ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಕಳೆದ 5 ವರ್ಷಗಳಿಂದಲೂ ಒಂದೇ ಇಲಾಖೆಯಲ್ಲಿ ಗ್ರೂಪ್ ಎ ಸೇರಿದಂತೆ ಇನ್ನಿತರೆ ವೃಂದದ 705 ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
ನೀತಿ ನಿರ್ಣಯವನ್ನು ನಿರೂಪಿಸುವ ಮಾತೃ ಸಂಸ್ಥೆಯಾಗಿರುವ ಸಚಿವಾಲಯದಲ್ಲಿಯೇ ದೀರ್ಘಾವಧಿಯಿಂದ ಒಂದೇ ಇಲಾಖೆಯಲ್ಲಿ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ ಯಾವುದೇ ಶಿಫಾರಸ್ಸು ಇಲ್ಲದೇ ಇನ್ನಿತರೆ ಪ್ರತಿಭಾವಂತ ನೌಕರರು ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲುಇ ಅವಕಾಶ ವಂಚಿತರಾಗುತ್ತಿದ್ದಾರೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಆಡಳಿತದಲ್ಲಿ ಏಕರೂಪತೆ ಅಳವಡಿಸಿಕೊಳ್ಳುವಲ್ಲಿ ಸರ್ಕಾರವು ವಿಫಲವಾಗಿದೆ.
ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಕಡೆ ಆಯಕಟ್ಟಿನ ಜಾಗದಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ನೌಕರರ ಪಟ್ಟಿಯನ್ನು ಒದಗಿಸಿದ್ದಾರೆ.
ಇದರಲ್ಲಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಆರ್ಥಿಕ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಸೇರಿದೆ.
ಸಚಿವಾಲಯದ ಒಂದೇ ಇಲಾಖೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಅಧಿಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಅವರನ್ನು ವರ್ಗಾವಣೆ ಮಾಡಿಲ್ಲ. ಹಲವು ಅಧಿಕಾರಿ, ನೌಕರರು 2014ರಿಂದಲೂ ವಿಧಾನಸೌಧದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ್ಯಾರು ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಬಿಟ್ಟು ಕದಲಿಲ್ಲ ಅಥವಾ ಅವರನ್ನು ಯಾವ ಸರ್ಕಾರವೂ ಕದಲಿಸುವ ಗೋಜಿಗೂ ಹೋಗಿಲ್ಲ ಎಂಬುದು ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆರಳಚ್ಚುಗಾರ, ಶೀಘ್ರಲಿಪಿಗಾರರಾಗಿ ನೇಮಕವಾಗಿದ್ದವರು ಸಚಿವಾಲಯದ ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಸರ್ಕಾರದ ಅಪರ ಕಾರ್ಯದರ್ಶಿ ಹುದ್ದೆಯ ತನಕವೂ ಮುಂಬಡ್ತಿ ಹೊಂದಿದ್ದಾರೆ. ಅದೇ ಇಲಾಖೆಯಲ್ಲಿ ಕೊಠಡಿಗಳನ್ನು ಬದಲಾಯಿಸುತ್ತ, ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಯೇ ಬೇರೆ ಇಲಾಖೆಗಳಿಗೆ ವರ್ಗಾವಣೆಯನ್ನೇ ಮಾಡಿಲ್ಲ. ಈ ಪೈಕಿ ಹಲವು ಅತ್ಯಂತ ಪ್ರಭಾವಿ ಅಧಿಕಾರಿ ನೌಕರರಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಕೆಲವು ಅಧಿಕಾರಿ ನೌಕರರು ಸಚಿವಾಲಯದಲ್ಲಿ 2018ರಿಂಣದ ಒಂದು ಹುದ್ದೆಯಲ್ಲಿ ಹಾಗೂ ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಹುದ್ದೆಗೆ ಮುಂಬಡ್ತಿ ಹೊಂದಿದ ನಂತರವೂ ಅದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
5 ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳ ಪಟ್ಟಿ
ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಅನಂತ್ ಎನ್ ಕಾಸ್ಕರ್ 2019ರ ಸೆ.25 ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದರು. 2020ರ ಅಕ್ಟೋಬರ್ 29 ರಿಂದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 2023ರ ನವೆಂಬರ 23ರಿಂದಸರ್ಕಾರದ ಅಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರೆದಿದ್ದಾರೆ.
ಆರ್ ಚಂದ್ರಶೇಖರ ಅವರು 2021ರ ಜುಲೈ 29ರಂದು ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿದ್ದರು. 2021ರ ನವೆಂಬರ್ 5ರಿಂದ ಸರ್ಕಾರದ ಅಪರ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಸದ್ಯ ಸಚಿವ ಸಂಪುಟ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಲಿತ ಅವರು 2018ರ ಏಪ್ರಿಲ್ 24ರಿಂದ ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2021ರ ಜುಲೈ 29ರಿಂದ ಸರ್ಕಾರದ ಜಂಟಿ ಕಾರ್ಯದರ್ಶಿ, 2025ರ ಫೆ.14ರಿಂದಸರ್ಕಾರದಾಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರೆದಿದ್ದಾರೆ.
ಶೋಭಾ ಎಚ್ ಎ ಅವರು 2014ರಿಂದಲೂ ಸಚಿವಾಲಯದ ಆರ್ಥಿಕ ಇಲಾಖೆಯಲ್ಲೇ ಠಿಕಾಣಿ ಹೂಡಿದ್ದಾರೆ. 2014 ಆಗಸ್ಟ್ 1ರಂದು ಸರ್ಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ಹೊಂದಿದ್ದರು. 2019ರ ಜೂನ್ 29ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದರು. 2022ರ ಆಗಸ್ಟ್ 22ರಂದು ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿವರ್ವಹಿಸುತ್ತಿದ್ದಾರೆ.
ಉಮಾ ಕೆ ಅವರು 2020ರ ಮೇ 7ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2023ರ ಆಗಸ್ಟ್ 1ರಿಂದ ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿ ಮುಂದುವರೆದಿದ್ದಾರೆ.
ವನಿತ ಎನ್ ಇವರು 2015ರಿಂದಲೂ ಸಚಿವಾಲಯ ಬಿಟ್ಟು ಕದಲಿಲ್ಲ. 2025 ಮಾರ್ಚ್ 9ರಂದು ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ, 2024ರ ಜೂನ್ 28ರಂದು ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ್ದಾರೆ.
ಸತೀಶ್ ಎನ್ ಅವರು 2016ರಿಂದಲೂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರ ಆಗಸ್ಟ್ 17ರಂದು ಅಧೀನ ಕಾರ್ಯದರ್ಶಿಯಾಗಿದ್ದರು. 2021ರ ಮಾರ್ಚ್ 20ರಿಂದ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಬಿ ಎಸ್ ವಿರೂಪಾಕ್ಷ ಅವರು 2018ರಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿದ್ದರು. 2022ರ ಆಗಸ್ಟ್ 12ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ.
ಗೋಪಿಚಂದ್ರ ಎಸ್ ಅವರು ಆರ್ಥಿಕ ಇಲಾಖೆಗೆ 1991ರ ಜೂನ್ 30ರಂದು ಬೆರಳಚ್ಚುಗಾರರಾಗಿ ನೇಮಕಗೊಂಡಿದ್ದರು. 1995ರ ಏಪ್ರಿಲ್ 24ರಂದು ಶೀಘ್ರಲಿಪಿಗಾರರಾಗಿ ಬಡ್ತಿ ಹೊಂದಿದ್ದರು. 2015ರ ಫೆ. 20ರಂದು ಶಾಖಾಧಿಕಾರಿಯಾಗಿದ್ದರು. 2018ರ ಏಪ್ರಿಲ್ 24ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೇರಿದ್ದರು. 2023ರ ಮಾರ್ಚ್ 27ರಂದು ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಾಯತ್ರಿ ಕೆ ಇವರು 2015ರ ಫೆ.23ರಂದು ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2023ರ ನವೆಂಬರ್ 23ರಂದು ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿಯೇ ಮುಂದುವರೆದಿದ್ದಾರೆ.
ಮಂಜುಳ ನಟರಾಜ್ ಅವರು 2015ರ ಫೆ.20ರಂದು ಶಾಖಾಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಪಡೆದಿದ್ದರು.2024ರ ಆಗಸ್ಟ್ 13ರಂದುಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದಾರೆ. ವಿಶೇಷವೆಂದರೇ ಮಂಜುಳ ನಟರಾಜ್ ಅವರು ಅಬಕಾರಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಎಂ 2 ಲೈಸೆನ್ಸ್ ಇಲ್ಲದಿದ್ದರೂ ಸಾವಿರಾರು ಕೋಟಿ ರು ಮೌಲ್ಯದ ಮೊಲಾಸಿಸ್ ರಫ್ತಿಗೆ ಅದೇಶ ಹೊರಡಿಸಿದ್ದರು. ಇವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ. ಇದಕ್ಕೆ ತಡೆಯಾಜ್ಞೆ ತಂದಿದ್ದಾರೆ.
ಲಕ್ಷ್ಮಿ ವಿ ಇವರು 2001ರಿಂದಲೂ ವಿಧಾನಸೌಧದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. 2001ರ ಜನವರಿ 15ರಂದು ಶೀಘ್ರಲಿಪಿಗಾರ್ತಿಯಾಗಿ ನೇಮಕವಾಗಿದ್ದರು. 2012ರಿಂದ ಹಿರಿಯ ಶೀಘ್ರಲಿಪಿಗಾರ್ತಿ 2014ರ ಆಗಸ್ಟ್ 11ರಿಂದ ಪತ್ರಾಂಕಿತ ಆಪ್ತ ಸಹಾಯಕರು, 2018ರ ಏಪ್ರಿಲ್ 2ರಿಂದ ಆಪ್ತ ಕಾರ್ಯದರ್ಶಿ -2, 2021ರ ಮೇ 29ರಿಂದಾಪ್ತ ಕಾರ್ಯದರ್ಶಿ ಗ್ರೇಡ್ 1 ಆಗಿ ಕೆಲಸ ಮಾಡುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಶಶಿಕಲಾ ಜಿ ಇವರು 2007ರಿಂದಲೂ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2007ರ ಡಿಸೆಂಬರ್ 15ರಿಂದ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಇವರು 2013ರ ಮಾರ್ಚ್ 27ರಿಂದ ಹಿರಿಯ ಶೀಘ್ರಲಿಪಿಗಾರರಾಗಿದ್ದಾರೆ. 2016ರಲ್ಲಿ ಆರ್ಥಿಕ ಇಲಾಖೆಗೆ ಪತ್ರಾಂಕಿತ ಆಪ್ತ ಸಹಾಯಕರು, 2019ರ ಸೆ.12ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 2), 2022ರ ಡಿಸೆಂಬರ್ 15ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 1) ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಎ ಎನ್ ವಿರುಪಾಕ್ಷ ಇವರು ಸಿಬ್ಬಂದಿ ಸುಧಾರಣೆ ಆಡಳಿತ ಇಲಾಖೆಯಲ್ಲಿ 2016ರಿಂದ ಶಾಖಾಧಿಕಾರಿಯಾಗಿದ್ದರು. 2020ರಿಂದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2015ರಿಂದ ಶಾಖಾಧಿಕಾರಿಯಾಗಿದ್ದ ಜಿ ಆರ್ ಸಂದೇಶ ಅವರು 2020ರಿಂದ ಅಧೀನ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಎಸ್ ನಾಗರತ್ನ ಅವರು (2015) ತಿಪ್ಪೇಸ್ವಾಮಿ (2019), ನಾಗರತ್ನ ಸಿ (2016) ವೀರಭದ್ರ (2016), ನಾಗರತ್ನ ವಿ ಪಾಟೀಲ್ (2016) ಚಂದ್ರಕಲಾ ಎಸ್ ಎನ್ (2018) ಇವರು ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದಾರೆ.
