ಬೆಂಗಳೂರು; ರೈತರು ಮತ್ತು ಸ್ಥಳೀಯರ ವಿರೋಧದ ನಡುವೆಯೂ ಫೆರಿಫೆರಲ್ ರಿಂಗ್ ರಸ್ತೆ (ಭಾಗ 2) ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಈ ಯೋಜನೆಯನ್ನು ಪರಿಷ್ಕರಿಸಿದೆ. ಅಲ್ಲದೇ ಪರಿಷ್ಕೃತ ಯೋಜನೆ ವರದಿಗೆ ಅನುಮೋದನೆ ನೀಡುವ ಕುರಿತು ಇಲಾಖೆ ಮಟ್ಟದಲ್ಲಿ ಬಿರುಸಿನ ಚರ್ಚೆಗಳು ನಡೆದಿವೆ.
ಫೆರಿಫೆರಲ್ ರಿಂಗ್ ರೋಡ್ 2 ಯೋಜನೆಗೆ ಕಳೆದ ಒಂದು ವರ್ಷದ ಹಿಂದೆಯೇ ಅನುಮೋದನೆ ನೀಡಿತ್ತು. ಇದೀಗ ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕರಿಸಿದೆ. ಈ ಪರಿಷ್ಕೃತ ಯೋಜನಾ ವರದಿಗೆ ಅನುಮೋದನೆ ಪಡೆದುಕೊಳ್ಳಲು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವದ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬಿಡಿಎನ ಅಧ್ಯಕ್ಷ ಎನ್ ಎ ಹ್ಯಾರೀಸ್ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
2026ರ ಜುಲೈ 27ರಂದು ಬಿಡಿಎಯು ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವ ಸಲ್ಲಿಕೆಯಾಗಿರುವುದನ್ನು (ಬೆಂಅಪ್ರಾ/ಆಯುಕ್ತರು/ಟಿ-26342/2026-27) ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ದಿ ಫೈಲ್ ಗೆ ಖಚಿತಪಡಿಸಿದ್ದಾರೆ.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ಸ್ಥಳೀಯ ರೈತರು ಬಲವಾಗಿ ವಿರೋಧಿಸುತ್ತಿದ್ದಾರೆ. ಹೈಕೋರ್ಟ್ ಕೂಡ ಈ ಯೋಜನೆಯ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೇ ಫೆರಿಫೆರಲ್ ರಿಂಗ್ ರೋಡ್ (ಭಾಗ- 2 ) ಪರಿಷ್ಕೃತ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲು ಬಿಡಿಎಯು ಸಲ್ಲಿಸಿರುವ ಪ್ರಸ್ತಾವವು ಮುನ್ನೆಲೆಗೆ ಬಂದಿದೆ.
ಭೂಮಿ ಅಗತ್ಯವೆಷ್ಟಿದೆ?
ಪ್ರಸ್ತಾವಿತ ಫೆರಿಫೆರಲ್ ರಿಂಗ್ (ಪಿಆರ್ಆರ್) ಯೋಜನೆಯ ಮಾರ್ಗವು ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಮೂಲಕ ತುಮಕೂರು ರಸ್ತೆಯವರಗೆ ಇದೆ. ಈಗಾಗಲೇ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಇದು ಸಾರ್ವಜನಿಕವಾಗಿ ಬಳಕೆಯಾಗುತ್ತಿದೆ. ಉಳಿಕೆ ರಸ್ತೆಯ ಭಾಗವಾಗಿರುವ ಹೊಸೂರು ರಸ್ತೆಯಿಂದ ಮೈಸೂರು ರಸ್ತೆವರೆಗೆ ಹಾಗೂ ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಯವರಿಗೆ ಒಟ್ಟು 41.85 ಕಿ ಮೀ ಉದ್ದದ ರಸ್ತೆಗೆ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆಗೆ ಅವಶ್ಯಕವಿರುವ ಭೂ ಪ್ರದೇಶಗಳನ್ನು ಪ್ರಸ್ತಾವಿಸಿದೆ. ಹಾಗೂ 6 ಸಂಖ್ಯೆಯ ಕ್ಲವರ್ ಲೀಫ್ ನಿರ್ಮಿಸು ಹೆಚ್ಚುವರಿಯಾಗಿ 102 ಎಕರೆ 2.25 ಗುಂಟೆ ಜಮೀನಿನ ಅವಶ್ಯಕತೆ ಇದೆ. ಈ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕಾಗಿದೆ ಎಂದು ಬಿಡಿಯು ತನ್ನ ಪ್ರಸ್ತಾವದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

4,500 ಕೋಟಿ ಭೂ ಪರಿಹಾರ?
ಈಗಾಗಲೇ ಪಿಆರ್ಆರ್ (ಭಾಗ 1) ರಸ್ತೆಗೆ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಭೂ ಪರಿಹಾರವಾಗಿ ಪ್ರತಿ ಎಕರೆಗೆ ಸರಾಸರಿ 6 ಕೋಟಿ ರುಗಳಂತೆ 1,500 ಎಕರೆಗೆ 9 ಸಾವಿರ ಕೋಟಿ ರುಗಳನ್ನು ಪರಿಹಾರವಾಗಿ ವಿತರಿಸಿದೆ. ಪಿಆರ್ಆರ್ 2 ಯೋಜನೆಯಲ್ಲಿಯೂ ನಗದು ಪರಿಹಾರ ಪಡೆಯುವ ಭೂ ಮಾಲೀಕರು ಶೇ.30 ಎಂದು ಅಂದಾಜಿಸಿದ್ದಲ್ಲಿ 4,500 ಕೋಟಿ ರು ಎಂದು ಪರಿಗಣಿಸಬಹುದು. ಪಿಆರ್ಆರ್ 2 ಯೋಜನೆಗೆ ಭೂ ಸ್ವಾಧೀನಪಡಿಸಿಕೊಳ್ಳುವ ಭೂ ಮಾಲೀಕರಿಗೆ ನಗದು ಅಥವಾ ಟಿಡಿಆರ್ ಅಥವಾ ಎಫ್ಎಆರ್ ಅಥವಾ 50;50 ಅನುಪಾತದಲ್ಲಿ 11,978 ಚದರ ಅಡಿ ( ಪ್ರತಿ ಎಕರೆಗೆ) ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನಗಳನ್ನು ನೀಡಲು ಅಥವಾ ಪಿಆರ್ಆರ್ 2 ರಸ್ತೆಗೆ ಹೊಂದಿಕೊಂಡಂತೆ ರಸ್ತೆಯಲ್ಲಿ ಉಳಿದ 24 ಮೀ ಅಗಲದ (ಆರ್ಒಡಬ್ಲ್ಯೂ) ಜಮೀನಿನಲ್ಲಿ 65;35ರ ಅನುಪಾತದಲ್ಲಿ (8385 ಚ.ಅಡಿ ಪ್ರತಿ ಎಕರೆಗೆ) ವಾಣಿಜ್ಯ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಒಟ್ಟು 15,450 ಕೋಟಿ ಅಂದಾಜು ವೆಚ್ಚ
ಬಿಡಿಎಯು ಈ ಯೋಜನೆಗೆ ಲಭ್ಯವಿರುವ ಮಾಹಿತಿ ಆಧರಿಸಿ ಒಟ್ಟು 15,450 ಕೋಟಿ ರು ವೆಚ್ಚವಾಗಬಹುದು ಎಂದು ಅಂದಾಜಿಸಿದೆ. ಭೂ ಸ್ವಾಧೀನ ವೆಚ್ಚ ಅಂದಾಜು 1,500 ಎಕರೆಗೆ 9 ಸಾವಿರ ಕೋಟಿ ರು ಭೂ ಪರಿಹಾರ ನೀಡಬೇಕಾಗುವುದು ಎಂದು ಅಂದಾಜಿಸಿದೆ. ಪ್ರಸ್ತಾವಿತ ಪೆರಿಫೆರಲ್ ರಿಂಗ್ ರಸ್ತೆ-2 ಯೋಜನೆ (ಹೊಸೂರು ರಸ್ತೆಯಿಂದ ಮೈಸೂರು ರಸ್ತೆವರೆಗೆ ಹಾಗೂ ಮಾಗಡಿ ರಸ್ತೆಯಿಂದ ತುಮಕೂರು ರಸ್ತೆವರೆಗೆ) ಒಟ್ಟು ಮೊತ್ತವು6,450 ಕೋಟಿ ರು ಆಗಿರುತ್ತದೆ. ಒಟ್ಟಾರೆ ಅಂದಾಜು 15,450 ಕೋಟಿ ರು ವೆಚ್ಚವಾಗಬಹುದು ಎಂದು ಅಂದಾಜಿಸಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.
ಯೋಜನೆಗೆ ಹಣಕಾಸಿನ ವ್ಯವಸ್ಥೆ ಏನಿದೆ?
ಪ್ರಸ್ತಾವಿತ ಪೆರಿಫೆರಲ್ ರಿಂಗ್ ರಸ್ತೆ -2 ಯೋಜನೆಯ ಸಂಪೂರ್ಣ ವೆಚ್ಚವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿವಿಧ ಹಣಕಾಸಿನ ಮೂಲಗಳಿಂದ ಕ್ರೋಢೀಕರಿಸಲು ಚಿಂತಿಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲೆ ನಿವೇಶನಗಳ ಹರಾಜಿನಿಂದ 4,000 ಕೋಟಿ ಆದಾಯ, ಡಾ ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆಯಿಂದ 10,000 ಕೋಟಿ ಆದಾಯ, ಪ್ರಾಧಿಕಾರದಿಂದ ನಿರ್ಮಿಸಿರುವ ಮತ್ತು ನಿರ್ಮಿಸುತ್ತಿರುವ ವಸತಿ ಯೋಜನೆಗಳಲ್ಲಿ ಲಭ್ಯವಾಗುವ ನಿವೇಶನಗಳ ಹಂಚಿಕೆಯಿಂದ ಬರುವ 3,000 ಕೋಟಿ ರು ಸೇರಿ ಒಟ್ಟಾರೆ ಸುಮಾರು 17,000 ಕೋಟಿಗಳಷ್ಟು ಆದಾಯ ಸಂಗ್ರಹ ನಿರೀಕ್ಷಿಸಿದೆ. ಈ ಮೂಲದಿಂದ ಸಂಗ್ರಹವಾಗುವ ಆದಾಯವನ್ನು ಪಿಆರ್ಆರ್ 2 ಯೋಜನೆಗೆ ಬಳಸಿಕೊಳ್ಳಬಹುದು ಎಂದು ವಿವರಿಸಿದೆ.
ಹೊಸೂರು ರಸ್ತೆಯಿಂದ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಯವರೆಗೆ ಯೋಜಿತ 41.85 ಕಿ ಮೀ ಉದ್ದದ ಪಿಆರ್ಆರ್ -2 ನಿರ್ಮಿಸಲು 6,450 ಕೋಟಿ ರು ಅವಶ್ಯಕತೆ ಇದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ವಾಣಿಜ್ಯ ನಿವೇಶನಗಳ ರಚನೆಗೆ ಈಗಾಗಲೇ ಅಧಿಸೂಚಿಸಿರುವ ಭೂಮಿಯನ್ನು ಬಳಸಿಕೊಳ್ಳಬೇಕಿದೆ. ಅಲ್ಲದೇ ಪಿಆರ್ಆರ್ 2 ರಸ್ತೆ ನಿರ್ಮಿಸುವ ಯೋಜನೆಗೆ ಪ್ರಾಧಿಕಾರದ ಸಭೆಯ ಘಟನೋತ್ತರ ಅನುಮೋದನೆ ನೀಡಬೇಕು ಎಂದು ಕೋರಿದೆ.
ಫೆರಿಫೆರಲ್ ರಿಂಗ್ ರೋಡ್ (ಭಾಗ 2) ನ ಹೊಸೂರು ರಸ್ತೆಯಿಂದ ಮೈಸೂರು ರಸ್ತೆ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಅಭಿವೃದ್ಧಿ ಯೋಜನೆಯ ಪರಿಷ್ಕೃತ ವರದಿಗೆ ಅನುಮೋದನೆ ಕೋರಿದೆ. ಇದೇ ಯೋಜನೆಯ ವಿನ್ಯಾಸವನ್ನು ಸಾಮಾನ್ಯ ಭಾಗದಲ್ಲಿ ( ಕೆರೆ, ಅರಣ್ಯ, ರಸ್ತೆ, ಜಂಕ್ಷನ್, ರೈಲ್ವೇ ಸೇತುವೆ ಹೊರತುಪಡಿಸಿ) ಒಟ್ಟಾರೆ 100 ಮೀ ಅಗಲಕ್ಕೆ ವಿನ್ಯಾಸಗೊಳಿಸಬೇಕು. ಮುಖ್ಯ ರಸ್ತೆ ಹಾಗೂ ಎರಡೂ ಬದಿಯಲ್ಲಿ 24.00 ಮೀ ಅಗಲದ ವಾಣಿಜ್ಯ ನಿವೇಶನಗಳನ್ನು ರಚಿಸಲು ಕಾಯ್ದರಿಸಬೇಕು. ಹೀಗಾಗಿ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶದ ವಲಯ ನಿಯಮಾವಳಿಯಲ್ಲಿ ಆರ್ಎಂಪಿ 2015ರಲ್ಲಿ ಮಾರ್ಪಾಡು ಮಾಡಲು ಅನುಮೋದನೆ ಕೋರಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತವಾದಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಅನ್ವಯ ಟಿಡಿಆರ್ ಯೋಜನೆಯಡಿ ಡಿಆರ್ಸಿ ನೀಡಿ ಭೂ ಸ್ವಾಧೀನಪಡಿಸಿಕೊಳ್ಳುವಾಗ ನೋಂದಣಿ ಮುದ್ರಾಂಕ ಇಲಾಖೆ ಹೊರಡಿಸಿರುವ ಅಧರಿಸಿ ಭೂಮಿ ಮೌಲ್ಯಮಾಪನ ಮಾಡಲು ಮಾರ್ಗಸೂಚಿ ಹೊರಡಿಸಿದೆ. ಈ ಆದೇಶದ ಪ್ರಕಾರ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೀಮಿತವಾದಂತೆ ಎಂಬುದರ ಬದಲಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಹಾಗೂ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಬಿಡಿಎ, ಬ ಇಎಂಐಸಿಪಿಎ ಹಾಗೂ ಇನ್ನಿತರೆ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಜಮೀನುಗಳಿಗೆ ಅನ್ವಯವಾಗುವಂತೆ ಸೀಮಿತಗೊಳಿಸಲು ಮಾರ್ಪಾಡು ಮಾಡಲು ಅನುಮೋದನೆ ನೀಡಬೇಕು ಎಂದು ಪ್ರಸ್ತಾವದಲ್ಲಿ ಕೋರಿರುವುದು ತಿಳಿದು ಬಂದಿದೆ.
ಟಿಡಿಆರ್ ನೀಡುವ ಪ್ರಕರಣಗಳಿಗೆ ನಮೂನೆ 1ರಿಂದ 3 ವರೆಗೆ ವಿನಾಯಿತಿ ನೀಡಿ ಒಪ್ಪಿಗೆ ಸೂಚಿಸಿದ ಭೂ ಮಾಲೀಕರುಗಳಿಗೆ ಟಿಡಿಆರ್ ನೀಡಬೇಕು. ಪಿಆರ್ಆರ್ 2 ರಸ್ತೆಗೆ ಭೂ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಭೂ ಪರಿಹಾರವಾಗಿ 0ಎ 5 ಗುಂಟೆವರೆಗೆ ಜಮೀನು ಕಳೆದುಕೊಳ್ಳುವ ಭೂ ಮಾಲೀಕರಿಗೆ ಸಂಪೂರ್ಣವಾಗಿ ನಗದು ಪರಿಹಾರ ಪಾವತಿಸುವುದು. 0.05 ಗುಂಟೆಗಿಂತ ಮೇಲ್ಪಟ್ಟು 20 ಗುಂಟೆವರೆಗಿನ ಭೂ ಮಾಲೀಕರಿಗೆ ನಗದು ಪರಿಹಾರ ಅಥವಾ ಟಿಡಿಆರ್ ನೀಡಲು ಅಥವಾ ಎಫ್ಎಆರ್ ಭಾಗಶಃ ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಉಳಿಕೆ ಹೊಂದಿಕೊಂಡಿರುವ ಜಮೀನುಗಳಿಗೆ ಬೆಂಗಳೂರು ಸ್ಥಳೀಯ ಪ್ರದೇಶದ ಆರ್ಎಂಪಿ 2015ರ ನಿಯಮಾಗಳಿಗಳ ಅನುಗುಣವಾಗಿ ಎಫ್ಎಆರ್ ನೀಡಬೇಕು. ಅಥವಾ 50;50 ಅನುಪಾತದಲ್ಲಿ 11,978 ಚದರ ಅಡಿ ಗೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನಗಳನ್ನು ನೀಡಬೇಕು.
0.20 ಗುಂಟೆ ಮೇಲ್ಪಟ್ಟ ಜಮೀನು ಭೂಮಾಲೀಕರಿಗೆ ನಗದು ಪರಿಹಾರ ಅಥವಾ ಟಿಡಿಆರ್ ಅಥವಾ ಎಫ್ಎಆರ್ ಭಾಗಶಃ ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ಉಳಿಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಂಗಳೂರು ಸ್ಥಳೀಯ ಪ್ರದೇಶದ ಆರ್ಎಂಪಿ 2015ರ ನಿಯಮಾವಳಿಗೆ ಅನುಗುಣವಾಗಿ ಎಫ್ಎಆರ್ ನೀಡಬೇಕು. 20 ಮೀಟರ್ ಅಗಲದ (ಆರ್ಒಡಬ್ಲ್ಯೂ)ದ ಜಮೀನಿನಲ್ಲಿ 65;35 ಅನುಪಾತದಲ್ಲಿ (8385 ಚ ಅಡಿ ಪ್ರತಿ ಎಕರೆಗೆ) ವಾಣಿಜ್ಯ ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಲು ಅನುಮೋದನೆ ಕೋರಿರುವುದು ಗೊತ್ತಾಗಿದೆ.




