Wednesday | June 17, 2026 |

ಮುಖ್ಯಮಂತ್ರಿ ಮೂಲಸೌಕರ್ಯ ಯೋಜನೆ ಉದ್ದೇಶಕ್ಕೆ ಧಕ್ಕೆ ; ನ್ಯಾಯಾಂಗ ಬಡಾವಣೆ ಪ್ರತಿಷ್ಠಿತರ ಒತ್ತಡಕ್ಕೆ ಮಣಿದು ಹೆಬ್ಬಾಗಿಲು ನಿರ್ಮಾಣ?

ಬೆಂಗಳೂರು; ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ಒದಗಿಸಿದ್ದ ಅನುದಾನವನ್ನು ಅಧಿಕಾರಿವರ್ಗವು ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆಗಳ ಹೆಬ್ಬಾಗಿಲು ನಿರ್ಮಾಣ ಸೇರಿದಂತೆ ಅನ್ಯ ಉದ್ದೇಶದ ಕಾಮಗಾರಿಗಳಿಗೆ ಮಾರ್ಗಪಲ್ಲಟ ಮಾಡುತ್ತಿರುವುದು ಬಹಿರಂಗವಾಗಿದೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಡ್‌ ರಸ್ತೆಗಳು, ಚರಂಡಿಗಳ ನಿರ್ಮಾಣ ಅಭಿವೃದ್ದಿ, ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರು ನಗರ ಜಿಲ್ಲೆಯ ಸಚಿವರು ಮತ್ತು ಶಾಸಕರುಗಳ ಕೋರಿಕೆ ಸಲ್ಲಿಸಿದ್ದರು. ಈ ಪೈಕಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿಗೆ 1,100 ಕೋಟಿ ರುಪಾಯಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿತ್ತು.

ಆದರೆ ಈ ಕ್ರಿಯಾ ಯೋಜನೆಯಲ್ಲಿ ಎಲ್ಲಿಯೂ ಪ್ರಸ್ತಾವಿಸದ ಕಾಮಗಾರಿಗಳನ್ನು ಅನುಷ್ಠಾನದ ಹಂತದಲ್ಲೇ ಬದಲಾವಣೆ ಮಾಡಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೇ ಕ್ರಿಯಾಯೋಜನೆಯಲ್ಲಿ ಇಲ್ಲದೇ ಇರುವ ಕಾಮಗಾರಿಗಳನ್ನು ಪ್ರಭಾವಿಗಳು ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸೇರಿಸುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ರುಪಾಯಿಗಳು ಅನ್ಯ ಉದ್ದೇಶಕ್ಕೆ ಖರ್ಚು ಮಾಡಲಾಗುತ್ತಿದೆ ಎಂಬ ಆಪಾದನೆಗಳೂ ಸಹ ಕೇಳಿ ಬಂದಿವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 05 ಹೊಸ ನಗರ ಪಾಲಿಕೆಗಳು ಇನ್ನೂ ಆರಂಭಿಕ ಹಂತದಲ್ಲಿದ್ದ ಸಂದರ್ಭದಲ್ಲೇ ಸರ್ಕಾರದಿಂದ ವಿಶೇಷ ಆರ್ಥಿಕ ನೆರವು ಕೋರಿದ್ದವು. ನಾಗರೀಕ ಸೇವೆಗಳನ್ನು ನಿರಂತರವಾಗಿ ಮುಂದುವರೆಸುವ ಉದ್ದೇಶದಿಂದ ಮುಖ್ಯ ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿಸಲು ಮುಂದಾಗಿತ್ತು.

 

 

ಈ ಹಿನ್ನೆಲೆಯಲ್ಲಿ 5 ನಗರಪಾಲಿಕೆಗಳಲ್ಲಿ ವಿವಿಧ ವಾರ್ಡ್‌ ರಸ್ತಗಳ, ಚರಂಡಿ ಅಭಿವೃದ್ದಿ, ನಿರ್ವಹಣೆ ಮತ್ತು ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 1,055.00 ಕೋಟಿ ರು ಅಂದಾಜು ಮೊತ್ತದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಜಿಬಿಎ ಮುಖ್ಯ ಆಯುಕ್ತರು ಕೋರಿದ್ದರು.

 

 

ಹಾಗೆಯೇ ಜಿಬಿಎ ವ್ಯಾಪ್ತಿಯಲ್ಲಿರುವ 05 ನಗರ ಪಾಲಿಕೆಗಳಲ್ಲಿ ಹಾಳಾಗಿರುವ ವಾರ್ಡ್‌ ರಸ್ತೆಗಳಿಗೆ ಡಾಂಬರೀಕರಣಗೊಳಿಸುವುದು, ಚರಂಡಿ ಅಭಿವೃದ್ದಿಗೊಳಿಸುವುದು, ಇತರೆ ಮೂಲ ಸೌಕರ್ಯಗಳ ಕಾಮಗಾರಿಗಳ ಪಟ್ಟಿಯನ್ನು ಶಾಸಕರುಗಳು ಕಳಿಸಿದ್ದರು.

