ಲಾಕ್‌ಡೌನ್‌ ವಿಸ್ತರಣೆ; ಲೈಂಗಿಕ ಕಾರ್ಯಕರ್ತೆಯರ ಸಂಕಷ್ಟ ಆಲಿಸದ ಸರ್ಕಾರ?

ಬೆಂಗಳೂರು; ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅವಧಿ ಮೇ 3ರವರೆಗೆ ವಿಸ್ತರಣೆಯಾಗಿರುವುದು ಲೈಂಗಿಕ ಕಾರ್ಯಕರ್ತೆಯರ ಆರೋಗ್ಯದ ಮೇಲೂ  ಗಂಭೀರ ಪರಿಣಾಮ ಬೀರಿದೆ.  ಎಚ್‌ಐವಿ/ಏಡ್ಸ್‌ನಿಂದ  ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರ ಬಳಿ ಔಷಧ ಖರೀದಿಸಲೂ ಹಣವಿಲ್ಲದ  ಸ್ಥಿತಿ  ಎದುರಾಗಿದೆ. 

ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ವಿವಿಧೆಡೆ ಇರುವ  ಲೈಂಗಿಕ ಕಾರ್ಯಕರ್ತೆಯರು, ಲಾಕ್‌ಡೌನ್‌ನಿಂದ  ಒಪ್ಪೊತ್ತಿನ ಗಂಜಿಗೆ ಪರದಾಡುತ್ತಿದ್ದರೂ ಕರ್ನಾಟಕದ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಕರ್ನಾಟಕ  ರಾಜ್ಯ ಮಹಿಳಾ ಆಯೋಗ  ಈವರೆವಿಗೂ ಲೈಂಗಿಕ ಕಾರ್ಯಕರ್ತರ ಸಂಕಷ್ಟವನ್ನು ಆಲಿಸಿಲ್ಲ. ಆಹಾರ ಪಡಿತರ  ಸೇರಿದಂತೆ  ಔಷಧ ಖರೀದಿಗೆ ಧನ ಸಹಾಯವನ್ನೂ ಘೋಷಿಸಿಲ್ಲ.  

ಈ ಕುರಿತು ‘ದಿ ಫೈಲ್‌’ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ  ನಾಗಲಕ್ಷ್ಮಿಬಾಯಿ ಅವರು ಲೈಂಗಿಕ  ಕಾರ್ಯಕರ್ತೆಯರ ಸ್ಥಿತಿ  ಚಿಂತಾಜನಕವಾಗಿದೆ.  ಇವರು ಹೆಚ್ಚಿನ ಸಂಖ್ಯೆಯಲ್ಲಿರುವ ಕೋಲಾರ, ಚಿಕ್ಕಮಗಳೂರು, ವಿಜಯಪುರದಲ್ಲಿ ಆಹಾರ ಪಡಿತರ  ವಿತರಣೆಗೆ  ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಮುಂದಾಗಬೇಕಿತ್ತು. ಅವರನ್ನೂ ಮಾನವೀಯತೆಯಿಂದ ನೋಡಬೇಕು. ಕೋವಿಡ್‌ನಿಂದಾಗಿ ದೈನಂದಿನ ಜೀವನ ನಡೆಸಲು ಕಷ್ಟಪಡುತ್ತಿರುವ ಅವರಿಗೆ  ಸರ್ಕಾರ ನೆರವು ಘೋಷಿಸಬೇಕು,’ ಎಂದು ಹೇಳಿದರು. 

ಲೈಂಗಿಕ ಕಾರ್ಯಕರ್ತೆಯರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಬೇಕು ಮತ್ತು  ನಾಗರಿಕ ಸಮಾಜ ಸಂಸ್ಥೆಯ ನೆರವಿನೊಂದಿಗೆ ಆಹಾರ ಪಡಿತರ ವಿತರಿಸಲು ಮುಂದಾಗಬೇಕು. ಅಗತ್ಯವಿದ್ದಲ್ಲಿ ಶಿಥಿಲವಾದ ವಸತಿಯಲ್ಲಿದ್ದವರನ್ನು ಸ್ಥಳಾಂತರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು  ಎಂದು ರಾಷ್ಟ್ರೀಯ ಮಹಿಳಾ ಆಯೋಗವು 2020ರ ಏಪ್ರಿಲ್‌ 15ರಂದು ಕರ್ನಾಟಕ ಸೇರಿದಂತೆ ಪಶ್ಚಿಮ ಬಂಗಾಳ, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.  

ಮಹಾರಾಷ್ಟ್ರದಲ್ಲಿ ಈಗಾಗಲೇ ಅಲ್ಲಿನ ಮಹಿಳಾ ಮತ್ತು ಕಲ್ಯಾಣ ಸಚಿವರಾದ  ಯಶೋಮತಿ ಚಂದ್ರಕಾಂತ್‌ ಠಾಕೂರ್‌ ಈಗಾಗಲೇ ಅಲ್ಲಿನ ಮುಖ್ಯಮಂತ್ರಿ  ಉದ್ಧವ್‌ ಠಾಕ್ರೆ ಅವರೊಂದಿಗೆ ಮಾತನಾಡಿದ್ದಾರೆ. ಅಲ್ಲದೆ ಲೈಂಗಿಕ ಕಾರ್ಯಕರ್ತರಿಗೆ ಆಹಾರ ಮತ್ತು ನೈರ್ಮಲ್ಯ ಸೌಲಭ್ಯವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.  ಲಾಕ್‌ಡೌನ್‌ನಿಂದಾಗಿ  ಲೈಂಗಿಕ ಕಾರ್ಯಕರ್ತರು ಅನುಭವಿಸುತ್ತಿರುವ ಕಷ್ಟಗಳನ್ನು ಪರಿಹರಿಸಲು ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ  ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.  

ಅದೇ ರೀತಿ ಪಶ್ಚಿಮ ಬಂಗಾಳದ ಮಹಿಳಾ ಆಯೋಗ ಲೈಂಗಿಕ ಕಾರ್ಯಕರ್ತೆಯರ ಸಮುದಾಯಕ್ಕೆ ಸಹಾಯ ಮಾಡಲು  ಮುಂದಾಗಿದೆ. ಧನ ಸಹಾಯ ನೀಡಲು ತಕ್ಷಣಕ್ಕೆ ಸಾಧ್ಯವಾಗದಿದ್ದರೂ ಪಡಿತರ ಸೇರಿದಂತೆ ಇನ್ನಿತರೆ ನೆರವು ನೀಡಲಿದೆಎಂದು ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಾಧ್ಯಾಯ ಅವರು ಸ್ಥಳೀಯ ಸುದ್ದಿಸಂಸ್ಥೆಯೊಂದಕ್ಕೆ  ಪ್ರತಿಕ್ರಿಯಿಸಿದ್ದಾರೆ. 

ಹಾಗೆಯೇ ಪಶ್ಚಿಮ ಬಂಗಾಳದ ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ರಾಜ್ಯ ಸಚಿವ ಶಶಿ ಪಂಜಾ ಕೂಡ 1,500 ಸಂಖ್ಯೆಯ ಲೈಂಗಿಕ  ಕಾರ್ಯಕರ್ತರಿಗೆ ಪಡಿತರ ಮತ್ತು ಮುಖಗವಸುಗಳನ್ನು ವಿತರಿಸಿದ್ದಾರೆ. 

ಇದು ಕೇವಲ ಬೆಂಗಳೂರಿನಲ್ಲಿರುವ ಲೈಂಗಿಕ ಕಾರ್ಯಕರ್ತರ ಪರಿಸ್ಥಿತಿ ಅಷ್ಟೇ ಅಲ್ಲ.  ಕೋಲ್ಕತ್ತಾ, ಆಂಧ್ರ ಮತ್ತು ಮುಂಬೈನಲ್ಲಿ ಜೀವನ ಸಾಗಿಸುತ್ತಿರುವ ಲೈಂಗಿಕ  ಕಾರ್ಯಕರ್ತರ ಬದುಕು ಅಕ್ಷರಶಃ  ಬೀದಿಗೆ ಬಂದು ನಿಂತಿದೆ. ಲಾಕ್‌ಡೌನ್‌ನಿಂದಾಗಿ ಆಹಾರವೂ ಸಿಗದಂತಾಗಿರುವಾಗ ಆದಾಯದ ಮಾತೆಲ್ಲಿ ಎಂದು ಹಲವು ಲೈಂಗಿಕ ಕಾರ್ಯಕರ್ತೆಯರು ತಮ್ಮನ್ನು ಭೇಟಿ  ಮಾಡಿದ್ದ ಎನ್‌ಜಿಒಗಳ ಪ್ರತಿನಿಧಿಗಳ ಬಳಿ ತಮ್ಮ ಗೋಳು ತೋಡಿಕೊಂಡಿದ್ದಾರೆ. 

ಕೋವಿಡ್‌ 19ನ್ನು ನಿಯಂತ್ರಿಸಲು ಸರ್ಕಾರವೇನೋ ಲಾಕ್‌ಡೌನ್‌ ಘೋಷಿಸಿತು. ಇದರಿಂದಾಗಿ ಗ್ರಾಹಕರೇ ಇಲ್ಲದಂತಾಯಿತು. ಹೀಗಾಗಿ ಲೈಂಗಿಕ ಕಾರ್ಯಕರ್ತರ ಬಳಿ ಔಷಧ ಖರೀದಿಸಲು 5,000 ರು. ಕೂಡ ಇಲ್ಲದಂತಾಗಿದೆ,’ ಎಂದು ಎನ್‌ಜಿಒ ಪ್ರತಿನಿಧಿಯೊಬ್ಬರು ಹೇಳುತ್ತಾರೆ. 

ಸಾಮಾಜಿಕ  ಅಂತರ ಕಾಪಾಡಿಕೊಳ್ಳಬೇಕು ಎಂಬ ಸರ್ಕಾರದ ಸೂಚನೆಯನ್ನು ಪಾಲಿಸುತ್ತಿರುವ ಲೈಂಗಿಕ  ಕಾರ್ಯಕರ್ತೆಯರಿಗೆ ಆಹಾರ ಪಡಿತರವನ್ನು ಪೂರೈಸುವ ಜವಾಬ್ದಾರಿಯನ್ನು  ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸುತ್ತಿಲ್ಲ. ಆಯಾ ರಾಜ್ಯಗಳ ಮಹಿಳಾ ಆಯೋಗಗಳು ಕೂಡ ಇವರಿಗೂ ತಮಗೂ ಸಂಬಂಧವಿಲ್ಲದಂತೆ ನಟಿಸುತ್ತಿವೆ. 

ಕೊರೊನಾ ವೈರಸ್‌ನ್ನು ತಡೆಗಟ್ಟುವ ಭಾಗವಾಗಿ ಸಂತ್ರಸ್ತರಿಗೆ ಹಣಕಾಸು  ನೆರವು ನೀಡಲು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿಯಲ್ಲಿ ತಿಂಗಳಿಗೆ 500 ರು.ಗಳನ್ನು ಜನ್‌ಧನ್‌ ಅಡಿಯಲ್ಲಿ ಮಹಿಳಾ ಖಾತೆಗಳಿಗೆ 3 ತಿಂಗಳವರೆಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ 2020ರ  ಮಾರ್ಚ್ 26ರಂದು ಘೋಷಿಸಿತ್ತು. ಬೆರಳಣಿಕೆಯಷ್ಟು ಲೈಂಗಿಕ ಕಾರ್ಯಕರ್ತರ ಬಳಿ ಜನಧನ್‌  ಖಾತೆ ಇದ್ದರೆ, ಬಹುತೇಕ ಲೈಂಗಿಕ ಕಾರ್ಯಕರ್ತರ ಬಳಿ ಜನಧನ್‌ ಖಾತೆಯೇ ಇಲ್ಲ. ಹೀಗಾಗಿ ಅವರ ಪರಿಸ್ಥಿತಿ ಇನ್ನಷ್ಟೂ ಶೋಚನೀಯವಾಗಿದೆ ಎಂದು  ವಿವರಿಸುತ್ತಾರೆ ಎನ್‌ಜಿಒ ಪ್ರತಿನಿಧಿಯೊಬ್ಬರು. 

ಮಹಾರಾಷ್ಟ್ರದ ಅರ್ಧದಷ್ಟು ಲೈಂಗಿಕ ಕಾರ್ಯಕರ್ತರು ಬದುಕುಳಿಯಲು ಲೈಂಗಿಕ ಕೆಲಸಗಳನ್ನೇ ಅವಲಂಬಿಸಿದ್ದಾರೆ. ಆದರೆ ಯಾವುದೇ ವಿಮೆ ಹೊಂದಿಲ್ಲ. ತಮಿಳುನಾಡಿನ 2/5ರಷ್ಟು ಮತ್ತು ಕರ್ನಾಟಕದಲ್ಲಿ 1/5ರಷ್ಟು ಲೈಂಗಿಕ ಕಾರ್ಯಕರ್ತರು ಕೂಡ ಇದೇ ಸ್ಥಿತಿಯಲ್ಲಿದ್ದಾರೆ. 

ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವಾಸಿಸುತ್ತಿರುವ ಶೇ. 31ರಷ್ಟು  ಲೈಂಗಿಕ ಕಾರ್ಯಕರ್ತರು ಆರ್ಥಿಕವಾಗಿ ಅಸುರಕ್ಷಿತರು. ಹೀಗಾಗಿ ಅವರು ಬಡತನದಲ್ಲಷ್ಟೇ ಇಲ್ಲ ಪದೇ ಪದೇ ಅನಾರೋಗ್ಯಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಚಿಕಿತ್ಸೆ ಪಡೆಯಲು ಕೂಡ ಅವರ ಬಳಿ ಸಾಕಷ್ಟು ಹಣವಿಲ್ಲದಂತಾಗಿದೆ.   

‘ನಾವು ಹಲವು  ಲೈಂಗಿಕ ಕಾರ್ಯಕರ್ತರೊಂದಿಗೆ ಮಾತನಾಡಿದ್ದೇವೆ. ಅವರ ಬಳಿ  ಬಾಡಿಗೆ ಪಾವತಿಸಲು ಮತ್ತು ಅವರ ಕುಟುಂಬಗಳಿಗೆ ಸಾಕಷ್ಟು ಆಹಾರವನ್ನು ಖರೀದಿಸಲು ಹಣದ ಕೊರತೆಯೂ ಎದುರಾಗಿದೆ,’ ಎಂದು ಎನ್‌ಜಿಒ ಪ್ರತಿನಿಧಿಯೊಬ್ಬರು ಹೇಳುತ್ತಾರೆ. 

ಸರ್ಕಾರ ಜಾರಿಗೆ ತಂದಿರುವ ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳ ವ್ಯಾಪ್ತಿಯಲ್ಲಿ ದಿನಗೂಲಿ ಕಾರ್ಮಿಕರನ್ನು ಒಳಪಡಿಸಿದೆ. ಆದರೆ ಲೈಂಗಿಕ ಕಾರ್ಯಕರ್ತರಿಗೆ ಇಂತಹ ಯಾವುದೇ ಯೋಜನೆಯೂ ಇಲ್ಲವಾಗಿದೆ. ಅವರು ಅನೌಪಚಾರಿಕ ವಲಯದ ಅನೌಪಚಾರಿಕರು  ಎಂದು  ಅಭಿಪ್ರಾಯಿಸುತ್ತಾರೆ ಕ್ರಾಂತಿ ಸಂಘಟನೆಯ ತ್ರಿನಾ.

ಲೈಂಗಿಕ ಕಾರ್ಯಕರ್ತೆಯರ ಪೈಕಿ ಬಹುತೇಕರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದರ ಬೆನ್ನಲ್ಲೇ ಕೋವಿಡ್‌-19 ಸೋಂಕು ತಗುಲಿದಲ್ಲಿ ಇನ್ನಷ್ಟು ಅಪಾಯಗಳಿಗೆ ಸಿಲುಕಲಿದ್ದಾರೆ. ಎಚ್‌ಐವಿ, ಕ್ಷಯ ರೋಗ ಸೇರಿದಂತೆ ಇನ್ನಿತರೆ ರೋಗಗಳಿಂದ ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರಿಗೆ ಕೋವಿಡ್‌ 19 ಸಾವಿನ ಅಂಚಿಗೆ ದೂಡಬಹುದು ಎಂದು  ಕಳವಳ ವ್ಯಕ್ತಪಡಿಸುತ್ತವೆ ಎನ್‌ಜಿಒ ಸಂಘಟನೆಗಳು. 

ಅನೇಕ ಲೈಂಗಿಕ ಕಾರ್ಯಕರ್ತರು ಆಲ್ಕೊಹಾಲ್ ಮತ್ತು ತಂಬಾಕಿನ ಚಟ ಸೇರಿದಂತೆ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ದುರುಪಯೋಗಕ್ಕೆ ಗುರಿಯಾಗಿರುವ ಇವರು ಸಾಮಾಜಿಕ  ಬೆಂಬಲದ  ಜಾಲವನ್ನು ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದನ್ನು ಸ್ಮರಿಸಬಹುದು. 

ಭಾರತದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. 2014 ರ ಸರ್ಕಾರದ ಅಂದಾಜಿನ ಪ್ರಕಾರ ಭಾರತದಲ್ಲಿ 2.8 ಮಿಲಿಯನ್ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಇವರಲ್ಲಿ  ಹೆಚ್ಚಿನವರು ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿದ್ದಾರೆ.  ವಿಶ್ವಸಂಸ್ಥೆ 2016 ರಲ್ಲಿ ಮಾಡಿದ್ದ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 657,800 ಲೈಂಗಿಕ ಕಾರ್ಯಕರ್ತೆಯರಿದ್ದಾರೆ.

the fil favicon

SUPPORT THE FILE

Latest News

Related Posts