ಸರ್ಕಾರಿ ಭೂಮಿ ಮೇಲೆ ಇಸ್ಕಾನ್‌ ಕಣ್ಣು; 5-23 ಎಕರೆ ಜಮೀನು ಮಂಜೂರಾತಿಗೆ ಸಚಿವ, ಶಾಸಕರ ಶಿಫಾರಸ್ಸು

ಬೆಂಗಳೂರು;  ಅಕ್ಷಯ ಪಾತ್ರ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣ ಹೆಸರಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಸರ್ಕಾರಿ ಬೀಳು ಭೂಮಿಯನ್ನು  ಇಸ್ಕಾನ್‌ ಸಂಸ್ಥೆಗೆ ಮಂಜೂರು ಮಾಡಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ತಯಾರಿ ನಡೆಸುತ್ತಿದೆ. 

 

ಚಿಕ್ಕಬಳ್ಳಾಪುರ ಜಿಲ್ಲೆಯ 8  ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆ ತಯಾರಿಕೆ ವೆಚ್ಚದ ಅನುದಾನ, ಅಡುಗೆ ಸಿಬ್ಬಂದಿಗಳ ಸಂಭಾವನೆ ಮೊತ್ತ,  ಅಡುಗೆ ಕೋಣೆ ನಿರ್ವಹಣೆ, ಆಹಾರ ಧಾನ್ಯ ಹಾಗೂ ಯೋಜನೆ ಅನುಷ್ಠಾನದ ಸಂಪೂರ್ಣ ಸುಪರ್ದಿಯನ್ನು ಹಿಂದಿನ ಬಿಜೆಪಿ ಸರ್ಕಾರವು  ಅಕ್ಷಯ ಪಾತ್ರ ಫೌಂಡೇಷನ್‌ಗೆ ವಹಿಸಿತ್ತು.

 

ಇದೀಗ ಕಾಂಗ್ರೆಸ್‌ ಸರ್ಕಾರವೂ ಸಹ ಇದೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಇದೇ ಇಸ್ಕಾನ್‌ ಸಂಸ್ಥೆಗೆ ಅಂದಾಜು 2 ಕೋಟಿ ರು ಬೆಲೆಬಾಳುವ  5-23 ಎಕರೆ ವಿಸ್ತೀರ್ಣದ ಸರ್ಕಾರಿ ಬೀಳು ಭೂಮಿಯನ್ನು ಮಂಜೂರು ಮಾಡಲು ಮುಂದಾಗಿದೆ. 

 

ಇದಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರು ಪ್ರಾದೇಶಿಕ ಆಯುಕ್ತರಿಗೆ  ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. 

 

ಅಕ್ಷಯ ಪಾತ್ರ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕೆ 5-23 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ಮಂಜೂರು ಮಾಡಬೇಕು ಎಂದು ಇಸ್ಕಾನ್‌ನ ಮಧುಪಂಡಿತ್‌ದಾಸ್‌ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌  ಹಾಗೂ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್‍‌ ಅವರಿಗೆ ಮನವಿ ಸಲ್ಲಿಸಿದ್ದರು.

 

ಇಸ್ಕಾನ್‌ ಅಧ್ಯಕ್ಷರು ನೀಡಿದ್ದ ಮನವಿಯನ್ನು ಪರಿಗಣಿಸಿರುವ ಸಚಿವತ್ರಯರು ಮತ್ತು ಸ್ಥಳೀಯ ಶಾಸಕರು, ಈ ಮನವಿ ಆಧರಿಸಿ ಕ್ರಮ ಕೈಗೊಳ್ಳಬೇಕು ಇಲಾಖೆ ಮುಖ್ಯಸ್ಥರಿಗೆ ಸೂಚಿಸಿರುವುದು ಗೊತ್ತಾಗಿದೆ. 

 

ಇಸ್ಕಾನ್‌   ಮನವಿಯಲ್ಲೇನಿದೆ

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ಶಾಲೆಯನ್ನು ನಡೆಸಲು ಇಸ್ಕಾನ್‌  ಉದ್ದೇಶಿಸಿದೆ.  ಚಿಕ್ಕಬಳ್ಳಾಪುರ ತಾಲಕೂಕು ಮಂಡಿಕಲ್ಲು ಹೋಬಳಿ ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187ರಲ್ಲಿ 4-38 ಎಕರೆ ಮತ್ತು ಸರ್ವೆ ನಂಬರ್‍‌ 191ರಲ್ಲಿ 0-98 ಗುಂಟೆ ಸೇರಿ ಒಟ್ಟಾರೆ 5-23 ಎಕರೆ ಜಮೀನು ಇದೆ. ಈ ಜಮೀನನ್ನು ಅಕ್ಷಯ ಪಾತ್ರ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕು ಎಂದು ಇಸ್ಕಾನ್‌ ಅಧ್ಯಕ್ಷರು ಮನವಿಯಲ್ಲಿ ಕೋರಿದ್ದರು ಎಂಬುದು ಗೊತ್ತಾಗಿದೆ. 

 

 

ಈ ಮನವಿ ಮೇಲೆ ಕಂದಾಯ ಸಚಿವರು ‘ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು’ ಎಂದು ಷರಾ ಬರೆದಿದ್ದಾರೆ. ಅದೇ ರೀತಿಯ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ, ಹಾಗೂ ಶಾಸಕ ಪ್ರದೀಪ್‌ ಈಶ್ವರ್‍‌ ಸಹ ಮನವಿ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಷರಾ ಬರೆದಿರುವುದು ತಿಳಿದು ಬಂದಿದೆ. 

 

ಜಿಲ್ಲಾಧಿಕಾರಿ ನೀಡಿದ್ದ ವರದಿಯಲ್ಲೇನಿದೆ?

 

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187ರಲ್ಲಿ ಆರ್‍‌ಟಿಸಿಯಂತೆ ಒಟ್ಟು 5-13 ಎಕರೆ ಜಮೀನಿದೆ. ಈ ಪೈಕಿ ಬಿ ಖರಾಬು 0-15 ಗುಂಟೆ, ಜಾತ ಉಳಿಕೆ 4-38 ಎಕರೆ ಜಮೀನು ಸರ್ಕಾರಿ ಬೀಳು ಎಂಬುದಾಗಿ ವರ್ಗೀಕರಣಗೊಂಡಿದೆ. ಮತ್ತು ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 191ರಲ್ಲಿ ಆರ್‍‌ಟಿಸಿಯಂತೆ ಒಟ್ಟು ವಿಸ್ತೀರ್ಣ 0-25 ಗುಂಟೆ ಜಮೀನು ಸರ್ಕಾರಿ ಬೀಳು ಎಂಬುದಾಗಿ ವರ್ಗೀಕರಣಗೊಂಡಿದೆ ಎಂದು ವಿವರಿಸಿದ್ದಾರೆ. 

 


ಈ ಪ್ರಸ್ತಾಪಿತ ಜಮೀನಿನಲ್ಲಿ ಬೆಲೆಬಾಳುವ ಮರ, ಮಾಲ್ಕಿಗಳು ಇರುವುದಿಲ್ಲ. ಗ್ರಾಮಸ್ಥರ ಮಹಜರ್‍‌ ನಂತೆ ಗ್ರಾಮಸ್ಥರ ತಂಟೆ ತಕರಾರು ಇಲ್ಲ. ಈ ಬಗ್ಗೆ ತಯಾರಿಸಿರುವ ನಕ್ಷೆಯಂತೆ ಸರ್ಕಾರಕ್ಕೆ ಕಾಯ್ದಿರಿಸಬೇಕಾದ ಅಂಶಗಳು ಇರುವುದಿಲ್ಲ. ಈ  ಗ್ರಾಮದಲ್ಲಿ ರಾಸುಗಳಿಗೆ ಅನುಗುಣವಾಗಿ ಹೆಚ್ಚುವರಿ ಗೋಮಾಳ ಇರುತ್ತದೆ. ಪ್ರಸ್ತಾಪಿತ ಜಮೀನು ಮಂಜೂರಿ ಕೋರಿ ನಿಯಮ 50ರಲ್ಲಿ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

 

 

ನಮೂನೆ 53ರಲ್ಲಿ 03 ಅಜಿfಗಳು ಮತ್ತು ನಮೂನೆ 57ರಲ್ಲಿ 01 ಅರ್ಜಿ ಸಲ್ಲಿಕೆಯಾಗಿವೆ.  ಈ  ಅರ್ಜಿಗಳನ್ನು ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು 2024ರ ಜೂನ್‌ 19ರಂದು ಅರ್ಜಿದಾರರು ಯಾರು ಅನುಭವದಲ್ಲಿ ಇರುವುದಿಲ್ಲ ಮತ್ತು ವ್ಯವಸಾಯ ಮಾಡುತ್ತಿರುವುದಿಲ್ಲ ಎಂದು ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಿರುವುದು ತಿಳಿದು ಬಂದಿದೆ. 

 

ಪ್ರಸ್ತಾಪಿತ ಜಮೀನು ಅನಧಿಕೃತ ಸಾಗುವಳಿಯಿಂದ ಮುಕ್ತವಾಗಿದೆ.  ಪ್ರಸ್ತಾಪಿತ ಸರ್ವೆ ನಂಬರ್‍‌ಗಳು ಭೂ ಸ್ವಾಧೀನ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಸದರಿ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳು ಇರುವುದಿಲ್ಲ.ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187 ಮತ್ತು 191ರ ಆರ್‍‌ಟಿಸಿ ಮತ್ತು ಆಕಾರ್‍‌ಬಂದ್‌ ವಿಸ್ತೀರ್ಣಕ್ಕೆ ತಾಳೆ ಇದೆ  ಎಂಬ ಮಾಹಿತಿಯನ್ನೂ ಒದಗಿಸಿರುವುದು ಗೊತ್ತಾಗಿದೆ. 

 

ರಾಷ್ಟ್ರೀಯ ಹೆದ್ದಾರಿ 44ರಿಂದ ಪ್ರಸ್ತಾಪಿತ ಜಮೀನಿಗೆ 22 ಕಿ ಮೀ ದೂರದಲ್ಲಿರುತ್ತದೆ. ಪ್ರಸ್ತಾಪಿತ ಉದ್ದೇಶಿಸಿರುವ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರುಗಳು ಇರುವುದಿಲ್ಲ ಮತ್ತು ಹೈಟೆನ್ನ್‌ ವಿದ್ಯುತ್‌ ವಾಹಕ ತಂತಿ ಹಾದು ಹೋಗಿರುವುದಿಲ್ಲ.  ರಸ್ತೆ ಸಂಪರ್ಕ ಹೊಂದಿದೆ ಎಂದು ವರದಿಯಲ್ಲಿ ವಿವರಿಸಿದೆ. 

 

ಅರಣ್ಯಾಧಿಕಾರಿಗಳ ವರದಿಯಲ್ಲೇನಿದೆ?

 

ಚಿಕ್ಕಬಳ್ಳಾಪುರ ತಾಲೂಕು ಉಪ ನೋಂದಣಾಧಿಕಾರಿಗಳ ವರದಿ ಪ್ರಕಾರ ಯರ್‍ರಮಾರೇನಹಳ್ಳಿ ಗ್ರಾಮದಲ್ಲಿ ಖುಷ್ಕಿ ಜಮೀನು ಎಕರೆ ಒಂದಕ್ಕೆ 5,00,000 ರು. ಇದೆ. ಈ ಗ್ರಾಮವು ಬೇಚರಾಕ್‌ ಗ್ರಾವಾಗಿದೆ. ಈ ಜಮೀನಿನ ಸರ್ವೆ ನಂಬರ್‍‌ 187 ಮತ್ತು 191ರ ಜಮೀನುಗಳು ಯಾವುದೇ ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಚಿಕ್ಕಬಳ್ಳಾಪುರ ವಲಯದ ನರಸಿಂಹದೇವರಬೆಟ್ಟ 4ನೇ ಬೀಟ್‌ ಅರಣ್ಯ ಪ್ರದೇಶಕ್ಕೆ 200 ಮೀಟರ್‍‌ ದೂರದಲ್ಲಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು  ವರದಿ ಸಲ್ಲಿಸಿರುವುದು ಗೊತ್ತಾಗಿದೆ. 

 

ಸರ್ಕಾರದಿಂದ ಸರ್ಕಾರಿ ಜಮೀನು ಮಂಜೂರು ಮಾಡಿದ್ದಲ್ಲಿ ಸರ್ಕಾರವು ವಿಧಿಸುವ ಮೊತ್ತವನ್ನು ಪಾವತಿಸಲು ಬದ್ಧವಾಗಿದೆ ಎಂದು ಇಸ್ಕಾನ್‌ ಅಧ್ಯಕ್ಷರು  ಪ್ರಮಾಣ ಪತ್ರ ಹಾಜರುಪಡಿಸಿದ್ದಾರೆ.  ಈ ಸರ್ವೆ ನಂಬರ್‍‌ಗಳಲ್ಲಿನ ಜಮೀನನನ್ನು ಇಸ್ಕಾನ್‌ ಸಂಸ್ಥೆಗೆ ಮಂಜೂರು ಮಾಡುವುದರಿಂದ ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಯಿಂದ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ ಎಂದು ಅಭಿಪ್ರಾಯಿಸಿರುವ   ಪಿಡಿಒ 2024ರ ಫೆ.2ರಂದು ಎನ್‌ಒಸಿ ನೀಡಿರುವುದು ತಿಳಿದು ಬಂದಿದೆ. 

 

ಇಸ್ಕಾನ್‌ ಕೋರಿಕೆಯಂತೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 21 ಮತ್ತು 22ಎ(1)(i) ಕ್ರಮ ಸಂಖ್ಯೆ (4) ಅನ್ವಯ ಮಂಜೂರು ಮಾಡಬಹುದಾಗಿರುತ್ತದೆ ಎಂದು ಉಪ ವಿಭಾಗಾಧಿಕಾರಿಗಳು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ. 

 


‘ಆದ್ದರಿಂದ ಕಂದಾಯ ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಸಾಸಕರು ಅವರ ಕೋರಿಕೆಯಂತೆ ಯರ್‍ರಮಾರೇನಹಳ್ಳಿಯ ಸರ್ವೆ ನಂಬರ್‍‌ 187 ಮತ್ತು 191ರಲ್ಲಿನ ಸರ್ಕಾರಿ ಬೀಳಿನ ಪ್ರದೇಶದ ಪೈಕಿ 5-23 ಎಕರೆ ಜಮೀನನ್ನು ಅಕ್ಷಯ ಪಾತ್ರೆ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಇಸ್ಕಾನ್‌ ಅವರಿಗೆ ಮಂಜೂರು ಮಾಡಬಹುದು ಎಂದು ಜಿಲ್ಲಾಧಿಕಾರಿ ಪಿ ಎನ್‌ ರವೀಂದ್ರ ಅವರು 2024ರ ಜುಲೈ 23ರಂದೇ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ತಿಳಿದು ಬಂದಿದೆ. 

 

 

ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳನ್ನು ಎಸಗಿರುವ ಗಂಭೀರ ಆರೋಪಕ್ಕೆ ಅಕ್ಷಯ ಪಾತ್ರ ಫೌಂಡೇಷನ್‌  ಗುರಿಯಾಗಿದೆ. ಈ ಮಧ್ಯೆಯೇ  ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯ 08 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿತ್ತು. 

 

ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದಡಿಯಲ್ಲಿ ಚಿಕ್ಕಬಳ್ಳಾಪುರದ ನಲ್ಲಕದಿರೇನಹಳ್ಳಿ, ಯಗ್ರಮಾರೇನಹಳ್ಳಿ, ರಾಮಾಪಟ್ಟಣ, ಕಠಾರಿಕದಿರೇನಹಳ್ಳಿ, ಪೈಯೂರು, ದರಬೂರು, ಮಂಡಿಕಲ್ಲು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅಕ್ಷಯ ಪಾತ್ರ ಪ್ರತಿಷ್ಠಾನದೊಂದಿಗೆ ಅನುಷ್ಠಾನಗೊಳಿಸಲಿದೆ. ಹಿಂದಿನ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಈ ಯೋಜನೆಯನ್ನು ಅನುಮೋದಿಸಿದ್ದರು. 

 

 

ಬಿಸಿಯೂಟ; ಸಿಬ್ಬಂದಿ ಸಂಭಾವನೆ, ಆಹಾರ ಧಾನ್ಯ, ಅಡುಗೆ ವೆಚ್ಚದ ಅನುದಾನ ಅಕ್ಷಯಪಾತ್ರೆಗೆ ವರ್ಗಾವಣೆ

 

ಅಲ್ಲದೆ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಸಂಭಾವನೆ ಮೊತ್ತವನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವರ್ಗಾಯಿಸಬೇಕು. ಶಾಲೆಯ ಅಡುಗೆ ಕೋಣೆ ನಿರ್ವಹಣೆ ಮತ್ತು ಸಂಪೂರ್ಣ ಸುಪರ್ದಿಯ ಪ್ರತಿಷ್ಠಾನಕ್ಕೆ ವಹಿಸಬೇಕು. ಅಡುಗೆ ತಯಾರಿಕೆ ವೆಚ್ಚದ ಅನುದಾನವನ್ನೂ ಪ್ರತಿಷ್ಠಾನಕ್ಕೆ ನೀಡುತ್ತಿದೆ. 

 
the fil favicon

SUPPORT THE FILE

Latest News

Related Posts