ಘನತ್ಯಾಜ್ಯ; ಸರ್ಕಾರಿ ಜಾಗವಿದ್ದರೂ ಖಾಸಗಿ ಜಾಗ ಖರೀದಿಗೆ ಒಲವು, ಆರ್ಥಿಕ ಇಲಾಖೆ ಅಭಿಪ್ರಾಯಕ್ಕಿಲ್ಲ ಮನ್ನಣೆ

ಬೆಂಗಳೂರು; ಸಮಗ್ರ ಘನ ತ್ಯಾಜ್ಯ ನಿರ್ವಹಣೆಗೆ 117 ಕ್ವಾರಿಗಳಲ್ಲಿರುವ ಸರ್ಕಾರಿ ಜಮೀನನ್ನು ಬಳಸಬೇಕೆ ವಿನಃ ಖಾಸಗಿ ಜಮೀನನ್ನು ಖರೀದಿಸುವ ಅವಶ್ಯಕತೆಯೇ ಬೀಳುವುದಿಲ್ಲ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿರುವ  ನಗರಾಭಿವೃದ್ಧಿ ಇಲಾಖೆಯು  38 ಎಕರೆ 18 ಗುಂಟೆ ಜಮೀನನ್ನು ಖರೀದಿಸಲು ಮುಂದಾಗಿದೆ.

 

ಅಲ್ಲದೇ ಜಮೀನನ್ನು ಖಾಸಗಿ ತ್ಯಾಜ್ಯ ನಿರ್ವಹಣಾ ಘಟಕವು ಒತ್ತುವರಿ ಮಾಡಿರುವುದು ಕಂಡು ಬಂದಿದೆ ಎಂದು ಕಂದಾಯ ಇಲಾಖೆಯು ನಿರ್ದಿಷ್ಟ ಮತ್ತು ಖಚಿತವಾಗಿ ಹೇಳಿತ್ತು. ಆದರೂ  ಸಹ ನಗರಾಭಿವೃದ್ಧಿ ಇಲಾಖೆಯು ಕಂದಾಯ ಇಲಾಖೆಯ ಅಭಿಪ್ರಾಯವು ನಿರಾಧಾರವಾಗಿದೆ ಎಂದು ತಿಪ್ಪೆ ಸಾರಿಸಿತ್ತು.

 

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಸಮಗ್ರ ಘನ ತ್ಯಾಜ್ಯ ನಿರ್ವಹಣೆಗೆ ಜಮೀನನ್ನು ಖರೀದಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿ ಈ ಮಾಹಿತಿ ಇದೆ. ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯಲಿರುವ  ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.

 

ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ರಹಸ್ಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸರ್ಕಾರದ ಭೂಮಿ ಲಭ್ಯವಿಲ್ಲದಿದ್ದಲ್ಲಿ ಸೂಕ್ತ ಖಾಸಗಿ ಜಮೀನನ್ನು ಬೆಂಗಳೂರು ನಗರದ ನಾಲ್ಕು ದಿಕ್ಕಿನ ಹೊರವಲಯದಲ್ಲಿ ಸುಮಾರು 100 ಎಕರೆಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಬೆಲೆಯಲ್ಲಿ ಖರೀದಿಸಲು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆಯು ಅನುಮತಿ ನೀಡಿತ್ತು.

 

 

ಹೀಗಾಗಿ ಟೆರ್ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ ಪ್ರೈ ಲಿಮಿಟೆಡ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಗುಂಡಲಹಳ್ಳಿ ಗ್ರಾಮದಲ್ಲಿ ಘನತ್ಯಾಜ್ಯ ಸಂಸ್ಕರಣೆಯನ್ನು ನಿರ್ವಹಿಸುತ್ತಿದ್ದ ಜಮೀನನ್ನು ಬಿಬಿಎಂಪಿಗೆ ಭೂ ಆರ್ಜನೆಯಲ್ಲಿ ಯೋಗ್ಯ ಪರಿಹಾರ ಮತ್ತು ಪಾರದರ್ಶಕತೆ ಹಾಗೂ ಪುನರ್ವಸತಿ ಮತ್ತು ಪುನರ್ವ್ಯವಸ್ಥೆಗೆ ಅಧಿಕಾರದಡಿಯಲ್ಲಿ ಖರೀದಿಸಲು ಅನುಮೊದನೆ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಸಚಿವ ಸಂಪುಟ ರಹಸ್ಯ ಹಾಳೆಯಿಂದ ತಿಳಿದು ಬಂದಿದೆ.

 

ಗುಂಡಲಹಳ್ಳಿ ಗ್ರಾಮದ ಸರ್ವೆ ನಂಬರ್‍‌ 40/1, 6/ಪಿ 4, 1/2, 3/2, 7/ಪಿ 1ರಲ್ಲಿ ಟೆರ್ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ ಪ್ರೈ ಲಿಮಿಟೆಡ್‌  ಹೊಂದಿರುವ ಜಮೀನನ್ನು ಖರೀದಿಸಿದಲ್ಲಿ ಪ್ರತಿನಿತ್ಯ ಕನಿಷ್ಟ 2,000 ಮೆಟ್ರಿಕ್ ಟನ್‌ ತ್ಯಾಜ್ಯವನ್ನು 25ರಿಂದ 30 ವರ್ಷಗಳ ಕಾಲ ನಿರ್ವಹಿಸಬಹುದು ಎಂದು ಅಭಿಪ್ರಾಯಿಸಿತ್ತು.

 

ಆದರೆ ಆರ್ಥಿಕ ಇಲಾಖೆಯು ಇದಕ್ಕೆ ಭಿನ್ನವಾಗಿ ಅಭಿಪ್ರಾಯಿಸಿತ್ತು.

 

ಅಭಿಪ್ರಾಯದಲ್ಲೇನಿದೆ?

 

ಬೆಟ್ಟ ಹಲಸೂರಿನಲ್ಲಿ 117  ಕ್ವಾರಿಗಳು ಲಭ್ಯವಿವೆ. ಇದರಲ್ಲಿರುವ ಜಮೀನಿನಲ್ಲಿಯೇ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮಾಡಲು ಪರಿಶೀಲಿಸಬಹುದು. ಇದರಲ್ಲಿ ಕಸ ವಿಲೇವಾರಿ ಘಟಕ ಮಾಡಲು ಸಾಧ್ಯತೆ ಇದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸುವ ಅವಶ್ಯಕತೆಯೇ ಬೀಳುವುದಿಲ್ಲ. ಮತ್ತು ಈ ಕ್ವಾರಿಯನ್ನು ಬಳಸದಿರಲು ಸಕಾರಣಗಳಿದ್ದಲ್ಲಿ ಹಾಗೂ ಆ ಭಾಗದಲ್ಲಿ ಬೇರೆ ಯಾವುದೇ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಮಾತ್ರ  ಖಾಸಗಿ ಜಮೀನು ಖರೀದಿ ಮಾಡುವ ಪ್ರಸ್ತಾವನೆಯನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಿಸಿತ್ತು ಎಂಬುದು ಸಚಿವ ಸಂಪುಟ ಟಿಪ್ಪಣಿಯ ರಹಸ್ಯ ಹಾಳೆಗಳಿಂದ ಗೊತ್ತಾಗಿದೆ.

 

 

ಹಾಗೆಯೇ ‘ಈ ಜಮೀನನ್ನು ಖರೀದಿ ಮಾಡಿ, ಕಸ ವಿಲೇವಾರಿ ಘಟಕ ಸ್ಥಾಪಿಸಿದಲ್ಲಿ ಸ್ಥಳೀಯವಾಗಿ ವಿರೋಧವಾಗಿ ಬರುವುದಿಲ್ಲವೇ, ಹಾಗೂ ಖರೀದಿ ಮಾಡಿರುವ ಜಮೀನು ಉಪಯೋಗಕ್ಕೆ ಬರುತ್ತದೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸದರಿ ಜಮೀನಿನ ಮಾಲೀಕತ್ವ ಕುರಿತು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಸರ್ಕಾರಿ ಜಮೀನಿಗೆ ಖಾಸಗಿಯವರಿಗೆ ಪರಿಹಾರ ಹೋಗದೇ ಇರುವ ಹಾಗೆ ಖಾತ್ರಿ ಪಡಿಸಿಕೊಂಡು ಈ ಪ್ರಸ್ತಾವನೆ ಮುಂದುವರೆಸಬಹುದು,’ ಎಂದೂ ಅಭಿಪ್ರಾಯಿಸಿತ್ತು.

 

ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯಕ್ಕಿಂತಲೂ ಕಂದಾಯ ಇಲಾಖೆ ನೀಡಿದ್ದ ಅಭಿಪ್ರಾಯದಲ್ಲಿ ಭಿನ್ನತೆ ಇತ್ತು.

 

 

ಸರ್ವೆ ಇಲಾಖೆ ವರದಿ ಆಧರಿಸಿ ಕಂದಾಯ ಇಲಾಖೆಯು ಆರೋಪವೊಂದನ್ನು ಮಾಡಿತ್ತು. ‘ ಸರ್ವೆ ಇಲಾಖೆಯ ವರದಿಯ ಅನ್ವಯ ಸದರಿ ಜಮೀನನ್ನು ಖಾಸಗಿ ತ್ಯಾಜ್ಯ ನಿರ್ವಹಣಾ ಘಟಕವು ಒತ್ತುವರಿ ಮಾಡಿರುವುದು ಕಂಡು ಬಂದಿರುತ್ತದೆ,’ ಎಂದು ಹೇಳಿತ್ತು.

 

ಆದರೆ ಇದಕ್ಕೆ ನಗರಾಭಿವೃದ್ದಿ ಇಲಾಖೆಯು ಈ ಆರೋಪವು ನಿರಾಧಾರವಾಗಿದೆಯೆಂದು ಷರಾ ಬರೆದಿತ್ತು.

 

 

‘ಇದುವರೆಗೆ ಸದರಿ ಭೂಮಿ ಬಿಬಿಎಂಪಿ ಅಥವಾ ಬಿಎಸ್‌ಡಬ್ಲ್ಯುಎಂಎಲ್‌ನ ಒಡೆತನದಲ್ಲಿ ಇರುವುದಿಲ್ಲ.  ಹಾಗೂ ಈ ಸಂಸ್ಥೆಗಳಿಂದ ಬಳಕೆಯಾಗಿರುವುದಿಲ್ಲ. ಆದಕಾರಣ ಕಂದಾಯ ಇಲಾಖೆಯ ಈ ಅಭಿಪ್ರಾಯವು ನಿರಾರಾಧಾರವಾಗಿರುತ್ತದೆ,’ ಎಂದು ಅಭಿಪ್ರಾಯಿಸಿತ್ತು.

 

ಹಾಗೆಯೇ ಈ ಭೂಮಿಯನ್ನು ಕಾನೂನು ಪ್ರಕಾರ ಯಾವುದೇ ಭೂಮಿಯನ್ನು ಉಪ ಗುತ್ತಿಗೆ ನೀಡಲು ಅವಕಾಶವಿರುವುದಿಲ್ಲ ಎಂದು ಹೇಳಿದ್ದನ್ನು ನಗರಾಭಿವೃದ್ಧಿ ಇಲಾಖೆಯು ಒಪ್ಪಿಕೊಂಡಿತ್ತು.

 

ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದೇ ಸ್ಥಳದಲ್ಲಿ  ಸರ್ಕಾರಿ ಜಮೀನಿನ ಲಭ್ಯವಿಲ್ಲ ಎಂದು ಕಂದಾಯ ಇಲಾಖೆಯು 2024ರ ಜುಲೈ 14ರಂದು ವರದಿ ಸಲ್ಲಿಸಿತ್ತು.

 

 

ಹೀಗಾಗಿ ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ ಪ್ರೈ ಲಿಮಿಟೆಡ್‌ ಹೊಂದಿರುವ 60.06 ಎಕರೆ ( 21.28 ಎಕರೆ ಖರಾಬು ಸೇರಿದೆ) ಜಮೀನು ಮತ್ತು ಅದಕ್ಕೆ ಹೊಂದಿಕೊಂಡಂತೆ ಇತರೆ ಹಿಡುವಳಿದಾರರಿಂದ 28.01 ಎಕರೆ ಜಮೀನು ಇದೆ. ಮತ್ತು ಈ ಜಮೀನನ್ನು ಒಂದು ವೇಳೆ ಖರೀದಿಸಲು ನಿರ್ಧರಿಸಿದ್ದಲ್ಲಿ ಅದಕ್ಕೆ ಹೊಂದಿಕೊಂಡಂತೆ ಇರುವ 52.38 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಘನತ್ಯಾಜ್ಯ ನಿರ್ವಹಣೆಗೆ ಉಪಯೋಗಿಸಿಕೊಳ್ಳಬಹುದು ಎಂದೂ ವರದಿ ನೀಡಿತ್ತು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಅದೇ ರೀತಿ ‘ಇದನ್ನು ಹೊರತುಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶದಿಂದ ದೂರವಿರುವ, ಒತ್ತುವರಿಯಿಂದ ಮುಕ್ತವಾಗಿರುವ ರಸ್ತೆ ಸಂಪರ್ಕವಿದ್ದು, ಘನತ್ಯಾಜ್ಯ ವಿಲೇವಾರಿಗೆ ಯೋಗ್ಯವಿರುವ 50-100 ಎಕರೆಯಷ್ಟು ಸರ್ಕಾರಿ ಜಮೀನು ಲಭ್ಯವಿರುವುದಿಲ್ಲ,’ ಎಂದು  ವಿವರಿಸಿರುವುದು ತಿಳಿದು ಬಂದಿದೆ.

 

ಸರ್ಕಾರಿ ಮಾಲೀಕತ್ವ, ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌, ಇತರೆ ಹಿಡುವಳಿದಾರರಿಂದ ಗುತ್ತಿಗೆ/ಕ್ರಯ/ ಕರಾರು ಮಾಡಿಕೊಂಡಿರುವ ಒಟ್ಟಾರೆ 141 ಎಕರೆ 05 ಗುಂಟೆ ಇದೆ ಎಂದು ಜಮೀನಿನ ವಿವರ ನೀಡಿರುವುದು ಗೊತ್ತಾಗಿದೆ.

 

 

ಸಂಪುಟದ ಮುಂದೆ ಕೋರಿರುವ ಅನುಮೋದನೆಯಲ್ಲೇನಿದೆ?

 

ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ ಪ್ರೈ ಲಿ., ಸಂಸ್ಥೆಯು ಬಿಬಿಎಂಪಿಯು ವಿಧಿಸುವ ಎಲ್ಲಾ ಷರತ್ತುಗಳನ್ನು ಔಪಚಾರಿಕವಾಗಿ ಅಂಗೀಕರಿಸಿದ ಬಳಿಕವಷ್ಟೇ ಅಗತ್ಯಾನುಸಾರ ಹೈಕೋರ್ಟ್‌ ಗಮನಕ್ಕೆ ತಂದು ಖರೀದಿ ಪ್ರಸ್ತಾವನೆಯನ್ನು ಮುಂದುವರೆಸಬೇಕು ಎಂದು ಬಿಬಿಎಂಪಿಗೆ ಸೂಚಿಸಬೇಕು. ಬಿಬಿಎಂಪಿಯು ತನ್ನ ಸ್ವಂತ ಸಂಪನ್ಮೂಲದಲ್ಲಿನ ಅನುದಾನವನ್ನು ಬಳಸಿಕೊಂಡು ಭೂ ಆರ್ಜನೆಯಲ್ಲಿ ಯೋಗ್ಯ ಪರಿಹಾರ ಮತ್ತು ಪಾರದರ್ಶಕತೆ ಹಾಗೂ ಪುನರ್ವಸತಿ ಮತ್ತು ಪುನರ್ವ್ಯವಸ್ಥೆ ಅಧಿಕಾರ ಅಧಿನಿಯಮ 2013ರ ಅವಕಾಶಗಳ ಅಡಿಯಲ್ಲಿ ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ರಿಂದ ಅವರ ಒಡೆತನದಲ್ಲಿರುವ ಒಟ್ಟು 38 ಎಕರೆ 18 ಗುಂಟೆ ಜಮೀನನ್ನು ಖರೀದಿಸಲು ಅನುಮೋದಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

 

ಕಂದಾಯ ಇಲಾಖೆಯ ಷರತ್ತುಗಳನ್ನು ಕಾರ್ಯಗತಗೊಳಿಸಲು ಕಾಲಾವಕಾಶದ ಅಗತ್ಯವಿದೆ. ಕಾಲಮಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಬೇಕಿರುವುದರಿಂದ ಷರತ್ತುಗಳನ್ನು ಕಾರ್ಯಗತಗೊಳಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿಳಂಬವಾಗಬಾರದು ಎಂಬ ಸೂಕ್ತ ಷರತ್ತುಗಳೊಂದಿಗೆ ಕೂಡಲೇ ಬಿಬಿಎಂಪಿಗೆ ಅಗತ್ಯ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಹಸ್ತಾಂತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

 

ಸರ್ಕಾರಿ ಜಮೀನನ್ನು ಬಿಬಿಎಂಪಿಗೆ ವರ್ಗಾಯಿಸುವಾಗ ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ಮತ್ತು ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ಪಾವತಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿದೆ.

 

ಗುರುತಿಸಲಾಗಿರುವ ಖಾಸಗಿ ಜಮೀನಿನಲ್ಲಿ ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜೀಸ್‌ ಲಿಮಿಟೆಡ್‌ ಹಿಡುವಳಿದಾರರಿಂದ ಗುತ್ತಿಗೆ ಮತ್ತು ಕರಾರು ರೂಪದಲ್ಲಿ ಪಡೆದು ಆ ಜಮೀನಿನಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದ್ದರೇ, ಮೂಲ ಮಾಲೀಕರಿಂದ ಕಾನೂನಿಗೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿ ಟೆರ್‍ರಾ ಫಾರ್ಮಾ ಬಯೋಟೆಕ್ನಾಲಜೀಸ್‌ ಲಿಮಿಟೆಡ್‌ ಅನುಮತಿ ಪಡೆದು ಗುತ್ತಿಗೆ , ಕರಾರನ್ನು ರದ್ದುಗೊಳಿಸಿ ಆ ಜಮೀನುಗಳನ್ನು ಬಿಬಿಎಂಪಿಯು ತನ್ನ ಸ್ವಂತ ಸಂಪನ್ಮೂಲದಲ್ಲಿ ನೇರ ಖರೀದಿ ಮಾಡಲು ಅನುಮತಿ ನೀಡಬೇಕು ಎಂದು ಪ್ರಸ್ತಾವಿಸಿದೆ.

SUPPORT THE FILE

Latest News

Related Posts