ಆರ್ಥಿಕ ಇಲಾಖೆ
ಕವಿತಾ ಎಲ್ (2016ರಿಂದ), ನೇತ್ರಪ್ರಭಾ ಎಂ ದಯಾಪುಲೆ (2016ರಿಂದ), ಎಸ್ ಬಿ ಸತೀಶ್ (2015) ಕಾಂತಮ್ಮ ಎನ್ ಎಂ (2018) ಎಂ ರಾಜಮ್ಮ (2020) ಹೆಚ್ ಅರ್ ಲಲಿತಾ (2016), ಎಸ್ ಹರೀಶ್ (2016) ಅಜಯ್ ಎಸ್ ಕೊರಡೆ (2019) ನಾಗರತ್ನ ಕೆ ಎಸ್ (2018) ಮಾಯಪ್ಪ ಎಚ್ ಸಂಗಣ್ಣವರ್ (2018) ಬಸವರಾಜ ಎಂ (2019) ಎಂಕಟೇಶ್ ಎಸ್ ಎನ್ (2018) ಅವರು ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಕಂದಾಯ ಇಲಾಖೆಯ ವಿಮಲಮ್ಮ ಸಿ ಅವರು 2016ರಲ್ಲಿ ಶಾಖಾಧಿಕಾರಿಯಾಗಿದ್ದರು. 2021ರಿಂದ ಅಧೀನ ಕಾರ್ಯದರ್ಶಿಯಾಗಿದ್ದಾರೆ. ಶಾಲಿನಿ ಹೆಗಡೆ (ವಿದ್ಯುನ್ಮಾನ ಮಾಹಿತಿ, ತಂತ್ರಜ್ಞಾನ ಜೈವಿಕ ಇಲಾಯಲ್ಲಿ 2020ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಲಕ್ಷ್ಮಿ ಸಾಗರ 2019ರಿಂದ ನಿಯೋಜನೆ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗೊತ್ತಾಗಿದೆ.
2019 ರಿಂದ ವನಜ ಕೆ ಎನ್ (ಒಳಾಡಳಿತ ಇಲಾಖೆ) 2016ರಿಂದ, ಶ್ಯಾಮ್ ಹೊಳ್ಳ ಜಿ (ಒಳಾಡಳಿತ ) 2015ರಿಂದ ಪಿ ಸತ್ಯಭಾಮ (ಕೃಷಿ) 2020ರಿಂದ ಹೇಮಾವತಿ (ವಸತಿ) 2020ರಿಂದ, ನರಸಿಂಹಮೂರ್ತಿ (ಸಮಾಜ ಕಲ್ಯಾಣ) 2020 ರಿಂದ, ಎಂ ಜೆಸಿಂತ (ವಾರ್ತಾ) 2020ರಿಂದ, ವೇದಾವತಿ (ಸಾರಿಗೆ) ಆಪ್ತ ಕಾರ್ಯದಶರ್ಶಿ ಗ್ರೇಡ್ 2 ಇವರು ಸಾರಿಗೆ ಇಲಾಖೆಯಲ್ಲಿಇ ಪತ್ರಾಂಕಿತ ಅಪ್ತ ಸಹಾಯಕರಾಗಿ ಕಾರ್ಯಿರ್ವಹಿಸಿದ್ದಾರೆ. ಆನಂತರ ಆಪ್ತ ಕಾರ್ಯದರ್ಶಿ (ಗ್ರೇಡ್ 2) ವೃಂದಕ್ಕೆ ಮುಂಬಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರೆದಿದ್ದಾರೆ.
ಧರ್ಮಶೆಟ್ಟಿ ಆಪ್ತ ಕಾರ್ಯದರ್ಶಿ ಗ್ರೇಡ್ 2 (ಆರ್ಡಿಪಿಆರ್)ನಲ್ಲಿ ಪತ್ರಾಂಕಿತ ಆಪ್ತ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ಆಪ್ತ ಕಾರ್ಯದರ್ಶಿ ಗ್ರೇಡ್ 2 ವೃಂದಕ್ಕೆ ಮುಂಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರೆಯುತ್ತಿರುವುದು ಪಟ್ಟಿಯಿಂದ ಗೊತ್ತಾಗಿದೆ.