ಗುಜರಾತ್‌ ಮಾದರಿ ವಿಶೇಷ ಹೂಡಿಕೆ ವಲಯಕ್ಕೆ ವಿಧೇಯಕ; ಶಾಸನ ರಚನೆ ಇಲಾಖೆ ಅಸಮ್ಮತಿ?

Photo Credit;thenewsminiute

ಬೆಂಗಳೂರು; ಗುಜರಾತ್‌ ಮಾದರಿಯಲ್ಲಿ ಶಿವಮೊಗ್ಗ, ಕಲ್ಬುರ್ಗಿ ಮತ್ತು ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಸ್ತಾವನೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಇದರಿಂದ ಆರ್ಥಿಕ ಹೊರೆಯಾಗುತ್ತದೆಂದು ಎಚ್ಚರಿಸಿರುವುದು ಇದೀಗ ಬಹಿರಂಗವಾಗಿದೆ.

 

ಅದೇ ರೀತಿ ಕೈಗಾರಿಕೆ ವಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿಧೇಯಕದಲ್ಲಿ ಪ್ರಸ್ತಾಪಿಸಿರುವ ವಿಶೇಷ ಹೂಡಿಕೆ ವಲಯ ಮತ್ತು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ರಚನೆಯು ಕೆಐಎಡಿಬಿಯ ನಕಲು ಮಾಡಿದಂತಾಗುತ್ತದೆ ಎಂದೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

 

ಕರ್ನಾಟಕ ವಿಶೇಷ ಹೂಡಿಕೆ ವಲಯ ಮಸೂದೆ 2021ಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು 2021ರ ಮೇ 20ರಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಸಂಬಂಧ ‘ದಿ ಫೈಲ್‌’ಗೆ ಕೆಲ ದಾಖಲೆಗಳು ಮತ್ತು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ವಿಶೇಷ ಹೂಡಿಕೆ ವಲಯ ಸ್ಥಾಪಿಸುವ ಸಂಬಂಧ ಹಿಂದಿನ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಗುಜರಾತ್‌ನಲ್ಲಿ ಪ್ರವಾಸ ಕೈಗೊಂಡಿತ್ತಲ್ಲದೆ ಅಲ್ಲಿನ ಕೈಗಾರಿಕೋದ್ಯಮಿಗಳನ್ನೂ ಭೇಟಿ ಮಾಡಿ ಪರಿಶೀಲನೆ ನಡೆಸಿತ್ತು. ಗುಜರಾತ್‌ನಿಂದ ಹಿಂದಿರುಗಿದ ಬಳಿಕ ಜಗದೀಶ್‌ ಶೆಟ್ಟರ್‌ ಅವರು ಮಂಡಿಸಿದ್ದ ನೂತನ ಕೈಗಾರಿಕಾ ನೀತಿ 2020-25ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದೇ ನೀತಿಯಲ್ಲಿ ವಿಶೇಷ ಹೂಡಿಕೆ ವಲಯ ಮತ್ತು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನೂ ಪ್ರಸ್ತಾಪಿಸಿತ್ತು. ಈ ಬಗ್ಗೆ ಹಾಲಿ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರೂ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪ್ರಸ್ತಾಪಿಸಿದ್ದ ವಿಶೇಷ ಹೂಡಿಕೆ ವಲಯ ಮತ್ತು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಲೇಬೇಕಾಗಿದ್ದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯ ಕಾಯ್ದೆ 1966ಕ್ಕೆ ಸೂಕ್ತ ತಿದ್ದುಪಡಿ ತರುವುದರ ಮೂಲಕ ಅಳವಡಿಸುವ ಬಗ್ಗೆ ಪರಿಶೀಲಿಸುವಂತೆ ಕೋರಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಶಾಸನ ರಚನೆ ಇಲಾಖೆ ಅಭಿಪ್ರಾಯದ ಮುಖ್ಯಾಂಶಗಳು

 

 

ಪ್ರಸ್ತುತ ಕೈಗಾರಿಕೆ ಪ್ರದೇಶಾಭಿವೃದ್ಧಿಗಾಗಿ ಭೂಮಿಯನ್ನು ನಿಯಮಾನುಸಾರ ಸರ್ಕಾರದಿಂದ ಪಡೆದು ಕೈಗಾರಿಕೆ ವಲಯಗಳನ್ನು ಸ್ಥಾಪಿಸುವ ಕಾರ್ಯವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಿರ್ವಹಿಸುತ್ತಿದೆ. ಈಗ ಪ್ರಸ್ತಾಪಿಸಿರುವ ವಿಶೇಷ ಹೂಡಿಕೆ ವಲಯವನ್ನು (The Karnataka Special Investment Region Bill 2021) ಸಹ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯೇ ನಿರ್ವಹಿಸುವುದು ಸೂಕ್ತ. ಇಲ್ಲದಿದ್ದರೆ ಇದು Duplication of work and Authority ಆಗುತ್ತದೆ ಹಾಗೂ ಇದರಿಂದ ಆರ್ಥಿಕ ಹೊರೆಯಾಗುತ್ತದೆ.