 

 

ಈ ಪಟ್ಟಿಯನ್ನು ಪರಿಶೀಲಿಸಿದ್ದ ವಿಭಾಗೀಯ ಅಧಿಕಾರಿಗಳು, ಮುಖ್ಯ ಇಂಜಿನಿಯರ್‍‌ಗಳು, ಈ ಕಾಮಗಾರಿಗಳ ಅವಶ್ಯಕತೆ ಮತ್ತು ಈ ಕಾಮಗಾರಿಗಳು ಇತರೆ ಯಾವುದೇ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿಲ್ಲ ಎಂಬುದನ್ನು ದೃಢೀಕರಿಸಿದ್ದರು.

ಅಂತಿಮವಾಗಿ 5 ನಗರ ಪಾಲಿಕೆಗಳಲ್ಲಿ ಒಟ್ಟಾರೆ 900.00 ಕೋಟಿ ರು ಅಂದಾಜು ಮೊತ್ತದಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆಗೆ 2025ರ ನವೆಂಬರ್‍‌ 3ರಂದು ಅನುಮೋದನೆ ನೀಡಿದ್ದ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿತ್ತು. ಆದರೀಗ ಬೆಂಗಳೂರು ಉತ್ತರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಆದೇಶವನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿದೆ ಎಂಬ ದೂರು ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಿದೆ.

ಯಲಹಂಕ ವಿಧಾನಸಭೆ ಕ್ಷೇತ್ರಕ್ಕೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಗೆಂದು 23 ಕೋಟಿ ರು ಅನುದಾನ ಮಂಜೂರಾಗಿತ್ತು. ಅದರೆ ಈ ಅನುದಾನವನ್ನು ಬಡಾವಣೆಯ ಸಂಪರ್ಕ ರಸ್ತೆಯ ಹೆಬ್ಬಾಗಿಲು ನಿರ್ಮಾಣಕ್ಕೆ ಬಳಸಿದೆ. ಹೀಗಾಗಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕೆ ಧಕ್ಕೆ ಒದಗಿದೆ ಎಂದು ನಾಗರೀಕ ಸಂಘಟನೆಗಳು ಆರೋಪಿಸಿವೆ.

ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮತ್ತೊಂದು ವಿಶೇಷವೆಂದರೇ ಈ ಅನುದಾನ ಬಳಸಿಕೊಂಡು ಉದ್ದೇಶಿತ ಬಡಾವಣೆ ರಸ್ತೆ ಸಂಪರ್ಕದ ಹೆಬ್ಬಾಗಿಲು ನಿರ್ಮಾಣ ಮಾಡುತ್ತಿರುವ ಬಡಾವಣೆಗೆ ಬಿಡಿಎಯಿಂದ ಇದುವರೆಗೂ ಅನುಮೋದನೆಯೇ ದೊರೆತಿಲ್ಲ ಎಂದು ಗೊತ್ತಾಗಿದೆ. ಈ ಬಡಾವಣೆಗೆ ಅನುಮೋದನೆ ನೀಡಬೇಕೇ ಬೇಡವೇ ಎಂಬ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಇಂದಿಗೂ ಇತ್ಯರ್ಥವಾಗಿಲ್ಲ. ಹೀಗಾಗಿ ಇದು ಈಗಲೂ ಅನಧಿಕೃತ ಬಡಾವಣೆಯಾಗಿಯೇ ಉಳಿದಿದೆ ಎಂದು ತಿಳಿದು ಬಂದಿದೆ.

ಯಲಹಂಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬೆಂಗಳೂರು ಉತ್ತರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 4 ವಾರ್ಡ್‌ಗಳಿವೆ. ಈ ನಾಲ್ಕು ವಾರ್ಡ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆಯಡಿ 23 ಕೋಟಿ ರು ಅನುದಾನ ಕಲ್ಪಿಸಲಾಗಿತ್ತು. ಆದರೀಗ ಈ ಅನುದಾವನ್ನು ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಮತ್ತು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಹೊಂದಿಕೊಂಡಿರುವ ಯಶೋಧ ನಗರದ ರಸ್ತೆಯೊಂದಕ್ಕೆ ಹೆಬ್ಬಾಗಿಲು ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ.

