ಪೊಲೀಸ್‌ ಕಮಿಷನರ್‌ ಭಾಸ್ಕರರಾವ್ ಬದಲಾವಣೆ?; ನಡೆದಿದೆ ಬಿರುಸಿನ ಲಾಬಿ

ಬೆಂಗಳೂರು; ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕಮಿಷನರ್‌ ಭಾಸ್ಕರ್‌ರಾವ್‌ ಅವರನ್ನು ಎತ್ತಂಗಡಿ ಮಾಡುವ ಪ್ರಯತ್ನಗಳು ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ.


ಡಿಜಿ ಮತ್ತು ಐಜಿಪಿ ಹುದ್ದೆ ಬಳಿಕ ಅತ್ಯಂತ ಮಹತ್ವದ್ದಾಗಿರುವ ಪೊಲೀಸ್‌ ಕಮಿಷನರ್‌ ಹುದ್ದೆ ಗಿಟ್ಟಿಸಲು ಹಿರಿಯ ಅಧಿಕಾರಿಗಳಾದ ಕಮಲ್‌ ಪಂಥ್‌ ಮತ್ತು ಅಮೃತ್‌ಪಾಲ್‌ ಅವರು ಲಾಬಿ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ವಲಯದಲ್ಲಿ ಹೇಳಲಾಗುತ್ತಿದೆ.
ಕಮಲ್‌ ಪಂಥ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬಕ್ಕೆ ನಿಕಟವರ್ತಿಗಳು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕಮಲ್‌ ಪಂಥ್‌ ಅವರು ಬೆಂಗಳೂರು ಪೊಲೀಸ್‌ ಕಮಿಷನರ್ ಹುದ್ದೆಗೇರುವ ಸಾಧ್ಯತೆಗಳು ಹೆಚ್ಚಿವೆ.


ಲಾಕ್‌ಡೌನ್‌ ನಡುವೆಯೂ ಅಕ್ರಮ ಮದ್ಯ ಸಾಗಣೆ, ಸಿಗರೇಟ್‌ ಮಾರಾಟ ಪ್ರಕರಣ, ನಕಲಿ ಮಾಸ್ಕ್‌ ತಯಾರಕರ ಮೇಲೆ ದಾಳಿ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳೇ ಲಂಚ ಪಡೆದಿದ್ದ ಆರೋಪಕ್ಕೆ ಗುರಿಯಾಗಿದ್ದರಲ್ಲದೆ, ವಿಚಾರಣೆಯಿಂದಲೂ ಆರೋಪಗಳು ದೃಢಪಟ್ಟಿದ್ದವು. ಈ ಪ್ರಕರಣಗಳು ಬಹಿರಂಗಗೊಂಡ ನಂತರ ಆಯುಕ್ತ ಭಾಸ್ಕರರಾವ್‌ ಅವರು ತೀವ್ರ ಮುಜುಗರ ಅನುಭವಿಸಿದ್ದರು. ಎಸಿಪಿ, ಇನ್ಸ್‌ಪೆಕ್ಟರ್‌ಗಳೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿ ಆಗಿದ್ದಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿತ್ತು.


ಲಾಕ್‌ಡೌನ್‌ ದಿನಗಳಲ್ಲಿ ನಾಗರಿಕರಿಗೆ ಪಾಸ್‌ ವಿತರಣೆ ಮಾಡುವುದರಲ್ಲಿಯೂ ಲಂಚ ಪಡೆಯಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಮುಖ್ಯಮಂತ್ರಿಗಳ ಎದುರಿನಲ್ಲೇ ಆರೋಪ ಮಾಡಿದ್ದರಿಂದ ಭಾಸ್ಕರರಾವ್‌ ಅವಮಾನಕ್ಕೊಳಗಾಗಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಅವರು ಈ ಬಗ್ಗೆ ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.


ಬೆಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಗಳ ಮೇಲೆ ಭಾಸ್ಕರರಾವ್‌ ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬ ಮಾತುಗಳಿಗೆ ಈ ಬೆಳವಣಿಗೆಗಳು ಹೆಚ್ಚಿನ ಪುಷ್ಠಿ ನೀಡಿವೆ. ಈ ಹಿನ್ನೆಲೆಯಲ್ಲಿ ಭಾಸ್ಕರರಾವ್‌ ಅವರನ್ನು ಎತ್ತಂಗಡಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.


ಭಾಸ್ಕರರಾವ್‌ ಅವರ ನೇಮಕವೇ ಮೂಲತಃ ವಿವಾದಕ್ಕೊಳಗಾಗಿತ್ತು. ದೂರವಾಣಿ ಕದ್ದಾಲಿಕೆ ಆರೋಪ ಹೊತ್ತಿರುವ ಅಲೋಕ್‌ಕುಮಾರ್‌, ಸೋನಿಯಾ ಗಾಂಧಿ ಆಪ್ತ ಎಂದು ಹೇಳಿಕೊಂಡಿದ್ದ ಫರಾಜ್‌ ಎಂಬುವರ ಜತೆ ಭಾಸ್ಕರರಾವ್‌ ಅವರು ನಡೆಸಿದ್ದರು ಎನ್ನಲಾದ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರು ಎನ್ನಲಾಗಿದೆ. ಇದು ಪೊಲೀಸ್‌ ಇಲಾಖೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.


ಅಲ್ಲದೆ ಲಾಕ್‌ಡೌನ್‌ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಪೊಲೀಸ್‌ ಕಮಿಷನರ್‌ ನಿಭಾಯಿಸಿದ ಬಗ್ಗೆ ಡಿಜಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಬೆಂಗಳೂರು ಪೊಲೀಸರ ಕಾಯಕ್ಷೇತ್ರದಲ್ಲಿ ಡಿಜಿ ಮತ್ತು ಐಜಿ ಹಸ್ತಕ್ಷೇಪ ಮಾಡಿದ್ದು ಅತ್ಯಂತ ವಿರಳ. ಈ ವಿಷಯದಲ್ಲಿ ಪ್ರವೀಣ್ ಸೂದ್, ಭಾಸ್ಕರರಾವ್‌ ಅವರಿಗೆ ಪತ್ರ ಬರೆದಿದ್ದು ಪೊಲೀಸ್‌ ವಲಯದಲ್ಲಿ ವ್ಯಾಪಕ ಚರ್ಚೆಗಳನ್ನು ಹುಟ್ಟು ಹಾಕಿತ್ತು.


ನಗರದ ರಸ್ತೆಗಳಲ್ಲಿ ಪೊಲೀಸರು ಕಣ್ಮರೆಯಾಗಿದ್ದಾರೆ, ಬ್ಯಾರಿಕೇಡ್‌ಗಳು ನಾಪತ್ತೆಯಾಗಿವೆ. ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ವಾಹನಗಳ ಸಂಚಾರ ವಿಪರೀತವಾಗಿದೆ ಎಂದೆಲ್ಲಾ ಪತ್ರದಲ್ಲಿ ಗುಡುಗಿದ್ದರು. ಪತ್ರದ ಪರಿಭಾಷೆಯೇ ಒಂದು ರೀತಿ ಭಾಸ್ಕರರಾವ್‌ ಅವರಿಗೆ ಇರುಸುಮುರುಸು ಉಂಟು ಮಾಡಿತ್ತು. ಭಾಸ್ಕರರಾವ್‌ ಅವರ ವರ್ಗಾವಣೆಗೆ ಇವೆಲ್ಲವೂ ಕಾರಣಗಳಾಗಲಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

the fil favicon

SUPPORT THE FILE

Latest News

Related Posts