 

ಸಂಸದೀಯ ಶಾಸನ ರಚನೆ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

 

ಪ್ರಸ್ತಾಪಿಸಿರುವ ವಿಧೇಯಕದಲ್ಲಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ನಿರ್ವಹಿಸುವ ಕಾರ್ಯವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಿರ್ವಹಿಸುತ್ತಿರುವುದರಿಂದ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಅಗತ್ಯತೆ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಆಡಳಿತ ಇಲಾಖೆಯನ್ನು ಕೋರಿದೆ.
Special Investment Region ಯಾವ ಆಧಾರದ ಮೇಲೆ ಗುರುತಿಸಲಾಗುವುದು ಎಂಬುದರ ಬಗ್ಗೆ ಮರು ಪರಿಶೀಲಿಸುವಂತೆ ಕೋರಿದೆ.

 

ವಿಧೇಯಕದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯನ್ನೇ Apex Authorityಯನ್ನಾಗಿ ಮಾಡುವುದರಿಂದ ಪ್ರಸ್ತಾವಿತ ವಿಧೇಯಕದ ಅಗತ್ಯತೆ ಕಂಡು ಬರುವುದಿಲ್ಲ.

 

Special Investment Region to be Industrial Township ಇದು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಾರ್ಯ ಸ್ವರೂಪಕ್ಕೆ ವ್ಯತಿರಿಕ್ತವಾಗುತ್ತದೆ. Industrial Townships ನ್ನು muncipalities Act ಅಡಿಯಲ್ಲಿ ರಚಿಸಬೇಕು

 

ಪ್ರಸ್ತಾಪಿಸಿರುವ ವಿಧೇಯಕದಲ್ಲಿನ Special Investment Region and Regional Development Authorityಯ ಉಪ ಬಂಧಗಳನ್ನು ಅಗತ್ಯವಾದಲ್ಲಿ the karnataka industrial area developement act 1966ಗೆ ಸೂಕ್ತ ತಿದ್ದುಪಡಿಯನ್ನು ತರುವುದರ ಮೂಲಕ ಅಳವಡಿಸುವ ಬಗ್ಗೆ ಪರಿಶೀಲಿಸುವಂತೆ ಕೋರಿದೆ.

 

ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 & ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸಲಾಗುವುದು ಎಂದು ಹಿಂದಿನ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ಹೇಳಿದ್ದನ್ನು ಸ್ಮರಿಸಬಹುದು.

 

100 ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ವಿಶೇಷ ಹೂಡಿಕೆ ವಲಯ ಸ್ಥಾಪನೆ, ಅಭಿವೃದ್ಧಿಪಡಿಸಿ ಅದನ್ನು ನಿರ್ವಹಿಸಲು ರಾಜ್ಯದಲ್ಲಿ ವಿಶೇಷ ಹೂಡಿಕೆ ವಲಯ ಕಾಯ್ದೆ ಜಾರಿಗೆ ತರಲು ಪ್ರಸ್ತಾಪಿಸಲಾಗಿತ್ತು. ಈ ಪ್ರದೇಶವನ್ನು ಕೈಗಾರಿಕೆ ಟೌನ್‌ ಶಿಪ್‌ ಎಂದು ಪರಿಗಣಿಸಲಾಗುತ್ತದೆ.

 

ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಧಾರವಾಡ ವಿಶೇಷ ಹೂಡಿಕೆಯ ಮೊದಲನೇ ವಲಯ ಎಂದು ಅಧಿಸೂಚಿಸಲು ಪ್ರಸ್ತಾಪಿಸಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ವಿಶೇಷ ಹೂಡಿಕೆ ವಲಯ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನೊಳಗೊಂಡ ಕಲಬುರಗಿ ವಿಶೇಷ ಹೂಡಿಕೆ ವಲಯವನ್ನು ಅಧಿಸೂಚಿತಗೊಳಿಸಲು ಪ್ರಸ್ತಾಪಿಸಲಾಗಿತ್ತು.

 

ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿ 2020-25 ರಾಜ್ಯವನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿ ಮಾಡುವತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಲಾಗಿತ್ತು.

the fil favicon

SUPPORT THE FILE

Latest News

Related Posts