ಈ ಬಗ್ಗೆ ಇತಿಹಾಸ ತಜ್ಞ ಮತ್ತು ಲೇಖಕ ಡಾ ಪಾಂಡುಕುಮಾರ್, ಇಸ್ರೋದ ನಿವೃತ್ತ ವಿಜ್ಞಾನಿ ಶಿವಪ್ರಕಾಶ್‌, ಭೂ ದಾಖಲೆಗಳ ನಿವೃತ್ತ ನಿರ್ದೇಶಕ ಮುದ್ದುರಂಗಪ್ಪ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿವೃತ್ತ ಅಧಿಕಾರಿ ಜಿ ಎನ್ ನರಸಿಂಹಮೂರ್ತಿ ಮತ್ತು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಬಿಎಯ ಮುಖ್ಯ ಆಯುಕ್ತರ ಮಹೇಶ್ವರರಾವ್‌, ಬೆಂಗಳೂರು ಉತ್ತರ ನಗರಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್‍‌ ಅವರಿಗೆ ಈ-ಮೈಲ್ ಮೂಲಕ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಈ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ.

‘ಈ ಸಂಪರ್ಕ ರಸ್ತೆಯು ನ್ಯಾಯಾಂಗ ಬಡಾವಣೆಯ ಸಂಪರ್ಕ ರಸ್ತೆಯಾಗಿದೆ. ಹೀಗಾಗಿ ನ್ಯಾಯಾಂಗ ಬಡಾವಣೆಯಲ್ಲಿ ನೆಲೆಸಿರುವ ಪ್ರತಿಷ್ಠಿತರು ಮತ್ತು ಪ್ರಭಾವಿಗಳ ಒತ್ತಡಕ್ಕೆ ಮಣಿದು ಮೂಲಸೌಕರ್ಯಕ್ಕೆಂದು ನೀಡಿರುವ ಅನುದಾನವನ್ನೇ ದುರ್ಬಳಕೆ ಮಾಡಿದಂತಾಗಿದೆ,’ ಎನ್ನುತ್ತಾರೆ ದೂರುದಾರ ಎಚ್‌ ಎಂ ವೆಂಕಟೇಶ್‌.

ಅಲ್ಲದೇ ಮುಖ್ಯಮಂತ್ರಿಗಳ ಮೂಲಸೌಕರ್ಯ ಕಾರ್ಯಕ್ರಮ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು. ತಕ್ಷಣವೇ ಆರ್ಚ್ ನಿರ್ಮಾಣದ ಕಾಮಗಾರಿಯನ್ನು ನಿಲ್ಲಿಸಬೇಕು. ಮತ್ತು ಈ ಯೋಜನೆಯನ್ನು ರದ್ದು ಪಡಿಸಿ ಮುಖ್ಯಮಂತ್ರಿ ಮೂಲಭೂತ ಸೌಕರ್ಯದ ಯೋಜನೆಯ ಉದ್ದೇಶವನ್ನೇ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಆಗ್ರಹಿಸಿರುವುದು ತಿಳಿದು ಬಂದಿದೆ.

ಯಲಹಂಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಗೆ 2025-26ನೇ ಆರ್ಥಿಕ ಸಾಲಿನಲ್ಲಿ 23 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ನ್ಯಾಯಾಂಗ ಬಡಾವಣೆಯ ವಾರ್ಡ್‌ ನಂ 4ರಲ್ಲಿನ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿಗೆ 4 ಕೋಟಿ, ಡ್ಯುಯೋ ಮಾರ್ವೆಲ್‌ ಬಡಾವಣೆ, ಆಂಧ್ರ ಲೇ ಔಟ್‌, ಬಾಲಾಜಿ ಲೇಔಟ್‌, ನಿಸರ್ಗ ಲೇಔಟ್‌, ಮಹಾಲಕ್ಷ್ಮಿ ಲೇ ಔಟ್‌ ಮತ್ತಿತರೆ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ ನಂ 3 ಕ್ಕೆ 4 ಕೋಟಿ ರು. ಮಂಜೂರಾಗಿತ್ತು.

 

 

ರಮಣಶ್ರೀ ಕ್ಯಾಲಿಫೋನಿರ್ಯಾ ಗಾರ್ಡ್‌ನ್, ವಿವೇಕಾನಂದ ಬಡಾವಣೆ ಮತ್ತು ವಿನಾಯಕನಗರ ಮತ್ತು ಸುತ್ತಮುತ್ತ ಪ್ರದೇಶಗಳ ಅಭಿವೃದ್ಧಿಗೆ 2.50 ಕೋಟಿ ರು., ಬೆಟ್ಟಹಳ್ಳಿ ಬಡಾವಣೆ, ಅಂಬಾಭವಾನಿ ನಗರ, ಬೆಸ್ಟ್‌ ಕಂಟ್ರಿ, ಜ್ಯೋತಿ ನಗರ, ಆದಿತ್ಯ ನಗರ ಮತ್ತು ವಿನಾಯಕ ನಗರ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ 3.00 ಕೋಟಿ ರು. ಅನುದಾನ ಮಂಜೂರಾಗಿತ್ತು.

 

 

ಅದೇ ರೀತಿ ಪ್ರಕೃತಿ ಬಡಾವಣೆ, ಇಸ್ರೋ ಬಡಾವಣೆ, ಸೂರ್ಯವಂಶಿ, ಬಡಾವಣೆಗೆ 2.00 ಕೋಟಿ ರು., ಯಲಹಂಕ ವಿಧಾನಸಭೆ ಕ್ಷೇತ್ರದ ವಾರ್ಡ್‌ ನಂ 1ರಿಂದ 4ವರೆಗೆ ವಿವಿಧ ಪಾರ್ಕ್‌ಗಳ ಅಭಿವೃದ್ಧಿಗಾಗಿ 2.50 ಕೋಟಿ ರು. ಮಂಜೂರಾಗಿತ್ತು. ಅದೇ ರೀತಿಯಲಹಂಕ ಉಪ ನಗರದ ವಾರ್ಡ್‌ ನಂ 4ರಲ್ಲಿರುವ ನ್ಯಾಯಾಂಗ ಬಡಾವಣೆಗೆ ಹೆಬ್ಬಾಗಿಲು ನಿರ್ಮಾಣಕ್ಕೆ 2 ಕೋಟಿ ರು ಮಂಜೂರಾಗಿತ್ತು.

 

 

ಹಾಗೆಯೇ ಈ ವಾರ್ಡ್‌ಗಳಲ್ಲಿ ಮುಖ್ಯ ಮತ್ತು ಅಡ್ಡ ರಸ್ತೆಗಳಲ್ಲಿ ಚರಂಡಿ, ಮರು ಡಾಂಬರೀಕರಣ, ಪಾದಚಾರಿ ಮಾರ್ಗ ಅಭಿವೃದ್ದಿ, ಉದ್ಯಾನಗಳ ಅಭಿವೃದ್ಧಿ ನ್ಯಾಯಾಂಗ ಬಡಾವಣೆಯಲ್ಲಿ ಆರ್ಚ್‌ ನಿರ್ಮಾಣ ಮಾಡುವ ಕೆಲಸಗಳನ್ನು ನಿರ್ವಹಿಸಬೇಕಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

‘ಮುಖ್ಯಮಂತ್ರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು ಮುಖ್ಯಮಂತ್ರಿ ಅವರ ಕಾರ್ಯಕ್ರಮ ಯೋಜನೆ ಅನುಷ್ಠಾನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಕ್ಷಣ ಆರ್ಚ್ ನಿರ್ಮಾಣದ ಕಾಮಗಾರಿಯನ್ನು ನಿಲ್ಲಿಸಬೇಕು. ಮತ್ತು ಈ ಯೋಜನೆಯನ್ನು ರದ್ದು ಪಡಿಸಿ ಮುಖ್ಯಮಂತ್ರಿ ಮೂಲಭೂತ ಸೌಕರ್ಯದ ಯೋಜನೆಯ ಉದ್ದೇಶವನ್ನೇ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು,’ ಎಂದು ನಾಗರಿಕ ಸಂಘಟನೆಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಇ ಮೈಲ್‌ ಮೂಲಕ ಕೋರಿದೆ.

ಹಾಗೆಯೇ ಪಾಲಿಕೆ ಆಯುಕ್ತ ಪೊಮ್ಮುಲ ಸುನೀಲ್ ಕುಮಾರ್ ಅವರಿಗೆ ಪ್ರತಿಕ್ರಿಯೆ ಕೋರಿ ದಿ ಫೈಲ್‌ ಕರೆ ಮಾಡಿತ್ತಾದರೂ ಸಂಪರ್ಕ ಸಾಧ್ಯವಾಗಲಿಲ್ಲ.

Hot this week

ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್‌ನಲ್ಲಿ ಲೋಪ!; ಬಹಿರಂಗವಾಗದ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ವರದಿ

ಬೆಂಗಳೂರು; ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍‌, ಅನುಮೋದಿತ ಸ್ಥಳದಲ್ಲಿ ಇಳಿಯದೇ ಬೇರೆ...

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...
Please Scan to make Your Contribution

Topics

ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್‌ನಲ್ಲಿ ಲೋಪ!; ಬಹಿರಂಗವಾಗದ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ವರದಿ

ಬೆಂಗಳೂರು; ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍‌, ಅನುಮೋದಿತ ಸ್ಥಳದಲ್ಲಿ ಇಳಿಯದೇ ಬೇರೆ...

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

Related Articles

Popular Categories

error: Content is protected !!