Monday | August 10, 2026 |

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ ಇಲಾಖೆಗಳ ಮುಖ್ಯ ನಿಯಂತ್ರಣಾಧಿಕಾರಿಗಳು ಮಾಸಿಕ ಲೆಕ್ಕ ಹೊಂದಾಣಿಕೆ ಮಾಡುವುದರಲ್ಲಿಯೇ ಲೋಪ ಎಸಗುತ್ತಿರುವ ಪ್ರಕರಣಗಳು ಇದೀಗ ಬಹಿರಂಗವಾಗಿವೆ.

ವೆಚ್ಚ ಮತ್ತು ಮತ್ತು ಸ್ವೀಕೃತಿಗಳ ಹೊಂದಾಣಿಕೆ ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಆದಾಯ ವೆಚ್ಚ, ಸ್ವೀಕೃತಿ ಮತ್ತು ಬಂಡವಾಳ ವೆಚ್ಚವನ್ನು ಮರು ಹೊಂದಾಣಿಕೆಯಲ್ಲಿ ಪದೇಪದೇ ಲೋಪಗಳು ಕಂಡುಬರುತ್ತಿವೆ. ಈ ಸಂಬಂಧ ಕರ್ನಾಟಕ ವಿಭಾಗದ ಲೆಕ್ಕಪರಿಶೋಧನಾ ಮಹಾನಿರ್ದೇಶಕರಾದ ರಾಜೀವ್ ಕುಮಾರ್ ಸಿಂಗ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕಡ್ಡಾಯ ಮಾಸಿಕ ಲೆಕ್ಕ ಹೊಂದಾಣಿಕೆ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಕರ್ನಾಟಕ ವಿಭಾಗದ ಲೆಕ್ಕಪರಿಶೋಧನಾ ಮಹಾನಿರ್ದೇಶಕರಾದ ರಾಜೀವ್ ಕುಮಾರ್ ಸಿಂಗ್‌ ಸರ್ಕಾರದ ಗಮನ ಸೆಳೆದಿದ್ದರು. ಆದರೂ ಸಹ ಮುಖ್ಯ ನಿಯಂತ್ರಣಾಧಿಕಾರಿಗಳು ಕಡ್ಡಾಯ ಮಾಸಿಕ ಲೆಕ್ಕ ಹೊಂದಾಣಿಕೆ ಪ್ರಕ್ರಿಯೆಗಳಲ್ಲಿ ಪದೇಪದೇ ಲೋಪ ಎಸಗುತ್ತಿದ್ದಾರೆ.

ಹೀಗಾಗಿ ಆರ್ಥಿಕ ಇಲಾಖೆಯು ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ. 2026ರ ಜುಲೈ 1ರಂದು ಹೊರಡಿಸಿರುವ ಸುತ್ತೋಲೆ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

ಲೆಕ್ಕಪರಿಶೋಧನಾ ಮಹಾನಿರ್ದೇಶಕರ ಪತ್ರದಲ್ಲೇನಿದೆ?

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯ ನಿಯಂತ್ರಣಾಧಿಕಾರಿಗಳು ವೆಚ್ಚ ಹಾಗೂ ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆ (Reconciliation) ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತಿಲ್ಲ. ಇದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.

2025–26ನೇ ಹಣಕಾಸು ವರ್ಷದ ಹಣಕಾಸು ಲೆಕ್ಕಗಳು (Finance Accounts) ಹಾಗೂ ವಿನಿಯೋಗ ಲೆಕ್ಕಗಳು (Appropriation Accounts) ಅಂತಿಮಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಫೆಬ್ರವರಿ ಅಂತ್ಯದ ವೇಳೆಗೆ ಹೊಂದಾಣಿಕೆ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ ಶೇಕಡಾವಾರು ಪ್ರಮಾಣ ಇನ್ನೂ ಗಮನಾರ್ಹವಾಗಿ ಕಡಿಮೆಯಿದೆ. ಇದು ಪ್ರಮುಖ ಆತಂಕದ ವಿಷಯವಾಗಿದೆ ಎಂದು ಲೆಕ್ಕಪರಿಶೋಧನಾ ಮಹಾನಿರ್ದೇಶಕರು ತಮ್ಮ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಆದಾಯ ವೆಚ್ಚವು 2,39,487.42 ಕೋಟಿ ಇದೆ. ಇದನ್ನು 1,78,806 ಕೋಟಿ ರು ಗೆ ಮರು ಹೊಂದಾಣಿಕೆ ಮಾಡಲಾಗಿದೆ. ಶೇ.74.66ರಷ್ಟು ಪೂರ್ಣಗೊಂಡಿದೆ. ಸ್ವೀಕೃತಿಗಳ ವಿಭಾಗದಲ್ಲಿ 2,44,762.93 ಕೋಟಿ ರು ಇದೆ. ಇದನ್ನು 95,110.08 ಕೋಟಿ ರು ಗೆ ಮರು ಹೊಂದಾಣಿಕೆ ಮಾಡಲಾಗಿದೆ. ಇದು ಕೇವಲ ಶೇ.38.86ರಷ್ಟು ಮಾತ್ರ ಪೂರ್ಣಗೊಂಡಿದೆ. ಅದೇ ರೀತಿ ಬಂಡವಾಳ ವೆಚ್ಚದಲ್ಲಿಯೂ ಸಹ 38,662.40 ಕೋಟಿ ರು ಇದೆ. ಇದನ್ನು 8,710.20 ಕೋಟಿ ರು ಗೆ ಮರು ಹೊಂದಾಣಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯು ಶೇ. 22.53ರಷ್ಟು ಮಾತ್ರ ಪೂರ್ಣವಾಗಿದೆ ಎಂದು ಸರ್ಕಾರದ ಗಮನ ಸೆಳೆದಿರುವುದು ತಿಳಿದು ಬಂದಿದೆ.

 

 

‘ಸರ್ಕಾರದ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಕಾಪಾಡಲು, ಇಲಾಖೆಗಳ ಅಂಕಿ-ಅಂಶಗಳು ಮತ್ತು ಈ ಕಚೇರಿ ಸಂಗ್ರಹಿಸಿರುವ ಅಂಕಿ-ಅಂಶಗಳ ನಡುವೆ ನಿಯಮಿತ ಹಾಗೂ ಸಕಾಲಿಕ ಹೊಂದಾಣಿಕೆ (Reconciliation) ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

 

ಅಷ್ಟೇ ಅಲ್ಲ ‘ಹಲವು ಮುಖ್ಯ ನಿಯಂತ್ರಣಾಧಿಕಾರಿಗಳು (CCOs) ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕಿದ್ದ ಹೊಂದಾಣಿಕೆ ಕಾರ್ಯವನ್ನು ನಿರ್ಲಕ್ಷಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಾಕಿ ಉಳಿದಿರುವ ಹೊಂದಾಣಿಕೆ ಕೆಲಸಗಳ ಪರಿಣಾಮವಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬ, ವ್ಯತ್ಯಾಸಗಳು (Discrepancies) ಹಾಗೂ ತಾಂತ್ರಿಕ ತೊಂದರೆಗಳು ಉಂಟಾಗುತ್ತಿವೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್ ಸಿಂಗ್‌ ಅವರ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

 

ಮಾಸಿಕ ಹೊಂದಾಣಿಕೆ (Monthly Reconciliation) ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಮುಖ್ಯ ನಿಯಂತ್ರಣಾಧಿಕಾರಿಗಳಿಗೆ (Chief Controlling Officers – CCOs) ಸೂಕ್ತ ನಿರ್ದೇಶನ ನೀಡಬೇಕು. ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ (Heads of Departments) ಬಾಕಿ ಉಳಿದಿರುವ ಎಲ್ಲ ಹೊಂದಾಣಿಕೆ ಕಾರ್ಯಗಳನ್ನು ಅತ್ಯಂತ ಆದ್ಯತೆಯ ಮೇರೆಗೆ 2026ರ ಜೂನ್ 5ರೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

ಎಲ್ಲಾ ಹೊಂದಾಣಿಕೆ ಪ್ರಕ್ರಿಯೆಗಳನ್ನು ಜೂನ್‌ 5ರೊಳಗೆ ಪೂರ್ಣಗೊಳಿಸಬೇಕು ಎಂದು ಕೋರಿದ್ದರೂ ಸಹ ಮುಖ್ಯ ನಿಯಂತ್ರಣಾಧಿಕಾರಿಗಳು ಕಾಲ ಕಸವನ್ನಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಆರ್ಥಿಕ ಇಲಾಖೆಯು 2026ರ ಜುಲೈ 1ರಂದೇ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲೇನಿದೆ?

2026ರ ಫೆಬ್ರುವರಿ ಅಂತ್ಯಕ್ಕೆ ಶೇ. 38.86ರಷ್ಟು ಜಮೆ ಮತ್ತು ಶೇ. 74.66ರಷ್ಟು ರಾಜಸ್ವ ವೆಚ್ಚ, ಶೆ. 22.53ರಷ್ಟು ಬಂಡವಾಳ ವೆಚ್ಚಗಳನ್ನು ಲೆಕ್ಕ ಹೊಂದಾಣಿಕೆ ಮಾಡಲಾಗಿದೆ. ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಇಲಾಖೆ ಲೆಕ್ಕಗಳು ಮತ್ತು ಮಹಾಲೇಖಪಾಲರ ಅಂಕಿ ಅಂಶಗಳ ನಡುವೆ ನಿಯಮಿತ ಮತ್ತು ಸಕಾಲಿಕ ಮರು ಹೊಂದಾಣಿಕೆ ಕಡ್ಡಾಯವಾಗಿ ಆಗಬೇಕು. ಆದರೂ ಸಹ ಹಲವು ಮುಖ್ಯ ನಿಯಂತ್ರಣಾಧಿಕಾರಿಗಳು ಕಡ್ಡಾಯ ಮಾಸಿಕ ಲೆಕ್ಕ ಹೊಂದಾಣಿಕೆ ಮಾಡುವುದರಲ್ಲಿ ಲೋಪ ಎಸಗುತ್ತಿದ್ದಾರೆ. ಬಾಕಿ ಇರುವ ಲೆಕ್ಕ ಹೊಂದಾಣಿಕೆಯು ವಾರ್ಷಿಕ ಲೆಕ್ಕ ಪತ್ರಗಳ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ವ್ಯತ್ಯಾಸಗಳು ಕಂಡು ಬಂದಿವೆ ಎಂದು ಸುತ್ತೋಲೆಯಲ್ಲಿ ವಿವರಿಸಿದೆ.

 

 

ಮುಖ್ಯ ನಿಯಂತ್ರಣಾಧಿಕಾರಿಗಳು ನಿಯಮಿತವಾಗಿ ಲೆಕ್ಕ ಹೊಂದಾಣಿಕೆ ಮಾಡಬೇಕು. ಇಲ್ಲವಾದಲ್ಲಿ ಖಜಾನೆ -2 ರಲ್ಲಿ ಬಿಲ್‌ಗಳ ಸಲ್ಲಿಕೆಯನ್ನು ನಿರ್ಬಂಧಗೊಳಿಸಲಾಗುವುದು. ಬಾಕಿ ಇರುವ ಲೆಕ್ಕ ಹೊಂದಾಣಿಕೆಗಳನ್ನು ಕಡ್ಡಾಯವಾಗಿ 2026ರ ಜುಲೈ 6ರೊಳಗೆ ಪೂರ್ಣಗೊಳಿಸಬೇಕು ಎಂದು ಎರಡನೇ ಬಾರಿ ಕಟ್ಟು ನಿಟ್ಟಾಗಿ ನಿರ್ದೇಶನ ನೀಡಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

 

 

ಅಲ್ಲದೆ ಇಲಾಖೆಗಳ ಆಂತರಿಕ ಆರ್ಥಿಕ ಸಲಹೆಗಾರರು ತಮ್ಮ ವ್ಯಾಪ್ತಿಯ ಇಲಾಖೆಗಳಿಂದ ಕೈಗೊಂಡಿರುವ ಕ್ರಮದ ಕುರಿತು ಕ್ರೋಢೀಕೃತ ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಪುನಃ ಮತ್ತದೇ ನ್ಯೂನತೆಗಳು ಮರುಕಳಿಸಿದರೇ ಸಂಬಂಧಪಟ್ಟ ಆಡಳಿತ ಇಲಾಖೆಗಳೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆಯನ್ನೂ ಸಹ ನೀಡಿರುವುದು ತಿಳಿದು ಬಂದಿದೆ.

Hot this week

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ...
Please Scan to make Your Contribution

Topics

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

Related Articles

Popular Categories

error: Content is protected !!