ಐಎಂಎಯೊಂದಿಗೆ ಒಡಂಬಡಿಕೆ; ಅಧಿಕಾರಿಗಳು, ಶಿಕ್ಷಕರ ವಿರುದ್ಧ ವಿಚಾರಣೆಗೆ ವಿಶೇಷ ಮಂಜೂರಾತಿ

ಬೆಂಗಳೂರು; ಸಾವಿರಾರು ಕೋಟಿ ರು. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಎಂಎ ಕಂಪನಿಯೊಂದಿಗೆ ಶಿವಾಜಿನಗರದಲ್ಲಿರುವ ವಿ ಕೆ ಓಬೇದುಲ್ಲಾ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೂರ್ವಾನುಮತಿ ಪಡೆದಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಖಾಸಗಿ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ಜಿಲ್ಲೆಯಯ ಹಿಂದಿನ ಉಪನಿರ್ದೇಶಕ ಸಿ ಬಿ ಜಯರಂಗ, ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌ ವಿ, ಹಿಂದಿನ ಉಪ ನಿರ್ದೇಶಕ ಅಬ್ದುಲ್‌ ವಾಜಿದ್‌ ಖಾಜಿ, ಪ್ರಭಾ ಅಲೆಕ್ಸಾಂಡರ್‌, ನಜತಗ್ತುನ್ನೀಸಾ, ಕೌಸರ್‌ ಜಹಾನ್‌, ನಫೀಜುನ್ನೀಸಾ ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ನಡೆಸಿರುವ ಇಲಾಖೆಯು ಇದೀಗ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.

 

ಆರೋಪಿತ ಅಧಿಕಾರಿಗಳು ಎಸಗಿರುವ ಕರ್ತವ್ಯಲೋಪದ ವಿರುದ್ಧ ಸಲ್ಲಿಕೆಯಾಗಿರುವ ಪ್ರಾಥಮಿಕ ವಿಚಾರಣೆ ವರದಿ ಆಧರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ 1958ರ ನಿಯಮ 214ರ ಅನ್ವಯ ಜಂಟಿ ಇಲಾಖೆ ವಿಚಾರಣೆ ನಡೆಸಲು ವಿಶೇಷ ಮಂಜೂರಾತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು 2022ರ ಮಾರ್ಚ್‌ನಲ್ಲಿ ಆದೇಶ (ಸರ್ಕಾರದ ಆದೇಶ ಸಂಖ್ಯೆ; ಇಡಿ 11 ಡಿಜಿಪಿ 2021 ಬೆಂಗಳೂರು) ಹೊರಡಿಸಿದೆ. ಈ ಆದೇಶದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಧಿಕಾರಿ, ಶಿಕ್ಷಕರ ವಿರುದ್ಧ ವಿಚಾರಣೆಗೆ ಹೊರಡಿಸಿರುವ ಆದೇಶದ ಪ್ರತಿ

 

ಆರೋಪಿತ ಅಧಿಕಾರಿ ಮತ್ತು ಶಿಕ್ಷಕರ ಪೈಕಿ ಅಬ್ದುಲ್‌ ವಾಜೀದ್‌ ಖಾಜಿ (2020ರ ಜೂನ್‌ 30), ಸಿ ಬಿ ಜಯರಂಗ (2020ರ ಜೂನ್‌ 30), ನಜಾತುನ್ನೀಸಾ (2017 ಫೆ.28), ಕೌಸರ್‌ ಜಹಾನ್‌ (2020ರ ಜೂನ್‌ 30)ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿರುವುದು ಆದೇಶದ ನಡವಳಿಯಿಂದ ತಿಳಿದು ಬಂದಿದೆ.

 

ಅಲ್ಲದೆ ವಿ ಕೆ ಓಬೆದುಲ್ಲಾ ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕಾಗಿ ಇದೇ ಕಂಪನಿಯು ಮಾಡಿರುವ ವೆಚ್ಚವನ್ನೂ ಸರ್ಕಾರದಿಂದಲೇ ವಸೂಲು ಮಾಡಲು ಮುಂದಾಗಿತ್ತು. ಸರ್ಕಾರಿ ವಿ ಕೆ ಓಬೆದುಲ್ಲಾ ಶಾಲೆಯ ಮೂಲಸೌಕರ್ಯಕ್ಕಾಗಿ ಐ ಎಂ ಎ ಕಂಪನಿಯು 12.82 ಕೋಟಿ ರು. ವೆಚ್ಚ ಮಾಡಿತ್ತು. ಈ ಹಣವನ್ನು ವಸೂಲು (ರಿಕವರಿ) ಮಾಡಿದಲ್ಲಿ ಹೂಡಿಕೆದಾರರಿಗೆ ಕ್ಲೈಮ್‌ಗಳನ್ನು ಹಿಂದಿರುಗಿಸಲು ಅನುಕೂಲವಾಗುತ್ತದೆ ಎಂದು ಕಂದಾಯ ಇಲಾಖೆಯು ಪ್ರತಿಪಾದಿಸಿತ್ತು. ಈ ಸಂಬಂಧ 2021ರ ಜುಲೈ 31ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಟ್ಟುಗೋಲಿಗೆ ಸಲ್ಲಿಸಿದ್ದ ಪ್ರಸ್ತಾವನೆ

 

‘2017-18 ಮತ್ತು 2018-19ನೇ ಸಾಲಿಗೆ ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕೆ 10 ಕೋಟಿ ಹೂಡಿಕೆ ಮಾಡಿರುತ್ತದೆ. ಶಾಲೆಯ ವಾರ್ಷಿಕ ಕಾರ್ಯನಿರ್ವಹಣೆ ವೆಚ್ಚವಾಗಿ 2.82 ಕೋಟಿ ಪಾವತಿ ಮಾಡಿರುವುದರಿಂದ ಒಟ್ಟು 12.82 ಕೋಟಿ ಮೊತ್ತವನ್ನು ಚೇತರಿಕೆ ಮಾಡಿದಲ್ಲಿ ಹೂಡಿಕೆದಾರರಿಗೆ ಕ್ಲೈಮ್‌ಗಳನ್ನು ಹಿಂದಿರುಗಿಸಲು ಅನುಕೂಲವಾಗುತ್ತದೆ,’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು.

 

ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ‘ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಗೆ ಐಎಂಎ ಸಂಸ್ಥೆ ಮಾಡಿರುವ ವೆಚ್ಚವನ್ನು ಪರಿಶೀಲಿಸಲಾಗಿದೆ. ರಾಜ್ಯದಲ್ಲಿ ಸಾವಿರಾರು ಶಾಲೆಗಳಿಗೆ ಅನೇಕ ಕಂಪನಿಗಳು, ಉದ್ಯಮಗಳು, ದಾನಿಗಳು ಮೂಲಭೂತ ಸೌಲಭ್ಯಗಳಿಗೆ ವೆಚ್ಚ ಮಾಡಿದ್ದು ಸಾರ್ವಜನಿಕ ಉದ್ದೇಶಕ್ಕೆ ಬಳಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡಿದಲ್ಲಿ ಸಾವಿರಾರು ಪ್ರಕರಣಗಳಲ್ಲಿ ಈ ರೀತಿಯ ಬೇಡಿಕೆ ಬರುವ ಸಾಧ್ಯತೆ ಇದೆ. ಆದ್ದರಿಂದ ಈ ಶಾಲೆಯ ಮೂಲಭೂತ ಸೌಕರ್ಯಕ್ಕೆ ವ್ಯಯಿಸಲಾಗಿರುವ ಮೊತ್ತವನ್ನು ಸರ್ಕಾರದಿಂದ ನೀಡಲು ಸಾಧ್ಯವಿಲ್ಲ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾನೂನು ಸಲಹೆಗಾರರು ಅಭಿಪ್ರಾಯಿಸಿದ್ದರು.

