ಯುವರಾಜಸ್ವಾಮಿ ಮನೆಯಲ್ಲಿದ್ದವು ನಿರಾಣಿ ಹೆಸರಿನ ಲೆಟರ್‌ಹೆಡ್‌ಗಳು; ಕಲ್ಪವೃಕ್ಷದ ಗುಟ್ಟೇನು?

ಬೆಂಗಳೂರು: ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ನಡೆದಿದ್ದ ಗದ್ದುಗೆ ಜಿದ್ದಿನಲ್ಲಿ ಸೆಣೆಸಿದ್ದ ಮುರುಗೇಶ್‌ ಆರ್‌ ನಿರಾಣಿ ಅವರೊಂದಿಗೆ ಯುವರಾಜಸ್ವಾಮಿ ಸಂಪರ್ಕವಿತ್ತು ಎಂಬ ಆರೋಪಗಳನ್ನು ಪುಷ್ಠೀಕರಿಸುವ ಅಂಶಗಳು ಇದೀಗ ಮುನ್ನೆಲೆಗೆ ಬಂದಿವೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಇಂದ್ರಕಲಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವರಾಜಸ್ವಾಮಿ ಮತ್ತು ಆತನ ಪತ್ನಿ ಪ್ರೇಮಾ ಅವರ ಬಳಿ ಇದ್ದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಪೊಲೀಸರು ಮುರುಗೇಶ್‌ ನಿರಾಣಿ ಅವರ ಹೆಸರಿನಲ್ಲಿದ್ದ ಲೆಟರ್‌ ಹೆಡ್‌ಗಳೂ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ಇದ್ದವು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ. ದೋಷಾರೋಪಣೆ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಲ್ಪವೃಕ್ಷ ಎಂದು ಇಂಗ್ಲೀಷ್‌ ಭಾಷೆಯಲ್ಲಿ ಬರೆದಿದ್ದ ಸ್ಪೈರಲ್‌ ಬೈಂಡಿಂಗ್‌ ಪುಸ್ತಕ ಮತ್ತು ಇದರ ಮುಖಪುಟದಲ್ಲಿ ಮುರುಗೇಶ್‌ ಆರ್‌ ನಿರಾಣಿ ಅವರ ಹೆಸರು ಮತ್ತು ಭಾವಚಿತ್ರವೂ ಇದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದಾರೆ.

ಅದೇ ರೀತಿ ಮುರುಗೇಶ್‌ ಆರ್‌ ನಿರಾಣಿ ಹೆಸರಿನ ಲೆಟರ್‌ ಹೆಡ್‌ ಇರುವ 11 ಪತ್ರಗಳಲ್ಲಿ ಸಹಿ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ಟೈಪಿಂಗ್‌ ಮತ್ತು ಬರವಣಿಗೆಗಳಿವೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಮಾಹಿತಿ ಒದಗಿಸಿರುವ ಪೊಲೀಸರು ಬರವಣಿಗೆಯಲ್ಲೇನಿತ್ತು , ಲೆಟರ್‌ ಹೆಡ್‌ಗಳಲ್ಲಿ ಯಾರ ಹೆಸರಿದ್ದವು ಎಂಬ ವಿವರಗಳನ್ನು ನಮೂದಿಸಿಲ್ಲ.

ವಂಚಕ ಯುವರಾಜಸ್ವಾಮಿ ಬಂಧನವಾದ ನಂತರ ಮುರುಗೇಶ್‌ ನಿರಾಣಿ ಅವರ ಹೆಸರೂ ತಳಕು ಹಾಕಿಕೊಂಡಿತ್ತು. ನಿರಾಣಿ ಅವರು ನಟಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗಿದ್ದ ಭಾವಚಿತ್ರಗಳು ಹರಿದಾಡಿದ್ದವು. ರಾಧಿಕಾ ಕುಮಾರಸ್ವಾಮಿ ಅವರನ್ನು ನಿರಾಣಿ ಅವರಿಗೆ ಭೇಟಿ ಮಾಡಿಸಿದ್ದೇ ಯುವರಾಜಸ್ವಾಮಿ ಎಂಬ ಮಾತು ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ನಿರಾಣಿ ಅವರು ಈ ಮಾತನ್ನು ಅಲ್ಲಗಳೆದಿದ್ದರು.

ಯುವರಾಜ್‌ಸ್ವಾಮಿ ಅವರ ಮನೆಯಲ್ಲಿ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ನಿರಾಣಿ ಅವರ ಹೆಸರು ಇರುವ ಮತ್ತು ಸಹಿ ಇರುವ ಲೆಟರ್‌ಹೆಡ್‌ಗಳು ಇದ್ದವು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ರಾಜ್ಯಪಾಲರ ಹುದ್ದೆ, ರಾಜ್ಯಸಭೆ ಸದಸ್ಯತ್ವ, ಬಿಎಂಟಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ರಾಜಕೀಯ ಸ್ಥಾನಮಾನ, ಸರಕಾರಿ ಹುದ್ದೆಗಳು, ಕಾಲೇಜುಗಳಲ್ಲಿ ಸೀಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ ಹಲವರಿಂದ ಕೊಟ್ಯಂತರ ರೂ. ಹಣ ಪಡೆದ ಆರೋಪ ಯುವರಾಜಸ್ವಾಮಿ ಮೇಲಿದೆ.

Your generous support will help us remain independent and work without fear.

Latest News

Related Posts