Saturday | August 1, 2026 |

ವಿವಿಧ ತೆರಿಗೆ ಹಣ ಮಂಜೂರು; ಉತ್ತರ ಪ್ರದೇಶಕ್ಕೆ 7,524 ಕೋಟಿ, ಕರ್ನಾಟಕಕ್ಕೆ 1,530 ಕೋಟಿ

ಬೆಂಗಳೂರು; ಸೇವಾ ತೆರಿಗೆ, ಕೇಂದ್ರ ಅಬಕಾರಿ ಶುಲ್ಕ, ಸುಂಕ, ಕೇಂದ್ರ ಸರಕು ಸೇವಾ ತೆರಿಗೆ, ಆದಾಯ ತೆರಿಗೆ, ಕಾರ್ಪೋರೇಷನ್‌ ತೆರಿಗೆ ವಿಭಾಗದಲ್ಲಿ ಏಪ್ರಿಲ್‌ನಿಂದ ಜೂನ್‌ ಅವಧಿವರೆಗೆ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ 1,76,007 ಲಕ್ಷ ಕೋಟಿ ರು.ಗಳನ್ನು ಕರ್ನಾಟಕ ಸೇರಿದಂತೆ ದೇಶದ 28 ರಾಜ್ಯಗಳಿಗೆ ಪಾವತಿಸಲು ಹಂಚಿಕೆ ಮಾಡಿದೆ.

ರಾಷ್ಟ್ರಪತಿ ಅನುಮೋದನೆ ಮೇರೆಗೆ 41,966 ಕೋಟಿ ರು.ಗಳನ್ನು ಮಂಜೂರು ಮಾಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯವು ಎಂದಿನಂತೆ ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಹೆಚ್ಚಿನ ಪಾಲು ನೀಡಿದೆ.

ಜಿಎಸ್‌ಟಿ ಪರಿಹಾರ ಕೇಳುತ್ತಿರುವ ರಾಜ್ಯಗಳು ಒಟ್ಟು 2.35 ಲಕ್ಷ ಕೋಟಿಯನ್ನು ಸಾಲದ ರೂಪದಲ್ಲಿ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲೇ ಮಂಜೂರಾಗಿರುವ ವಿವಿಧ ತೆರಿಗೆ ಹಣದ ಅಂಕಿ ಅಂಶಗಳು ಬಹಿರಂಗಗೊಂಡಿವೆ.

15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಮಂಜೂರಾಗಿರುವ 6,417.28 ಕೋಟಿ ರು. ನಲ್ಲಿ 1,530.07 ಕೋಟಿ ರು.ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯವು ಆರ್ಥಿಕ ಸಚಿವಾಲಯದ ಮುಖ್ಯ ಲೆಕ್ಕ ನಿಯಂತ್ರಕರಿಗೆ 2020ರ ಜುಲೈ 20ರಂದು ಸೂಚಿಸಿದೆ. ಈ ಸೂಚನಾ ಪತ್ರ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮಂಜೂರಾಗಿರುವ ಒಟ್ಟು ಮೊತ್ತದಲ್ಲಿ ಉತ್ತರ ಪ್ರದೇಶಕ್ಕೆ 7,524.92 ಕೋಟಿ ನೀಡುವ ಮೂಲಕ ಸಿಂಹಪಾಲು ದೊರೆತಂತಾಗಿದೆ. ಉಳಿದಂತೆ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಕರ್ನಾಟಕಕ್ಕೆ ನೀಡಿರುವುದಕ್ಕಿಂತಲೂ ಹೆಚ್ಚಿನ ಮೊತ್ತ ಮಂಜೂರಾಗಿದೆ.

ಜಿಎಸ್‌ಟಿ ಪರಿಹಾರ ಮೊತ್ತವನ್ನು ಹಂಚಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಎಸ್‌ಟಿ ಹೊರತುಪಡಿಸಿ ಸಂಗ್ರಹವಾಗಿರುವ ಇತರೆ ತೆರಿಗೆಯಲ್ಲಿ ಹಂಚಿಕೆಯಾಗಿರುವ ಹಣಕಾಸಿನ ವಿವರಗಳು ಮುನ್ನೆಲೆಗೆ ಬಂದಿವೆ.

ಒಟ್ಟು ಮಂಜೂರಾಗಿರುವ ಮೊತ್ತದಲ್ಲಿ ಸೇವಾ ತೆರಿಗೆ 30.00 ಕೋಟಿ ರು., ಕೇಂದ್ರ ಅಬಕಾರಿ ಶುಲ್ಕ 1,516 ಕೋಟಿ, ಸುಂಕ 2,668 ಕೋಟಿ, ಕೇಂದ್ರ ಸರಕು, ಸೇವಾ ತೆರಿಗೆ(ಸಿಜಿಎಸ್‌ಟಿ) 12,520 ಕೋಟಿ, ಆದಾಯ ತೆರಿಗೆ 12,779 ಕೋಟಿ, ಕಾರ್ಪೋರೇಷನ್‌ ತೆರಿಗೆ 12,453 ಕೋಟಿ ರು. ಹಂಚಿಕೆಯಾಗಿರುವ ಮೊತ್ತದಲ್ಲಿ ಸೇರಿದೆ.

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಸೇರಿದಂತೆ ಇನ್ನಿತರೆ ಬಾಬ್ತಿನಲ್ಲಿ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಹೊಂದಾಣಿಕೆ ಮಾಡಿ ಉಳಿದ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ ಎಂದು ಕೇಂದ್ರ ಅರ್ಥಿಕ ವ್ಯವಹಾರಗಳ ಸಚಿವಾಲಯವು ಆರ್‌ಬಿಐಗೆ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಸೇವಾ ತೆರಿಗೆಯಲ್ಲಿ ರಾಜ್ಯಕ್ಕೆ 1.09 ಕೋಟಿ

ದೇಶದ 28 ರಾಜ್ಯಗಳಿಗೆ ಮಂಜೂರಾಗಿರುವ 30 ಕೋಟಿ ಸೇವಾ ತೆರಿಗೆ ಪೈಕಿ ರಾಜ್ಯಕ್ಕೆ ಮಂಜೂರಾಗಿರುವ 4.36 ಕೋಟಿ ರು.ನಲ್ಲಿ 1.09 ಕೋಟಿ ಬಿಡುಗಡೆ ಮಾಡಲು ಸೂಚಿಸಿದೆ. ಉತ್ತರ ಪ್ರದೇಶಕ್ಕೆ 21.46 ಕೋಟಿ ರು.ನಲ್ಲಿ 5.37 ಕೋಟಿ ರು. ಬಿಡುಗಡೆಯಾಗಿದೆ. ಮಹಾರಾಷ್ಟ್ರಕ್ಕೆ 1.84 ಕೋಟಿ, ತಮಿಳುನಾಡಿಗೆ 1.26 ಕೋಟಿ, ಪಶ್ಚಿಮ ಬಂಗಾಳಕ್ಕೆ 2.26 ಕೋಟಿ, ಮಧ್ಯ ಪ್ರದೇಶಕ್ಕೆ 2.37 ಕೋಟಿ, ಬಿಹಾರಕ್ಕೆ 3 ಕೋಟಿ ಬಿಡುಗಡೆ ಮಾಡಿದೆ.

ಕೇಂದ್ರ ಅಬಕಾರಿ ಶುಲ್ಕದಲ್ಲಿ 55.27 ಕೋಟಿ ಮಂಜೂರು

ಸಂಗ್ರಹವಾಗಿರುವ ಕೇಂದ್ರ ಅಬಕಾರಿ ಶುಲ್ಕದ ಪೈಕಿ 1,516 ಕೋಟಿಯಲ್ಲಿ ರಾಜ್ಯಕ್ಕೆ 55.27 ಕೋಟಿ ಮಂಜೂರಾಗಿದೆ. ದೇಶದ 28 ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಅತಿಹೆಚ್ಚು ಎಂದರೆ 271.83 ಕೋಟಿ ಮಂಜೂರಾಗಿದ್ದರೆ, ಬಿಹಾರಕ್ಕೆ 152.52 ಕೋಟಿ, ಮಧ್ಯಪ್ರದೇಶಕ್ಕೆ 119.55 ಕೋಟಿ, ಪಶ್ಚಿಮ ಬಂಗಾಳಕ್ಕೆ 113.99 ಕೋಟಿ ದೊರೆತಿದೆ.

ಆದಾಯ ತೆರಿಗೆಯಲ್ಲಿ ದೊರೆತಿದ್ದು 465.92 ಕೋಟಿ

12,779 ಕೋಟಿ ಆದಾಯ ತೆರಿಗೆ ಪೈಕಿ ರಾಜ್ಯಕ್ಕೆ 465.92 ಕೋಟಿ ದೊರೆತಿದೆ. ಉತ್ತರ ಪ್ರದೇಶಕ್ಕೆ 2,291 ಕೋಟಿ, ಬಿಹಾರಕ್ಕೆ 1,285.70 ಕೋಟಿ, ಮಧ್ಯಪ್ರದೇಶಕ್ಕೆ 1,007.75 ಕೋಟಿ, ಪಶ್ಚಿಮ ಬಂಗಾಳಕ್ಕೆ 960.85 ಕೋಟಿ ನೀಡಲಾಗಿದೆ.

ಕಾರ್ಪೋರೇಷನ್‌ ತೆರಿಗೆಯಲ್ಲಿ 454.04 ಕೋಟಿ

ಕಾರ್ಪೋರೇಷನ್‌ ತೆರಿಗೆ ವಿಭಾಗದಲ್ಲಿ ಬಿಡುಗಡೆಯಾಗಿರುವ ಒಟ್ಟು 12,,453 ಕೋಟಿ ಪೈಕಿ ರಾಜ್ಯಕ್ಕೆ 454.04 ಕೋಟಿ ಸಿಕ್ಕಿದೆ. ಉತ್ತರ ಪ್ರದೇಶಕ್ಕೆ 2,232.96 ಕೋಟಿ, ಬಿಹಾರಕ್ಕೆ 1,252.90 ಕೋಟಿ, ಮಧ್ಯಪ್ರದೇಶಕ್ಕೆ 982.04 ಕೋಟಿ, ಪಶ್ಚಿಮ ಬಂಗಾಳಕ್ಕೆ 936.34 ಕೋಟಿ ದೊರೆತಿದೆ.

ಸುಂಕ ವಿಭಾಗದಲ್ಲಿ 97.27 ಕೋಟಿ

ಈ ವಿಭಾಗದಲ್ಲಿ ಬಿಡುಗಡೆಯಾಗಿರುವ ಒಟ್ಟು 2,668 ಕೋಟಿ ಪೈಕಿ ರಾಜ್ಯಕ್ಕೆ 97.27 ಕೋಟಿ ಮಾತ್ರ ದೊರೆತಿದೆ. ಉತ್ತರ ಪ್ರದೇಶಕ್ಕೆ 478.40 ಕೋಟಿ, ಬಿಹಾರಕ್ಕೆ 268.43 ಕೋಟಿ, ಮಧ್ಯಪ್ರದೇಶಕ್ಕೆ 210.40 ಕೋಟಿ, ಪಶ್ಚಿಮ ಬಂಗಾಳಕ್ಕೆ 200.61 ಕೋಟಿ ಬಿಡುಗಡೆ ಮಾಡಲು 15ನೇ ಹಣಕಾಸಿನ ಆಯೋಗ ಶಿಫಾರಸ್ಸು ಮಾಡಿದೆ.

ಕೇಂದ್ರ ಸರಕು ಸೇವಾ ತೆರಿಗೆಯಲ್ಲಿ 456.48 ಕೋಟಿ

ಕೇಂದ್ರ ಸರಕು ಸೇವಾ ತೆರಿಗೆಯಲ್ಲಿ ರಾಜ್ಯಕ್ಕೆ 456.48 ಕೋಟಿ ರು. ದೊರೆತಿದೆ. ಉತ್ತರ ಪ್ರದೇಶಕ್ಕೆ 2,244.96 ಕೋಟಿ, ಬಿಹಾರಕ್ಕೆ 1,259.64 ಕೋಟಿ, ಮಧ್ಯಪ್ರದೇಶಕ್ಕೆ 987.33 ಕೋಟಿ, ಪಶ್ಚಿಮ ಬಂಗಾಳಕ್ಕೆ 941.38 ಕೋಟಿ ದೊರೆತಿದೆ.

ಏಪ್ರಿಲ್‌ನಿಂದ ಜೂನ್‌ವರೆಗೆ ರಾಜ್ಯಕ್ಕೆ ಒಟ್ಟು 13,764 ಕೋಟಿ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಬರಬೇಕಿದೆ. ಈವರೆವಿಗೆ 2 ಲಕ್ಷ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ 52,251 ಕೋಟಿ ಮರು ಪಾವತಿ ಆಗಿದೆ. ಆದರೆ ಕೇಂದ್ರ ಸರ್ಕಾರ ಈ ಮೊತ್ತವನ್ನು ಮಂಜೂರು ಮಾಡಲು ತಾರತಮ್ಯ ಎಸಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕೋವಿಡ್‌ ಸಂಕಷ್ಟದ ಕಳೆದ 4 ತಿಂಗಳಲ್ಲಿ ಶೇ.71.61ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರಕ್ಕೆ ಮನವರಿಕೆ ಮಾಡಿದ್ದನ್ನು ಸ್ಮರಿಸಬಹುದು.

Hot this week

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

Related Articles

Popular Categories

error: Content is protected !!