ಲೆಕ್ಕಪರಿಶೋಧಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ;ತುರ್ತು ನೋಟೀಸ್‌, ಸರ್ಕಾರಿ ವಕೀಲರ ನೇಮಕಕ್ಕೆ ಮೊರೆ

ಬೆಂಗಳೂರು; 2014-15ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಲೆಕ್ಕ ಪರಿಶೋಧನೆಯನ್ನು ಕಾನೂನು ನಿಯಮಗಳ ಪ್ರಕಾರ ಕೈಗೊಳ್ಳದಿರುವುದು ಮತ್ತು ಬ್ಯಾಂಕ್‌ನ ವಾಸ್ತವಿಕ ಆರ್ಥಿಕ ಸ್ಥಿತಿಗತಿಗಳನ್ನು ಮರೆಮಾಚಿ ಕರ್ತವ್ಯ ಲೋಪಕ್ಕೆ ಕಾರಣರಾದ ಲೆಕ್ಕ ಪರಿಶೋಧಕರುಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಜಂಟಿ ನಿರ್ದೇಶಕರಿಗೆ ಹೈಕೋರ್ಟ್‌ ತುರ್ತು ನೋಟೀಸ್‌ ಜಾರಿಗೊಳಿಸಿದೆ.

 

ಈ ಪ್ರಕರಣದಲ್ಲಿ ಹೈಕೋರ್ಟ್‌ಗೆ ಹಾಜರಾಗಲು ಇದುವರೆಗೂ ಸರ್ಕಾರಿ ವಕೀಲರು ಮತ್ತು ವ್ಯಾಜ್ಯ ನಿರ್ವಹಣಾಧಿಕಾರಿಯನ್ನು ನೇಮಕ ಮಾಡಿಲ್ಲ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮಗಳನ್ನು ಸಿಬಿಐ ತನಿಖೆಗೊಳಪಡಿಸಲು ಕ್ರಮವಹಿಸಲಾಗುವುದು ಎಂದು ಜುಲೈನಲ್ಲಿ ನಡೆದಿದ್ದ ಬಜೆಟ್‌ ಅಧಿವೇಶನದಲ್ಲಿ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಭರವಸೆ ನೀಡಿದ್ದರು. ಆದರೆ ಈ ಬ್ಯಾಂಕ್‌ನಲ್ಲಿ ಕ್ರಮಬದ್ಧವಾಗಿ ಲೆಕ್ಕ ಪರಿಶೋಧನೆ ನಡೆಸದ ಲೆಕ್ಕ ಪರಿಶೋಧಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು  ಸರ್ಕಾರ ವಕೀಲರ ನೇಮಕ   ಆಗದಿರುವುದು ಮುನ್ನೆಲೆಗೆ ಬಂದಿದೆ.

 

 

ಬ್ಯಾಂಕ್‌ನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಅರ್ಜಿ (4167/2023)ಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರುಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಜಂಟಿ ನಿರ್ದೇಶಕರಿಗೆ ಅನುಮತಿ ನೀಡಲಾಗಿತ್ತು. ಈ ಪ್ರಕರಣದಲ್ಲಿ ಹಾಜರಾಗಲು ಹೈಕೋರ್ಟ್‌ ತುರ್ತು ನೋಟೀಸ್‌ ಜಾರಿಗೊಳಿಸಿರುವ ಕಾರಣ ಸರ್ಕಾರಿ ವಕೀಲರ ನೇಮಕ ಮಾಡಲು ಕ್ರಮಕೈಗೊಳ್ಳಬೇಕು ಎಂದು  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಜಂಟಿ ನಿರ್ದೇಶಕರು 2023ರ ಆಗಸ್ಟ್‌ 17ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ 2014-15ರಿಂದ 2018-19ರವರೆಗಿನ ಲೆಕ್ಕ ಪರಿಶೋಧನೆಯನ್ನು ಕಾನೂನು ನಿಯಮಗಳಿಗೆ ಅನುಗುಣವಾಗಿ ಕೈಗೊಳ್ಳದೇ ಬ್ಯಾಂಕ್‌ನ ವಾಸ್ತವಿಕ ಅರ್ಥಿಕ ಸ್ಥಿತಿಗತಿಗಳನ್ನು ಮರೆಮಾಚಿ, ಗಂಭೀರವಾದ ಕರ್ತವ್ಯಲೋಪಕ್ಕೆ ಕಾರಣರಾದ ಲೆಕ್ಕ ಪರಿಶೋಧಕರ ವಿರುದ್ಧ ಸಹಕಾರ ಸಂಘಗಳ ಕಾಯ್ದೆ 109(12)(ಎ) ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನನಗೆ  ಅನುಮತಿ ನೀಡಲಾಗಿರುತ್ತದೆ. ಈ ಸಂಬಂಧ ಹಾಜರಾಗಬೇಕು ಎಂದು  ಹೈಕೋರ್ಟ್‌ನಿಂದ 2023ರ ಆಗಸ್ಟ್‌ 14ರಂದು ತುರ್ತು ನೋಟೀಸ್‌ ಜಾರಿಯಾಗಿದೆ. ಹೈಕೋರ್ಟ್‌ಗೆ ಹಾಜರಾಗಲು ಸರ್ಕಾರಿ ವಕೀಲರು ಮತ್ತು ವ್ಯಾಜ್ಯ ನಿರ್ವಹಣಾಧಿಕಾರಿಯನ್ನು  ನೇಮಕ ಮಾಡಿಕೊಡಬೇಕು,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

 

 

ಸಾವಿರಾರು ಕೋಟಿ ರು. ಮೊತ್ತದ ಅವ್ಯವಹಾರ ನಡೆಸಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ 2020ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 1,923 ಕೋಟಿ ರು. ನಷ್ಟ ಹೊಂದಿದೆ. ಅಲ್ಲದೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ 2014-15ರ ವರ್ಷವೊಂದರಲ್ಲೇ ಇದೇ ಬ್ಯಾಂಕ್‌ನಲ್ಲಿ 807 ಕೋಟಿ ರು. ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯು ಹೊರಗೆಡವಿತ್ತು.

 

 

ಅಲ್ಲದೆ ಈ ಬ್ಯಾಂಕ್‌ 2021ರ ಜುಲೈ 9ರ ಅಂತ್ಯಕ್ಕೆ 38,848 ಗ್ರಾಹಕರಿಗೆ 2,073.91 ಕೋಟಿ ರು. ಹಾಗೂ 994 ಸಾಂಸ್ಥಿಕ ಗ್ರಾಹಕರಿಗೆ 375 ಕೋಟಿ ರು. ಠೇವಣಿ ಹಣವನ್ನು ಪಾವತಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

 

 

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತು ನಿಯಮ 73ರ ಅಡಿಯಲ್ಲಿ ಶಾಸಕ ಎಲ್‌ ಎ ರವಿ ಸುಬ್ರಮಣ್ಯ ಪ್ರಸ್ತಾಪಿಸಿರುವ ಗಮನ ಸೆಳೆಯುವ ಸೂಚನೆಗೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ನೀಡಿರುವ ಟಿಪ್ಪಣಿಯು ಬ್ಯಾಂಕ್‌ನ ಅಕ್ರಮವನ್ನು ಇನ್ನಷ್ಟು ವಿಸ್ತರಿಸಿತ್ತು.

 

 

ಬ್ಯಾಂಕ್‌ ಹೊಂದಿರುವ 1,923 ಕೋಟಿ ರು. ನಷ್ಟದಲ್ಲಿ 1,480 ಕೋಟಿ ರು. ದುರುಪಯೋಗವಾಗಿದೆ ಎಂದು 2019-20ರ ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ. ಅಲ್ಲದೆ 2014-15ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸಿದೆ. ಈ ಪೈಕಿ 2014-15ನೇ ಸಾಲಿಗೆ 871 ಕೋಟಿ ರು. ನಷ್ಟ ಮತ್ತು 807 ಕೋಟಿ ರು. ಹಣ ದುರುಪಯೋಗವಾಗಿದೆ. ಒಂದೇ ವರ್ಷದಲ್ಲಿ 807 ಕೋಟಿ ರು ದುರುಪಯೋಗವಾಗಿದೆಯಾದರೂ ಇನ್ನು 2015-16, 2016-17, 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನೆ ಬಹಿರಂಗವಾದಲ್ಲಿ ದುರುಪಯೋಗವಾಗಿರುವ ಮೊತ್ತವು ನಾಲ್ಕೈದು ಪಟ್ಟು ಹೆಚ್ಚಲಿದೆ.

 

 

ಬ್ಯಾಂಕ್‌ ನೀಡಿರುವ ಸಾಲದಲ್ಲಿ ಶೇ.95ರಷ್ಟು ಅನುತ್ಪಾದಕ ಆಸ್ತಿಗಳಾಗಿದೆ. 1,594 ಕೋಟಿಗಳಷ್ಟು ಸಾಲವನ್ನು ಮೋಸ, ವಂಚನೆ ಎಂದು ಆರ್‌ಬಿಐ ತನ್ನ ಪರಿವೀಕ್ಷಣಾ ವರದಿಯಲ್ಲಿ ಪರಿಗಣಿಸಿದೆ. 2020ರ ಆಗಸ್ಟ್‌ 31ರ ಅಂತ್ಯಕ್ಕೆ 1,405 ಕೋಟಿ ರು. (ಬಡ್ಡಿ ಸೇರಿ) ವಸೂಲಾತಿಗೆ ಬಾಕಿ ಇದೆ. ಅಲ್ಲದೇ 2020ರ ಜನವರಿ 10ರ ಅಂತ್ಯಕ್ಕೆ ಒಟ್ಟು 1,567 ಕೋಟಿ ಸಾಲ ಮ್ತು ಮುಂಗಡಗಳ ಬಾಕಿ ಇರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಬ್ಯಾಂಕ್‌ನ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೂ 9 ತನಿಖಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ 923 ಕೋಟಿ ರು. ಹಣಕಾಸಿನ ಅವ್ಯವಹಾರವಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಆರೋಪಿಗಳಿಂದ 17,88,110 ರು.ಗಳನ್ನು ಹಾಗೂ ಆರೋಪಿಗಳು ಮತ್ತು ಅವರ ಅವಲಂಬಿತ ಸದಸ್ಯರ ಹೆಸರಿನಲ್ಲಿ 9,548 ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ಗೂ ಹೆಚ್ಚಿನ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

 

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌; 1,400 ಕೋಟಿ ರು. ಮೊತ್ತದ ಸಾಲ ಅನುತ್ಪಾದಕ ಆಸ್ತಿ ಎಂದು ಘೋಷಣೆ

 

 

ಹಾಗೆಯೇ ಸುಮಾರು 1,115 ಕೋಟಿಗಿಂತ ಹೆಚ್ಚಿನ ಬೆಲೆಬಾಳುವ ಸ್ಥಿರಾಸ್ತಿಗಳನ್ನು ಗುರುತಿಸಿ ಹಣ ವರ್ಗಾವಣೆ ನಿಷೇಧ ಅಧಿನಿಯಮ 2002ರ ಅಡಿಯಲ್ಲಿ ಕ್ರಮಜರುಗಿಸಲು ಜಾರಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ.

 

 

ಅದೇ ರೀತಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲೂ 90 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು ತನ್ನ ಠೇವಣಿದಾರರ ಹಣದಲ್ಲಿ 90 ಕೋಟಿಗಳನ್ನು ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ತೊಡಗಿಸಿ ಜಮಾ ಮಾಡಿ ಅವ್ಯವಹಾರ ಎಸಗಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

 

ಅದೇ ರೀತಿ ಇದೇ ಸೌಹಾರ್ದ ಪತ್ತಿನ ಸಂಘವು ಕಾನೂನುಬಾಹಿರವಾಗಿ 163.43 ಕೋಟಿ ರು. ಸಾಲ ನೀಡಿದೆ. ಅಲ್ಲದೆ 228.71 ಕೋಟಿಗಳಷ್ಟು ಠೇವಣಿ ಸಂಗ್ರಹಿಸಿ ಅದನ್ನು ಸಕಾಲದಲ್ಲಿ ಸದಸ್ಯರಿಗೆ ಮರು ಪಾವತಿಸದೇ ನಂಬಿಕೆ ದ್ರೋಹ, ಮೋಸ ಮತ್ತು ವಂಚನೆ ಮಾಡಿದೆ. ಹಾಗೆಯೇ ಸೂಕ್ತ ಭದ್ರತೆ ಪಡೆಯದೆಯೇ 174 ಪ್ರಕರಣಗಳಲ್ಲಿ 149.33 ಕೋಟಿ ರು. ಬೇನಾಮಿ ಸಾಲ ನೀಡಿದೆಯಲ್ಲದೆ 4.48 ಕೋಟಿ ರು.ಗಳ ನಕಲಿ ಸಾಲಗಳನ್ನು ಸೃಷ್ಟಿಸಿದೆ ಎಂಬುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

 

2019-20ನೇ ಸಾಲಿನ ಲೆಕ್ಕಪರಿಶೋಧನೆ ವರದಿ ಪ್ರಕಾರ ಸೊಸೈಟಿಯಲ್ಲಿ 4.90 ಕೋಟಿ ಷೇರು ಬಂಡವಾಳ ಪಾವತಿಯಾಗಿತ್ತು. ಆಪದ್ಧನ ಮತ್ತು ಇತರೆ ನಿಧಿಗಳ ರೂಪದಲ್ಲಿ 0.16 ಕೋಟಿ ರು., 228.71 ಕೋಟಿ ಠೇವಣಿ , 233.78 ಕೋಟಿ ದುಡಿಯುವ ಬಂಡವಾಳ, 66.80 ಕೋಟಿ ಹೂಡಿಕೆಗಳಿದ್ದರೆ, ಸಾಲ ಮತ್ತುಮುಂಗಡಗಳ ರೂಪದಲ್ಲಿ 163.43 ಕೋಟಿ ರು ಇದೆ.

 

 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಈ ಸೊಸೈಟಿಯು ಕಾರ್ಯನಿರ್ವಹಿಸುತ್ತಿತ್ತು.

the fil favicon

SUPPORT THE FILE

Latest News

Related Posts