 

ಅಲ್ಲದೆ ಶಾಲಾ ಕಟ್ಟಡಗಳು, ತರಗತಿಗಳು ಮೂಲಭೂತ ಸೌಲಭ್ಯಗಳನ್ನು ಎಲ್ಲಾ ರೀತಿಯ ದಾನಿಗಳಿಂದ ಪಡೆಯಲಾಗಿದೆ. ಈ ಸಂಬಂಧ ಯಾವುದೇ ಹಕ್ಕುಗಳನ್ನು ದಾನಿಗಳಿಗೆ ನೀಡಿಲ್ಲ. ವಿ ಕೆ ಒಬೆದುಲ್ಲಾ ಸರ್ಕಾರಿ ಶಾಲೆಯ ಪ್ರಕರಣದಲ್ಲಿಯೂ ಇದೇ ರೀತಿಯ ದಾನ ಪಡೆಯಲಾಗಿದೆ. ಈ ರೀತಿಯ ದಾನ ಸ್ವ ಇಚ್ಛೆಯಿಂದ ಪಡೆಯಲಾಗಿದೆ. ಹೀಗಾಗಿ ಸರ್ಕಾರದಿಂದ ಯಾವುದೇ ಪರಿಹಾರ ವೆಚ್ಚವನ್ನು ಹಿಂಪಾವತಿ ಕೇಳಲು ಸಾಧ್ಯವಿಲ್ಲ ಎಂದೂ ಶಿಕ್ಷಣ ಇಲಾಖೆಯು ಅಭಿಪ್ರಾಯಿಸಿತ್ತು.

 

ಮುಟ್ಟುಗೋಲಿಗೆ ಅವಕಾಶವಿದೆಯೇ?

 

ಸರ್ಕಾರಿ ವಿ ಕೆ ಓಬೆದುಲ್ಲಾ ಶಾಲಾ ಕಟ್ಟಡವು ಐಎಂಎ ಸಂಸ್ಥೆಯ ಅಧೀನದಲ್ಲಿರುವುದೇ, ಹಾಗಿದ್ದಲ್ಲಿ ಪಿಪಿಐಡಿ ಕಾಯ್ದೆ 3(2)ರ ಪ್ರಕಾರ ಮುಟ್ಟುಗೋಲು ಹಾಕಬಹುದು ಎಂದಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಶಾಲಾ ಜಮೀನು ಹಾಗೂ ಕಟ್ಟಡವು ಸರ್ಕಾರದ ವಶದಲ್ಲಿದ್ದು ಸರ್ಕಾರದ ಸ್ವತ್ತು ಆಗಿರುವುದರಿಂದ ಕಟ್ಟಡವನ್ನು ಕೆಪಿಐಡಿ ಸೆಕ್ಷನ್‌ 3(2)ರ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ 2021ರ ಏಪ್ರಿಲ್‌ 17ರಂದು ಪ್ರಶ್ನೆ ಎತ್ತಿತ್ತು.

 

ಇದರ ಜತೆಗೆ ಇನ್ನೂ ಒಂದು ಪ್ರಶ್ನೆ ಎತ್ತಿತ್ತು. ‘ಶಾಲೆಯು ಸರ್ಕಾರದ ವಶದಲ್ಲಿದ್ದ ಪಕ್ಷದಲ್ಲಿ ಹೂಡಿಕೆದಾರರ ಹಣವನ್ನು ಕಟ್ಟಡದ ಪುನರ್‌ ನಿರ್ಮಾಣಕ್ಕಾಗಿ ಬಳಸಲಾಗಿದೆಯೇ, ಹಾಗಿದ್ದಲ್ಲಿ ಸರ್ಕಾರವು ಸಕ್ಷಮ ಪ್ರಾಧಿಕಾರದ ಕೋರಿಕೆಯನ್ನು ಪರಿಗಣಿಸುವ ಬಗ್ಗೆ ಅಂದರೆ ಕಟ್ಟಡಕ್ಕಾಗಿ ಹಾಗೂ ಇತರೆ ಕಾಮಗಾರಿಗಳಿಗಾಗಿ 12.82 ಕೋಟಿಯನ್ನು ಸರ್ಕಾರವು 2 ತಿಂಗಳೊಳಗಾಗಿ ಮರುಪಾವತಿಸುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಬೇಕು,’ ಎಂದೂ ನ್ಯಾಯಾಲಯವು ಹೇಳಿತ್ತು.

 

ಸರ್ಕಾರಿ ಶಾಲೆಗೆ ಸೌಲಭ್ಯವನ್ನು ಒದಗಿಸುವ ಸಂಬಂಧ ಐಎಂಎ ಸಂಸ್ಥೆಯನ್ನು ಒಂದು ದಾನ ನೀಡುವ ಸಂಸ್ಥೆಯನ್ನಾಗಿ ಪರಿಗಣಿಸಿದೆ. ಶಿಕ್ಷಣ, ವಿಜ್ಞಾನ, ಸಾಹಿತ್ಯ ಹಾಗೂ ಕಲೆಯ ಪ್ರಗತಿಗಾಗಿ ಶ್ರಮ ವಹಿಸುತ್ತಿದ್ದ ಕಾರಣ ಈ ಶಾಲೆಯನ್ನು ನಿರ್ವಹಿಸುವ ಹಾಗೂ ಅದರ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಸರ್ಕಾರದೊಂದಿಗೆ 2016ರ ಏಪ್ರಿಲ್‌ 12ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಒಡಂಬಡಿಕೆಯ ಕ್ಲಾಸ್‌ 11ರಲ್ಲಿ ‘ಎಂಒಯು ಅವಧಿ ನಂತರ ದಾನಿಯಿಂದ ಹಾಗೂ ಇಲಾಖೆಯಿಂದ ನೀಡಲ್ಪಟ್ಟ ಎಲ್ಲಾ ಸ್ವತ್ತು ಸಹಾಯಗಳು ಶಾಲೆಯ ಸ್ವತ್ತಾಗಿ ಮುಂದುವರೆತಕ್ಕದ್ದು ಎಂದು ಹೇಳಲಾಗಿದೆ.

 

ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಐಎಂಎ ಮಧ್ಯೆ ಆಗಿರುವ ಒಡಂಬಡಿಕೆ ಪ್ರಕಾರ ಸರ್ಕಾರಿ ವಿ ಕೆ ಒಬೆದುಲ್ಲಾ ಉರ್ದು ಮಾದರಿ ಪ್ರಾಥಮಿಕ ಶಾಲೆಗೆ ಮಹಮದ್‌ ಮನ್ಸೂರ್‌ ಅಧ್ಯಕ್ಷರಾಗಿರುವ ಐಎಂಎ ಚಾರಿಟಬಲ್‌ ಟ್ರಸ್ಟ್‌ ಮಾಲೀಕತ್ವದಲ್ಲಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

 

28 ಕೊಠಡಿಗಳು, 2 ಊಟದ ಮನೆ, ಒಂದು ಸಭಾಂಗಣ, ಶಿಕ್ಷಕರ 4 ಕೊಠಡಿ, 3 ಪ್ರಯೋಗಾಲಯ, ಗ್ರಂಥಾಲಯ, ಒಟ್ಟು ಕಟ್ಟಡದಲ್ಲಿರುವ 28 ತರಹದ ಪರಿಕರಗಳು, ಪೀಠೋಪಕರಣಗಳು ಈ ಶಾಲೆಯಲ್ಲಿವೆ. 2017-18ನೇ ಸಾಲಿನಿಂದ ಮರು ಆರಂಭಗೊಂಡಿದ್ದ ಈ ಶಾಲೆ ಮೇಲೆ ಐಎಂಎ ಸಂಸ್ಥೆಯು ಒಟ್ಟು 10 ಕೋಟಿ ರು.ಗಳನ್ನು ಹೂಡಿಕೆ ಮಾಡಿತ್ತು ಎಂಬುದು ಐಎಂಎ ಮತ್ತು ಇತರೆ ವಂಚನೆ ಪ್ರಕರಣಗಳ ಸಕ್ಷಯ ಪ್ರಾಧಿಕಾರದ ಸಹಾಯಕ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts