ಬೆಂಗಳೂರು; ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೈಗಾರಿಕೆ ಸ್ಥಾಪನೆಗಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನೂ ಪಡೆಯದೇ ಕಿರ್ಲೋಸ್ಕರ್ ಕಂಪನಿಯು, ವಸತಿ ಉದ್ದೇಶಕ್ಕೆ ಬದಲಾಯಿಸಿರುವುದು ಇದೀಗ ಬಹಿರಂಗವಾಗಿದೆ.
ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನಿನ ಉದ್ದೇಶವನ್ನೇ ಬದಲಾಯಿಸಿದೆ ಎಂದು ಹಲವು ಆಪಾದನೆಗಳು ಕೇಳಿ ಬಂದಿದ್ದವು. ಇದೀಗ ಈ ಪ್ರಕರಣದಲ್ಲಿ ಕಂಪನಿ ಮತ್ತು ಪ್ರಾಧಿಕಾರವು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಪ್ರಾಧಿಕಾರದ ಆಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಈ ಜಮೀನು, ಸರ್ಕಾರವು ವಾಪಸ್ ಪಡೆದುಕೊಳ್ಳುವಲ್ಲಿ ಮೀನಮೇಷ ಎಣಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಾಧಿಕಾರದ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನನ್ನು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ಪರಭಾರೆ ಮಾಡಿರುವುದು, ಮೂಲ ಉದ್ದೇಶವನ್ನೇ ಮಣ್ಣು ಪಾಲು ಮಾಡಿದಂತಾಗಿದೆ.
ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಸರ್ವೆ ನಂಬರ್ 88 ಬಿ, 88/ಪಿ/1ರಲ್ಲಿನ 89 ಎಕರೆ 23 ಗುಂಟೆ ಪೈಕಿ 31 ಎಕರೆ 24 ಗುಂಟೆ ಪ್ರದೇಶವನ್ನು ಕೈಗಾರಿಕೆ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗಕ್ಕೆ ಬದಲಾವಣೆ ಮಾಡಿತ್ತು. ಈ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು.
ಈ ಬೆಳವಣಿಗೆ ಮಧ್ಯೆಯೇ ಸರ್ವೆ ನಂಬರ್ 88 ಬ ರಲ್ಲಿನ 20 ಎಕರೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇದೀಗ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವರದಿ ನೀಡಲು ನಿರ್ದೇಶಿಸಿದ್ದಾರೆ. ಈ ಸಂಬಂಧ 2025ರ ಮಾರ್ಚ್ 19ರಂದು ಧಾರವಾಡ ಜಿಲ್ಲಾಧಿಕಾರಿಗೆ ಪತ್ರವನ್ನು (ಕಂಇ 56 ಎಲ್ಜಿಡಿ 2022) ಬರೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2024ರ ನವೆಂಬರ್ 20ರಂದು ಬರೆದಿರುವ ಪತ್ರ ಮತ್ತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬರೆದಿರುವ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಿರ್ಲೋಸ್ಕರ್ ಇಲೆಕ್ಟ್ರಿಕಲ್ ಕಂಪನಿಯು ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರು ಮಾಡಿಸಿಕೊಂಡಿದ್ದ ಸರ್ಕಾರಿ ಜಮೀನನ್ನು ಕೈಗಾರಿಕೆ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡಿಸಿಕೊಂಡಿತ್ತು. ಮಂಜೂರಾತಿಯ ಷರತ್ತಗಳನ್ನು ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಈ ಕಂಪನಿಯು ಮತ್ತೊಂದು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರಭಾರೆ ಮಾಡಿತ್ತು. ಈ ಪ್ರಕರಣದ ಕುರಿತು ನಗರಾಭಿವೃದ್ಧಿ ಇಲಾಖೆಯು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ 2024ರ ಅಕ್ಟೋಬರ್ 15ರಂದು ವರದಿ ಕೇಳಿತ್ತು.
ಈ ಸಂಬಂಧ 2024ರ ನವೆಂಬರ್ 20ರಂದು ಪ್ರಾಧಿಕಾರವು ವರದಿ ನೀಡಿದೆ.
