ಆದಾಯ ಇಳಿಕೆಯಿಂದ ಎಪಿಎಂಸಿಗಳ ಪರದಾಟ; 509 ಕೋಟಿ ನೆರವಿಗೆ ಪ್ರಸ್ತಾವ ಸಲ್ಲಿಸಿದ ಸಚಿವ

ಬೆಂಗಳೂರು; ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಮತ್ತೆ ಮತ್ತೆ ಒಪ್ಪಿಕೊಳ್ಳುತ್ತಿರುವ ಸಹಕಾರ ಇಲಾಖೆಯು ಇದೀಗ ಎಪಿಎಂಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳಿಗೂ ಅನುದಾನವಿಲ್ಲದೆ ಪರದಾಡುತ್ತಿದೆ. ಆದಾಯದಲ್ಲಿ ಇಳಿಕೆಯಾಗಿರುವ ಕಾರಣ ಎಪಿಎಂಸಿಗಳಲ್ಲಿ ಮೂಲಭೂತ ಸೌಲಭ್ಯ, ಆಯ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮೂಲಭೂತ ಸೌಲಭ್ಯ, ಪರಿಶಿಷ್ಟ ಹಮಾಲರಿಗೆ ವಸತಿ ಸೌಕರ್ಯ ಕಲ್ಪಿಸಲು ಒಟ್ಟಾರೆ 509.63 ಕೋಟಿ ರು ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ.

 

2022-23ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಪೂರ್ವಸಿದ್ಧತಾ ಸಭೆಗೆ ಸಹಕಾರ ಇಲಾಖೆಯು ಬೇಡಿಕೆ ಪಟ್ಟಿಯನ್ನು ಸಲ್ಲಿಸಿದೆ. ಈ ಕುರಿತಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಸಹಕಾರ ಇಲಾಖೆಯು ಸಲ್ಲಿಸಿರುವ ಬೇಡಿಕೆ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಹಕಾರ ಇಲಾಖೆಯು ಸಲ್ಲಿಸಿರುವ ಬೇಡಿಕೆ ಪಟ್ಟಿ

 

ಸಹಕಾರ ಇಲಾಖೆಯು ಮುಂದುವರೆಸುವ ಯೋಜನೆಗಳಿಗೆ 3.850.13 ಕೋಟಿ ರು., ಹೊಸ ಯೋಜನೆಗಳಿಗೆ 1,128. 77 ಕೋಟಿ ಸೇರಿದಂತೆ ಒಟ್ಟಾರೆ 4,978.9 ಕೋಟಿ ರು. ಅನುದಾನಕ್ಕೆ ಪ್ರಸ್ತಾಪಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

 

ಇದರಲ್ಲಿ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಆರ್ಥಿಕ ನೆರವು ಸೇರಿದಂತೆ ಹಾಲಿ ಕಾರ್ಯಕ್ರಮಗಳು ಮತ್ತು ಮುಂದುವರೆಸುವ ಯೋಜನೆಗಳಿಗೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯು ಒಟ್ಟು 2,830.50 ಕೋಟಿ ರು. ಅಂದಾಜನ್ನು ಪ್ರಸ್ತಾಪಿಸಿದೆ. ಅದೇ ರೀತಿ ಹೊಸ ಯೋಜನೆಗಳಿಗೆ 1,058 ಕೋಟಿ ರು., ಕೃಷಿ ಮಾರಾಟ ಇಲಾಖೆಯು 809.63 ಕೋಟಿ ರು., ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಮುಂದುವರೆಸುವ ಯೋಜನೆಗಳಿಗೆ 210 ಕೋಟಿ, ಹೊಸ ಯೋಜನೆಗಳಿಗೆ 70 ಕೋಟಿ ಅಂದಾಜನ್ನು ಪ್ರಸ್ತಾಪಿಸಿದೆ. ಈ ಪೈಕಿ ನಿರ್ದಿಷ್ಟವಾಗಿ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆಂದೇ 509.63 ಕೋಟಿ ರು. ಆರ್ಥಿಕ ನೆರವು ಕಲ್ಪಿಸಬೇಕು ಎಂದು ಕೋರಿದೆ.

 

 

‘ಪ್ರಸ್ತುತ ಮಾರುಕಟ್ಟೆ ಸಮಿತಿಗಳ ಆದಾಯವು ಗಣನೀಯವಾಗಿ ಕಡಿಮೆ ಆಗಿರುವುರಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿಗೆ 10.00 ಕೋಟಿ ರು. ಆಯವ್ಯಯಕ್ಕೆ ಬೇಡಿಕೆ ಸಲ್ಲಿಸಿದೆ,’ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಅದೇ ರೀತಿ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಆರ್ಥಿಕ ನೆರವಿಗೆ ಕೋರಿರುವ ಸಹಕಾರ ಇಲಾಖೆಯು ನಿರ್ಮಾಣ ಉಪ ಯೋಜನೆಗಳಿಗೆ 300.00 ಕೋಟಿ ರು., ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 157.31 ಕೋಟಿ, ಗಿರಿಜನ ಉಪ ಯೋಜನೆಯಡಿಯಲ್ಲಿ 42.32 ಕೋಟಿ ರು. ಆಯವ್ಯಯಕ್ಕೆ ಬೇಡಿಕೆ ಸಲ್ಲಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

2021-22ನೇ ಸಾಲಿನಲ್ಲಿ ವಿಶೇಷ ಅಭಿವೃದ್ದಿ ಯೋಜನೆ, ನಿರ್ಮಾಣ ಉಪ ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪ ಯೋಜನೆಗಳಿಗೆ ಆಯವ್ಯಯದಲ್ಲಿ ಹಂಚಿಕೆ ಮಾಡಿರಲಿಲ್ಲ. ಹೀಗಾಗಿ 2022-23ನೇ ಸಾಲಿಗೆ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಒಟ್ಟಾರೆ 509.63 ಕೋಟಿ ರು. ಬೇಡಿಕೆ ಸಲ್ಲಿಸಿದೆ.
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಮಾಲರಿಗೆ ವಸತಿ ಸೌಲಭ್ಯಕ್ಕೆ 2022-23ನೇ ಸಾಲಿಗೆ 509.63 ಕೋಟಿ ರು ಪೈಕಿ 199.63 ಕೋಟಿ ರು. ಒದಗಿಸಬೇಕು ಎಂದು ಕೋರಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

 

ಎಪಿಎಂಸಿಗಳ ಆದಾಯದಲ್ಲಿ ಗಣನೀಯ ಕುಸಿತ ಕಂಡಿರುವ ಕಾರಣ ಮಾರುಕಟ್ಟೆಯ ತಿಂಗಳ ವೆಚ್ಚಕ್ಕೂ ಸರಿದೂಗದ ಆದಾಯದಿಂದ ನಿರ್ವಹಣೆ ದುಸ್ತರವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ರಾಜ್ಯ ಹಾಗೂ ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡುವ ಮುಂಚೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿತ್ತು. ಈಗ ಎಪಿಎಂಸಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆಯಲ್ಲದೆ ಮಾರುಕಟ್ಟೆ ಶುಲ್ಕ ಸಂಗ್ರಹದಲ್ಲೂ ಭಾರಿ ಇಳಿಮುಖವಾಗಿದೆ. ಕೋವಿಡ್‌ ಅಪ್ಪಳಿಸಿದ ಪರಿಣಾಮವೂ ಎಪಿಎಂಸಿಗೆ ಬರುತ್ತಿರುವ ಆದಾಯ ತಿಂಗಳ ಖರ್ಚಿಗೂ ಸಾಲುತ್ತಿಲ್ಲ. ಹೀಗಾದರೆ ಎಪಿಎಂಸಿ ಆಡಳಿತ ನಡೆಸುವುದೇ ಹೇಗೆ ಎಂದು ಪ್ರಶ್ನಿಸುತ್ತಾರೆ ಎಪಿಎಂಸಿ ಆಡಳಿತವರ್ಗದ ಸದಸ್ಯರೊಬ್ಬರು.

 

ವ್ಯಾಪಾರ ವಹಿವಾಟುಗಳು ತೀರಾ ಕಡಿಮೆಯಾಗಿದೆ ಮತ್ತು ಎಪಿಎಂಸಿಗಳು ಅನುಭವಿಸುತ್ತಿರುವ ಆರ್ಥಿಕ ನಷ್ಟದ ಕುರಿತು ಯಾವುದೇ ಮಾಹಿತಿ ಇಲ್ಲವೆಂದಿದ್ದ ಕೃಷಿ ಮಾರಾಟ ಇಲಾಖೆಯು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಒಪ್ಪಿಕೊಂಡಿದ್ದನ್ನು ಸ್ಮರಿಸಬಹುದು.

 

‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಆಧಿನಿಯಮ 1966ಕ್ಕೆ ತಿದ್ದುಪಡಿ ತಂದಿರುವುದರಿಂದ ಹಾಗೂ ಈ ಹಿಂದೆ ಸಂಗ್ರಹಿಸಲಾಗುತ್ತಿದ್ದ ಮಾರುಕಟ್ಟೆ ಶುಲ್ಕವನ್ನು ಶೇ.1.50ರಿಂದ ಶೇ.0.60ಕ್ಕೆ ಇಳಿಕೆ ಮಾಡಲಾಗಿರುವುದರಿಂದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆದಾಯವು ಗಣನೀಯವಾಗಿ ಕಡಿಮೆಯಾಗಿರುವುದರಿಂದ 2022-23ನೇ ಸಾಲಿಗೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಿರಲು ತೀರ್ಮಾನಿಸಲಾಗಿರುತ್ತದೆ,’ ಎಂದು 2022-23ನೇ ಸಾಲಿನ ಆಯವ್ಯಯ ಭಾಷಣಕ್ಕೆ ಕೃಷಿ ಮಾರಾಟ ಇಲಾಖೆಯು ಈಗಾಗಲೇ ಮಾಹಿತಿ ಒದಗಿಸಿದೆ.

 

ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟು ತೀರಾ ಕಡಿಮೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ‘ಬಂದಿದೆ,’ ಎಂದು ಉತ್ತರಿಸಿದ್ದಾರಾದರೂ ಎಪಿಎಂಸಿಗಳಲ್ಲಿನ ವ್ಯಾಪಾರ ವಹಿವಾಟುಗಳು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ಇದರಿಂದ ಸಂಭವಿಸಿರುವ ನಷ್ಟದ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

 

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ 1966 ಕಾಯ್ದೆ (ಸಂಖ್ಯೆ; 59/2020) ಮೂಲಕ ಕಲಂ 8(2) ಹಾಗೂ ಕಲಂ 117ಕ್ಕೆ ತಿದ್ದುಪಡಿ ಮಾಡಿ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯೆ ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆರವುಗೊಳಿಸಿದೆ. ಹಾಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಣವನ್ನು ಪ್ರಾಂಗಣಕ್ಕಷ್ಟೇ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117ನ್ನೂ ಕೈ ಬಿಡಲಾಗಿದೆ ಎಂದು ಸಚಿವ ಸೋಮಶೇಖರ್‌ ವಿವರ ಒದಗಿಸಿದ್ದರು.

 

‘ಕಾಯ್ದೆ ತಿದ್ದುಪಡಿ ನಂತರ ರಾಜ್ಯದಲ್ಲಿನ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಿಂದಿನಂತೆ ಪ್ರಾಂಗಣದಲ್ಲಿ ಲೈಸೆನ್ಸ್‌ ಹೊಂದಿರುವ ನೇರ ಖರೀದಿ ಕೇಂದ್ರ, ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಥವಾ ತಮ್ಮ ಹೊಲದಲ್ಲೇ ತಮ್ಮ ಇಚ್ಛೆಯಂತೆ ಮಾರಾಟ ಮಾಡಲು ಅವಕಾಶ ಲಭ್ಯವಾಗಿದೆ. ಹಾಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗಿದೆ. ರೈತರು ತೊಂದರೆಗೊಳಾಗಿರುವುದು ಕಂಡು ಬಂದಿರುವುದಿಲ್ಲ,’ ಎಂದು ಉತ್ತರಿಸಿದ್ದರು.

 

ಆರ್ಥಿಕ ನಷ್ಟವನ್ನು ಸರಿದೂಗಿಸಲು ರಾಜ್ಯ ಸಂಚಿತ ನಿಧಿ ವಂತಿಗೆ ಶೇ. 0.20ರಷ್ಟು ಹಂಚಿಕೆ ಮಾಡಲಾಗಿದೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ಶೇ.0.05ರಷ್ಟು ವಂತಿಗೆ, ಅಡಮಾನ ಸಾಲ ಯೋಜನೆಗೆ ಶೇ. 0.10, ಕೃಷಿ ವಿಶ್ವವಿದ್ಯಾಲಯಗಳ ವಂತಿಗೆ ಶೇ.0.01, ಅಪತದ್ಧನ ಶೇ.0.04, ಅಭಿವೃದ್ಧಿ ವೆಚ್ಚಗಳು ಶೇ. 0.25, ಶಾಸನೇತರ ವೆಚ್ಚಗಳು ಶೇ.0.25, ರೆಮ್ಸ್‌ ಸಂಸ್ಥೆ ವಹಿವಾಟು ವೆಚ್ಚ ಶೇ. 0.10, ಆವರ್ತ ನಿಧಿ ಶೇ. 0.40, ಮಾರುಕಟ್ಟೆ ಸುಧಾರಣೆ ನಿಧಿ ಶೇ.0.10 ವಂತಿಗೆ ಮರು ಹಂಚಿಕೆ ಮಾಡಿದೆ.

 

ಇದರಂತೆ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವೇತನ, ಭತ್ಯೆ, ಮಾರುಕಟ್ಟೆ ಸಮಿತಿಗಳ ಚುನಾವಣೆ ವೆಚ್ಚ ಮುಂತಾದ ಬಾಬ್ತುಗಳಿಗೆ ತಗಲುವ ವೆಚ್ಚವನ್ನು ಮಾರುಕಟ್ಟೆ ಕಾಯ್ದೆ ಕಲಂ 91ರ ಮೇರೆಗೆ ಇಲಾಖೆ ನಿರ್ದೇಶಕರು ನಿಗದಿಪಡಿಸುವ ದರದಲ್ಲಿ ಮಾರುಕಟ್ಟೆ ಸಮಿತಿಗಳು ರಾಜ್ಯ ಸಂಚಿತ ನಿಧಿಗೆ ವಂತಿಗೆ ರೂಪದಲ್ಲಿ ಪಾವತಿಸಬೇಕಿತ್ತು. ಕಾಯ್ದೆ ಕಲಂ 64-ಬಿರ ಮೇರೆಗೆ ರಾಜ್ಯ ಸರ್ಕಾರವು ಸ್ಥಾಪಿಸಿರುವ ಆವರ್ತ ನಿಧಿಗೆ ಜಮೆ ಮಾಡಬೇಕಿತ್ತು.

 

ಮಾರುಕಟ್ಟೆ ಸಮಿತಿಗಳು ಆಕರಿಸುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಶೇ. 0.60ಕ್ಕೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸಂಚಿತ ನಿಧಿಗೆ ಸಮಿತಿಗಳಿಂದ ಪಾವತಿಸಬೇಕಿದ್ದ ವಂತಿಗೆಗೆ ವಿನಾಯಿತಿ ನೀಡಿ ಈ ವೆಚ್ಚವನ್ನೂ ಸರ್ಕಾರವೇ ಭರಿಸಲು ಕ್ರಮ ವಹಿಸಿದೆ ಎಂಬ ಉತ್ತರಿಸಿದ್ದರು.

 

ರಾಜ್ಯ ಸರ್ಕಾರವು ನಿಗದಿಪಡಿಸಿದ ಶೇ. 0.60 ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕದಲ್ಲಿ ಮರು ಹಂಚಿಕೆ ಮಾಡಿತ್ತು. ಆವರ್ತ ನಿಧಿಗೆ ಶೆ. 0.10, ಕೃಷಿ ಮಾರಾಟ ಮಂಡಳಿಗೆ ವಂತಿಗೆ ಶೇ. 0.05, ಮತ್ತು ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ, ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಶೇ. 0.44, ರೆಮ್ಸ್‌ ಸಂಸ್ಥೆಗೆ ವಹಿವಾಟು ಶುಲ್ಕದ ರೂಪದಲ್ಲಿ ಶೇ. 0.01ರಷ್ಟು ಮರು ಹಂಚಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts