ಅತ್ಯಾಚಾರ ಆರೋಪ:ಶರಣರ ಸೋದರ ಎಂ ಜಿ ದೊರೆಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರು: ‘ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂಬ ಗುರುತರ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಬೃಹನ್ಮಠದ ಮುರುಘಾರಾಜೇಂದ್ರ ಶಿವಮೂರ್ತಿ ಶರಣರ ಖಾಸಾ ಸಹೋದರ ಹಾಗೂ ಮಠದ ಮಾಜಿ ಸಿಇಒ (ಮುಖ್ಯ ಆಡಳಿತಾಧಿಕಾರಿ) ಎಂ ಜಿ ದೊರೆಸ್ವಾಮಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ದೊರೆಸ್ವಾಮಿ ಬಂಧನದ ಭೀತಿ ಎದುರಿಸುವಂತಾಗಿದೆ.

ಈ ಕುರಿತಂತೆ ದೊರೆಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸೋಮವಾರದಂದು (ಮಾ 1) ವಿಚಾರಣೆ ನಡೆಸಿತು. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಕ್ಕೆ ನ್ಯಾಯಮೂರ್ತಿ ಕೆ.ನಟರಾಜನ್ ಅವರು ನೀಡಿದ ಮೌಖಿಕ  ಕಾರಣಗಳು ಇಂತಿವೆ.

ಆರೋಪಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾನೆ.

*  ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವಂತಹ
    ಸಾಕ್ಷ್ಯಾಧಾರಗಳು ಕಂಡು ಬರುತ್ತಿವೆ. 

*  ಆರೋಪಿಯನ್ನು ಬಂಧಿಸಿ ಕಸ್ಟೋಡಿಯಲ್ ವಿಚಾರಣೆ ನಡೆಸುವ ಅಗತ್ಯವಿದೆ.

* ಆರೋಪಿಯು ಮೇಲ್ನೋಟಕ್ಕೆ ಸಂತ್ರಸ್ತೆಗೆ ವಂಚನೆ ಮಾಡಿದ್ದಾನೆ ಎಂಬುದು          ಕಂಡುಬರುತ್ತದೆ.

ಈ ಮೊದಲು ಬೆಂಗಳೂರು ನಗರದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೋಡಲು ನಿರಾಕರಿಸಿತ್ತು. ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಜೆ.ದೊರೆಸ್ವಾಮಿ ಸಲ್ಲಿಸಿದ್ದ ಮನವಿಯನ್ನು 55ನೇ ಹೆಚ್ವುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶೆ ಆರ್. ಶಾರದಾ (ಶುಕ್ರವಾರ ಜ.5) ವಜಾಗೊಳಿಸಿದ್ದರು. ಇದರಿಂದಾಗಿ ದೊರೆಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದಲ್ಲಿ ಇನ್ನುಳಿದ ಮೂವರು ಆರೋಪಿಗಳಾದ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮಠದ ಕಾನೂನು ಸಲಹೆಗಾರ ಎನ್.ಗಂಗಾಧರ ಹಾಗೂ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ ಅವರಿಗೆ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

32 ವರ್ಷದ ಸಂತ್ರಸ್ತೆ ಉಪನ್ಯಾಸಕಿಯು ಬೆಂಗಳೂರಿನ ಯಶವಂತಪುರ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ 2021ರ ಜನವರಿ 15ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಆರೋಪಿ ದೊರೆಸ್ವಾಮಿ ಸೇರಿದಂತೆ ಒಟ್ಟು 4 ಮಂದಿ ವಿರುದ್ಧ 2021ರ ಜನವರಿ 16ರಂದು ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣವು ಕಳೆದ 2 ವರ್ಷದ ಹಿಂದೆ ನಡೆದಿದೆ ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಎಸ್ ಜೆ ಎಂ (ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠ) ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಮಠದ ಕಾನೂನು ಸಲಹೆಗಾರ ಎನ್. ಗಂಗಾಧರ್‌ ಹಾಗೂ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ ಅವರುಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ.

32 ವರ್ಷದ ಉಪನ್ಯಾಸಕಿಯೊಬ್ಬರ ಮೇಲೆ ನಡೆದಿದೆ ಎನ್ನಲಾಗಿರುವ ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ ಒಡ್ಡಿರುವ ಆರೋಪ ದೊರೆಸ್ವಾಮಿ ಬಿಟ್ಟು ಉಳಿದ ಮೂವರ ಮೇಲಿರುವುದು ಎಫ್‌ಐಆರ್‌ನಿಂದ ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ:

ಚಿತ್ರದುರ್ಗದ ಎಸ್‌ಜೆಎಂ ಮಹಾವಿದ್ಯಾಪೀಠದಲ್ಲಿ 2019ರ ಸೆಪ್ಟೆಂಬರ್‌ 17ರಂದು ನಡೆದಿದ್ದ ಸೈಬರ್‌ ಸೇಫ್‌ ಕ್ಯಾಂಪಸ್‌ ಕಾರ್ಯಾಗಾರ ಸಂದರ್ಭದಲ್ಲಿ ಎಂ.ಜಿ. ದೊರೆಸ್ವಾಮಿ ಅವರು ಕಾರ್ಯಕ್ರಮ ಆಯೋಜಕಿ ಉಪನ್ಯಾಸಕಿಯ ಮೊಬೈಲ್‌ ನಂಬರ್‌ ಪಡೆದಿದ್ದರು.

ಕಾರ್ಯಾಗಾರ ಪೂರ್ಣಗೊಂಡ ನಂತರ ದೊರೆಸ್ವಾಮಿ ಹಲವು ಬಾರಿ ಉಪನ್ಯಾಸಕಿಯೊಂದಿಗೆ ಸಲುಗೆಯೊಂದಿಗೆ ಮಾತನಾಡಲು ಆರಂಭಿಸಿದ್ದರು. ಆದರೆ, ಉಪನ್ಯಾಸಕಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಉಪನ್ಯಾಸಕಿಯ ವಿರೋಧದ ನಡುವೆಯೂ ದೊರೆಸ್ವಾಮಿ ಅವರು ಪದೇ ಪದೇ ಫೋನ್‌ ಮಾಡುತ್ತಿದ್ದರು ಎಂದು ದೂರಲಾಗಿದೆ. “ಇದೆಲ್ಲಾ ಇಷ್ಟ ಇಲ್ಲ” ಎಂದು ಆಕೆ ಹೇಳಿದರೂ, ಕೇಳದೇ ಪದೇ ಪದೇ ಫೋನ್‌ ಮಾಡಿ “ನನಗೆ ನೀವೆಂದರೆ ತುಂಬಾ ಇಷ್ಟ” ಎಂಬಂತಹ ಪ್ರಣಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಅತಿಯಾದ ಪ್ರೀತಿ ತೋರಿಸುತ್ತಿದ್ದರು. ನನಗೆ “ಅದು” ಇಷ್ಟ ಇಲ್ಲ ಎಂದು ಹೇಳಿದರೂ ನನ್ನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದರು” ಎಂದು ವಿವರಿಸಿರುವುದು ಉಪನ್ಯಾಸಕಿ ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ.

ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆದಿತ್ತೇ ಅತ್ಯಾಚಾರ?

ಸಂತ್ರಸ್ತೆ ಉಪನ್ಯಾಸಕಿಯು ಬೆಂಗಳೂರಿನಲ್ಲಿ ಇದ್ದುದನ್ನು ಮೊದಲೇ ಗೊತ್ತುಪಡಿಸಿಕೊಂಡಿದ್ದ ಆರೋಪಿ ದೊರೆಸ್ವಾಮಿ ಅವರು ಸಂಪರ್ಕ ಸಾಧಿಸಿದ್ದರು. ಯಶವಂತಪುರದಲ್ಲಿನ ಮತ್ತೊಂದು ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು ಎಂಬುದು ದೂರಿನಿಂದ ತಿಳಿದು ಬಂದಿದೆ.

‘2019ರ ಅಕ್ಟೋಬರ್‌ 10ರಂದು ನಾನು ಬೆಂಗಳೂರಿಗೆ ಬಂದೆ. ಆತನು ಸಹ ಅಧಿಕೃತ ಕೆಲಸದ ಮೇರೆಗೆ ಬೆಂಗಳೂರಿಗೆ ಬಂದಿದ್ದ. ಯಶವಂತಪುರದಲ್ಲಿನ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ರಾತ್ರಿ ಊಟಕ್ಕೆ ಆಹ್ವಾನಿಸಿದರು. ಊಟದ ನಂತರ ರಾತ್ರಿ 9.42ಕ್ಕೆ ಹೋಟೆಲ್‌ನ ಕೊಠಡಿಗೆ ಕರೆದೊಯ್ದರು. ಮೊದಮೊದಲು ಸಹಜವಾಗಿ ಮಾತನಾಡುತ್ತ ಅನಂತರ ನನ್ನ ತಲೆ ಮತ್ತು ಕೈಗಳನ್ನು ಮುಟ್ಟತೊಡಗಿದನು. ಆಗ ನಾನು ಹೀಗೆ ಮಾಡಬೇಡಿರೆಂದು ಪ್ರಾರ್ಥಿಸಿದೆ. ಇದು ನನಗೆ ಇಷ್ಟವಿಲ್ಲ ಎಂದು ಪ್ರತಿಭಟಿಸಿದೆ. ಆದರೆ ಅವನು ನನ್ನ ಮಾತನ್ನು ಕೇಳದೆ ನನಗೆ ಜ್ಯೂಸ್‌ನ್ನು ಕುಡಿಯಲು ನೀಡಿದನು. ಆ ಜ್ಯೂಸ್‌ನ್ನು ಕುಡಿದ ನಂತರ ನಾನು ಮೂರ್ಛೆ ತಪ್ಪಲಾರಂಭಿಸಿತು. ಆಗ ಅವನು ದೇಹದ ಅಂಗಾಂಗಳನ್ನೆಲ್ಲಾ ಮುಟ್ಟಿ ನನ್ನನ್ನು ವಸ್ತ್ರ ಕಳಚಿದನು. ನಾನು ಆತನಿಗೆ ಹೀಗೆ ಮಾಡಬೇಡಿ ಮತ್ತೊಮ್ಮೆ ಬೇಡಿಕೊಂಡರೂ ಸಹ ಆತನು ಬಹಳ ಅಮಾನುಷವಾಗಿ ಕ್ರೂರವಾಗಿ ಬಲವಂತವಾಗಿ ನನ್ನನ್ನು ಅತ್ಯಾಚಾರ ಮಾಡಿದನು. ಆಗ ಅವನು ಲೈಂಗಿಕ ಉದ್ರೇಕದ ಔಷಧವನ್ನು ತೆಗೆದುಕೊಂಡಿರುವಂತೆ ಕಂಡು ಬಂದಿತು. ನಾನು ಬಹಳ ದುಃಖದಿಂದ ಅಳುತ್ತಿರುವಾಗ ಸಾಂತ್ವನಗೊಳಿಸಿ ಮತ್ತು ನನ್ನನ್ನು ಮದುವೆಯಾಗುವನೆಂದು ನನಗೆ ಭರವಸೆ ಕೊಟ್ಟನು,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಡಿಯೋ ತೋರಿಸಿ ಬೆದರಿಸಿದ್ದರೇ?

2019ರ ಅಕ್ಟೋಬರ್‌ 10ರ ನಂತರವೂ ಆರೋಪಿ ದೊರೆಸ್ವಾಮಿ ಅವರು ಉಪನ್ಯಾಸಕಿಯನ್ನು ಬೆದರಿಸಿ ಅದೇ ಪ್ರತಿಷ್ಠಿತ ಹೋಟೆಲ್‌ಗೆ ಕರೆಸಿಕೊಂಡಿದ್ದ. ‘ನನಗೆ ಫೋನ್‌ ಮಾಡಿ ಭೇಟಿ ಆಗೋಣವೆಂದು ಹೇಳಿದ. ನಾನು ಬರುವುದಿಲ್ಲ ಎಂದು ಹೇಳಿದಾಗ ನನ್ನ ಬಳಿ ವಿಡಿಯೋ ಇದೆ ಎಂದು ಬೆದರಿಸಿದ. 2019ರ ಅಕ್ಟೋಬರ್‌ 25 ಮತ್ತು 26ರಂದು ಹೋಟೆಲ್‌ಗೆ ಕರೆಸಿಕೊಂಡ. ಇಷ್ಟವಿಲ್ಲ ಎಂದರೂ 2 ದಿನಗಳ ಕಾಲ ಬಿಟ್ಟೂ ಬಿಡದೆ ನನ್ನ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಮಾಡಿದ. ನಂತರ ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ಇದೆ ಎಂದು ಬ್ಲಾಕ್‌ಮೇಲ್‌ ಮಾಡಿದ. ಹಲವು ಪ್ರತಿಷ್ಠಿತ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಹಲವು ಬಾರಿ ಅತ್ಯಾಚಾರ ಮಾಡಿದ”, ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮದುವೆಗೆ ನಿರಾಕರಿಸಿದ್ದೇಕೆ?

ಹಲವು ಬಾರಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪಕ್ಕೆ ಗುರಿಯಾಗಿರುವ ದೊರೆಸ್ವಾಮಿ ಅವರನ್ನು ಸಂತ್ರಸ್ತೆ ಉಪನ್ಯಾಸಕಿ ಮದುವೆಗೆ ಒತ್ತಾಯಿಸಿದಾಗ ಹಲವು ಸಬೂಬುಗಳನ್ನು ಹೇಳುತ್ತಲೇ ಮುಂದೂಡಿದ್ದರು ಎಂಬ ಅಂಶ ದೂರಿನಿಂದ ಗೊತ್ತಾಗಿದೆ.

‘ನಾನು ದೊರೆಸ್ವಾಮಿ ಅವರಿಗೆ ಮದುವೆ ಮಾಡಿಕೊಳ್ಳುವಂತೆ ಹಲವು ಬಾರಿ ಹೇಳಿದಾಗ ಇವತ್ತು, ನಾಳೆ ಮಾಡಿಕೊಳ್ಳುವುದಾಗಿ ಸಬೂಬುಗಳನ್ನು ಹೇಳುತ್ತಲೇ ಬಂದರು. ನಂತರ ದೊರೆಸ್ವಾಮಿ ಅವರು ಯಾವುದೇ ವಿಚ್ಛೇದನ ಪಡೆದಿರುವುದಿಲ್ಲ ಎಂದು ತಿಳಿಯಿತು. ಆ ನಂತರವೂ ಅವರು ನನಗೆ ಪ್ರೀತಿ ತೋರಿಸದೆ ನಿರ್ಲಕ್ಷ್ಯ ಮಾಡಿದರು. ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ಏನನ್ನೂ ಮಾತನಾಡದೆ ಮೌನವಾಗಿರುತ್ತಿದ್ದ,’ ಎಂದು ಸಂತ್ರಸ್ತೆ ಉಪನ್ಯಾಸಕಿ ದೂರಿನಲ್ಲಿ ವಿವರಿಸಿದ್ದಾರೆ.

ಜೀವ ಬೆದರಿಕೆ ಒಡ್ಡಿದರು?

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತು ಕಾನೂನು ಸಲಹೆಗಾರ ಎನ್. ಗಂಗಾಧರ್‌ ಅವರು ಸಂತ್ರಸ್ತೆ ಉಪನ್ಯಾಸಕಿಗೆ ಜೀವ ಬೆದರಿಕೆ ಒಡ್ಡಿದರು ಎಂದು ಆರೋಪ ಎದುರಿಸುತ್ತಿದ್ದಾರೆ.

‘ಕಾರ್ಯದರ್ಶಿ ಪರಮಶಿವಯ್ಯ ಮತ್ತು ಗಂಗಾಧರ್‌ ಅವರು ದೊರೆಸ್ವಾಮಿ ಜತೆ ಮಾತುಕತೆ ನಡೆಸಿ ಮದುವೆ ಮಾಡಿಸುವುದಾಗಿ ಹೇಳಿ ನಂಬಿಸಿದ್ದರು. ನನ್ನ ಮತ್ತು ದೊರೆಸ್ವಾಮಿ ನಡುವಿನ ಸಂಭಾಷಣೆಯ ಆಡಿಯೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಅವರು ನನ್ನ ಬಳಿ ಬಂದು ಈ ವಿಚಾರವನ್ನು ಇಲ್ಲಿಗೇ ಬಿಡಿ. ಇಲ್ಲಾ ಅಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ,’ ಎಂದು ಬೆದರಿಕೆ ಒಡ್ಡಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶರಣರಿಗೂ ಗೊತ್ತಿತ್ತು ಈ ಪ್ರಕರಣ!

ಇಡೀ ಪ್ರಕರಣ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರ ಗಮನದಲ್ಲಿದೆ. ಅಕ್ಟೋಬರ್‌ 9ರಂದು ವೀರೇಶ್‌ ಎಂಬುವರು ನನ್ನನ್ನು ಶಿವಮೂರ್ತಿ ಮುರುಘಾ ಶರಣರ ಬಳಿ ಕರೆದೊಯ್ದರು. ಆ ಸಂದರ್ಭದಲ್ಲಿ ಮಲ್ಲಿಕಯ್ಯ ಮತ್ತು ಪರಮಶಿವಯ್ಯ ಹಾಜರಿದ್ದರು. ಆ ವೇಳೆ ನನ್ನ ಮತ್ತು ದೊರೆಸ್ವಾಮಿ ಸಂಬಂಧದ ಬಗ್ಗೆ ಸತ್ಯವನ್ನು ಹೇಳಿದೆ. ನನಗೆ ನ್ಯಾಯ ಕೊಡಿಸುವುದಾಗಿ ಸ್ವಾಮೀಜಿ ಭರವಸೆ ನೀಡಿದರು. ಮತ್ತು ಶರಣ ಸಂಸ್ಕೃತಿ ಉತ್ಸವದ ನಂತರ ಆ ವಿಷಯವನ್ನು ಪರಿಹರಿಸುವ ಜವಾಬ್ದಾರಿಯನ್ನು ಮಲ್ಲಿಕಯ್ಯ ಮತ್ತು ವೀರೇಶ್‌ ಅವರಿಗೆ ನೀಡಿದರು. ಹೀಗೆ ಆ ಸಭೆಯನ್ನು ಮುಂದೂಡಲಾಗಿತ್ತು. ನನಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾದರು,’ ಎಂದು ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts