ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 81.23 ಎಕರೆ ಗೋಮಾಳ ಮಂಜೂರು: ಕಾಯ್ದೆ ಉಲ್ಲಂಘನೆ?

photo credit-tv9

ಬೆಂಗಳೂರು; ಗೋಮಾಳ, ಹುಲ್ಲುಗಾವಲು ಪ್ರದೇಶಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಭೂ ಮಂಜೂರಾತಿ ಕಾಯ್ದೆಯಲ್ಲಿ ಅವಕಾಶಗಳಿಲ್ಲದಿದ್ದರೂ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 81.23 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ವಿಸ್ತೀರ್ಣದ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 81.23 ಎಕರೆ ಗೋಮಾಳವನ್ನು ಮಂಜೂರು ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಗೋಮಾಳ ಮಂಜೂರು ಮಾಡುವುದಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ. ಮೂರ್ನಾಲ್ಕು ದಿನದೊಳಗೆ ಮಂಜೂರಾತಿ ಆದೇಶವನ್ನೂ ಸರ್ಕಾರವು ಹೊರಡಿಸಲಿದೆ ಎಂದು ತಿಳಿದು ಬಂದಿದೆ.

 

ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ 5 ಕೋಟಿ ರು. ಅನುದಾನ ಮಂಜೂರು ಮಾಡಿದ್ದರ ಬೆನ್ನಲ್ಲೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಚಲಮಟ್ಟಿ ಗ್ರಾಮದಲ್ಲಿನ ವಿವಿಧ ಸರ್ವೆ ನಂಬರ್‌ಗಳಲ್ಲಿರುವ ಗೋಮಾಳ, ಹುಲ್ಲುಗಾವಲು, ಗಾಯರಾಣ ಸ್ವರೂಪ ಇರುವ ಒಟ್ಟು ಜಮೀನಿನ ಪೈಕಿ 81.23 ಎಕರೆಯನ್ನು ಕಾಯ್ದೆಯನ್ನು ಬದಿಗಿರಿಸಿ ಮಂಜೂರು ಮಾಡಿದೆ. ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾದಾರ ಚೆನ್ನಯ್ಯ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇವರದೇ ಹೆಸರಿನಲ್ಲಿರುವ ಗುರುಪೀಠಕ್ಕೆ ರಾಜ್ಯ ಬಿಜೆಪಿ ಸರ್ಕಾರವು 5 ಕೋಟಿ ರು.ಅನುದಾನ ಮಂಜೂರು ಮಾಡಿ ಇದೀಗ ಭೂಮಿಯನ್ನೂ ಮಂಜೂರು ಮಾಡಲು ಹೊರಟಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಂತಾಗಿದೆ.

 

81.23 ಎಕರೆ ವಿಸ್ತೀರ್ಣ ಹೊಂದಿರುವ ಹುಲ್ಲುಗಾವಲು ಪ್ರದೇಶವನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸ್ಪಷ್ಟ ನಿಲುವು ತಾಳಿಲ್ಲ. ಹುಲ್ಲುಗಾವಲು ಪ್ರದೇಶವನ್ನು ಮಂಜೂರು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಪ್ರಸ್ತಾವನೆಯನ್ನು ತಿರಸ್ಕರಿಸಬಹದು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆಯಾದರೂ ಶೈಕ್ಷಣಿಕ ಮತ್ತು ಸಾಂಸ್ಕೃತಿ ಚಟುವಟಿಕೆಗಳಿಗಾಗಿ ಗೋಮಾಳ ಸ್ವರೂಪದಿಂದ ತಗ್ಗಿಸಬಹುದು. ಕರ್ನಾಟಕ ಭೂ ಕಂದಾಯ ಕಾಯ್ದೆ 1966ರ 97(4) ಅನ್ವಯ ಮತ್ತು ಕರ್ನಾಟಕ ಭೂ ಮಂಜೂರಾತಿ 1969ರ ನಿಯಮ 27 ಮತ್ತು ಕರ್ನಾಟಕ ಭೂ ಮಂಜೂರಾತಿ 1969ರ ಕಾಯ್ದೆ 22 ಎ (1)(i) (2) ಅನ್ವಯ ಮಾರುಕಟ್ಟೆ ಬೆಲೆ ನಿಗದಿಪಡಿಸಿ ಮಂಜೂರು ಮಾಡಬಹುದು ಎಂದು ಪ್ರಸ್ತಾಪಿಸಿರುವುದು ಪ್ರಸ್ತಾವನೆಯ ಪ್ರತಿಯಿಂದ ತಿಳಿದು ಬಂದಿದೆ.

 

ಈ ಎರಡೂ ಅಂಶವನ್ನು ಆರ್ಥಿಕ ಇಲಾಖೆಯು ಉಲ್ಲೇಖಿಸಿದೆಯಲ್ಲದೆ ಧಾರವಾಡ ಜಿಲ್ಲಾಧಿಕಾರಿ ನೀಡಿರುವ ವರದಿಯನ್ನು ಎತ್ತಿ ಹಿಡಿದಿದೆ. ‘ಜಿಲ್ಲಾಧಿಕಾರಿಗಳು ಈ ಪ್ರಸ್ತಾವನೆಯನ್ನು ನಿಯಮಾನುಸಾರ ಅಂಗೀಕರಿಸಲಾಗುವುದಿಲ್ಲ ಎಂದು ತಿಳಿಸಿರುವುದರಿಂದ ಕಂದಾಯ ಇಲಾಖೆಯ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ. ಗೋಮಾಳ ಭೂಮಿ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಕಾನೂನು ಇಲಾಖೆಯೂ 2022ರ ಜನವರಿ 14ರಂದು ಅಭಿಪ್ರಾಯ ನೀಡಿದೆ,’ ಎಂದು ಉಚ್ಛರಿಸಿರುವ ಆರ್ಥಿಕ ಇಲಾಖೆಯು 2022ರ ಫೆ.13ರಂದು ಹಿಂಬರಹ ನೀಡಿದೆ.

 

ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಪ್ರತಿ

 

ಆರ್ಥಿಕ ಮತ್ತು ಕಾನೂನು ಇಲಾಖೆಯು ನೀಡಿರುವ ಎರಡೂ ಅಭಿಪ್ರಾಯಗಳನ್ನು ಕಂದಾಯ ಇಲಾಖೆಯು ಒಪ್ಪಿದೆ. ಆದರೂ 81.23 ಎಕರೆ ಮಂಜೂರು ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟದ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಚಲಮಟ್ಟಿ ಗ್ರಾಮದಲ್ಲಿ 273 ಮತ್ತು ಅದೇ ರೀತಿ ಇದಕ್ಕೆ ಹೊಂದಿಕೊಂಡಿರುವ ಕಾಡನಕೊಪ್ಪ ಗ್ರಾಮದಲ್ಲಿ 478 ಜಾನುವಾರುಗಳಿವೆ. ಇನ್ನುಳಿದ 144 ಎಕರೆ ಹುಲ್ಲುಗಾವಲು ಇದೆ. ಇದಲ್ಲದೆ 72.25 ಎಕರೆ ಸರ್ಕಾರಿ ಜಾಗವೂ ಇದೆ. ಅದೇ ರೀತಿ ಬಗರ್‌ ಹುಕುಂ ಸಾಗುವಳಿ ಸಕ್ರಮಗೊಳಿಸುವ ಸಂಬಂಧ ನಮೂನೆ 57ರ ಅನ್ವಯ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಹೀಗಾಗಿ ಖಾಸಗಿ ಉದ್ದೇಶಕ್ಕೆ ಜಾಗವನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ಪ್ರಾಥಮಿಕ ವರದಿ ನೀಡಿದ್ದರು ಎಂಬುದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

ಧಾರವಾಡ ಜಿಲ್ಲಾಧಿಕಾರಿ ಅವರು 2022ರ ಮಾರ್ಚ್‌ 22ರಂದು ಮತ್ತೊಂದು ವರದಿ ನೀಡಿದ್ದರು. ಚಲಮಟ್ಟಿ ಗ್ರಾಮದ ಸರ್ವೆ ನಂಬರ್‌ 65/ಎ ನಲ್ಲಿದ್ದ ಒಟ್ಟು 66.20 ಎಕರೆ ಪೈಕಿ 55.03 ಎಕರೆಯಲ್ಲಿ ಭೂ ಮಂಜೂರಾತಿಗಾಗಿ 19 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದೇ ರೀತಿ ಕಾಡನಕೊಪ್ಪ ಗ್ರಾಮದ ಸರ್ವೆ ನಂಬರ್‌ 71ರಲ್ಲಿ 24.23 ಎಕರೆ ಪೈಕಿ 23.25 ಎಕರೆಯಲ್ಲಿ ಭೂ ಮಂಜೂರಾತಿಗಾಗಿ ನಮೂನೆ 57ರ ಅನ್ವಯ ಸಲ್ಲಿಕೆಯಾಗಿದ್ದ 10 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಿದ್ದರು.

the fil favicon

SUPPORT THE FILE

Latest News

Related Posts