ನಿರಾಣಿ ವಿರುದ್ಧದ ಪ್ರಕರಣದಲ್ಲಿನ ಅಧಿಕಾರಿಗಳ ವಿಚಾರಣೆಗೆ ಇನ್ನೂ ಸಿಗದ ಪೂರ್ವಾನುಮತಿ; ಆರೋಪಿತರ ರಕ್ಷಣೆ?

ಬೆಂಗಳೂರು; ಮಾಜಿ ಸಚಿವ ಮುರುಗೇಶ್‌ ಆರ್ ನಿರಾಣಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧದ  ಪ್ರಾಸಿಕ್ಯೂಷನ್‌ಗೆ, ರಾಜ್ಯ ಕಾಂಗ್ರೆಸ್‌ ಸರ್ಕಾರವು  ಇದುವರೆಗೂ  ಪೂರ್ವಾನುಮತಿ ನೀಡಿಲ್ಲ.

 

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ 2018) ಕಲಂಕ 17 ಎ ಅಡಿಯಲ್ಲಿ ಇದುವರೆಗೂ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಲೋಕಾಯುಕ್ತ ಪೊಲೀಸರು  ಪೂರ್ವಾನುಮತಿಯನ್ನು ಕೋರಿ 9 ಬಾರಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡುವ ಸಂಬಂಧ ಯಾವುದೇ ಕ್ರಮ ವಹಿಸಿಲ್ಲ.

 

ಮುರುಗೇಶ್‌ ನಿರಾಣಿ ಸೇರಿದಂತೆ ಹಲವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಇಡೀ ಕಾಂಗ್ರೆಸ್‌ ಸರ್ಕಾರವೇ ಬೊಬ್ಬೆ ಹೊಡೆದಿತ್ತು. ಅಲ್ಲದೇ ರಾಜ್ಯಪಾಲರನ್ನೂ ಸಚಿವರ ನಿಯೋಗವೇ ಭೇಟಿ ಮಾಡಿತ್ತು.

 

ಮುರುಗೇಶ್ ಆರ್‍‌ ನಿರಾಣಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡದೇ ಇರುವ ಸಂಗತಿಯನ್ನೇ  ಮುಂದಿಟ್ಟುಕೊಂಡು ರಾಜ್ಯಪಾಲರ ವಿರುದ್ಧ ಬೀದಿಗಿಳಿದಿದ್ದ ಕಾಂಗ್ರೆಸ್‌ ಸರ್ಕಾರವು, ಇದೀಗ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತ ಪೊಲೀಸರಿಗೆ ಪೂರ್ವಾನುಮತಿ  ನೀಡದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಅಲ್ಲದೇ ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ಅಧಿಕಾರಿಗಳ ರಕ್ಷಣೆಗೂ ನಿಂತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಧಿಕಾರಿಗಳ ವಿರುದ್ದದ ವಿಚಾರಣೆಗೆ ಪೂರ್ವಾನುಮತಿ ಕೋರಿರುವ ಸಂಬಂಧ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯದ ಗಮನಕ್ಕೂ ತಂದಿದ್ದಾರೆ. ಈ ಎಲ್ಲದರ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

 

ಬಂಡವಾಳ ಆಕರ್ಷಿಸುವ ನೆಪದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಹಲವಾರು ಬಾರಿ ವಿದೇಶ ಪ್ರವಾಸ ನಡೆಸಿರುವ ಬೆನ್ನಲ್ಲೇ ಸಮಾವೇಶಕ್ಕೆ ಸಂಬಂಧಿಸಿದಂತೆ ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಐದೇ ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ 4.50 ಕೋಟಿ ರು. ಖರ್ಚು ಮಾಡಿತ್ತು.

 

ಕೇವಲ 2 ಲಕ್ಷ ರು.ಗಳಲ್ಲಿ ಚಿತ್ರೀಕರಿಸಬಹುದಾದ ವಿಡಿಯೋಗೆ 4,08,87,000 ರು.ಗಳ ಬೃಹತ್‌ ಮೊತ್ತಕ್ಕೆ ಕೆಲಸದ ಆದೇಶ ನೀಡಿತ್ತು.  ಸರ್ಕಾರದಿಂದ ಹಣವನ್ನು  ಬಿಡುಗಡೆ ಮಾಡಿಸಿಕೊಂಡಿತ್ತು. ಇದರಲ್ಲಿ ಅಕ್ರಮ ನಡೆದಿದೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ವಿಡಿಯೋವನ್ನು ಇನ್‌ವೆಸ್ಟ್‌ ಕರ್ನಾಟಕ 2022 ಎಂಬ ಹೆಸರಿನ ಗ್ಲೋಬಲ್‌ ಇನ್‌ವೆಸ್ಟರ್‍‌ ಮೀಟ್‌ನಲ್ಲಿ ಪ್ರದರ್ಶಿಸಿರುವುದಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದು  ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಾಹಂ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

