ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ 101 ತಾಲೂಕುಗಳ ಪೈಕಿ ಹಾಸನ ಜಿಲ್ಲೆಯೊಂದರಲ್ಲೇ ಎಸ್ಡಿಆರ್ಎಫ್ ಮಾನದಂಡಗಳ ಅಡಿಯಲ್ಲಿ ಒಟ್ಟಾರೆ 321.64 ಕೋಟಿಯಷ್ಟು ಮೊತ್ತವನ್ನು ಕೋರಿದೆ. ಅಲ್ಲದೇ ಬರ ಪರಿಸ್ಥಿತಿ ನಿಭಾಯಿಸುವ ಸಂಬಂಧ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಪಿ ಡಿ ಖಾತೆಗಳಲ್ಲಿ 310 ಕೋಟಿ ರು ಇದೆ. ಈ ಪೈಕಿ 266 ಕೋಟಿ ರು.ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಹಣವನ್ನು ಬಿಡುಗಡೆ ಮಾಡಿದ ನಂತರ ಪಿ ಡಿ ಖಾತೆಗಳಲ್ಲಿ ಕೇವಲ 44 ಕೋಟಿ ಮಾತ್ರ ಇರಲಿದೆ.
ರಾಜ್ಯದಲ್ಲಿನ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಯನ್ನು ಪರಾಮರ್ಶಿಸಲು ಮತ್ತು ಸಮರ್ಥವಾಗಿ ನಿಭಾಯಿಸಲು ನೀತಿ ನಿರೂಪಣೆ ಮತ್ತು ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸುವ ಕುರಿತು 2026ರ 3ರಂದು ನಡೆದಿದ್ದ ಸಚಿವ ಸಂಪುಟ ಉಪ ಸಭೆಯಲ್ಲಿ ಸದ್ಯದ ಹಣಕಾಸಿನ ಸ್ಥಿತಿ ಕುರಿತು ಚರ್ಚೆಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿ ಸಭೆಗೆ ಮಂಡಿಸಿದ್ದ ಟಿಪ್ಪಣಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಹಣಕಾಸಿನ ಸ್ಥಿತಿ ಹೇಗಿದೆ?
ಸಚಿವ ಸಂಪುಟ ಉಪ ಸಮಿತಿಗೆ ಮಂಡನೆಯಾಗಿರುವ ಟಿಪ್ಪಣಿಯ ಪ್ರಕಾರ 2026-27ನೇ ಸಾಲಿನಲ್ಲಿ ಎಸ್ಡಿಎಆರ್ಎಫ್ ಅಡಿಯಲ್ಲಿ ಕೇಂದ್ರ ಸರ್ಕಾರದ ಪಾಲು 929.25 ಕೋಟಿ ರು, ರಾಜ್ಯದ ಪಾಲು 309.75 ಕೋಟಿ ರು ಇದೆ. ಒಟ್ಟಾರೆ 1,239 ಕೋಟಿ ರು ಇದೆ. ಆದರೆ ಈ ಸಂಬಂಧ ಮೊದಲ ಕಂತಿನ ಅನುದಾನ ಬಿಡುಗಡೆಗೆ ಬಾಕಿ ಇದೆ.
ಹಾಗೆಯೇ ಎಸ್ಡಿಎಂಎಫ್ ಅಡಿಯಲ್ಲಿ 2026-27ನೇ ಸಾಲಿಗೆ ಕೇಂದ್ರ ಪಾಲು 232.5 ಕೋಟಿ ರು ಇದೆ. ರಾಜ್ಯದ ಪಾಲು 77.5 ಕೋಟಿ ಇದೆ. ಒಟ್ಟಾರೆ 310 ಕೋಟಿ ಇದೆ. ಈ ಪೈಕಿ ಕೇಂದ್ರ ಸರ್ಕಾರವು ತನ್ನ ಪಾಲಿನ ಪೈಕಿ ಮೊದಲ ಕಂತಿನ ರೂಪದಲ್ಲಿ 116 ಕೋಟಿ ರು ಬಿಡುಗಡೆ ಮಾಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ 310 ಕೋಟಿ ರು ಇದೆ. ಈ ಪೈಕಿ ಶೀಘ್ರದಲ್ಲೇ 266 ಕೋಟಿ ರು ಬಿಡುಗಡೆಯಾಗಲಿದೆ. ಇದರ ಪ್ರಕಾರ ಹಣ ಬಿಡುಗಡೆ ನಂತರ ಪಿ ಡಿ ಖಾತೆಗಳಲ್ಲಿ 44 ಕೋಟಿಯಷ್ಟೇ ಉಳಿಯಲಿದೆ.
ಎನ್ಡಿಆರ್ಎಫ್ ಅಡಿಯಲ್ಲಿ ರಾಜ್ಯ ಸರ್ಕಾರವು ಮೆಮೋರಂಡಂ ಸಲ್ಲಿಸಲು ಸಿದ್ಧತೆ ನಡೆಸಿದೆ. ಇದರ ಪ್ರಕಾರ 17.85 ಲಕ್ಷ ಹೆಕ್ಟೇರ್ನಷ್ಟು ಬೆಳೆ ನಷ್ಟವಾಗಿದೆ. 18, 748.23 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದೆ. 476 ಕಡೆ ಜಾನುವಾರು ಶಿಬಿರ ತೆರೆಯಲು 209.21 ಕೋಟಿ ರು., 241 ಕಡೆಗಳಲ್ಲಿ ಮೇವು ಬ್ಯಾಂಕ್ ತೆರೆಯಲು 241.61 ಕೋಟಿ ರು. ವೈದ್ಯಕೀಯ, ವಾಕ್ಸಿನ್ ಮತ್ತು ಸಾಗಾಣಿಕೆಗೆ 21.27 ಕೋಟಿ ರು., ಪೌಷ್ಟಿಕಾಂಶ ಮತ್ತು ಹೆಚ್ಚುವರಿಗೆ 21.40 ಕೋಟಿ ರು., ಆಹಾರ ಮಿನಿ ಕಿಟ್ಗಳಿಗಾಗಿ 89.55 ಕೋಟಿ ರು. ಸೇರಿ ಒಟ್ಟಾರೆ ಎನ್ಡಿಆರ್ಎಫ್ ಅಡಿಯಲ್ಲಿ 2,600.3 ಕೋಟಿ ರು ಕ್ಲೈಮ್ ಮಾಡಬಹುದು ಎಂದು ವಿವರಿಸಿದೆ.

ಎಸ್ಡಿಆರ್ಎಫ್ ಅಡಿಯಲ್ಲಿ ಜಿಲ್ಲಾವಾರು ಎಷ್ಟೆಷ್ಟು ಮೊತ್ತವನ್ನು ಕೋರಬಹುದು ಎಂದು ಪಟ್ಟಿಯನ್ನು ಸಹ ಸಚಿವ ಸಂಪುಟ ಉಪ ಸಮಿತಿಗೆ ಒದಗಿಸಿದೆ. ಬರ ಪೀಡಿತ ಎಂದು ಘೋಷಣೆಯಾಗಿರುವ 101 ತಾಲೂಕುಗಳ ಪೈಕಿ ತುಮಕೂರು ಜಿಲ್ಲೆಯಲ್ಲಿ 9 ಮೈಸೂರು ಜಿಲ್ಲೆಯಲ್ಲಿ 8, ಚಿಕ್ಬಬಳ್ಳಾಪುರ 8, ಮಂಡ್ಯ 7, ಕೋಲಾರದಲ್ಲಿ 6 ತಾಲೂಕುಗಳಿವೆ. ಒಟ್ಟಾರೆ 101 ತಾಲೂಕುಗಳಲ್ಲಿ 19.52 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ. ಎಸ್ಡಿಆರ್ಎಫ್ ಅಡಿಯಲ್ಲಿಯೂ 2,017.26 ಕೋಟಿ ಮೊತ್ತ ಕೋರಬಹುದು ಎಂದು ಪಟ್ಟಿ ಮಾಡಿದೆ.
ಈ ಪಟ್ಟಿಯ ಪ್ರಕಾರ ಹಾಸನ ಜಿಲ್ಲೆಯೊಂದರಲ್ಲೇ 321.61 ಕೋಟಿಯಷ್ಟು ಎಸ್ಡಿಎಆರ್ಎಫ್ ಅಡಿಯಲ್ಲಿ ಕೋರಬಹುದು. ಬಾಗಲಕೋಟೆ ಜಿಲ್ಲೆಯಲ್ಲಿ 193.02 ಕೋಟಿ, ವಿಜಯನಗರ ಜಿಲ್ಲೆಯಲ್ಲಿ 180.18 ಕೋಟಿ, ತುಮಕೂರು ಜಿಲ್ಲೆಯಲ್ಲಿ 144.05 ಕೋಟಿ, ಮೈಸೂರು ಜಿಲ್ಲೆಯಲ್ಲಿ 122.34 ಕೋಟಿ, ಚಿತ್ರದುರ್ಗದಲ್ಲಿ 103.70 ಕೋಟಿ ಪರಿಹಾರ ಕೋರಬಹುದು ಎಂದು ಪಟ್ಟಿಯಲ್ಲಿ ವಿವರಿಸಿದೆ.

ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ 29.05 ಕೋಟಿ, ಬೆಂಗಳೂರು ಗ್ರಾಮಾಂತರದಲ್ಲಿ 33.69 ಕೋಟಿ, ಬೆಂಗಳೂರು ನಗರ ಜಿಲ್ಲೆಯಲ್ಲಿ 9.37 ಕೋಟಿ, ಬೀದರ್ ಜಿಲ್ಲೆಯಲ್ಲಿ 93.09 ಕೋಟಿ, ಚಾಮರಾಜನಗರ ಜಿಲ್ಲೆಯಲ್ಲಿ 84.06 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 57.78 ಕೋಟಿ, ಚಿಕ್ಕಮಗಳೂರಿನಲ್ಲಿ 17.36 ಕೋಟಿ, ದಾವಣಗೆರೆಯಲ್ಲಿ 62.51 ಕೋಟಿ, ಗದಗ್ ಜಿಲ್ಲೆಯಲ್ಲಿ 27.01 ಕೋಟಿ, ಕೊಡಗು ಜಿಲ್ಲೆಯಲ್ಲಿ 13.52 ಲಕ್ಷ, ಕೋಲಾರದಲ್ಲಿ 33.41 ಕೋಟಿ, ಕೊಪ್ಪಳದಲ್ಲಿ 80.10 ಕೋಟಿ, ರಾಯಚೂರು ಜಿಲ್ಲೆಯಲ್ಲಿ 181.91 ಕೋಟಿ, ಬೆಂಗಳೂರು ದಕ್ಷಿಣದಲ್ಲಿ 20.60 ಕೋಟಿ, ಉತ್ತರ ಕನ್ನಡದಲ್ಲಿ 9.22 ಕೋಟಿ, ವಿಜಯಪುರದಲ್ಲಿ 101.38 ಕೋಟಿ ರು., ಯಾದಗಿರಿಯಲ್ಲಿ 57.03 ಕೋಟಿಯಷ್ಟು ಪರಿಹಾರ ಕೋರಬಹುದು. 33 ವಾರಗಳಿಗೆ ಸಾಕಾಗುವಷ್ಟು ಅಂದರೇ 151 ಲಕ್ಷ ಟನ್ನಷ್ಟು ಮೇವು ಸಂಗ್ರಹವಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ತೋರುತ್ತಿರುವ ಮಲತಾಯಿ ಧೋರಣೆ ಆಕ್ಷೇಪಾರ್ಹ. ಬರ ಪರಿಸ್ಥಿತಿಯಿಂದ ಕಳೆದ ವರ್ಷ ಕರ್ನಾಟಕಕ್ಕೆ ಸಂಭವಿಸಿದ ಬೆಳೆಹಾನಿ ಪ್ರಮಾಣ ₹39,000 ಕೋಟಿಗೂ ಅಧಿಕ. ಕೇಂದ್ರ ಸರ್ಕಾರದಿಂದ ಬರ ಪರಿಹಾರದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ₹18,000 ಕೋಟಿ ಅನುದಾನಕ್ಕೆ ಮನವಿ ಮಾಡಿತ್ತು. ಆದರೆ, ಕೇಂದ್ರದಿಂದ ದೊರೆತಿದ್ದು ಕೇವಲ ₹3,500 ಕೋಟಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಅಲ್ಪ ಮೊತ್ತದ ಪರಿಹಾರ ಒದಗಿಸಲಾಗಿತ್ತು.
‘ಪ್ರಸಕ್ತ ಸಾಲಿನಲ್ಲೂ ಬರ ಪರಿಸ್ಥಿತಿ ತೀವ್ರವಾಗಿದೆ. ಅಧಿಕ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ಈಗಾಗಲೇ ರಾಜ್ಯದ 101 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಇದರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಾಲ್ಲೂಕುಗಳು ಸೇರ್ಪಡೆಗೊಳ್ಳುವ ಸಂಭವವಿದೆ,’ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ ಅವರು ಈಚೆಗೆ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.
54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ
ಭೀಕರ ಬರ ಎದುರಾಗಿದ್ದರೂ ಸಹ ಆರಂಭದಲ್ಲೇ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿರಲಿಲ್ಲ. ಈ ಕುರಿತು ದಿ ಫೈಲ್ 2026ರ ಆಗಸ್ಟ್ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




