ಸಿ ಡಿ ಬಹಿರಂಗಕ್ಕೆ ತಡೆ; ಮಾಧ್ಯಮಗಳಿಗೆ ಮೂಗುದಾರ ಹಾಕಿದ ನಿರಾಣಿ ವಿರುದ್ಧ ದೂರು

ಬೆಂಗಳೂರು: ಸುದ್ದಿ ಮಾಧ್ಯಮಗಳು ತಮ್ಮ ವಿರುದ್ಧ ಯಾವುದೇ ರೀತಿಯಲ್ಲಿ ಕಟುವಾದ, ನಕಾರಾತ್ಮಕವಾದ ಅಥವಾ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ- ಬಿತ್ತರಿಸದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ಪಡೆದಿರುವ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ಆರ್. ನಿರಾಣಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.

ಈ ಕುರಿತಂತೆ, “ಪಂಚಮಸಾಲಿ ಹಿತರಕ್ಷಣಾ ವೇದಿಕೆ” ಪ್ರಧಾನ ಕಾರ್ಯದರ್ಶಿ ಕಾರಿಗನೂರಿನ ಜಿ.ಸಿ.ಮಂಜುನಾಥ್ ಇದೇ 12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಲಿಖಿತ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮೊದಲ ದೂರು ಸಲ್ಲಿಕೆಯಾಗಿರುವುದು ವಿಶೇಷ.

“ಮುರುಗೇಶ್ ನಿರಾಣಿ ಅವರನ್ನು ತಕ್ಷಣವೇ ‌ಸಂಪುಟದ ಸಚಿವ ಸ್ಥಾನದಿಂದ ಕೈಬಿಡುವಂತೆ ನಿರ್ದೇಶಿಸಬೇಕು” ಎಂದು ಅವರು ಮನವಿ ಮಾಡಿರುವುದು ದೂರಿನಿಂದ ಗೊತ್ತಾಗಿದೆ.

ದೂರಿನಲ್ಲಿ ಏನಿದೆ?

“ತಮ್ಮ ವಿರುದ್ಧ ಮಾಧ್ಯಮಗಳು ನಕಾರಾತ್ಮಕ ರೀತಿಯಲ್ಲಿ ಸುದ್ದಿ ಪ್ರಕಟಿಸಿದಂತೆ-ಬಿತ್ತರಿಸದಂತೆ ನ್ಯಾಯಾಲಯದ ಮೊರೆ ಹೋಗಿ 39 ಪ್ರತಿವಾದಿ ಸುದ್ದಿ ಮಾಧ್ಯಮಗಳ ವಿರುದ್ಧ ತಡೆ ಆದೇಶ ತಂದಿರುವುದು ಸಂವಿಧಾನದ 164 (3)ರ ಅನುಸಾರ iiiನೇ ಷೆಡ್ಯೂಲ್ ನ ನಮೂನೆ 5ರ ಅಡಿಯಲ್ಲಿ ಪ್ರದತ್ತವಾದಂತೆ; ಸಚಿವರಿಗೆ ರಾಜ್ಯಪಾಲರು ಬೋಧನೆ ಮಾಡಿರುವ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವ ಅಂಶಕ್ಕೆ ವಿರುದ್ಧವಾಗಿದೆ” ಎಂದು ಪ್ರತಿಪಾದಿಸಲಾಗಿದೆ.

“ತಮ್ಮ ಅವ್ಯವಹಾರಗಳು ಬಯಲಾಗದಂತೆ ಕೋರ್ಟ್ ತಡೆ ಆದೇಶ ತರುವ ಮೂಲಕ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮಾಡಲಾಗಿದೆ” ಎಂದು ದೂರಿನಲ್ಲಿ ವಿವರಿಸಲಾಗಿದೆ.

“ತಮ್ಮ ದೈನಂದಿನ ಖಾಸಗಿ ವ್ಯಾಪಾರ- ವಹಿವಾಟು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಿರಾಣಿ ಅವರು ಕೋರ್ಟ್ ಮೆಟ್ಟಿಲೇರಿ ಮಾಧ್ಯಮಗಳಿಗೆ ಮೂಗುದಾರ ಹಾಕಲು ಪ್ರಯತ್ನಿಸಿದ್ದಾರೆ. ಆದ್ದರಿಂದ, ಕೂಡಲೇ ನಿರಾಣಿ ಅವರನ್ನು ಸಂಪುಟದ ಸಚಿವ ಸ್ಥಾನದಿಂದ ಕೈಬಿಡಲು ನಿರ್ದೇಶಿಸಬೇಕು” ಎಂದು ಕೋರಿದ್ದಾರೆ.

ಪ್ರಕರಣ ಹಿನ್ನೆಲೆ

ಅಸಲು ದಾವೆಗಳಲ್ಲಿ ಫಿರ್ಯಾದುದಾರರಾದ ನಿರಾಣಿ ಅವರು, “ನನ್ನ ವಿರುದ್ಧ ಅಥವಾ ನನ್ನ ಕುಟುಂಬದ ಸದಸ್ಯರ ವಿರುದ್ಧ ಅಥವಾ ನನಗೆ ಸಂಬಂಧಿಸಿದ ಆಪ್ತರ ವಿರುದ್ಧವಾಗಿ ಯಾವುದೇ ಸುದ್ದಿಗಳನ್ನು ಪ್ರಕಟಿಸುವ, ಹರಿಬಿಡುವ ಮುನ್ನ ಸತ್ಯಶೋಧನೆ ಮಾಡಬೇಕು. ಚಾರಿತ್ರ್ಯವಧೆ ಮಾಡುವಂತಹ ಅಥವಾ ಮಾನಹಾನಿ ಉಂಟಾಗಬಹುದಾದ ಇಲ್ಲವೇ ನಕಾರಾತ್ಮಕ ರೀತಿಯಲ್ಲಿ ಅಥವಾ ಕಟುವಾದ ಅಥವಾ ಪೂರ್ವ ಕಲ್ಪಿತ ಭಾವನೆಗಳಲ್ಲಿ ಬರೆದ ಸುದ್ದಿಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಇಲ್ಲವೇ ಹಬ್ಬಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕು” ಎಂದು ನ್ಯಾಯಾಲಯಕ್ಕೆ ಕೋರಿದ್ದರು.

ಈ ಕುರಿತಂತೆ 2020 ರ ಡಿಸೆಂಬರ್ 1ರಂದು ಸಲ್ಲಿಸಲಾಗಿರುವ ಅಸಲು ದಾವೆಗಳ ಸಂಖ್ಯೆ 6056/2020 ಮತ್ತು 3783/2020ರಲ್ಲಿ ಮಾಡಲಾಗಿರುವ ಮಧ್ಯಂತರ ಮನವಿಗಳನ್ನು ಸಿಟಿ ಸಿವಿಲ್ ಕೋರ್ಟ್ ಸೆಷನ್ಸ್ ನ್ಯಾಯಾಧೀಶ ರಾಜೇಶ್ವರ ಅವರು ಮಾನ್ಯ ಮಾಡಿದ್ದರು.

ಸುದ್ದಿ ಮಾಧ್ಯಮಗಳು ನಿರಾಣಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸಿದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಈ ಸಂಬಂಧ 2020ರ ಡಿಸೆಂಬರ್ 4ರಂದು ನೀಡಲಾಗಿರುವ ಆದೇಶದ ಪ್ರತಿ ಆಧರಿಸಿ ‘ದಿ ಫೈಲ್‌’ 2021ರ ಜುಲೈ 18ರಂದು ವರದಿ ಪ್ರಕಟಿಸಿತ್ತು.

ಸಚಿವ ನಿರಾಣಿಗೂ ಸಿ.ಡಿ ಭಯವೇ?; ಮಾನಹಾನಿಕರ ಸುದ್ದಿ ಪ್ರಕಟಣೆಗೆ ಕೋರ್ಟ್ ತಡೆಯಾಜ್ಞೆ

ಪ್ರಕರಣದಲ್ಲಿ “ಟೈಂಸ್ ನೌ, ಸಿ ಎನ್ ಎನ್ – ಐ ಬಿ ಎನ್, ಎ ಎನ್ ಐ, ಸ್ಟಾರ್ ನ್ಯೂಸ್, ಟುಡೇ, ಆಜ್ ತಕ್, ರಿಪಬ್ಲಿಕ್ ಟಿ.ವಿ ಸೇರಿದಂತೆ ನಾಡಿನ ಪ್ರಜಾವಾಣಿ, ಕನ್ನಡಪ್ರಭ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಹಿಂದೂಸ್ಥಾನ್ ಟೈಂಸ್ ನಂತಹ ಪ್ರಮುಖ ದೈನಿಕಗಳನ್ನು ಒಳಗೊಂಡಂತೆ ಒಟ್ಟು 39 ಪ್ರತಿವಾದಿಗಳು ನಿರಾಣಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸಿದಂತೆ, ಇಲ್ಲವೇ ಬಿತ್ತರಿಸದಂತೆ ತಾತ್ಕಾಲಿಕ ತಡೆ ಆದೇಶ ನೀಡಲಾಗಿದೆ. ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಲು ಅದೇಶಿಸಿತ್ತು.

ಅಸಲು ದಾವೆ ಸಂಖ್ಯೆ 6056/2020 ಬಿಜಾಪುರ ಜಿಲ್ಲೆಯ, “ಶ್ರೀ ಮುರುಗೇಶ್ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಗೆ ಸಂಬಂಧಿಸಿದ್ದಾದರೆ ಮತ್ತೊಂದು ಅಸಲು ದಾವೆ ಸಂಖ್ಯೆ 3783/2020, ಹಿಂದೂ ದೇವತೆಗಳನ್ನು ತುಚ್ಛವಾಗಿ ನಿಂದಿಸಿದ ಸಂದೇಶವು, “ಮುರುಗೇಶ್ ನಿರಾಣಿ ಗ್ರೂಪ್” ಸದಸ್ಯರಿಗೆ ಫಾರ್ವರ್ಡ್ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.

“ಅಸಲಿಗೆ ಈ ಎರಡೂ ದಾವೆಗಳಲ್ಲಿ ವಿವರಿಸಲಾದ ಅಂಶಗಳು ಅತ್ಯಂತ ಸಾಮಾನ್ಯ ಸಂಗತಿಗಳು ಎನಿಸಿದರೂ ಈ ಕಾರಣಗಳನ್ನೇ ಮುಂದು ಮಾಡಿಕೊಂಡಿರುವ ನಿರಾಣಿ ತಮ್ಮ ತೇಜೋವಧೆ ಆಗಬಹುದಾದ ಯಾವುದೇ ಸುದ್ದಿ ಇಲ್ಲವೇ ಸಿ.ಡಿಗಳು ಬಹಿರಂಗವಾಗದಂತೆ ನೋಡಿಕೊಳ್ಳುವ ಕಳ್ಳ ದಾರಿ ತುಳಿದಿದ್ದಾರೆ” ಎಂದು ಅಂದಾಜಿಸಲಾಗಿತ್ತು.

“ಬದಲಾಗುತ್ತಿರುವ ರಾಜ್ಯ ರಾಜಕೀಯ ಬೆಳವಣಿಗೆಗಳ ನಡುವೆ ತಮ್ಮ ರಾಜಕೀಯ ಭವಿಷ್ಯದ ಉಳಿವಿಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಮುಖ ಸುದ್ದಿ ಮಾಧ್ಯಮಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ” ಎಂದು ಹೇಳಲಾಗಿದೆ.

“ಮಾಧ್ಯಮಗಳು ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ಜಾಣತನದಲ್ಲಿ ತಡೆ ಆದೇಶ ಪಡೆದುಕೊಂಡಿರುವ ನಿರಾಣಿ, ತಾವು ನ್ಯಾಯಾಲಯದ ಮೆಟ್ಟಿಲೇರಿರುವ ಈ ಸುದ್ದಿ ಹೆಚ್ಚು ಬಹಿರಂಗವಾಗದಂತೆಯೂ ನೋಡಿಕೊಂಡಿದ್ದಾರೆ” ಎಂದೇ ಈಗ ವಿಶ್ಲೇಷಿಸಲಾಗುತ್ತಿದೆ.
ಅಷ್ಟಕ್ಕೂ ನಿರಾಣಿ ಅವರು ಸಾಧಾರಣ ಪ್ರಕರಣಗಳಲ್ಲಿ ರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಟಿ.ವಿ ಚಾನೆಲ್ ಗಳು ಹಾಗೂ ಪ್ರಮುಖ ಇಂಗ್ಲಿಷ್ ದೈನಿಕಗಳನ್ನು ಪ್ರತಿವಾದಿಗಳನ್ನಾಗಿ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈಗಾಗಲೇ ಮಾನ್ಯ ಮಾಡಿರುವ ಬೆನ್ನಲ್ಲೇ ಇದೀಗ ನಿರಾಣಿ ಅವರ ನಡೆ ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿತ್ತು.

the fil favicon

SUPPORT THE FILE

Latest News

Related Posts