ಪ್ರವಾಹ; ಜಿಲ್ಲೆಗಳಲ್ಲಿ ಪ್ರವಾಸವನ್ನೇ ಕೈಗೊಳ್ಳದ ಸಚಿವರ ಪಟ್ಟಿ ಬಹಿರಂಗ

ಬೆಂಗಳೂರು; ಕಳೆದ ಬಾರಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕದ 13 ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ತತ್ತರಿಸಿ ಹೋಗಿದ್ದರೂ ಕಂದಾಯ ಸಚಿವ ಆರ್‌ ಅಶೋಕ್‌ ಸೇರಿದಂತೆ ಬಿಜೆಪಿ ಸರ್ಕಾರದ ಹಲವು ಸಚಿವರು ಜಿಲ್ಲಾ ಪ್ರವಾಸವನ್ನೇ ಕೈಗೊಂಡಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಮತ್ತು ವಸತಿ ಸಚಿವರು ಕೇವಲ ನೆಪ ಮಾತ್ರಕ್ಕಷ್ಟೇ ಪ್ರವಾಸ ಕೈಗೊಂಡಿದ್ದರು. ಉಳಿದವರು ಪ್ರವಾಸವನ್ನು ಕೈಗೊಂಡಿರುವ ಬಗ್ಗೆ ನಿದರ್ಶನವೇ ಇಲ್ಲ. ರಸ್ತೆ, ಸೇತುವೆ, ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗಿ 5,509 ಕೋಟಿ ರು ನಷ್ಟವಾಗಿದ್ದರೂ ಸಂಬಂಧಿಸಿದ ಸಚಿವರುಗಳು ಒಂದೋ ಎರಡೋ ಜಿಲ್ಲೆಗಳಿಗಷ್ಟೇ ಭೇಟಿ ನೀಡಿ ಕೈತೊಳೆದುಕೊಂಡಿದ್ದಾರೆ. ಈ ಕುರಿತು ಇಲಾಖೆಯ ಮುಖ್ಯಸ್ಥರುಗಳನ್ನು ಭೇಟಿ ಮಾಡಿದ್ದ ‘ದಿ ಫೈಲ್‌’ ಗೆ ದಾಖಲೆಗಳು ಲಭ್ಯವಾಗಿವೆ.

ಭಾರೀ ಪ್ರವಾಹ ಸಂಭವಿಸಿದ್ದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ್‌, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಕಳೆದ ಬಾರಿಯ ಹಾನಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಪ್ರವಾಹ ಎದುರಿಸಲು ಸಿದ್ಧತೆ ನಡೆಸುತ್ತಿದೆ. ಆದರೂ ಸಂಬಂಧಿಸಿದ ಸಚಿವರು ಈ ಜಿಲ್ಲೆಗಳಲ್ಲಿ ಪ್ರವಾಸವನ್ನು ಕೈಗೊಂಡಿರಲಿಲ್ಲ ಎಂಬುದು ದಾಖಲೆಯಿಂದ ಬಹಿರಂಗವಾಗಿದೆ.

ಪ್ರವಾಹ ನಿರ್ವಹಣೆ, ಹಾನಿ ಪ್ರದೇಶಗಳಿಗೆ ಪರಿಹಾರ ಸೇರಿದಂತೆ ಇನ್ನಿತರೆ ಮಹತ್ತರ ಜವಾಬ್ದಾರಿ ಹೊತ್ತಿರುವ ಕಂದಾಯ ಇಲಾಖೆ ಸಚಿವ ಆರ್‌ ಆಶೋಕ್‌ ಅವರು 2019ರ ಆಗಸ್ಟ್‌ 29ರಂದು ಕೊಡಗಿಗೆ, 2019ರ ಆಗಸ್ಟ್‌ 31ರಂದು ಶಿವಮೊಗ್ಗಕ್ಕೆ , 2019ರ ಸೆಪ್ಟಂಬರ್‌ 19ರಂದು ಚಿಕ್ಕಮಗಳೂರಿಗೆ, 2019ರ ಅಕ್ಟೋಬರ್‌ 27ರಂದು ಬೆಳಗಾವಿಗೆ ಮಾತ್ರ ಭೇಟಿ ನೀಡಿದ್ದಾರೆ ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಅವರು 2019ರ ಆಗಸ್ಟ್‌ 21ರಂದು ಬಾಗಲಕೋಟೆ, 2019ರ ಸೆ.7 ಮತ್ತು 29ರಂದು ಬೆಳಗಾವಿಗೆ 2019ರ ಅಕ್ಟೋಬರ್‌ 25ರಂದು ಕೊಡಗಿಗೆ ಭೇಟಿ ನೀಡಿರುವುದು ಗೊತ್ತಾಗಿದೆ.

ವಸತಿ ಸಚಿವ ವಿ ಸೋಮಣ್ಣ ಅವರು 2019ರ ನವೆಂಬರ್‌ 5 ಮತ್ತು 6ರಂದು ಬಾಗಲಕೋಟೆಗೆ, 2019ರ ನವೆಂಬರ್‌ 4 ಮತ್ತು 11ರಂದು ಬೆಳಗಾವಿಗೆ ಮಾತ್ರ ಭೇಟಿ ನೀಡಿದ್ದಾರೆ. ಉಳಿದ ಕಡೆ ಪ್ರವಾಸವನ್ನೇ ಕೈಗೊಂಡಿಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಒಟ್ಟು 7,521 ಮನೆಗಳು ಪೂರ್ಣ ಹಾನಿಯಾಗಿದ್ದರೆ 22,689 ಮನೆಗಳು ಭಾಗಶಃ ಹಾನಿಯಾಗಿವೆ. ಬೆಳಗಾವಿಯಲ್ಲಿ 5,944 ಪೂರ್ಣ ಮನೆ ಹಾನಿ (80.12 ಕೋಟಿ ನಷ್ಟ), 11,777 ಭಾಗಶಃ ಮನೆ ಹಾನಿ, (145.67 ಕೋಟಿ ನಷ್ಟ), ಬಾಗಲಕೋಟೆಯಲ್ಲಿ 532 ಮನೆ ಹಾನಿ (8.55 ಕೋಟಿ ನಷ್ಟ), 2,428 ಭಾಗಶಃ ಹಾನಿ (36.39 ಕೋಟಿ ನಷ್ಟ)ಯಾಗಿತ್ತು. ಸಂಪೂರ್ಣ ಮನೆ ಕಳೆದುಕೊಂಡಿರುವರಿಗೆ ಒಟ್ಟು 102.27 ಕೋಟಿ ರು., ಭಾಗಶಃ ಮನೆ ಕಳೆದುಕೊಂಡಿರುವರಿಗೆ 290.88 ಕೋಟಿ ರು. ಪರಿಹಾರ ನೀಡಿದೆ.

ಪ್ರವಾಹದಿಂದ ಉಂಟಾದ ಭೂ ಕುಸಿತದಿಂದ 12,708 ಹೆಕ್ಟೇರ್‌ ಕೃಷಿ ಭೂಮಿ ನಾಶವಾಗಿತ್ತು. ಬೆಳಗಾವಿಯಲ್ಲಿ 4,721 ಹೆಕ್ಟೇರ್‌ (1770.38 ಲಕ್ಷ ರು.ಹಾನಿ) ಹಾವೇರಿ ಜಿಲ್ಲೆಯಲ್ಲಿ 7,914 ಹೆಕ್ಟೇರ್‌ (2967.75 ಲಕ್ಷ ಹಾನಿ) ಪ್ರದೇಶ ಭೂ ಕುಸಿತದಿಂದ ಹಾನಿಯಾಗಿತ್ತು. ಈ ಸಂಬಂಧ ಬದಲಿ ಕೃಷಿ ಭೂಮಿ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿದು ಬಂದಿದೆ.

4,416 ಕೋಟಿ ಮೊತ್ತದಲ್ಲಿ ರಸ್ತೆ (13,573 ಕಿ ಮೀ ) ಹಾನಿ, 1,642 ಸೇತುವೆ ಹಾನಿಯಿಂದ 6,55.45 ಕೋಟಿ, 6,137 ಸಾರ್ವಜನಿಕ ಕಟ್ಟಡಗಳಿಗೆ ಸಂಭವಿಸಿದ ಹಾನಿಯಿಂದ 437.68 ಕೋಟಿ ರು. ಸೇರಿದಂತೆ ಒಟ್ಟು 5,509 ಕೋಟಿ ರು. ನಷ್ಟವಾಗಿತ್ತು.

ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಒಟ್ಟು 13,663.51 ಹೆಕ್ಟೇರ್‌ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳಲ್ಲಿದ್ದ ಬೆಳೆಯು ಸಂಪೂರ್ಣ ನಾಶವಾಗಿತ್ತು. ಈ ಎರಡೂ ವಲಯಗಳಿಂದಲೇ 15,230 ಕೋಟಿ ರು.ನಷ್ಟ ಸಂಭವಿಸಿತ್ತು.

ಅಲ್ಲದೆ ರಸ್ತೆ, ಸೇತುವೆ, ಕಟ್ಟಡ, ಮನೆ ಹಾನಿಯೂ ಸೇರಿದಂತೆ ಒಟ್ಟು 35,160.81 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ನೆರವು ಕೋರಿದ್ದ ಮೊತ್ತಕ್ಕೆ ಎದುರಾಗಿ ಕೇಂದ್ರ ಸರ್ಕಾರವು ಕೇವಲ 1,652 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಅಲ್ಲದೆ ಒಂದು ವರ್ಷದ ಸಂಭ್ರಮದಲ್ಲಿದ್ದ ಬಿಜೆಪಿ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಕೆಂದ್ರ ಸರ್ಕಾರ 1,869 ಕೋಟಿ ನೆರವು ನೀಡಿದೆ ಎಂದು ತಪ್ಪಾಗಿ ಬಿಂಬಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಅದೇ ರೀತಿ 2019ರ ಆಗಸ್ಟ್‌ನಲ್ಲಿ ತೀವ್ರ ಮಳೆ ಮತ್ತು ಭೂ ಕುಸಿತದಿಂದಾಗಿ 17,981.00 ಹೆಕ್ಟೇರ್‌ ಕಾಫಿ ಬೆಳೆ ಹಾನಿಯಾಗಿತ್ತು. ಈ ಪೈಕಿ 12,895 ರೈತರಿಗೆ 40,78,00,000 ರು.ಇನ್‌ಪುಟ್‌ ಸಬ್ಸಿಡಿಯನ್ನು ಆಯಾ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿತ್ತು. ಕಾಫಿ ಸೇರಿದಂತೆ ಇತರೆ ಬೆಳೆಹಾನಿ ಸಂಬಂಧ ಒಟ್ಟು 26,934 ರೈತರಿಗೆ 61,70,46,405 ರು. ಪರಿಹಾರ ಮೊತ್ತ ನೀಡಿತ್ತು ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts