ಗೋದಾಮಿನಲ್ಲೇ ಧೂಳು, ಶೇ.17ರಷ್ಟು ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ ಸಮವಸ್ತ್ರ; ತಪಾಸಣೆ

ಬೆಂಗಳೂರು;  ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಉಚಿತ ಸಮವಸ್ತ್ರಗಳನ್ನು ಸ್ವೀಕರಿಸಿದ್ದ ರಾಜ್ಯದ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ವಿತರಿಸಿಲ್ಲ. ಸ್ವೀಕರಿಸಿದ್ದ ಉಚಿತ ಸಮವಸ್ತ್ರಗಳನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲಿಡಲಾಗುತ್ತಿದೆಯೇ ವಿನಃ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುತ್ತಿಲ್ಲ  ಎಂಬುದು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ತಪಾಸಣೆಯು ಬಹಿರಂಗಗೊಳಿಸಿದೆ.

 

ವಿದ್ಯಾವಿಕಾಸ ಯೋಜನೆಯಡಿ 2022-23ನೇ ಸಾಲಿನ 2ನೇ ಜೊತೆ ಸಮವಸ್ತ್ರವನ್ನು 2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಸರಬರಾಜು ಮಾಡಲು ಸರ್ಕಾರವು ಆದೇಶಿಸಿತ್ತು.

 

ಆದರೆ  ಪ್ರಸಕ್ತ ಶೈಕ್ಷಣಿಕ ವರ್ಷದ ಒಂದು ತಿಂಗಳು ಪೂರ್ಣಗೊಂಡಿದ್ದರೂ ಇನ್ನೂ ಶೇ.17ರಷ್ಟು ಮಕ್ಕಳಿಗೆ ಸಮವಸ್ತ್ರ ತಲುಪಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರು ವಿಧಾನಪರಿಷತ್‌ನಲ್ಲಿ ಮಂಜುನಾಥ ಭಂಡಾರಿ ಅವರು ಕೇಳಿದ್ದ ಪ್ರಶ್ನೆಗೆ ಉತ್ತರವನ್ನೂ ನೀಡಿದ್ದಾರೆ.

 

 

ಅದರಂತೆ ಸರಬರಾಜಾಗಿರುವ ಸಮವಸ್ತ್ರಗಳನ್ನು ಫಲಾನುಭವಿ ಮಕ್ಕಳಿಗೆ ಹಂಚಿಕೆ ಮಾಡಬೇಕಿದ್ದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಅಧಿಕಾರಿಗಳು ಅದನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲೇ ಇಡುತ್ತಿರುವುದರ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು 2023ರ ಜೂನ್‌ 22ರಂದೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

 

‘ಸ್ವೀಕರಿಸಿದ ಸಮವಸ್ತ್ರಗಳನ್ನು ಯಾವುದೇ ಕಾರಣಗಳಿಂದ ದೀರ್ಘಕಾಲ ಗೋದಾಮಿನಲ್ಲಿ ಶೇಖರಿಸದೆ ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮ ತ್ವರಿತವಾಗಿ ನಿರ್ವಹಿಸಬೇಕು. ಈ ಬಗ್ಗೆ ಹಲವಾರು ಬಾರಿ ಸುತ್ತೋಲೆ ನೀಡಿದ್ದರೂ ಸಹ ಮೇಲಾಧಿಕಾರಿಗಳು ತಪಾಸಣೆಗೆ ಬಂದಂತಹ ಸಂದರ್ಭದಲ್ಲಿ ಕೆಲವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮವಸ್ತ್ರಗಳು ಹಂಚಿಕೆ ಆಗದೇ ಗೋದಾಮಿನಲ್ಲಿರುವುದನ್ನು ಈ ಹಿಂದೆ ಗಮನಿಸಲಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ ವಿಶಾಲ್‌ ಅವರು 2023ರ ಜೂನ್‌ 22ರಂದು  ಹೊರಡಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

 

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲು ಅತ್ಯಾಸಕ್ತಿ ವಹಿಸಿದ್ದ ರಾಜ್ಯ ಸರ್ಕಾರವು 2022-23ನೇ ಶೈಕ್ಷಣಿಕ ವರ್ಷವು ಆರಂಭವಾಗಲು ಇನ್ನು ಐದು ದಿನಗಳು ಬಾಕಿ ಇದ್ದರೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಮೂರು ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆ ಮಾಡಿರಲಿಲ್ಲ.  ಸಮವಸ್ತ್ರ ಖರೀದಿ ಮತ್ತು ಪೂರೈಕೆ ಸಂಬಂಧ ಸರ್ಕಾರವು  ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡಿತ್ತು.

 

2021-22ನೇ ಸಾಲಿನ ಮೊದಲನೇ ಜೊತೆ ಸಮವಸ್ತ್ರ ಖರೀದಿ ಮತ್ತು ಪೂರೈಕೆಗೆ ಕರೆದಿದ್ದ ಇ- ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ್ದ ದರವು ಎರಡನೇ ಜೊತೆಗೆ ನಮೂದಿಸಿದ್ದ ಅಂದಾಜು ದರದಲ್ಲಿ ಶೇ.30ರಷ್ಟು ಹೆಚ್ಚಾಗಿತ್ತು.  2021-22ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ 2ನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧಿಸಿದಂತೆ ಮೂಲ ದರಗಳನ್ನು ಪುನರ್‌ ನಿಗದಿ ಮಾಡಿ ಅಲ್ಪಾವಧಿಗೆ ಮರು ಟೆಂಡರ್‌ ಆಹ್ವಾನಿಸಿತ್ತು.

 

ಬಿಡ್‌ದಾರರೊಂದಿಗೆ ನಡೆದ ದರ ಸಂಧಾನ ನಂತರ ಅಂತಿಮವಾಗಿ 99.15 ಕೋಟಿ ರು.ಗೆ ಅಂತಿಮಗೊಳಿಸಿದ್ದ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ಹಿಂದಿನ ಟೆಂಡರ್‌ಗೆ ಹೋಲಿಸಿದರೆ 7.3 ಕೋಟಿ ರು. ಅಧಿಕವಾಗಿತ್ತು.

 

ಈ ಹಿಂದಿನ ಟೆಂಡರ್‌ ಮೊತ್ತ ಮತ್ತು ಹೊಸದಾಗಿ ಕರೆದಿರುವ ಟೆಂಡರ್ ಮೊತ್ತ ಅಧಿಕವಾಗಲು ಇಂಧನ ಬೆಲೆ ಸೇರಿದಂತೆ ಇನ್ನಿತರೆ ಕಾರಣಗಳನ್ನು ಇಲಾಖೆಯು ಒದಗಿಸಿದೆ. ‘ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಧನಗಳು, ಕಚ್ಚಾ ಸಾಮಗ್ರಿಗಳು, ವೇತನ ಮತ್ತು ಇನ್ನಿತರೆ ಪೂರಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಹೆಚ್ಚಾಗಿರುತ್ತದೆಯಲ್ಲದೆ ಕೊರತೆಯೂ ಇದೆ. ಸರ್ಕಾರದ ಶಾಲೆಗಳಲ್ಲಿ ಸುಮಾರು ಮೂರು ಲಕ್ಷ ಮಕ್ಕಳ ದಾಖಲಾತಿ ಹೆಚ್ಚಾಗಿರುತ್ತದೆ. ಆದ್ದರಿಂದ ಸಮವಸ್ತ್ರದ ಬಟ್ಟೆಯ ಪರಿಮಾಣವು ಸುಮಾರು 124 ಲಕ್ಷ ಮೀಟರ್‌ನಿಂದ 136 ಲಕ್ಷ ಮೀಟರ್‌ ಅಧಿಕವಾಗಿದೆ. 2021-22ನೇ ಸಾಲಿನ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ ದರವು ಅಂದಾಜು ದರಗಳಿಗಿಂತ ಶೇ. 17.41 ಕಡಿಮೆ ಇರುತ್ತದೆ. ಅಂದಾಜು ದರವು 47.00 ಕೋಟಿ ರು. ಆಗಿರುತ್ತದೆ,’ ಎಂದು ಅಧಿಕಾರಿಗಳು ವಿವರಿಸಿದ್ದರು.

 

ಶಿಕ್ಷಣ ಇಲಾಖೆಯ ಟಿಪ್ಪಣಿ ಹಾಳೆ ಪ್ರತಿ

 

2021-22ನೇ ಸಾಲಿನ ಮೊದಲನೆ ಜೊತೆ ಸಮವಸ್ತ್ರದ ಟೆಂಡರ್‌ ದರಗಳು ಅಂದಿನ ಸನ್ನಿವೇಶಗಳಿಗೆ (ಕೊರೋನ ಸಮಯ) ಸೀಮಿತವಾಗಿ ಕಡಿಮೆ ಆಗಿದೆ. ಆದರೀಗ ಎರಡನೇ ಬಾರಿಗೆ ಕರೆಯಲಾಗಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಹೊರಹೊಮ್ಮಿದ ಅಂತಿಮ ಟೆಂಡರ್‌ ದರಗಳು ಮತ್ತುಇನ್ನಿತರೆ ವೆಚ್ಚಗಳು ಸೇರಿ 99.15 ಕೋಟಿ ರು. ಆಗಿದೆ. ಈ ಮೊತ್ತವು ಮಂಜೂರಾಗಿರುವ ಅನುದಾನಕ್ಕಿಂತ 7.30 ಕೋಟಿ ರು. ಹೆಚ್ಚುವರಿಯಾಗಿತ್ತು.

 

ಶಾಲಾರಂಭಕ್ಕೆ ಐದೇ ಐದು ದಿನ ಬಾಕಿ; ವಿದ್ಯಾರ್ಥಿಗಳಿಗೆ ದೊರಕದ ಸಮವಸ್ತ್ರ, ಟೆಂಡರ್‌ನಲ್ಲೇ ಕಾಲಹರಣ

 

‘2022-23ನೇ ಶೈಕ್ಷಣಿಕ ವರ್ಷವು 2022ರ ಮೇ 16ರಿಂದ ಪ್ರಾರಂಭವಾಗಲಿದ್ದು ಮಕ್ಕಳಿಗೆ ಸಮವಸ್ತ್ರ ಒದಗಿಸಲು ಕೂಡಲೇ ಕ್ರಮವಹಿಸಬೇಕಾಗಿದೆ. 2021-22ನೇ ಸಾಲಿನ ಎರಡನೆ ಜೊತೆ ಉಚಿತ ಸಮವಸ್ತ್ರ ಸರಬರಾಜಿಗೆ 99.15 ಕೋಟಿ ರು. ಭರಿಸಲು ಅರ್ಥಿಕ ಇಲಾಖೆ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋರಿತ್ತು.

 

2021ರ ಡಿಸೆಂಬರ್‌ 31ರಂದು ಕರೆದಿದ್ದ ಟೆಂಡರ್‌ನಲ್ಲಿ ಅರವಿಂದ್‌ ಕೋಟ್ಸ್‌ ಇಂಡಿಯಾ ಲಿಮಿಟೆಡ್‌, ಪದಂಚಂದ್‌ ಮಿಲಾಪ್‌ಚಂದ್‌ಜೈನ್‌ ಭಾಗವಹಿಸಿದ್ದರು. ಇದರಲ್ಲಿ ಅರವಿಂದ್‌ ಕೋಟ್ಸ್‌ 2ನೇ ಮತ್ತು ಪದಂಚಂದ್‌ 3ನೇ ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಪ್ಯಾಕೇಜ್‌ 1 ಮತ್ತು 2ರ ಐಟಂ ಸಂಖ್ಯೆ 1,2 ಮತ್ತು 3ರ ಕನಿಷ್ಠ ದರಗಳಿಗೆ ಇಳಿಸಲು ಈ ಬಿಡ್‌ದಾರರು ಸಹಮತಿ ಸೂಚಿಸಿರಲಿಲ್ಲ.

 

ಹೀಗಾಗಿ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ್ದ 91.85 ಕೋಟಿ ರು.ಗೆ 7 ಲಕ್ಷ ಅಧಿಕ ಸೇರ್ಪಡೆಗೊಂಡು ಒಟ್ಟು 91.92 ಕೋಟಿ ರು. ಆಗಿತ್ತು. ಕೆಟಿಪಿಪಿ ಕಾಯ್ದೆ 2000 ನಿಯಮ 12(5)ರ ಪ್ರಕಾರ ಶೇ. 25ರಷ್ಟು ಹೆಚ್ಚುಕಡಿಮೆ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪ್ಯಾಕೇಜ್‌ಗಳನ್ನು ಪದಂಚಂದ್‌ ಮಿಲಾಪ್‌ಚಂದ್‌ ಜೈನ್‌ ಅವರಿಗೆ ಒಟ್ಟು 71.55 ಕೋಟಿ ರು. ವೆಚ್ಚದಲ್ಲಿ ಸಮವಸ್ತ್ರ ಬಟ್ಟೆ ಒದಗಿಲು ಆದೇಶ ನೀಡಲು ಆಯುಕ್ತರು ಕೋರಿದ್ದರು.

the fil favicon

SUPPORT THE FILE

Latest News

Related Posts