‘ಸರ್ಕಾರದಿಂದ ಕೈಗಾರಿಕೆ ಉದ್ಧೇಶಕ್ಕಾಗಿ ಮಂಜೂರಾಗಿರುವ ಜಮೀನಿನ ಉದ್ದೇಶವನ್ನು ಬದಲಾಯಿಸಲು ಪ್ರಸ್ತಾಪಿತ ಜಮೀನನ್ನು ಮಂಜೂರು ಮಾಡಿದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆ ಯಾವುದೇ ದಾಖಲಾತಿಗಳನ್ನೂ ಸಲ್ಲಿಸಿರುವುದಿಲ್ಲ,’ ಎಂದು ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ವರದಿ ಸಲ್ಲಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಜುಲೈ 29ರಂದೇ ಧಾರವಾಡ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಈ ವರದಿಯ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಜಮೀನು ಮಂಜೂರಾತಿ ಷರತ್ತುಗಳು ಉಲ್ಲಂಘನೆ ಆಗಿದೆ. ಹೀಗಾಗಿ ಈ ಜಮೀನು ಸರ್ಕಾರಕ್ಕೆ ನಿಹಿತವಾಗುತ್ತದೆ ಎಂದು ಮನವರಿಕೆಯಾದಲ್ಲಿ, ನಿರ್ಣಯಿಸಿದ್ದಲ್ಲಿ ಈ ಜಮೀನನ್ನು ಸರ್ಕಾರದ ಉದ್ದೇಶಗಳಿಗಾಗಿ ಕಾಯ್ದಿರಿಸಬಹುದಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿಯೇ ಸೂಕ್ತ ಆದೇಶ ಹೊರಡಿಸುವುದು ಅವಶ್ಯವಾಗಿದೆ,’ ಎಂದು ಧಾರವಾಡ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಶಂಕರಪಾಟೀಲ ಮುನೇನಕೊಪ್ಪ ಅವರೇ ನೇರವಾಗಿ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯು ಇದೀಗ ಕಾನೂನು ಇಲಾಖೆಯ ಅಭಿಪ್ರಾಯ ಕೋರಿ ಪತ್ರ (RD/56/LDG/2022 Computer number 821088) ಬರೆದಿದ್ದರು.
ಹುಬ್ಬಳ್ಳಿ ತಾಲೂಕು ರಾಯನಾಳ ಗ್ರಾಮದ ಸರ್ವೆ ನಂಬರ್ 88 ಬ ದಲ್ಲಿ 80 ಎಕರೆ 27 ಗುಂಟೆ, ಸರ್ವೆ ನಂಬರ್ 89ರಲ್ಲಿ 8 ಎಕರೆ 36 ಗುಂಟೆ ಸರ್ಕಾರಿ ಜಮೀನು ಕಿರ್ಲೋಸ್ಕರ್ ಎಲೆಕ್ಟ್ರಿಕಲ್ ಕಂಪನಿಗೆ ಮಂಜೂರಾಗಿತ್ತು. ಈ ಜಮೀನಿನ ಪೈಕಿ 29 ಎಕರೆ 20 ಗುಂಟೆ ಜಮೀನನ್ನು ಮಾರ್ವೆಲ್ ಪ್ರಾಪರ್ಟಿಸ್ ಮತ್ತು ಆಸ್ಮಾಕಂ ಇನ್ ಫ್ರಾ ಪ್ರೊಜೆಕ್ಟ್ ಪ್ರೈವೈಟ್ ಲಿಮಿಟೆಡ್ಗೆ ಷರತ್ತು ಉಲ್ಲಂಘಿಸಿ ಮಾರಾಟ ಮಾಡಲಾಗಿದೆ ಎಂದು ಶಂಕರ ಪಾಟೀಲ್ ಮುನೇನಕೊಪ್ಪ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
‘ಕಂಪನಿಯವರು ಷರತ್ತುಗಳನ್ನು ಉಲ್ಲಂಘಿಸಿ ಪರಭಾರೆ ಮಾಡಿದ್ದು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸಿರುತ್ತದೆ. ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು,’ ಎಂದು ದೂರಿನಲ್ಲಿ ವಿವರಿಸಿದ್ದರು.
ಆದರೆ ಮಾರ್ವೇಲ್ ಪ್ರಾಪರ್ಟಿಸ್ ಮತ್ತು ಆಸ್ಮಾಕಂ ಇನ್ ಫ್ರಾ ಪ್ರೊಜೆಕ್ಟ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ತಮ್ಮ ಹೆಸರಿಗೆ ಪರಭಾರೆ ಮಾಡಿರುವ ಜಮೀನು ಸಂಬಂಧ ಯಾವುದೇ ಷರತ್ತುಗಳು ಉಲ್ಲಂಘನೆಯಾಗಿಲ್ಲ ಎಂದು ಪ್ರತಿಪಾದಿಸಿತ್ತು.
ಕಂಪನಿಯ ಈ ವಾದವನ್ನು ಧಾರವಾಡ ಜಿಲ್ಲಾಧಿಕಾರಿಗಳು ತಳ್ಳಿ ಹಾಕಿದ್ದರು. ‘ಮಾರ್ವೇಲ್ ಪ್ರಾಪರ್ಟಿಸ್ ಮತ್ತು ಅಸ್ಮಾಕಮ್ ಇನ್ ಫ್ರಾ ಪ್ರೊಜೆಕ್ಟರ್ ಪ್ರೈ ಲಿ., ಹುಬ್ಬಳ್ಳಿ ತಾಲೂಕು ರಾಯನಾಳ ಗ್ರಾಮದ ಸರ್ವೆ ನಂಬರ್ 88/ಬಿರಲ್ಲಿನ 80 ಎಕರೆ 27 ಗುಂಟೆ ಪೈಕಿ 20 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಆದೇಶ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿನ ದಾಖಲೆಗಳನ್ನು ಪರಿಶೀಲನೆ ಮಾಡುವ ಕಾಲಕ್ಕೆ ಸರ್ಕಾರದ ಆದೇಶಗಳಲ್ಲಿರುವಂತೆ ಭೂ ಪರಿಮಿತಿ ಕಾಯ್ದೆ ಅನ್ವಯ ವಿಧಿಸಿರುವ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿದೆ,’ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದರು.
ಶಂಕರ ಪಾಟೀಲ ಮುನೇಕೊಪ್ಪ ಅವರು ಮಾಡಿದ್ದ ಆರೋಪ ಮತ್ತು ಕಂಪನಿಯ ಸಮರ್ಥನೆಯನ್ನು ಪರಿಶೀಲಿಸಿರುವ ಕಂದಾಯ ಇಲಾಖೆಯು ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಟಿಪ್ಪಣಿಯಲ್ಲಿ ದಾಖಲಿಸಿತ್ತು.
ಪ್ರಕರಣದ ವಿವರ
ಕಿರ್ಲೋಸ್ಕರ್ ಎಲೆಕ್ಟ್ರಿಕಲ್ ಕಂಪನಿ ಲಿಮಿಟಿಡ್ ಯುನಿಟ್ -2 ಗೆ ಹುಬ್ಬಳ್ಳಿ ತಾಲೂಕು ರಾಯನಾಳ ಗ್ರಾಮದ ಸರ್ವೆ ನಂಬರ್ 88/ಬ ರಲ್ಲಿ 81 ಎಕರೆ 12 ಗುಂಟೆ ಹಾಗೂ ಸರ್ವೆ ನಂಬರ್ 89ರಲ್ಲಿ 8 ಎಕರೆ 26 ಗುಂಟೆ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ 1965ರಲ್ಲಿ ಸರ್ಕಾರವು ಮಂಜೂರು ಮಾಡಿತ್ತು. ಮೂಲತಃ ಈ ಜಮೀನು ಸರ್ಕಾರಿ ಬಿ ಖರಾಬು ಆಗಿತ್ತು. ಅಲ್ಲದೇ 11 ಜನರಿಗೆ ಕೃಷಿಗಾಗಿ ಮಂಜೂರು ಮಾಡಿದ್ದ ಜಮೀನಾಗಿತ್ತು.
ಹುಬ್ಬಳ್ಳಿ ಧಾರವಾಡದ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ 11 ಜನ ರೈತರಿಂದ ಹಕ್ಕು ಬಿಟ್ಟ ಪತ್ರ ಪಡೆದು ಅವರಿಗೆ ಬೇರೆಡೆಗೆ ಜಮೀನು ಮಂಜೂರು ಮಾಡಿ, ಕಿರ್ಲೋಸ್ಕರ್ ಗೆ ಕೈಗಾರಿಕೆ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಿತ್ತು.
‘ಮಂಜೂರಾದ ಜಮೀನಿನ ಆದೇಶದಲ್ಲಿ The Grantee Should Not alienate the land for a periorof 15 years fromd the date of this order ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು 15 ವರ್ಷಗಳ ನಂತರ ಪ್ರತಿ ಎಕರೆಗೆ 2,000 ರು.ನಂತೆ ಭರಣ ಮಾಡಿದ್ದರಿಂದ ಪರಭಾರೆ ಮಾಡಿದ್ದರಿಂದ ಪರಭಾರೆ ಮಾಡಬಾರದೆಂಬ ಷರತ್ತನ್ನು ಕಡಿಮೆ ಮಾಡಲು ಕಂಪನಿಯು ಕೋರಿಕೆ ಸಲ್ಲಿಸಿತ್ತು,’ ಎಂಬುದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದರು.
ಷರತ್ತನ್ನು ಕಡಿಮೆ ಮಾಡಲು ಸಲ್ಲಿಸಿದ್ದ ಕಂಪನಿಯ ಕೋರಿಕೆಯನ್ನು ಪರಿಶೀಲಿಸಿದ್ದ ಜಿಲ್ಲಾಡಳಿತವು ಬಿನ್ ಶೇತ್ಕಿ (02-07-1965) ಆದೇಶ ಮಾಡಿತ್ತು. ಆದರೆ ಕಂಪನಿಯು ಅವಧಿ ಮುಗಿದ ನಂತರವೂ ಭೂ ಮೌಲ್ಯವನ್ನು ಪಾವತಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
1983 ಮತ್ತು 1988ರಲ್ಲಿ ನಗರ ಭೂ ಪರಿಮಿತಿ ಕಾಯ್ದೆ ಜಾರಿಗೆ ಬಂದಿದ್ದರಿಂದ 1982ರ ಡಿಸೆಂಬರ್ 9ರ ಆದೇಶ ಹಾಗೂ 1988ರ ಮಾರ್ಚ್ 2ರಂದು ಆದೇಶದ ಅನ್ವಯ ಕೈಗಾರಿಕೆ ಉದ್ಧೇಶಕ್ಕಾಗಿ ಮುಂದುವರೆಸಲು ವಿನಾಯಿತಿ ನೀಡಲಾಗಿತ್ತು. ನಂತರ ಕಂಪನಿಯ ಕೋರಿಕೆ ಮೇರೆಗೆ 2015ರ ಅಕ್ಟೋಬರ್ 28ರಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು 80 ಎಕರೆ 27 ಗುಂಟೆ ಜಮೀನಿನ ಪೈಕಿ 20 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು.
ಕಿರ್ಲೋಸ್ಕರ್ನಿಂದ 29 ಎಕರೆ ಸರ್ಕಾರಿ ಜಮೀನು ಪರಭಾರೆ; ಸರ್ಕಾರದ ವಶಕ್ಕೆ ಪಡೆಯಲು ಮೀನಮೇಷ
ಇದಾದ ನಂತರ ಜಿಲ್ಲಾಧಿಕಾರಿಗಳು 2017ರ ಜೂನ್ 8ರಂದು ಮತ್ತೊಂದು ಪತ್ರವನ್ನು ಬರೆದಿದ್ದರು.ಕಂಪನಿಯ ಕೋರಿಕೆ ಮೇರೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದ್ದರು. ಅದರಂತೆ 2017ರ ಆಗಸ್ಟ್ 3 ಮತ್ತು 2017ರ ಸೆ.20ರಂದು ಸರ್ಕಾರವು ಕಂಪನಿಯ ಷರತ್ತು ಉಲ್ಲಂಘನೆಯಾಗಿರುವ ಬಗ್ಗೆ ನೋಟೀಸ್ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.
ಸರ್ಕಾರದ ಈ ನಿರ್ದೇಶನವನ್ನು ಪ್ರಶ್ನಿಸಿದ್ದ ಕಿರ್ಲೋಸ್ಕರ್ ಕಂಪನಿಯು ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಅರ್ಜಿ (ಡಬ್ಲ್ಯೂಪಿ ನಂ 106705/2019) ದಾಖಲಿಸಿತ್ತು. ಕಿರ್ಲೋಸ್ಕರ್ ಕಂಪನಿಯು ದಾಖಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಅರ್ಜಿದಾರರು ದಾಖಲಿಸಿದ ಪ್ರಕರಣವು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯುವುದಕ್ಕಾಗಿ ಮಾತ್ರ ಇದೆ. ಈ ಜಮೀನನ್ನು ಮಾರಾಟ ಮಾಡಲು ಅನುಮತಿ ನೀಡಲು ಕೋರುವುದಕ್ಕಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅಲ್ಲದೇ ಜಮೀನಿನ ಮಾರಾಟಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ನಿರ್ದೇಶನ ನೀಡಿತ್ತು.
ಅದರಂತೆ ಕಂಪನಿಯು 2016ರ ಜೂನ್ 15ರಂದು ವಸತಿ ವಿನ್ಯಾಸ ಅನುಮೋದನೆಗಾಗಿ ಪ್ರಾಧಿಕಾರದ ಆಯುಕ್ತರಿಗೆ ವಿನಂತಿಸಿತ್ತು. ಜಿಲ್ಲಾಧಿಕಾರಿಗಳಿಂದ ವಸತಿ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಆದೇಶದ ಉದ್ದೇಶ ಬದಲಾವಣೆ ಆದೇಶದ ಪ್ರತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹಿಂಬರಹ ನೀಡಿದ್ದರು. ಹೀಗಾಗಿ ಕಂಪನಿಯು ಹುಬ್ಬಳ್ಳಿ ಧಾರವಾಡ ಪ್ರಾಧಿಕಾರದ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಪಿಟೀಷನ್ ಅರ್ಜಿ ದಾಖಲಿಸಿತ್ತು.
210 ಎಕರೆ ಸರ್ಕಾರಿ ಜಮೀನು ಮಾರಾಟ, 1,000 ಕೋಟಿ ನಷ್ಟ; ವರದಿ ಸಲ್ಲಿಸಲು ನಿರ್ದೇಶನ
ಈ ವೇಳೆ ‘ ಪ್ರಸ್ತಾಪಿತ ಜಮೀನನ್ನು ಹುಬ್ಬಳ್ಳಿ ಧಾರವಾಡ ಜನತೆಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ನೀಡಲಾಗಿದೆಯೇ ವಿನಃ ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ನೀಡಿಲ್ಲ,’ ಎಂದು ಸರ್ಕಾರಿ ವಕೀಲರು ಹೈಕೋರ್ಟ್ನಲ್ಲಿ ವಾದಿಸಿದ್ದರು. ಹೀಗಾಗಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿಯೇ ಸೂಕ್ತ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು.
ಹಾಗೆಯೇ ಮಂಜೂರಾತಿ ಆದೇಶದಲ್ಲಿನ ಷರತ್ತುಗಳು ಮತ್ತು ವಿನಾಯಿತಿ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿ ಜಮೀನನ್ನು ಬಡಾವಣೆಗಳನ್ನಾಗಿ ಮಾಡಿ ವಸತಿ ಉದ್ದೇಶಕ್ಕೆ ಉಪಯೋಗಿಸಲು ಭೂ ಉಪಯೋಗ ಬದಲಾವಣೆ ಮಾಡಿಕೊಂಡಿದೆ. ಹಾಗೂ ಈಗಾಗಲೇ 29 ಎಕರೆ 20 ಗುಂಟೆ ಜಮೀನನ್ನು ಮಾರಾಟ ಮಾಡಿರುವದುರಿಂದ ಬಾಕಿ ಉಳಿದಿರುವ ಜಮೀನನ್ನೂ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸರ್ವೆ ನಂಬರ್ 88 / ಬ ಮತ್ತು 89ರಲ್ಲಿನ ಜಮೀನುಗಳನ್ನು ಸರ್ಕಾರಕ್ಕೆ ಕೂಡಲೇ ವಶಕ್ಕೆ ಪಡೆಯಬೇಕು ಎಂದು ಪ್ರಾದೇಶಿಕ ಆಯುಕ್ತರು ಅಭಿಪ್ರಾಯ ನೀಡಿದ್ದರು.