 

 

ಇದರಲ್ಲಿ ಮಾಜಿ ಸಚಿವ ಮುರುಗೇಶ್‌ ಆರ್ ನಿರಾಣಿ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದರು. ಅದೇ ರೀತಿ ಇನ್‌ವೆಸ್ಟ್‌ ಕರ್ನಾಟಕ  ಫೋರಂನ ಸಿಇಒ ಶಿವಕುಮಾರ್‍‌, ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಬಿ ಪೂಜಾರಿ, ಡೆಪ್ಯುಟಿ ಜನರಲ್‌ ಮ್ಯಾನೇಜರ್ ಪಿ ಎಸ್‌ ನಂದೀಶ್, ಬಿಬಿಪಿ ಸ್ಟುಡಿಯೋ ವರ್ಚುಯಲ್ ಭಾರತ್ ಪ್ರೈವೈಟ್‌ ಲಿಮಿಟೆಡ್‌ನ್ನು ಆರೋಪಿಗಳನ್ನಾಗಿಸಿದ್ದರು.

 

 

ಈ ದೂರರ್ಜಿಯನ್ನು ಡಿವೈಎಸ್ಪಿ ಪ್ರದೀಪ್‌ ಕುಮಾರ್ ಅವರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ‘ದೂರಿನಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ಸಮಗ್ರ ವಿಚಾರಣೆ ನಡೆಸುವ ಅವಶ್ಯಕತೆ ಇದೆ.

 

 

ಈ ದಿಸೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಅನ್ವಯ ಎದುರುದಾರರಾದ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯಕವಾಗಿರುತ್ತದೆ,’ ಎಂದು ಡಿವೈಎಸ್ಪಿ ಪ್ರದೀಪ್‌ ಕುಮಾರ್‍‌ ಅವರು ನ್ಯಾಯಾಲಯಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದರು.

 

 

 

ಈ ಸಂಬಂಧ ಮುರುಗೇಶ್‌ ಆರ್ ನಿರಾಣಿ ಸೇರಿದಂತೆ ಇನ್ನಿತರೆ ಅಧಿಕಾರಿ ವರ್ಗದವರನ್ನು ವಿಚಾರಣೆಗೊಳಪಡಿಸುವ ಸಂಬಂಧ ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್ ಗಂಗರುದ್ರಯ್ಯ ಅವರು ಬೃಹತ್‌ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪೂರ್ವಾನುಮತಿಗಾಗಿ ಪತ್ರ ಬರೆದಿದ್ದರು. 2024ರ ಮಾರ್ಚ್‌ 11ರಿಂದ ಇದುವರೆಗೆ ಒಟ್ಟಾರೆ 9 ಬಾರಿ ಪತ್ರಗಳನ್ನು ಬರೆದಿದ್ದಾರೆ.

 

ಆದರೆ ಇದುವರೆಗೂ ಸರ್ಕಾರವು  ಪೂರ್ವಾನುಮತಿಯನ್ನೇ ನೀಡಿಲ್ಲ. ಈ ಸಂಗತಿಯು ಸಚಿವ ಎಂ ಬಿ ಪಾಟೀಲ್‌ ಅವರ ಗಮನದಲ್ಲೂ ಇದೆ  ಎಂದು ತಿಳಿದು ಬಂದಿದೆ.

 

 

 

‘ಶಿವಕುಮಾರ್‍‌, ಸಿದ್ದಲಿಂಗಪ್ಪ ಬಿ ಪೂಜಾರಿ, ಪಿ ಎಸ್‌ ನಂದೀಶ್ ಅವರ ಸಕ್ಷಮ ಪ್ರಾಧಿಕಾರಿಯಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಎದುರುದಾರರ ವಿರುದ್ಧ ತನಿಖೆ ಕೈಗೊಳ್ಳಲು ಪೂರ್ವಾನುಮತಿ ದೊರೆತ ನಂತರ ಮುಂದಿನ ತನಿಖೆ, ವಿಚಾರಣೆ ಕೈಗೊಳ್ಳಲಾಗುವುದು,’ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಗಂಗರುದ್ರಯ್ಯ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

 

 

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿರುವ ಹೊತ್ತಿನಲ್ಲೇ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ರು. ನೀಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿತ್ತು.

 

ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರೊಂದಿಗೆ ಸಮಾಲೋಚನೆಯನ್ನೇ ನಡೆಸಿರಲಿಲ್ಲ. ಈ ಕುರಿತು ಖುದ್ದು ಅಂದಿನ  ಸಚಿವ ನಿರಾಣಿ ಅವರೇ 2022ರ ಅಕ್ಟೋಬರ್‌ 21ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

ನಿರಾಣಿ ಬರೆದಿರುವ ಪತ್ರದಲ್ಲೇನಿತ್ತು?

 

ನವೆಂಬರ್‌ 2,3 ಮತ್ತು 4 , 2022ರಂದು ಇನ್ವೆಷ್ಟ್‌ ಕರ್ನಾಟಕ 2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದ್ದು ಸಮಾವೇಶಕ್ಕೆ ಸಂಬಂಧಪಟ್ಟಂತೆ ಒಂದು ಕಿರುಚಿತ್ರವನ್ನು ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕ್ರಮಕೈಗೊಂಡಿದ್ದು ಸದರಿ ಕಿರುಚಿತ್ರ ನಿರ್ಮಾಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರು 4.50 ಕೋಟಿಯಷ್ಟು ಮೌಲ್ಯದ ಒಡಂಬಡಿಕೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.

 

ಸುಮಾರು 5 ನಿಮಿಷದ ಕಿರು ಚಿತ್ರ ನಿರ್ಮಾಣಕ್ಕೆ 4.50 ಕೋಟಿಯಷ್ಟು ಮೌಲ್ಯ ನಿಗದಿಪಡಿಸಿರುವುದು ತುಂಬಾ ಹೆಚ್ಚಾಗಿರುವುದು ಕಂಡು ಬರುತ್ತದೆ. ಒಂದು ಪಕ್ಷ ಇಲಾಖೆಯು ಮೇಲ್ಕಂಡ ಮೌಲ್ಯಕ್ಕೆ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶ ನೀಡಿರುವುದು ನಿಜವೇ ಆದಲ್ಲಿ ಇಷ್ಟೊಂದು ಹೆಚ್ಚು ಮೌಲ್ಯಕ್ಕೆ ನಿಗದಿಪಡಿಸಿದ ಒಡಂಬಡಿಕೆಯು ಇಂದಿನ ಪರಿಸ್ಥಿತಿಗೆ ಅಗತ್ಯ ಹಾಗೂ ಸೂಕ್ತವಿರುವುದಿಲ್ಲವೆಂದು ಭಾವಿಸಿದೆ.

 

 

ಸದರಿ ಒಡಂಬಡಿಕೆಯ ಕಾರ್ಯಾದೇಶವನ್ನು ವಜಾಕರಿಸಲು ಸೂಚಿಸಿದೆ. ಮುಂದುವರೆದು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳು ಜೊತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಕೊಳ್ಳಬೇಕು ಎಂದು ನಿರಾಣಿ ಅವರು ಸೂಚಿಸಿದ್ದರು.

 

ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ಖರ್ಚು?; ಜಿಮ್‌ ಹೆಸರಿನಲ್ಲಿ ನಡೆದಿದೆ ಲೂಟಿ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲು ಸಜ್ಜಾಗಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಕೆಟಿಪಿಪಿ ಕಾಯ್ದೆಯಿಂದ ಆ ಎಲ್ಲಾ ಕಾರ್ಯಕ್ರಮಗಳನ್ನು ಹೊರಗಿಟ್ಟಿದ್ಧರು. 4(ಜಿ) ವಿನಾಯಿತಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪಗಳಿದ್ದವು.  ಆದರೆ ಇದಾವುದೂ ಸಚಿವರ ಗಮನಕ್ಕೆ ಬಂದಿರಲಿಲ್ಲ ಎಂದು ಗೊತ್ತಾಗಿದೆ.

 

‘2022ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಟಿ.ಜೆ. ಅಬ್ರಾಹಂ ಎಂಬುವರು ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರ ಬಳಿ ಮನವಿ ಸಲ್ಲಿಸಿದ್ದರು. ಆದರೆ, ಆ ಆರೋಪದಲ್ಲಿ ಹುರುಳಿಲ್ಲದ ಕಾರಣ ರಾಜ್ಯಪಾಲರು ದೂರನ್ನು ಪರಸ್ಕರಿಸಿರಲಿಲ್ಲ. ಈಗ ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ಸಿಗರು ಅನಗತ್ಯವಾಗಿ ಆ ಪ್ರಕರಣ ಪ್ರಸ್ತಾಪಿಸಿ ನನ್ನ ಹೆಸರು ಎಳೆದು ತರುತ್ತಿದ್ದಾರೆ. ಇದು ಸರಿಯಲ್ಲ,’ ಎಂದು ನಿರಾಣಿ ಅವರು ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಯನ್ನು ಸ್ಮರಿಸಬಹುದು.

SUPPORT THE FILE

Latest News

Related Posts