ನೂರು ದಿನದಲ್ಲಿ 98 ಭ್ರಷ್ಟಾಚಾರ ಪ್ರಕರಣ, ಎಸಿಬಿ, ಲೋಕಾಯುಕ್ತದಲ್ಲಿ 2,950 ದೂರು ಸಲ್ಲಿಕೆ

ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೂರು ದಿನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಒಟ್ಟು 98 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಒಟ್ಟು 2,950 ದೂರು ದಾಖಲಾಗಿದೆ. 2021ರ ಜುಲೈ 28ರಿಂದ ಅಕ್ಟೋಬರ್‌ 25ರವರೆಗೆ ಬಸವರಾಜ ಬೊಮ್ಮಾಯಿ ಅವರ ಸಾಧನೆ ಪಟ್ಟಿಯಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಜಾಗೃತ ವಿಭಾಗವು ಈ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಪಟ್ಟಿಯನ್ನೂ ಮುಖ್ಯಮಂತ್ರಿ ಕಚೇರಿಗೆ ಒದಗಿಸಿದೆ.

‘ಸರ್ಕಾರದ ಎಲ್ಲ ಕಾರ್ಯಕ್ರಮಗಳು ಸಮಯಬದ್ಧವಾಗಿ ಅನುಷ್ಠಾನ ಆಗಬೇಕು. ಅನುಷ್ಠಾನದಲ್ಲಿ ತಡವಾಗುವುದು ಭ್ರಷ್ಟಾಚಾರಕ್ಕೆ ಮತ್ತು ವೆಚ್ಚ ಹಲವು ಪಟ್ಟು ಹೆಚ್ಚಾಗಲು ಕಾರಣವಾಗುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಖಡಕ್ ಸಂದೇಶ ನೀಡಿದ್ದರು. ಈ ಸಂದೇಶ ನೀಡಿದ 100 ದಿನದಲ್ಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 2,950 ದೂರು ದಾಖಲಾಗಿರುವುದು ಮತ್ತು 98 ಪ್ರಕರಣಗಳು ದಾಖಲಾಗಿರುವುದು ಮುನ್ನೆಲೆಗೆ ಬಂದಿವೆ. ಸಿಆಸುಇ ಇಲಾಖೆಯ ಜಾಗೃತ ವಿಭಾಗವು ಸಲ್ಲಿಸಿರುವ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಜುಲೈ 28ರಿಂದ ಅಕ್ಟೋಬರ್‌ 25ರವರೆಗೆ 63 ಟ್ರ್ಯಾಪ್‌, 10 ಶೋಧನಾ ಹಾಗೂ ಇತರೆ 25 ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳವು ದಾಖಲು ಮಾಡಿಕೊಂಡಿದೆ. ಈ ಎಲ್ಲಾ ಪ್ರಕರಣಗಳಲ್ಲಿ 101 ಆರೋಪಿ ಸಾರ್ವಜನಿಕ ನೌಕರರನ್ನು ದಸ್ತಗಿರಿ ಮಾಡಿರುವುದು ಇಲಾಖೆಯು ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ದಾಖಲಾಗಿರುವ ಪ್ರಕರಣಗಳ ಪೈಕಿ 57 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ. 1,425 ದೂರು ಅರ್ಜಿಗಳು ಸಲ್ಲಿಕೆಯಾಗಿವೆ. ಬಾಕಿ ಇದ್ದ ಅರ್ಜಿಗಳ ಪೈಕಿ 1,084 ದೂರು ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ಗೊತ್ತಾಗಿದೆ.

ಲೋಕಾಯುಕ್ತದಲ್ಲಿಯೂ ಜುಲೈ 28ರಿಂದ ಅಕ್ಟೋಬರ್‌ 26ರವರೆಗೆ 1,525 ದೂರು ಪ್ರಕರಣಗಳು ದಾಖಲಾಗಿವೆ. 2,865 ಇಲಾಖೆ ವಿಚಾರಣೆಗಳು ಬಾಕಿ ಇವೆಯಲ್ಲದೇ ಈ ಅವಧಿಯಲ್ಲಿ 294 ಪ್ರಕರಣಗಳಲ್ಲಿ ವಿಚಾರಣೆ ವರದಿಗಳನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ 12(3) ಅಡಿ 26 ಪ್ರಕರಣಗಳಲ್ಲಿ ವರದಿ ಸಲ್ಲಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಗಳಲ್ಲಿ 2021ರ ಸೆಪ್ಟಂಬರ್‌ 30ರ ಅಂತ್ಯಕ್ಕೆ 834 ಪ್ರಕರಣಗಳು ಬಾಕಿ ಇವೆ. ಜುಲೈ 28ರಿಂದ ಅಕ್ಟೋಬರ್‌ 26ರವರೆಗೆ 14 ಪ್ರಕರಣಗಳಲ್ಲಷ್ಟೇ ತೀರ್ಪು ಬಂದಿದೆ. ಈ ಪೈಕಿ 03 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.

ನೂರು ದಿನಗಳ ಅವಧಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ, ನೂತನ ಕಾರ್ಯಕ್ರಮಗಳೂ, ಪ್ರಮುಖ ಸಾಧನೆಗಳು, ಸಚಿವ ಸಂಪುಟ ಸಭೆಗಳ ನಿರ್ಣಯಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳು, ಕೋವಿಡ್‌ 19 ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ತೆಗೆದುಕೊಂಡ ಕ್ರಮಗಳು ಮತ್ತು ಸಾಧನೆಗಳ ಪಟ್ಟಿ ತಯಾರಿಕೆಯಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ಆಡಳಿತದ ಬಗ್ಗೆ ನನಗೆ ಯಾವ ನಿರೀಕ್ಷೆಗಳೂ ಇಲ್ಲ. ತಮ್ಮ ವಿನಯ ಪ್ರದರ್ಶನದ ಕಾರಣಕ್ಕಾಗಿ ಕೆಲವು ಮಾಧ್ಯಮಗಳಿಗೆ ಅವರು ಡಾರ್ಲಿಂಗ್‌ ಆಗಿರಬಹುದು. ಆದರೆ ಆಡಳಿತದ ವಿಚಾರಕ್ಕೆ ಬಂದಾಗ ಆಟಗಾರರು ಬದಲಾಗಿದ್ದಾರೆಯೇ ಹೊರತು ಆಟ ಬದಲಾಗಿಲ್ಲ ಎನ್ನುವಂತೆ ಅದೇ ದುರಾಡಳಿತ ಮುಂದುವರೆಯುತ್ತಿದೆ. ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾದರೆ ಹೊರತು ಬಹುತೇಕ ಅದೇ ಸಚಿವರು ಮುಂದುವರೆದಿದ್ದಾರೆ. ನೂರು ದಿನದ ಸಂಭ್ರಮಾಚರಣೆ ಎನ್ನುವುದೇ ನಗೆಪಾಟಲು ಮತ್ತು ನಾಚಿಕೆಗೇಡು. ಜಾಹೀರಾತು ಪಡೆಯುವವರಿಗಷ್ಟೇ ಇದು ಸಂಭ್ರಮಾಚರಣೆ. ಇವರ ನೂರು ದಿನದ ಆಡಳಿತ ಹೇಗಿದೆ ಎಂಬುದಕ್ಕೆ ಎಸಿಬಿ ಮತ್ತುಲೋಕಾಯುಕ್ತವೇ ಅಂಕಿ ಸಂಖ್ಯೆಗಳ ಮೂಲಕ ಕನ್ನಡಿ ಹಿಡಿದಿದೆ.

ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ

ಇಲಾಖಾವಾರು ಮಾಹಿತಿಗಳನ್ನು 2021ರ ಅಕ್ಟೋಬರ್‌ 25 ರೊಳಗೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2021ರ ಅಕ್ಟೋಬರ್‌ 21ರಂದು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಹಲವು ದಿನಗಳ ಕಾಲ ದೆಹಲಿ ಯಾತ್ರೆ ಕೈಗೊಂಡಿದ್ದರು. ಈ ಮಧ್ಯೆಯೇ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟಿನಲ್ಲಿ ಮುಳುಗಿದ್ದರು. ಪ್ರಮುಖವಾಗಿ ಆನಂದ್‌ಸಿಂಗ್‌ ಅವರ ಭಿನ್ನಮತವನ್ನು ಉಪಶಮನಗೊಳಿಸಿದರು.

ವಿಜಯನಗರ ಜಿಲ್ಲೆಯನ್ನು ಉದ್ಘಾಟಿಸಿದರು. ಸುದ್ದಿವಾಹಿನಿಗಳು ನಡೆಸಿದ್ದ ಸಂದರ್ಶನದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಹಾನಗಲ್‌, ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಎರಡು ಬಾರಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗಳಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts