಂಡಿರುವ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ಗಳಲ್ಲಿ ದೊಡ್ಡ ಮೊತ್ತದ ಕಿಕ್‌ ಬ್ಯಾಕ್ ಪಡೆದು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ಇಂಜಿನಿಯರ್‌ ಕೆ ಜೈಪ್ರಕಾಶ್‌ ಅವರ ಪರ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಅಖಾಡಕ್ಕೆ ಇಳಿದಿದ್ದಾರೆ.

 

ಭಾರೀ ನೀರಾವರಿ ಯೋಜನೆಗಳ ಟೆಂಡರ್‌ ಮತ್ತು ಎಲ್‌ಒಸಿ ಬಿಡುಗಡೆಯಲ್ಲಿ ದೊಡ್ಡಮೊತ್ತದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಎಸಿಬಿ ಎಡಿಜಿಪಿ ಅವರು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ಕೆ ಜೈಪ್ರಕಾಶ್‌ ಅವರನ್ನು ನಿವೃತ್ತಿ ನಂತರವೂ 2 ವರ್ಷದ ಅವಧಿಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಮೇ 16ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇದೆ ಪತ್ರದ ಮೇಲೆ ಕಡತ ಮಂಡಿಸಿ ಎಂದು ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಕ್ಕಣೆ ಹಾಕಿರುವುದು ಪತ್ರದಿಂದ ಗೊತ್ತಾಗಿದೆ.

 

ಪತ್ರದಲ್ಲೇನಿದೆ?

 

ಕೆ ಜೈಪ್ರಕಾಶ್‌ ಅವರು 2022ರ ಮೇ 31ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. 2013 ಸೆಪ್ಟಂಬರ್‌ನಿಂದ 2015 ಸೆಪ್ಟಂಬರ್‌ವರೆಗೆ ಎರಡು ವರ್ಷಗಳ ಅವಧಿಗೆ ಪ್ರಥಮ ಬಾರಿಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇದೀಗ ಎರಡನೇ ಬಾರಿಗೆ ಇದೇ ಹುದ್ದೆಯಲ್ಲಿ ಆಗಸ್ಟ್‌ 2019ರಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 18 ವರ್ಷಗಳಿಗೂ ಮಿಗಿಲಾದ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿಯೇ ನಿರ್ವಹಿಸಿರುವುದನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಮಹತ್ತರ ಯೋಜನೆಗಳಾದ ಮೇಕೆದಾಟು, ಕಾವೇರಿ ನದಿಕೊಳ್ಳದ ಹೆಚ್ಚುವರಿ ನೀರಿನ ಬಳಕಗೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ವಿಷಯಗಳನ್ನು ನಿರ್ವಹಿಸುವಲ್ಲಿ ಇರುವ ಅವರ ಪರಿಣಿತಿ, ಸಾಮರ್ಥ್ಯ ಮತ್ತು ಸೇವೆಗಳನ್ನು ಪರಿಗಣಿಸಿ ಇವರ ಸೇವೆಯನ್ನು ನಿವೃತ್ತಿ ನಂತರವೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು ಪ್ಯಾರಾ 95 (2)ರ ಅನ್ವಯ 2 ವರ್ಷದ ಅವಧಿಗೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಮುಂದುವರೆಸಲು ಪರಿಗಣಿಸುವುದು ಸೂಕ್ತ ಎಂದು ದೇವೇಗೌಡರು ಪತ್ರದಲ್ಲಿ ವಿವರಿಸಿದ್ದಾರೆ.

 

ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ಬರೆದಿರುವ ಪತ್ರದ ಪ್ರತಿ

 

ಕೆ ಜೈಪ್ರಕಾಶ್‌ ವಿರುದ್ಧ ದೂರಿನ ಅಂಶಗಳೇನು?

 

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜಯಪ್ರಕಾಶ್‌ ಮತ್ತು ಪ್ರಧಾನ ವ್ಯವಸ್ಥಾಪಕ ಗಂಗಾಧರ್‌ ಅವರ ವಿರುದ್ಧ ಜವರೇಗೌಡ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದರು. ಭಾರೀ ನೀರಾವರಿ ಯೋಜನೆಗಳ ಟೆಂಡರ್‌ ಮತ್ತು ಎಲ್‌ಒಸಿ ಬಿಡುಗಡೆಯಲ್ಲಿ ದೊಡ್ಡಮೊತ್ತದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

 

ಕೆ ಜೈಪ್ರಕಾಶ್‌ ಅವರು ತಮ್ಮ ಮಗನನ್ನು ಬಿಎಸ್‌ಆರ್‌ ಮತ್ತು ಸ್ಟಾರ್‌ ಬಿಲ್ಡರ್‌ ಕಂಪನಿಯಲ್ಲಿ ಪಾಲುದಾರರನ್ನಾಗಿ ಮಾಡಿ, ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್‌ ಮಾಡಿರುತ್ತಾರೆ ಎಂದು ಜವರೇಗೌಡ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.
ಜೈಪ್ರಕಾಶ್‌ ಮತ್ತು ಪ್ರಧಾನ ವವ್ಯವಸ್ಥಾಪಕ ಬಿ ಕೆ ಗಂಗಾಧರ್‌ ಸೇರಿ ಈ ಎರಡೂ ಕಂಪನಿಗಳಿಗೆ ಆದ್ಯತೆ ಮೇಲೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿರುತ್ತಾರೆ. ಮತ್ತು ಟೆಂಡರ್‌ ಪರಿಮಾಣಗಳನ್ನು ಮೀರಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಪರಿಗಣಿಸಿ ಈ ಎರಡೂ ಕಂಪನಿಗಳಿಗೆ ನೀಡಿ ಕಿಕ್‌ಬ್ಯಾಕ್‌ ಪಡೆದಿರುತ್ತಾರೆ. ಇವರ ಅಧಿಕಾರವಾಧಿಯಲ್ಲಿ ಟೆಂಡರ್‌ಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆಳೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿಗೆ ದೂರಿದ್ದರು.

 

ಎಸಿಬಿ ಮಾಡಿದ್ದೇನು?

 

ಈ ದೂರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳದ ಮೂಲಕ ತನಿಖೆ ನಡೆಸಬೇಕು ಎಂದು ಎಸಿಬಿಯ ಎಡಿಜಿಪಿಗೆ ಎಸ್ಪಿ ಯತೀಶ್‌ಚಂದ್ರ ಅವರು 2021ರ ಆಗಸ್ಟ್‌ 16ರಂದು ಪತ್ರ ಬರೆದಿದ್ದರು.

 

ಈ ಅರ್ಜಿಯನ್ನು ಪರಿಶೀಲಿಸಿದ್ದ ಎಸಿಬಿಯು ‘ ಅರ್ಜಿಯಲ್ಲಿನ ವಿಷಯವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡದೇ ಇರುವುದರಿಂದ ಇಲಾಖೆಯ ಆಡಳಿತಾತ್ಮಕ ವಿಷಯವಾಗಿರುವುದರಿಂದ ದೂರು ಅರ್ಜಿಯಲ್ಲಿ ಜಾಗೃತ ಅಧಿಕಾರಿಗಳ ಪರಿಶೀಲನೆ ಸಲುವಾಗಿಜಲಸಂಪನ್ಮೂಲ ಇಲಾಖೆಗೆ ಕಳಿಸಿಕೊಡಬೇಕು ಎಂದು ಎಸಿಬಿ ಎಡಿಜಿಪಿ ಕಚೇರಿಗೆ ವರದಿ ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

‘ಪೊಲೀಸ್‌ ಇನ್ಸ್‌ಪೆಕ್ಟರ್‌ ಸಲ್ಲಿಸಿರುವ ವರದಿಯಂತೆ ಎಸ್‌ ಎಂ ಜವರೇಗೌಡ ಅವರು ನೀಡಿರುವ ದೂರು ಅರ್ಜಿಯಲ್ಲಿನ ಆರೋಪಗಳ ಬಗ್ಗೆ ಜಲಸಂಪನ್ನೂಲ ಇಲಾಖೆಯ ಜಾಗೃತ ಅಧಿಕಾರಿಗಳಿಂದ ಪರಿಶೀಲನೆ ಕೈಗೊಳ್ಳಬೇಕು. ಇದನ್ನು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು,’ ಎಂದು ಎಸಿಬಿಯ ಎಸ್ಪಿ ಯತೀಶ್‌ ಚಂದ್ರ ಅವರು 2021ರ ಆಗಸ್ಟ್‌ 16ರಂದು ಎಸಿಬಿಯ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.

 

ಇದನ್ನಾಧರಿಸಿ ಎಡಿಜಿಪಿಯು ಸಹ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರ ಬರೆದು 9 ತಿಂಗಳು ಕಳೆದರೂ ಇಲಾಖೆಯು ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ಕೆ ಜೈಪ್ರಕಾಶ್‌ಕೆಲವೇ ತಿಂಗಳುಗಳಲ್ಲಿ ನಿವೃತ್ತಿಯಾಗುತ್ತಿದ್ದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts