ಪರಿ‍ಶಿಷ್ಟ ಜಾತಿ ಆಯೋಗದ ಕಾರ್ಯದರ್ಶಿಗೆ ಸಿಗದ ರಾಜ್ಯ ಶಿಷ್ಟಾಚಾರ; ಕರ್ತವ್ಯಲೋಪ ಎಸಗಿತೇ ರಾಜ್ಯ ಸರ್ಕಾರ?

ಬೆಂಗಳೂರು; ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಯು ಬೆಂಗಳೂರಿನಲ್ಲಿರುವ ರಾಜ್ಯ ಕಚೇರಿ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.

 

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಯು ಕಚೇರಿ ಪರಿಶೀಲನೆ ಮತ್ತು ಕೆಲವು ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಬೆಂಗಳೂರಿನಲ್ಲಿ ಕೈಗೊಂಡಿದ್ದ ಪ್ರವಾಸದ ವೇಳೆಯಲ್ಲಿ ಅವರನ್ನು ರಾಜ್ಯ ಅತಿಥಿ ಎಂದು ಪರಿಗಣಿಸದೇ ಬೇಜವಾಬ್ದಾರಿಯಿಂದ ವರ್ತಿಸಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ.

 

ಹಾಗೆಯೇ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಯನ್ನು ಡಿಪಿಎಆರ್ (ಪ್ರೋಟೋಕಾಲ್) ಕರ್ನಾಟಕ ರಾಜ್ಯ ಅತಿಥಿ ಎಂದು ಘೋಷಿಸಿರಲಿಲ್ಲ.

 

ಈ ಸಂಬಂಧ ಆಯೋಗದ ಬೆಂಗಳೂರು ಕಚೇರಿಯ ನಿರ್ದೇಶಕ ಜಗನ್ನಾಥ್‌ ಅವರು, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್ ಅವರಿಗೆ 2025ರ ಮೇ 2ರಂದು ಪತ್ರ ಬರೆದಿದ್ದಾರೆ. ಈ ಪತ್ರವನ್ನಾಧರಿಸಿ ಮೇಜರ್‍‌ ಮಣಿವಣ್ಣನ್‌ ಅವರು ಮೀಸಲಾತಿ ಜಾರಿ ಕೋಶದ ಹೆಚ್ಚುವರಿ ನಿರ್ದೇಶಕರಿಗೆ ಸ್ಪಷ್ಟೀಕರಣ ನೀಡಬೇಕು ಎಂದು 2025ರ ಮೇ 3ರಂದು ( ಸಂಖ್ಯೆ; ಸಕಇ/232/ಸಪ್ರಕಾ/2025) ನಿರ್ದೇಶಿಸಿದ್ದಾರೆ.

 

ಈ ಎರಡೂ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಯು 2025ರ 29 ಮತ್ತು 30ರಂದು ಬೆಂಗಳೂರು ಪ್ರವಾಸದಲ್ಲಿದ್ದರು. ಈ ಎರಡೂ ದಿನಗಳ ಕಾಲ ಅವರಿಗೆ ಶಿಷ್ಟಾಚಾರದ ಪ್ರಕಾರ ಸಾರಿಗೆ, ವಸತಿ, ಭದ್ರತೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಒದಗಿಸಲು ನಿರ್ದೇಶಿಸಿತ್ತು. ಶಿಷ್ಟಾಚಾರದ ಪ್ರಕಾರ ಈ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕಿದ್ದ ಶಿಷ್ಟಾಚಾರದ ಅಧಿಕಾರಿಗಳು ಒದಗಿಸಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.

 

ಅಷ್ಟೇ ಅಲ್ಲದೇ ಶಿಷ್ಟಾಚಾರಕ್ಕೆ ನಿಯೋಜಿಸಿದ್ದ ಅಧಿಕಾರಿಯು ‘ ತನ್ನ ಕರ್ತವ್ಯ ಸಮಯ ಮುಗಿದಿದೆ’ ಎಂದು ಹೇಳಿದ್ದರು. ಅಲ್ಲದೇ ಎನ್‌ಸಿಎಸ್‌ಸಿ ಕಾರ್ಯದರ್ಶಿ ವಿಮಾನ ಹತ್ತುವ ಮೊದಲೇ ಅವರು ಅಲ್ಲಿಂದ ತೆರಳಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಎನ್‌ಸಿಎಸ್‌ಸಿ ಪತ್ರದಲ್ಲೇನಿದೆ?

 

ಅಯೋಗದ ಕಾರ್ಯದರ್ಶಿ ಭೇಟಿಯ ಸಮಯದಲ್ಲಿ, ಅವರನ್ನು ಡಿಪಿಎಆರ್ (ಪ್ರೋಟೋಕಾಲ್) ಕರ್ನಾಟಕ ರಾಜ್ಯ ಅತಿಥಿ ಎಂದು ಘೋಷಿಸದಿರುವುದು ಗಮನಕ್ಕೆ ಬಂದಿತು. ಕುಮಾರ ಕೃಪಾ ಅತಿಥಿ ಗೃಹದಲ್ಲಿ ಬೋರ್ಡಿಂಗ್ ಮತ್ತು ವಸತಿ ವೆಚ್ಚಗಳನ್ನು ಭರಿಸುವಂತೆ ಡಿಪಿಎರ್‍‌ಗೆ ಸೂಚಿಸಿತ್ತು.

 

ಕರ್ನಾಟಕ ಸರ್ಕಾರದ ಶಿಷ್ಟಾಚಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಅತಿಥಿ ಸೌಲಭ್ಯಗಳನ್ನು ಸಾಮಾನ್ಯವಾಗಿ ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಿಗೂ ನೀಡಲಾಗುತ್ತದೆ. ಆದರೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಗೆ ಈ ಸವಲತ್ತುಗಳನ್ನು ನಿರಾಕರಿಸಲಾಗಿದೆ. ಹೀಗಾಗಿ ಅವರ ಭೇಟಿ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಅನಾನುಕೂಲವುಂಟಾಗಿದೆ.

 

 

2025ರ ಏಪ್ರಿಲ್‌ 30ರಂದು ಬೆಂಗಳೂರಿನಿಂದ ದೆಹಲಿಗೆ ಹಿಂದಿರುಗುವ ಪ್ರಯಾಣದ ಸಮಯದಲ್ಲಿ, ಅವರ ಪ್ರವೇಶ ಮತ್ತು ಬೋರ್ಡಿಂಗ್‌ಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣದಲ್ಲಿದ್ದ ಶಿಷ್ಟಾಚಾರಕ್ಕೆ ನಿಯೋಜಿತವಾಗಿದ್ದ ಅಧಿಕಾರಿಯು ತಮ್ಮ ಕರ್ತವ್ಯ ಸಮಯ ಮುಗಿದಿದೆ ಎಂದು ಹೇಳಿದ್ದರು. ಅಲ್ಲದೇ ಎನ್‌ಸಿಎಸ್‌ಸಿ ಕಾರ್ಯದರ್ಶಿ ವಿಮಾನ ಹತ್ತುವ ಮೊದಲೇ ಅವರು ನಿರ್ಗಮಿಸಿದ್ದರು ಮತ್ತು ಇದಕ್ಕೆ ಬದಲಿ ವ್ಯಕ್ತಿಯನ್ನೂ ಸಹ ನಿಯೋಜಿಸಿರಲಿಲ್ಲ ಎಂದು ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಈ ಪತ್ರವನ್ನು ಗಂಭೀರವಾಗಿ ಪರಿಶೀಲಿಸಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಮೀಸಲಾತಿ ಜಾರಿ ಕೋಶದ ಹೆಚ್ಚುವರಿ ನಿರ್ದೇಶಕರಿಂದ ಸ್ಪಷ್ಟೀಕರಣ ಬಯಸಿರುವುದು ತಿಳಿದು ಬಂದಿದೆ.

 

ಮಣಿವಣ್ಣನ್‌ ಅವರ ಟಿಪ್ಪಣಿಯಲ್ಲೇನಿದೆ?

 

ರಾಷ್ಟ್ರೀಯ ಪರಿ‍ಶಿಷ್ಟ ಜಾತಿಗಳ ಆಯೋಗದ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯದ ಕಚೇರಿಯನ್ನು ಪರಿಶೀಲಿಸಲು ಮತ್ತು ಅಧಿಕಾರಿಗಳೊಂದಿಗೆ ಕೆಲವು ಸಮಸ್ಯೆಗಳ ಕುರಿತು ಎರಡು ದಿನಗಳ ಕಾಲ ಪ್ರವಾಸದಲ್ಲಿದ್ದರು. ಇವರಿಗೆ ‍ಶಿಷ್ಟಾಚಾರದ ಪ್ರಕಾರ ಸಾರಿಗೆ, ವಸತಿ, ಭದ್ರತೆ ಈ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ನಿರ್ದೇಶಿಸಿತ್ತು.

 

ಆದರೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ರಾಷ್ಟ್ರೀಯ ಆಯೋಗದ ಕಾರ್ಯದರ್ಶಿಯನ್ನು ರಾಜ್ಯ ಅತಿಥಿಯೆಂದು ಪರಿಗಣಿಸಿಲ್ಲ. ಹಾಗೂ ಇವರಿಗೆ ನಿಯಮಾನುಸಾರ ನೀಡಬೇಕಿದ್ದ ಸವಲತ್ತುಗಳನ್ನು ಶಿಷ್ಟಾಚಾರದಂತೆ ನೀಡಿಲ್ಲ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಅಲ್ಲದೇ ‘2025ರ ಏಪ್ರಿಲ್‌ 30ರಂದು ಆಯೋಗದ ಕಾರ್ಯದರ್ಶಿಯು ಬೆಂಗಳೂರಿನಿಂದ ದೆಹಲಿಗೆ ಹಿಂದಿರುಗುವಾಗ ವಿಮಾನ ನಿಲ್ದಾಣದಲ್ಲಿ ಎಂಟ್ರಿ ಮತ್ತು ಬೋರ್ಡಿಂಗ್‌ ಆಗುವ ಮುಂಚಿತವಾಗಿಯೇ ತಾವು ನಿಯೋಜಿಸಿದ್ದ ಶಿಷ್ಟಾಚಾರದ ಅಧಿಕಾರಿಯು ನನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ಕಾರ್ಯದರ್ಶಿಯವರಿಗೆ ತಿಳಿಸಿ ಹೊರಡಿರುತ್ತಾರೆ,’ ಎಂದು ಹೇಳಿದ್ದಾರೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಶಿಷ್ಟಾಚಾರ ಉಲ್ಲಂಘನೆ ಬಗ್ಗೆ 48 ಗಂಟೆಯೊಳಗಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಮೀಸಲಾತಿ ಜಾರಿ ಕೋಶದ ಹೆಚ್ಚುವರಿ ನಿರ್ದೇಶಕರಿಗೆ ಸೂಚಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts