50 ಲಕ್ಷ ಥೈಲಿ ಸಿಕ್ಕಿಬಿದ್ದ ಪ್ರಕರಣ; ಪಿಡಬ್ಲ್ಯುಡಿ ಅಧಿಕಾರಿ ವಿರುದ್ಧ ತನಿಖೆ ವಿಳಂಬ?

ಬೆಂಗಳೂರು; 50 ಲಕ್ಷ ರು.ಗಳನ್ನು ಕೊಂಡ್ಯೊಯುತ್ತಿದ್ದ ವೇಳೆಯಲ್ಲಿ ಸಿಕ್ಕಿ ಬಿದ್ದಿದ್ದರು ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಲೋಕೋಪಯೋಗಿ ಇಲಾಖೆಯ ಜಂಟಿ ನಿಯಂತ್ರಕ ಸೋಮನಾಥ್‌ ಮತ್ತಿತರ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಮುಚ್ಚಿ ಹಾಕಲು ಭ್ರಷ್ಟಾಚಾರ ನಿಗ್ರಹ ದಳದ ಮೇಲೆ ಪ್ರಭಾವಿಯೊಬ್ಬರು ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳವು 9 ತಿಂಗಳ ಹಿಂದೆಯೇ ಎಫ್‌ಐಆರ್‌ ದಾಖಲಿಸಿದ್ದರೂ ತನಿಖೆಯನ್ನು ಮುಂದುವರೆಸಿಲ್ಲ. ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಯೊಬ್ಬರು ಐಎಎಸ್‌ ಬಡ್ತಿಗೆ ಶಿಫಾರಸ್ಸಾಗಿರುವ ಕಾರಣ ತನಿಖೆಯನ್ನು ಮುಂದುವರೆಸಬಾರದು ಎಂಬ ಒತ್ತಡ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದವರೊಬ್ಬರಿಂದಲೇ ಮುಂದುವರೆದಿದೆ. ಹೀಗಾಗಿಯೇ ಪ್ರಕರಣದಲ್ಲಿ ಕಳೆದ 9 ತಿಂಗಳಾದರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ .

ಅಲ್ಲದೆ ಎಸಿಬಿಯ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯೊಬ್ಬರು (ಈಗವರು ಎಸಿಬಿಯಿಂದ ವರ್ಗಾ ಆಗಿದ್ದಾರೆ) ಪ್ರಕರಣದ ತನಿಖೆಯನ್ನು ಮುಂದುವರೆಸಬಾರದು ಎಂಬ ಒತ್ತಡ ಹೇರಿದ್ದರು. ಈಗಿನ ಎಡಿಜಿಪಿ ಸೀಮಂತಕುಮಾರ್‌ ಸಿಂಗ್‌ ಕೂಡ ಪ್ರಕರಣದ ತನಿಖೆಯಲ್ಲಿ ಆಸಕ್ತಿ ವಹಿಸಿಲ್ಲ ಎಂದು ಗೊತ್ತಾಗಿದೆ.

ವಿಶೇಷವೆಂದರೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿ 9 ತಿಂಗಳಾದರೂ ಆರೋಪಿತ ಅಧಿಕಾರಿಗಳನ್ನು ಈವರೆವಿಗೂ ಅಮಾನತುಪಡಿಸಿಲ್ಲ. ಈವರೆವಿಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಶಾಸಕಿಯೊಬ್ಬರು ಸತತವಾಗಿ ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆಯಲ್ಲದೆ ಪ್ರಕರಣದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಕಾಸಸೌಧದಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿ ಜಂಟಿ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿರುವ ಸೋಮನಾಥ್‌ ಮತ್ತು ವಿಧಾನಸೌಧದಲ್ಲಿರುವ ಆರ್ಥಿಕ ಇಲಾಖೆಯ ಡಿ ಗ್ರೂಪ್‌ ನೌಕರ ಎಂ ಸೆಲ್ವಂ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2020ರ ಮಾರ್ಚ್‌ 17ರಂದು ಎಫ್‌ಐಆರ್‌ ದಾಖಲಿಸಿತ್ತು.

ಪ್ರಕರಣದ ವಿವರ

ಬೆಂಗಳೂರಿನ ಬಾಣಸವಾಡಿ ರೈಲ್ವೇ ನಿಲ್ದಾಣದಲ್ಲಿ 2020ರ ಮಾರ್ಚ್‌ 17ರಂದು ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಆರೋಪಿತ ನೌಕರ ಸೆಲ್ವಂನನ್ನು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೇ ಸಂದರ್ಭದಲ್ಲಿ ಆತನ ವಶದಲ್ಲಿದ್ದ ಹಣವನ್ನು ಅಮಾನತುಪಡಿಸಿಕೊಂಡಿದ್ದರು. ಅಲ್ಲದೆ ಆರೋಪಿತ ಸಾಮಾನ್ಯ ಸ್ಥಿತಿಗೆ ಬಂದ ನಂತರ ಹೆಚ್ಚಿನ ವಿಚಾರಣೆ ಮಾಡಿದ್ದ ಪೊಲೀಸ್‌ ಅಧಿಕಾರಿಗಳು ಆತನಿಂದ ಮಾಹಿತಿ ಪಡೆದ ನಂತರ ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಲಾಗಿತ್ತು. ಹೆಚ್ಚಿನ ವಿಚಾರಣೆ ಬಳಿಕ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ಜಂಟಿ ನಿಯಂತ್ರಕ ಸೋಮನಾಥ್‌ ಅವರನ್ನೂ ಆರೋಪಿ ಎಂದು ಎಫ್‌ಐಆರ್‌ ದಾಖಲಿಸಿತ್ತು.

ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ(ಎಲ್‌ಒಸಿ) ಮಾಡುವ ಉಸ್ತುವಾರಿಯನ್ನು ಸೋಮನಾಥ್‌ ಅವರು ಹೊತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಇದಕ್ಕೆ ಸಂಬಂಧಿಸಿದಂತೆ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದಿತವಾದ ಬಿಲ್‌ಗಳನ್ನು ಆರ್ಥಿಕ ಇಲಾಖೆ ಪರಿಶೀಲಿಸಿದ ನಂತರ ಹಣ ಬಿಡುಗಡೆಗೆ ಅನುಮತಿ ನೀಡುತ್ತದೆ. ಆರ್ಥಿಕ ಇಲಾಖೆಯ ಇದೇ ವಿಭಾಗದಲ್ಲಿ ಸೆಲ್ವಂ ಎಂಬಾತ ಡಿ ಗ್ರೂಪ್‌ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಗೊತ್ತಾಗಿದೆ.

ಆರೋಪಿತ ಅಧಿಕಾರಿ, ನೌಕರರನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದ್ದೇ ಆಗಿದ್ದಲ್ಲಿ ಪ್ರಕರಣದ ಹಿಂದೆ ಯಾರಿದ್ದಾರೆ, ಆ ಹಣ ಯಾರಿಗೆ ಸೇರಿದ್ದು, ಅದು ಯಾರಿಗೆ ಸೇರಬೇಕಿತ್ತು ಎಂಬ ಹಲವು ಮಾಹಿತಿಗಳು ಹೊರಬರಲಿದ್ದವು.

ಇದೇ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯೊಬ್ಬರ ಜೊತೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೂಲಕ ಎಸಿಬಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಈ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಎಸಿಬಿ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.

ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಸಂಬಂಧ ಎರಡೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಅರೋಪಗಳಿಗೆ ಈ ಪ್ರಕರಣ ಹೆಚ್ಚಿನ ಪುಷ್ಠಿ ನೀಡಿದೆ.

the fil favicon

SUPPORT THE FILE

Latest News

Related Posts