‘ದಿ ಫೈಲ್‌’ ವರದಿ ಪರಿಣಾಮ; 273 ಅಕ್ರಮ ಖಾತೆ ರದ್ದುಗೊಳಿಸಿದ ಸರ್ಕಾರ

ಬೆಂಗಳೂರು; ಆನೇಕಲ್‌ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯರನ್ನೂ ಯಾಮಾರಿಸಿ 300 ಕೋಟಿ  ರು. ಮೌಲ್ಯದ 79 ಎಕರೆ ವಿಸ್ತೀರ್ಣ ಜಮೀನಿಗೆ ಅಕ್ರಮವಾಗಿ ಮಾಡಿದ್ದ  273 ಖಾತೆಗಳನ್ನು  ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣ ಕುರಿತು ಏಪ್ರಿಲ್‌ 10ರಂದು ವರದಿ ಮಾಡಿದ್ದ ‘ದಿ ಫೈಲ್‌’ ಸರಣಿ ವರದಿಗಳನ್ನೂ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಒಂದು  ದಿನದಲ್ಲೇ  ಅಂತರದಲ್ಲೇ ಎಚ್ಚೆತ್ತುಕೊಂಡಿದ್ದ ಗ್ರಾಮ ಪಂಚಾಯ್ತಿ ಸದಸ್ಯರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದರಲ್ಲದೆ, ಈ ಕುರಿತು  ಜಿಲ್ಲಾ  ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ತೇಪೆ ಹಾಕಲು ಯತ್ನಿಸಿದ್ದ ಸಂಸದರೊಬ್ಬರ ನಿಯೋಗವೊಂದು ಸಚಿವ ಈಶ್ವರಪ್ಪ ಅವರ ಬಳಿ ತೆರಳಿತ್ತು.

‘ಬಿಲ್ಲಾಪುರ ಗ್ರಾಮ ಪಂಚಾಯ್ತಿಯಲ್ಲಿ 2018ರ ಜುಲೈ 3ರಂದು ನಡೆದ  ಸಾಮಾನ್ಯ ಸಭೆಯಲ್ಲಿ 273 ಖಾತೆಗಳನ್ನು ವಿತರಿಸಿರುವ  ಜಮೀನು ಸರ್ಕಾರಿ ಗೋಮಾಳ  ಜಮೀನು ಆಗಿರುತ್ತದೆ ಎಂದು ಚರ್ಚಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಈ ಜಮೀನಿಗೆ ಸಂಬಂಧಿಸಿದಂತೆ ನಮೂನೆ  9ನ್ನು ವಿತರಿಸದಿರಲು ಸಹ ಸಭೆಯಲ್ಲಿ ತೀರ್ಮಾನಿಸಿರುವುದು ಕಂಡುಬಂದಿರುತ್ತದೆ,’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 2020ರ ಏಪ್ರಿಲ್‌ 15ರಂದು ತಾಲೂಕು ಪಂಚಾಯ್ತಿ ಇಒಗೆ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. 

‘ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಅನುಸರಿಸಿ  ನಮೂನೆ  9 ಗ್ರಾಮ ಪಂಚಾಯ್ತಿಯಿಂದ  ವಿತರಣೆ ಆಗಿರುವುದಿಲ್ಲ. ಆದ ಕಾರಣ ಎಲ್ಲಾ 273 ಖಾತೆಗಳನ್ನು ರದ್ದುಪಡಿಸಿ, ತಾಲೂಕು ಪಂಚಾಯ್ತಿ ಕಚೇರಿಗೆ ವರದಿ ಸಲ್ಲಿಸಬೇಕು,’ ಎಂದು ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು  2020ರ ಏಪ್ರಿಲ್‌  16ರಂದು ನಿರ್ದೇಶಿಸಿದ್ದಾರೆ. 

‘ಈ ಪ್ರಕರಣ ಲೋಕಾಯುಕ್ತ, ಎಸಿಬಿ ಮತ್ತು ಭೂ ಕಬಳಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಮ್ಮಗಳ  ಗಮನಕ್ಕೆ ಬರದೇ ಅಕ್ರಮ ಮತ್ತು ಕಾನೂನುಬಾಹಿರವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಈ ಕೂಡಲೇ ಪಿಡಿಒ ಜಯರಾಂ ಅವರನ್ನು ಸೇವೆಯಿಂದ ವಜಾ  ಮಾಡಬೇಕು ಮತ್ತು 273 ಖಾತೆಗಳನ್ನು ರದ್ದುಗೊಳಿಸಬೇಕು,’ ಎಂದು ದೂರಿನಲ್ಲಿ ಕೋರಿದ್ದರು. 

ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವ ಸಂದರ್ಭವನ್ನು ಬಳಸಿಕೊಂಡಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ ವಿ ಜಯರಾಮ್‌ ಎಂಬುವರು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಯನ್ನೂ ಕತ್ತಲಲ್ಲಿಟ್ಟು 273 ಖಾತೆಗಳನ್ನು ಮಾಡಿಕೊಟ್ಟಿದ್ದನ್ನು ‘ದಿ ಫೈಲ್‌’ ಹೊರಗೆಡವಿತ್ತು.

ರೆಮ್ಕೋ ಬಿಎಚ್‌ಇಎಲ್‌ ಹೌಸಿಂಗ್‌ ಸೊಸೈಟಿ ಅಧ್ಯಕ್ಷ ವಿಜಯಕುಮಾರ್‌ ಅವರ ಹೆಸರಿಗೆ 2020ರ ಏಪ್ರಿಲ್‌ 1ರಂದು ಖಾತೆ ಮಾಡಿಕೊಡಲಾಗಿತ್ತು. ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತದಲ್ಲಿ ಯಾವುದೇ ಮಾಹಿತಿ, ದಾಖಲೆಯೂ ಇರಲಿಲ್ಲ. ವಿಧಾನಪರಿಷತ್‌ ಸದಸ್ಯ ಸಿ ಆರ್‌ ಮನೋಹರ್‌ ಅವರ ಹೆಸರು ಈ ಪ್ರಕರಣದಲ್ಲಿ ಥಳಕು ಹಾಕಿಕೊಂಡಿತ್ತು. 

ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಅಡಿಗಾರಕಲ್ಲಹಳ್ಳಿಯಲ್ಲಿ ಮೂಲ ಸರ್ವೇ ನಂಬರ್‌ 47ರ 103 ಎಕರೆ 33 ಗುಂಟೆ  ಗೋಮಾಳ ಜಮೀನಿನ ಮಂಜೂರಾತಿ ಹಾಗೂ ಪೋಡಿ ದುರಸ್ತಿಯಲ್ಲಿ ಅಕ್ರಮ ನಡೆದಿದೆ ಎಂದು  ಹಿಂದಿನ ಜಿಲ್ಲಾಧಿಕಾರಿ ನೇಮಿಸಿದ್ದ ವಿಚಾರಣಾ ಸಮಿತಿಯ ತನಿಖೆ ವೇಳೆಯಲ್ಲಿ ಪತ್ತೆಯಾಗಿತ್ತು. 

ಪ್ರಕರಣದ ಹಿನ್ನಲೆ

ವಿಧಾನ ಪರಿಷತ್‌ ಸದಸ್ಯ ಸಿ.ಆರ್‌. ಮನೋಹರ್‌ (ಜೆಡಿಎಸ್‌) ಹಾಗೂ ಸಿ.ಆರ್‌.ಗೋಪಿ ಮಾಲೀಕತ್ವದ ಲಯನ್‌ ಎಸ್ಟೇಟ್ಸ್‌ ಆ್ಯಂಡ್‌ ಪ್ರಾಪರ್ಟೀಸ್‌ ಸಂಸ್ಥೆಯು ಈ ಸರ್ವೇ ನಂಬರ್‌ನ  ಗೋಮಾಳ ಜಾಗದಲ್ಲೇ ವಸತಿ ಬಡಾವಣೆ ನಿರ್ಮಿಸಿ ರೆಮ್ಕೊ–ಬಿಎಚ್‌ಇಎಲ್‌ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಮಾರಾಟ ಮಾಡಿತ್ತು. 

ಸಿ.ಆರ್‌.ಮನೋಹರ್‌ ಅವರು ಪಹಣಿ ಕಾಲಂ 3 ಮತ್ತು 9 ಅನ್ನು ಸರಿಪಡಿಸಿಕೊಡಲು ಕೋರಿರುವಂತೆ  ಅಡಿಗಾರ ಕಲ್ಲಹಳ್ಳಿ ಗ್ರಾಮದ ಮೂಲ ಸರ್ವೇ ನಂಬರ್‌ 47ರಲ್ಲಿ  ಜಮೀನಿನ  ಪೋಡಿ ದುರಸ್ತಿ ಮಾಡಲಾಗಿತ್ತಲ್ಲದೆ ಹಳೇ ಸರ್ವೇ ನಂಬರ್‌ (47)  ಬದಲು ಹೊಸ ಸರ್ವೇ ನಂಬರ್‌ಗಳನ್ನು  ನೀಡಲಾಗಿತ್ತು. ಇದರಲ್ಲಿ ಕೆಲವು ಅಧಿಕಾರಿಗಳೂ ಕೈಜೋಡಿಸಿದ್ದು ಅವರ ವಿರುದ್ಧವೂ ಕ್ರಮಕೈಗೊಳ್ಳಲು ಸಮಿತಿ ಶಿಫಾರಸು ಮಾಡಿತ್ತು. 

ಈ ಪೈಕಿ ಸರ್ವೇ ನಂಬರ್‌ 165ರಿಂದ 180ರವರೆಗಿನ ದುರಸ್ತಿ ದಾಖಲೆಗಳನ್ನು  ಹಾಗೂ ಚಾಲ್ತಿಯಲ್ಲಿರುವ ಪಹಣಿಗಳನ್ನು ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದ್ದರೂ ಖಾತೆ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. 

ಅದರಲ್ಲೂ ವಿಶೇಷವಾಗಿ ಮೂಲ ಸರ್ವೇ ನಂಬರ್‌ 47ರಲ್ಲಿರುವ 24 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇನ್ನುಳಿದ 79 ಎಕರೆ 10 ಗುಂಟೆ ಜಮೀನಿನ   ಮಂಜೂರಾತಿಗೆ ಸಂಬಂಧಿಸಿ ಕೆಲವು ದಾಖಲೆಗಳು ಲಭ್ಯ ಇದ್ದು, ಇನ್ನೂ ಕೆಲವು ಪ್ರಮುಖ ದಾಖಲೆಗಳು ಲಭ್ಯ ಇರಲಿಲ್ಲ ಎಂಬುದನ್ನೂ ಸಮಿತಿ ಹೊರಗೆಡವಿತ್ತು. 

ಇದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿತ್ತಲ್ಲದೆ,1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (3)ರ ಅಡಿ ಭೂಮಾಲೀಕತ್ವ ನಿರ್ಧರಿಸುವ ಬಗ್ಗೆ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿತ್ತು. 

ಇನ್ನು, ಗ್ರಾಮದ ಮೂಲ ದಾಖಲೆಗಳ ಪ್ರಕಾರ ಸರ್ವೇ ನಂಬರ್‌ 47ರಲ್ಲಿ  103 ಎಕರೆ 33 ಗುಂಟೆ ಗೋಮಾಳ ಜಮೀನು ಇದೆ. ಈ ಪೈಕಿ 1926–27ರಲ್ಲಿ 13 ಮಂದಿಗೆ ತಲಾ 4 ಎಕರೆಯಂತೆ 52 ಎಕರೆ ಹಾಗೂ 1953–54ರಲ್ಲಿ 22 ಮಂದಿಗೆ ತಲಾ 22 ಎಕರೆ ಭೂಮಿ ಮಂಜೂರು ಮಾಡಿರುವುದು ತಿಳಿದು ಬಂದಿದೆ. 

1978–79ರಲ್ಲೂ 2 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಆನೇಕಲ್‌ ತಹಸೀಲ್ದಾರ್‌ (ಈ ಹಿಂದಿನವರು) ಅವರು ಸಮಿತಿ ಮುಂದೆ ಹೇಳಿದ್ದರು. ಆದರೆ ಈ ಭೂಮಿ ಮಂಜೂರು ಮಾಡಿದ ಬಗ್ಗೆ ಮೂಲ   ದಾಖಲೆಗಳು  ಲಭ್ಯವಿಲ್ಲ ಎಂಬ ಅಂಶ ವಿಚಾರಣೆಯಿಂದ ಬಹಿರಂಗಗೊಂಡಿತ್ತು.

ಯಾವುದೇ ಭೂದಾಖಲೆಗಳ ಪೋಡಿ ದುರಸ್ತಿಗೆ ಮೂಲ ಮಂಜೂರಾತಿ ಆದೇಶ, ಸಾಗುವಳಿ ಚೀಟಿ, ಮಂಜೂರಾತಿ ಸಂದರ್ಭದಲ್ಲಿ ತಯಾರಿಸಿದ ನಕ್ಷೆ, ಪೋಡಿ ಶುಲ್ಕ ಪಾವತಿಸಿದ ರಸೀದಿ, ಮಂಜೂರಿದಾರರ ಹೆಸರಿಗೆ ಹಕ್ಕು ಬದಲಾವಣೆಗೊಂಡ ಮ್ಯುಟೇಷನ್‌ ಹಾಗೂ ಚಾಲ್ತಿ ಸಾಲಿನ ಆರ್‌ಟಿಸಿಗಳು ಅತ್ಯವಶ್ಯ. 

ಆದರ ಜೊತೆಗೆ ಮಂಜೂರಾತಿಯ ನೈಜತೆ ಸಾಬೀತುಪಡಿಸುವ ದರಖಾಸ್ತು ಮಂಜೂರಾತಿ ವಹಿ ಹಾಗೂ ಸಾಗುವಳಿ ಚೀಟಿ ವಿತರಣಾ ವಹಿಗಳಲ್ಲಿ ಹೆಸರು ನಮೂದಾಗಿರುವ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಬೇಕು. ಆದರೆ ಈ ಪ್ರಮುಖ ದಾಖಲೆಗಳು ಇಲ್ಲದಿದ್ದರೂ ಗೋಮಾಳ ಜಮೀನಿನ ಪೋಡಿ ದುರಸ್ತಿ ಮಾಡಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದ ಸಮಿತಿ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (3)ರ ಅಡಿ ಭೂಮಾಲೀಕತ್ವ ನಿರ್ಧರಿಸುವ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಪ್ರಮುಖ ದಾಖಲೆಗಳು ಲಭ್ಯ ಇಲ್ಲದಿದ್ದಾಗ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 67ರ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಆದೇಶ ಪಡೆದು ಪೋಡಿ ದುರಸ್ತಿ ಮಾಡಬಹುದು. ಆದರೆ, ಇಲ್ಲಿ ಈ ನಿಯಮವೂ ಪಾಲನೆ ಆಗಿರಲಿಲ್ಲ ಎಂಬುದನ್ನು ಸಮಿತಿ ಹೊರಗೆಡವಿತ್ತು. 

ಸರ್ಜಾಪುರ ಹೋಬಳಿಯ ಚಿಕ್ಕತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್‌ 55ಕ್ಕೆ ಮಂಜೂರಾದ ಜಮೀನಿನ ಸಂಖ್ಯೆಯನ್ನು ಇಟ್ಟುಕೊಂಡಿರುವುದಲ್ಲದೆ ಈ ಸಂಬಂಧ ಅಕ್ರಮ ದಾಖಲೆ ಸೃಷ್ಟಿಸಿರುವುದೂ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಇನ್ನು, ಯಾವುದೇ ಪಹಣಿಯ ಕಾಲಂ 3 ಹಾಗೂ 9ರಲ್ಲಿ ತಿದ್ದುಪಡಿ ಮಾಡುವ ಅಧಿಕಾರ  ಉಪವಿಭಾಗಾಧಿಕಾರಿಗೆ ಮಾತ್ರ ಇದೆ. ಆದರೆ ಈ ಪ್ರಕರಣದಲ್ಲಿ ಆಗಿನ ತಹಸೀಲ್ದಾರ್‌ ಆರ್‌.ಅನಿಲ್‌ ಕುಮಾರ್‌ ಅವರು  ಅಧಿಕಾರದ ವ್ಯಾಪ್ತಿ ಮೀರಿ ನಿಯಮಬಾಹಿರವಾಗಿ ಪಹಣಿ ತಿದ್ದುಪಡಿ ಮಾಡಿರುವುದನ್ನೂ ಸಮಿತಿಯ ತನಿಖೆ ವೇಳೆಯಲ್ಲಿ ಪತ್ತೆಯಾಗಿತ್ತು. 

ಅದೇ ರೀತಿ ಬಡಾವಣೆಯು ಗೋಮಾಳ ಜಾಗದಲ್ಲಿದೆ ಎಂಬ ಅಂಶ ಬೆಳಕಿಗೆ ಬಂದ ನಂತರ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರು    ನಿವೇಶನ ನೋಂದಣಿ ಮಾಡಬಾರದು ಎಂದು ಸೂಚಿಸಿ 2016ರ ಮೇ 27ರಂದು ಗೃಹನಿರ್ಮಾಣ ಸಂಘಕ್ಕೆ  ಪತ್ರ ಬರೆದಿದ್ದರು. ಆದರೆ ಆ ಸೂಚನಾ ಪತ್ರವನ್ನು ಬದಿಗೆ ಸರಿಸಿ ನಿವೇಶನಗಳನ್ನು ನೋಂದಣಿ ಮಾಡಲಾಗಿತ್ತು. 

the fil favicon

SUPPORT THE FILE

Latest News

Related Posts