Monday | August 31, 2026 |

4,791.95 ಕೋಟಿ ಮೊತ್ತದ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ ಪ್ರಕರಣ; ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣನೆಗೆ ಅಂಜುಂ ಪರ್ವೇಜ್ ಸಮಿತಿ ಆಕ್ಷೇಪ, ವರದಿ ಬಹಿರಂಗ

ಬೆಂಗಳೂರು; ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಎಲ್ಲಾ ಪ್ಯಾಕೇಜುಗಳಿಗೂ ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣಿಸುವುದು ಸೂಕ್ತವಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ಅಭಿಪ್ರಾಯಿಸಿದೆ.

ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಗಂಭೀರ ಸ್ವರೂಪದ ಅಕ್ರಮಗಳು ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯು, ಕಸ ಸಂಗ್ರಹಣೆ ಮತ್ತು ಸಾಗಾಣಿಕೆಯ ಟೆಂಡರ್ ಪ್ರಕ್ರಿಯೆಗಳ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಿದೆ.

ಅಂಜುಂ ಪರ್ವೇಜ್‌ ಅವರ ನೇತೃತ್ವದ ಸಮಿತಿಯು ನೀಡಿದ್ದ ವರದಿ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು  ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಚರ್ಚಿಸಿದ್ದರು ಎಂದು ಗೊತ್ತಾಗಿದೆ.

ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಸರ್ಕಾರಕ್ಕೆ ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕುರಿತು 2012ರಿಂದಲೂ ಟೆಂಡರ್ ಕರೆಯಲಾಗುತ್ತಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಮಿತಿಯು ಹೇಳಿರುವಂತೆ ಇದುವರೆಗೆ ಒಂದಿಲ್ಲೊಂದು ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಸದೃಢಗೊಳಿಸಿ ಕಾರ್ಯಾದೇಶ ನೀಡಲು ಸಾಧ್ಯವಾಗಿಲ್ಲ ಎಂಬ ಕುರಿತು ಸಮಿತಿಯು ಯಾವುದೇ ಟಿಪ್ಪಣಿ ಮಾಡಿಲ್ಲ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥಾಪನಾ ಮಂಡಳಿಯು 7 ವರ್ಷಗಳ ಅವಧಿಗೆ ಬೇಕಾಗುವ ವಾಹನಗಳ ಅಧಾರದ ಮೇಲೆ ತಯಾರಿಸಿರುವ ಅಂದಾಜನ್ನು ಸಮಿತಿಯು ಪರಿಶೀಲಿಸಿದೆ. ಪ್ರಸ್ತಾಪಿತ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಅಂದಾಜನ್ನು ಪ್ರಸಕ್ತ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯ ಮತ್ತು ಅಂದಾಜು ಬೆಳವಣಿಗೆ ಆಧಾರದ ಮೇಲೆ ತಯಾರಿಸಿರುವುದನ್ನು ಸಮಿತಿಯು ಗಮನಿಸಿದೆ. ಇದರ ಅಧಾರದ ಮೇಲೆಯೇ 7 ವರ್ಷಗಳಿಗೆ ಬೇಕಾಗುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿರುವುದು, ವಾಹನಗಳ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ವೆಚ್ಚದ ಆಧಾರದ ಮೇಲೆ ಅಂದಾಜು ತಯಾರಿಸಿರುವುದನ್ನು ಸಮಿತಿಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ಘನತ್ಯಾಜ್ಯ ಸಂಗ್ರಹಣೆಯಲ್ಲಿ 100 ಕೆ ಜಿ ಗಿಂತ ಕಡಿಮೆ ಉತ್ಪಾದನೆಯಾಗುತ್ತಿರುವ ವಾಣಿಜ್ಯ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ. ಅಲ್ಲದೇ ಇದರೊಂದಿಗೆ ಪ್ರಸಕ್ತ ಆಹ್ವಾನಿಸಿರುವ ಟೆಂಡರ್‍‌ನಲ್ಲಿ ಸಣ್ಣ ಪ್ರಮಾಣದ ರಸ್ತೆ ಬದಿ ವಿಲೇವಾರಿಯಾದ ಕಟ್ಟಡ ಭಗ್ನಾವಶೇಷ ತ್ಯಾಜ್ಯ ಮತ್ತು ಬೃಹತ್‌ ಪ್ರಮಾಣದ ತ್ಯಾಜ್ಯ ಸಾಗಿಸಲು ಅವಶ್ಯಕ ವಾಹನಗಳನ್ನು ಅಳವಡಿಸಿಕೊಂಡಿರುವುದನ್ನು ಸಮಿತಿಯು ಗಮನಿಸಿದೆ.

ಅಂದಾಜನ್ನು ತಯಾರಿಸುವ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ವಾರ್ಷಿಕ ಶೇ.5ರ ದರ ಹೆಚ್ಚಳದ ಅಂದಾಜಿಗೆ ಅವಕಾಶ ಕಲ್ಪಿಸಿದೆ. ಆದರೆ ಟೆಂಡರ್ ದಾಖಲೆಯಲ್ಲಿ ಇಂಧನ ದರಗಳಲ್ಲಿನ ಹೆಚ್ಚಳ ಮತ್ತು ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನ ಪಾವತಿಸುವ ಷರತ್ತು ಅಳವಡಿಸಿದೆ. ಇಂಧನ ವೆಚ್ಚವನ್ನು ಸಗಟು ದರ ಆಧಾರದದಲ್ಲಿ, ಕಾರ್ಮಿಕರ ವೆಚ್ಚವನ್ನು ಕನಿಷ್ಟ ವೇತನ ದರಗಳ ಆಧಾರದ ಮೇಲೆ ಪಾವತಿಸುವ ಷರತ್ತು ಅಳವಡಿಸಿದೆ. ಆದರೆ ಗುತ್ತಿಗೆದಾರರಿಗೆ ಇವೆರಡರಲ್ಲಿ ಯಾವ ಮೊತ್ತವನ್ನು ಪಾವತಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿತ್ತು.

ಎಸ್ಕಲೇಷನ್ ಆಗಿಲ್ಲ

ಇದಕ್ಕೆ ಅನುಪಾಲನೆ ವರದಿ ನೀಡಿದ್ದ ಬಿಎಸ್‌ಡಬ್ಲ್ಯೂಎಂಎಲ್‌, ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ಅಂದಾಜು ತಯಾರಿಸುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ವೆಚ್ಚದ ಏರಿಳಿತಗಳನ್ನು ಪರಿಗಣಿಸಿದೆ, ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚುವರಿ ಮೊತ್ತವನ್ನು ಕೇವಲ ಅಂದಾಜು ಹಾಗೂ ಆಡಳಿತಾತ್ಮಕ ಅನುಮೋದನೆ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಅಲ್ಲದೇ ಶೇ.5ರಷ್ಟು ಹೆಚ್ಚುವರಿ ಮೊತ್ತವು ಗುತ್ತಿಗೆದಾರರಿಗೆ ಪಾವತಿಸಬೇಕಾದ ನಿಗದಿತ ಎಸ್ಕಲೇಷನ್ ಆಗಿಲ್ಲ ಎಂದು ಸಮಜಾಯಿಷಿ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಅದೇ ರೀತಿ ಅಂದಾಜು ಪಟ್ಟಿಯಲ್ಲಿ ಒಳಗೊಂಡಿರುವ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ಷರತ್ತುಗಳು ಪರಸ್ಪರ ವಿಭಿನ್ನ ಉದ್ದೇಶ ಹೊಂದಿದೆ. ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತವು ಕೇವಲ ಅಂದಾಜು ತಯಾರಿಕೆ ಹಾಗೂ ಆಡಳಿತಾತ್ಮಕ ಅನುಮೋದನೆಗಾಗಿ ಒದಗಿಸಿರುವ ಬಜೆಟ್‌ ಮೀಸಲು ಆಗಿದೆ. ಗುತ್ತಿಗೆದಾರರಿಗೆ ಪಾವತಿಯನ್ನು ನಿರ್ಧರಿಸುವ ಅಧಾರವಾಗಿರುವುದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಇಂಧನ ಮತ್ತು ಕಾರ್ಮಿಕ ವೇತನದ ವ್ಯತ್ಯಾಸದ ಮೊತ್ತಗಳನ್ನು ಷರತ್ತುಗಳ ಪ್ರಕಾರ ಮಾತ್ರ ಪರಿಷ್ಕರಿಸಿ ಪಾವತಿಸಲಾಗುತ್ತದೆ ಎಂದು ಸಮಿತಿಗೆ ವಿವರಿಸಿರುವುದು ಗೊತ್ತಾಗಿದೆ.

ಹಾಗೆಯೇ ಅಂದಾಜಿನಲ್ಲಿನ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ವ್ಯವಸ್ಥೆ ನಡುವೆ ಯಾವುದೇ ವೈರುಧ್ಯವಿಲ್ಲ. ಟೆಂಡರ್ ಅಂತಿಮಗೊಂಡು ಕಾರ್ಯಾದೇಶ ನೀಡಿದ ನಂತರ ಷರತ್ತಿನಂತೆ ಇಂಧನ ಮತ್ತು ಕಾರ್ಮಿಕರ ವೇತನ ವ್ಯತ್ಯಾಸದ ದರಗಳನ್ನು ಪಾವತಿ ಅಥವಾ ಕಡಿತಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ದರಗಳು ಹೆಚ್ಚಿದಲ್ಲಿ ಶೇ.5ರವರೆಗೂ ಅವಕಾಶ ಕಲ್ಪಿಸಿರುವುದರಿಂದ ಅದೇ ಮೊತ್ತದಲ್ಲಿ ಪಾವತಿಸಲಾಗುವುದು. ದರಗಳು ಅಸಹಜವಾಗಿ ಏರಿಳಿತವಾದಲ್ಲಿ ಶೇ.5ರಷ್ಟು ಹೆಚ್ಚು ಮೀರಿದ್ದಲ್ಲಿ ಮುಂದಿನ ಹೆಚ್ಚುವರಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದು ಪಾವತಿಸಬೇಕಾಗುತ್ತದೆ ಎಂದು ವಿವರಿಸಿದೆ.

ಬಿಎಸ್‌ಡಬ್ಲ್ಯೂಎಂಎಲ್‌ ತಯಾರಿಸಿರುವ 21 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮೌಲ್ಯಮಾಪನ ಮಾಡಿ ಶೇ. 4.5ರಿಂದ ಶೇ.14ವರೆಗಿನ ಟೆಂಡರ್ ಪ್ರೀಮಿಯಂ ಅನ್ನು ಪರಿಗಣಿಸಲು ಒಪ್ಪಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದೇ ರೀತಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಉಳಿಕೆ ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆಯೂ ಸಹ ಶೇ. 14ರ ಟೆಂಡರ್ ಪ್ರೀಮಿಯಂನ್ನು ಪರಿಗಣಿಸಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಪ್ರಸ್ತಾವಿಸಿದೆ.

ಶೇ. 14 ಟೆಂಡರ್ ಪ್ರೀಮಿಯಂ ಸೂಕ್ತವಲ್ಲ

ಈ ಸಂಬಂಧ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಅವಲೋಕಿಸಿ ತನ್ನ ಅಭಿಪ್ರಾಯ ನೀಡಿದೆ. 2022ರ ಮೇ 10ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ (ಆಇ/128/ವೆಚ್ಚ-12/2021) ಪ್ರಕಾರ ಗರಿಷ್ಠ ಶೇ. 5ರಷ್ಟು ಟೆಂಡರ್ ಪ್ರೀಮಿಯಂನ್ನು ಪರಿಗಣಿಸಲು ಹಾಗೂ ಅದಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ನ್ನು ಅಂಗೀಕರಿಸಬಯಸಿದ್ದಲ್ಲಿ ಸಮರ್ಥನೀಯ ಕಾರಣಗಳನ್ನು ನೀಡಬೇಕು. ಮತ್ತು ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆದು ಅಂಗೀಕರಿಸಬೇಕು ಎಂದು ಹೇಳಿದೆ. ಅಲ್ಲದೇ ಇನ್ನು ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಪ್ಯಾಕೇಜ್‌ಗಳ ಸಂಬಂಧದಲ್ಲಿ ಸಹ ಶೇ. 14 ಟೆಂಡರ್ ಪ್ರೀಮಿಯಂನ್ನು ಪರಿಗಣಿಸುವುದು ಸೂಕ್ತವಾದ ಕ್ರಮವಾಗಿಲ್ಲ ಎಂದು ಸಮಿತಿಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಇದಕ್ಕೆ ಬಿಎಸ್‌ಡಬ್ಲ್ಯೂಎಂಎಲ್‌ ತನ್ನ ಅನುಪಾಲನೆ ವರದಿ ನೀಡಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ 21 ಪ್ಯಾಕೇಜ್‌ಗಳಲ್ಲಿ ಶೇ. 4.5ರಿಂದ ಶೇ.14ರವರೆಗಿನ ಟೆಂಡರ್ ಪ್ರೀಮೀಯಂ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಟೆಂಡೆರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿರುವ ಉಳಿದ ಪ್ಯಾಕೇಜ್‌ಗಳಲ್ಲಿಯೂ ಸಹ ಇದೇ ರೀತಿ ಪರಿಸ್ಥಿತಿ ಉಂಟಾದಲ್ಲಿ ಪ್ರತಿ ಪ್ರಕರಣಕ್ಕೂ ಪ್ರತ್ಯೇಕವಾಗಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆಯುವ ಅವಶ್ಯಕತೆಯಿಂದ ಉಂಟಾಗಬಹುದಾದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ 33 ಪ್ಯಾಕೇಜ್‌ಗಳಿಗೆ ಒಟ್ಟಾಗಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆಯಲು ಪ್ರಸ್ತಾವಿಸಿದೆ ಎಂದು ಸಮರ್ಥಿಸಿಕೊಂಡಿರುವುದು ವರದಿಯಿಂದ ಗೊತ್ತಾಗಿದೆ.

 

 

‘ಆದರೂ ಈ ಪ್ರಸ್ತಾವನೆಯು ಯಾವುದೇ ಉಳಿದ ಪ್ಯಾಕೇಜಿನಲ್ಲಿ ಶೇ.14ರ ಟೆಂಡರ್ ಪ್ರೀಮಿಯಂನ್ನು ಪೂರ್ವಭಾವಿಯಾಗಿ ಅಂಗೀಕರಿಸುವ ಉದ್ದೇಶ ಹೊಂದಿಲ್ಲ.  ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರತಿ ಪ್ಯಾಕೇಜಿನ ಟೆಂಡರ್ ಪ್ರೀಮಿಯಂನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಸುತ್ತೋಲೆ ಪ್ರಕಾರ ಕ್ರಮ ವಹಿಸಲಾಗುವುದು. ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಕಂಡು ಬಂದಲ್ಲಿ ಸುತ್ತೋಲೆಯಲ್ಲಿ ನಿಗದಿಪಡಿಸಿರುವಂತೆ ಸಮರ್ಥನೀಯ ಕಾರಣಗಳನ್ನು ದಾಖಲಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ನಂತರವೇ ಟೆಂಡರ್ ಅಂಗೀಕಾರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,’ ಎಂದು ಹೇಳಿದೆ.

ಅದೇ ರೀತಿ’ ಎಲ್ಲಾ 33 ಪ್ಯಾಕೇಜುಗಳಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಕೋರುವ ಪ್ರಸ್ತಾವನೆಯು ಆಡಳಿತಾತ್ಮಕ ಅನುಕೂಲತೆ ಮತ್ತು ಸಮಯೋಚಿತ ಅನುಷ್ಠಾನ ಉದ್ದೇಶಕ್ಕಾಗಿ ಕೈಗೊಂಡ ಮುಂಜಾಗ್ರತಾ ಕ್ರಮವಾಗಿದೆ. ಯಾವುದೇ ಪ್ಯಾಕೇಜಿನಲ್ಲಿ ಶೇ.14ರ ಟೆಂಡರ್ ಪ್ರೀಮಿಯಂನ್ನು ಪೂರ್ವನಿರ್ಧರಿಸಿ ಅಂಗೀಕರಿಸಿರುವುದಾಗಿ ಪರಿಗಣಿಸಬಾರದು,’ ಎಂದು ವಿವರಿಸಿದೆ.

 

 

ಏರಿಯಾ ವೇಯ್ಟೇಜ್‌ ಅಳವಡಿಕೆ

ಹಾಲಿ ಇರುವ ಗುತ್ತಿಗೆಗಳಲ್ಲಿನ ವೆಚ್ಚಗಳು ಮತ್ತು ಹೊಸ ಟೆಂಡರ್‍‌ಗಳು ಅನುಷ್ಠಾನಗೊಂಡ ನಂತರ ತಗಲುವ ವೆಚ್ಚಗಳನ್ನು ತುಲನೆ ಮಾಡಿ ಸರ್ಕಾರಕ್ಕೆ ಬಿಎಸ್‌ಡಬ್ಲ್ಯೂಎಂಎಲ್‌ ಸಲ್ಲಿಸಿರುವ ವರದಿಯ ಕುರಿತು ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಆಕ್ಷೇಪಿಸಿದೆ. ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ ಏರಿಯಾ ವೇಯ್ಟೇಜ್‌ ಅಳವಡಿಸಿ ಟೆಂಡರ್ ದರಗಳನ್ನು ಸಮರ್ಥಿಸಿಕೊಂಡಿದೆ. ಆದರೆ ಮೂಲತಃ ಅಂದಾಜುಗಳನ್ನು ಬೆಂಗಳೂರು ಮಹಾನಗರಕ್ಕೆ ಸೀಮಿತಗೊಳಿಸಿ ತಯಾರಿಸಿರುವುದರಿಂದ ಮತ್ತೊಮ್ಮೆ ಏರಿಯಾ ವೇಯ್ಟೇಜ್‌ ಅಡಿ ಪರಿಗಣಿಸುವುದು ಸಮರ್ಥನೀಯವಲ್ಲ ಎಂದು ಸಮಿತಿಯು ತಕರಾರು ತೆಗೆದಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಸಮಿತಿಯು ನೀಡಿರುವ ಅಭಿಪ್ರಾಯವನ್ನು ಬಿಎಸ್‌ಡಬ್ಲ್ಯೂಎಂಎಲ್‌ ತಳ್ಳಿ ಹಾಕಿದೆ. ಉದ್ದೇಶಿತ ಪ್ಯಾಕೇಜ್‌ಗಳಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸುವಾಗ ದರ ವಿಶ್ಲೇಷಣೆಯನ್ನು ಲೋಕೋಪಯೋಗಿ ಇಲಾಖೆ 2023-24ನೇ ಸಾಲಿನ ದರಪಟ್ಟಿಯಂತೆಯೇ ಮೂಲ ದರಗಳನ್ನು ಪರಿಗಣಿಸಿದೆ. ಈ ದರಪಟ್ಟಿಯ (ಸಂಚಿಕೆ-1 ಸೆಕ್ಷನ್‌ vii ನಿಗದಿತ ನಿರ್ದಿಷ್ಟ ಪ್ರದೇಶದಲ್ಲಿ ಲೋಡಿಂಗ್‌ , ಪುಟ ಸಂಖ್ಯೆ ಎ 53, ಕ್ರಮ ಸಂಖ್ಯೆ 1) ಪ್ರಕಾರ ಮೊದಲ ಹಂತದ ನಗರ- ಬಿಬಿಎಂಪಿ ಮಿತಿಯೊಳಗೆ ಹೆಚ್ಚುವರಿ ಲೋಡಿಂಗ್‌ ಶುಲ್ಕ ಶೇ. 10ರಷ್ಟು ಏರಿಯಾ ವೇಯ್ಟೇಜ್‌ ಪರಿಗಣಿಸಬೇಕು ಎಂದು ನಮೂದಾಗಿದೆ.

 

 

 

 

 

 

 

ಈ ಹಿಂದೆ ಸಲ್ಲಿಸಿದ್ದ ಸಮರ್ಥನೆಯಲ್ಲಿ ಅಂದಾಜು ಪಟ್ಟಿಗೆ ದರ ವಿಶ್ಲೇಷಣೆ ಮಾಡುವಾಗ ಮೂಲ ದರಗಳನ್ನು ಪರಿಗಣಿಸಿದೆ. ಕಂಡಿಕೆ 9.15ರಲ್ಲಿ ಸಲ್ಲಿಸಿರುವ ಸಮರ್ಥನೆ/ಅಭಿಪ್ರಾಯದಲ್ಲಿ ಕೂಡ ವಿಶ್ಲೇಷಣೆಯಲ್ಲಿ ಏರಿಯಾ ವೇಯ್ಟೇಜ್‌ ಪರಿಗಣಿಸಿಲ್ಲ. ಆದ್ದರಿಂದ ಮತ್ತೊಮ್ಮೆ ಏರಿಯಾ ವೇಯ್ಟೇಜ್‌ ಅಡಿ ಪರಿಗಣಿಸುವ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.

 

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

 

ಇದೇ 21 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದಿಸಿದ್ದ ಸಚಿವ ಸಂಪುಟವು ಸಾರ್ವಜನಿಕ ಹಿತಾಸಕ್ತಿ, ಘನತೆಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದೊಂದು 4,791.95 ಕೋಟಿ ರು ಮೊತ್ತದ ಹಗರಣವಿದು ಎಂಬ ಮಾತು ಕೇಳಿ ಬಂದಿತ್ತು.

 

ಘನ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ ; ಅಂದಾಜು ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಮರ್ಥನೆ ಮಾಡಿಕೊಂಡ ಬಿಎಸ್‌ಡಬ್ಲ್ಯೂಎಂಎಲ್, ಅಂಜುಂ ಪರ್ವೇಜ್‌ ಸಮಿತಿ ವರದಿಯಲ್ಲೇನಿದೆ?

 

ಈ ಕುರಿತು ದಿ ಫೈಲ್‌ ಸಚಿವ ಸಂಪುಟ ರಹಸ್ಯ ಹಾಳೆಗಳ ಸಮೇತ ವರದಿ ಪ್ರಕಟಿಸಿತ್ತು.

Hot this week

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...
Please Scan to make Your Contribution

Topics

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

Related Articles

Popular Categories

error: Content is protected !!