ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು ಶೇಕಡ 60ರಷ್ಟು ತೆರಿಗೆಯೇತರ ಆದಾಯವನ್ನು ವಸೂಲಿ ಮಾಡಿಲ್ಲ. ಆರಂಭಿಕ ಮೊತ್ತದೊಂದಿಗೆ ಕೇವಲ ಶೇ. 36ರಷ್ಟು ತೆರಿಗೆಯೇತರ ಆದಾಯವನ್ನಷ್ಟೇ ವಸೂಲು ಮಾಡಿದೆ. ಅಷ್ಟೇ ಅಲ್ಲ ರಾಜ್ಯದ 27 ಜಿಲ್ಲೆಗಳ 1,478 ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿದ್ದ 13.07 ಕೋಟಿಯಷ್ಟು ಆಂತರಿಕ ಆದಾಯವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆಯನ್ನೇ ಮಾಡಿಲ್ಲ. ಹೀಗಾಗಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸುಸ್ಥಿರ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಯಲು ಮಾಡಿದೆ.
ಅದಷ್ಟೇ ಅಲ್ಲ ಕಡಿಮೆ ಪ್ರಮಾಣದ ತೆರಿಗೆ ಮತ್ತು ತೆರಿಗೆಯೇತರ ಆದಾಯವು ವಸೂಲಿ ಅಗಿರುವುದರಿಂದ ಹಣಕಾಸು ಆಯೋಗವು ಬಿಡುಗಡೆ ಮಾಡುವ ಅನುದಾನದ ಮೇಲೂ ಇದು ಪರಿಣಾಮ ಬೀರಿದೆ. ಹೀಗಾಗಿಯೇ ಪ್ರೋತ್ಸಾಹ ಧನ ಬಿಡುಗಡೆಯಲ್ಲಿಯೂ ಇಳಿಕೆಯಾಗಿದೆ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ವರದಿಯನ್ನು ಬಿಡುಗಡೆ ಮಾಡಿದೆ. ತೆರಿಗೆ ಮತ್ತು ತೆರಿಗೆಯೇತರ ಆದಾಯ ಸಂಗ್ರಹಣೆಯಲ್ಲಿ ಗ್ರಾಮ ಪಂಚಾಯ್ತಿಗಳು ಹಿಂದೆ ಬಿದ್ದಿರುವುದು ಮತ್ತು ಇದರಿಂದಾಗಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿರುವುದನ್ನು ಮುನ್ನೆಲೆಗೆ ತಂದಿದೆ.
2023-24ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ವರ್ಷದ ಬೇಡಿಕೆಗಳನ್ನೊಳಗೊಂಡಂತೆ ತೆರಿಗೆಯೇತರ ಆದಾಯವನ್ನು ಶೇ. 36ರಷ್ಟು ಮಾತ್ರ ವಸೂಲಿ ಮಾಡಿದೆ. ಶೇ. 64ರಷ್ಟನ್ನ ವಸೂಲು ಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಮೊತ್ತವು ವರ್ಷದಿಂದ ವರ್ಷಕ್ಕೆ ಸಂಚಯಿತವಾಗುತ್ತಿದೆ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡುಬಂದಿದೆ.
‘ಪಂಚಾಯ್ತಿಗಳು ತಮ್ಮ ಸ್ವಂತ ವರಮಾನಗಳನ್ನು ಪರಿಪೂರ್ಣವಾಗಿ ವಸೂಲು ಮಾಡಲು ಕ್ರಮಕೈಗೊಂಡಿಲ್ಲ. ಸಂಪೂರ್ಣವಾಗಿ ಸರ್ಕಾರದ ಅನುದಾನಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿಗಳ ಸುಸ್ಥಿರ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ. ಇದು ಸಂಸ್ಥೆಗಳಲ್ಲಿನ ವೃತ್ತಿಪರತೆ ಮತ್ತು ದಕ್ಷತೆ ಜೊತೆಗೆ ಹೊಣೆಗಾರಿಕೆ ಇಲ್ಲದಿರುವುದನ್ನು ತೋರಿಸುತ್ತದೆ,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.

ತೆರಿಗೆ ಸಂಗ್ರಹಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಪಂಚಾಯ್ತಿಗಳು ಮ್ಯಾನುಯಲ್ ಮೂಲಕ ರಸೀದಿ ನೀಡುತ್ತಿವೆ. ಮತ್ತು ರದ್ದುಗೊಳಿಸಿರುವ ರಸೀದಿಗಳ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಹೀಗಾಗಿ ತೆರಿಗೆ ಪಾವತಿಯಲ್ಲಿ ದುರ್ಬಳಕೆ ಆಗಿದೆ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ.
2017ರಲ್ಲ ಸರ್ಕಾರವು ಹೊರಡಿಸಿದ್ದ ಸುತ್ತೋಲೆ ಪ್ರಕಾರ ( ಗ್ರಾಅಪ 11 ಗ್ರಾಪಸ 2016 ದಿನಾಂಕ 09-03-2017) ಮತ್ತು ಪಂಚಾಯತ್ರಾಜ್ ಅಧಿನಿಯಮದ ಪ್ರಕರಣ 200ರ ಅನ್ವಯ ಗ್ರಾಮ ಪಂಚಾಯ್ತಿಗಳು ತಮ್ಮ ಕಾರ್ಯಕ್ಷಮತೆಯಿಂದ ಹಿಂದಿನ ವರ್ಷಕ್ಕಿಂತ ಆ ಸಾಲಿನಲ್ಲಿ ತೆರಿಗೆ ಆದಾಯ, ತೆರಿಗೆಯೇತರ ಆದಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಸೂಲು ಮಾಡಬೇಕು. ಅಲ್ಲದೇ ತನ್ನ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡಿರಬೇಕು. ವಸೂಲಾಗಿಯಾಗಬೇಕಾಗಿರುವ ತೆರಿಗೆಯಲ್ಲಿ ಶೇ.80ಕ್ಕಿಂತ ಕಡಿಮೆ ವಸೂಲಿಯಾಗಿದ್ದರೇ ಹಣಕಾಸು ಆಯೋಗದಿಂದ ಬಿಡುಗಡೆಯಾಗುವ ಅನುದಾನದ ಮೇಲೆ ಕಡಿಮೆ ವಸೂಲಾತಿಯು ಪರಿಣಾಮ ಬೀರುತ್ತದೆ. ಅಲ್ಲದೇ ಪ್ರೋತ್ಸಾಹ ಧನದ ಬಿಡುಗಡಯಲ್ಲಿಯೂ ಕಡಿಮೆಯಾಗುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆಂತರಿಕ ಆದಾಯ ಜಮೆಯಾಗಿಲ್ಲ
ಕರ್ನಾಟಕ ಪಂಚಾಯತ್ರಾಜ್ ಆಯವ್ಯಯ ಮತ್ತು ಲೆಕ್ಕಪತ್ರ ನಿಯಮಗಳು 2006ರ ನಿಯಮ 19 ಮತ್ತು 25ರ ಅನ್ವಯ ಗ್ರಾಮ ಪಂಚಾಯ್ತಿಯಿಂದ ಸಂಗ್ರಹಿಸುವ ಆಸ್ತಿ ತೆರಿಗೆ ಮತ್ತು ಇತರೆ ಶುಲ್ಕಗಳನ್ನು ವಿಳಂಬವಿಲ್ಲದೇ ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇಧ 4 (ಎ) ಪ್ರಕಾರ 2 ದಿನಗಳ ಒಳಗಾಗಿ ಗ್ರಾಮ ಪಂಚಾಯ್ತಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಆದರೆ ಗ್ರಾಮ ಪಂಚಾಯ್ತಿಯು ವಸೂಲು ಮಾಡಿರುವ ತೆರಿಗೆ ಮತ್ತು ಶುಲ್ಕಗಳ ಮೊತ್ತವನ್ನು ಗ್ರಾಮ ಪಂಚಾಯ್ತಿಯ ನಿಧಿಗೆ ಜಮೆ ಮಾಡಿಲ್ಲ.

ಹೀಗಾಗಿ ಗ್ರಾಮ ಪಂಚಾಯ್ತಿಗಳ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಆರ್ಥಿಕ ಶಿಸ್ತು ಇಲ್ಲ. ಇಂತಹ ಹಲವು ಪ್ರಕರಣಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

13.07 ಕೋಟಿ ಎಲ್ಲಿದೆ?
ರಾಜ್ಯದ 27 ಜಿಲ್ಲೆಗಳಲ್ಲಿರುವ 1,478 ಗ್ರಾಮ ಪಂಚಾಯ್ತಿಗಳು 13.07 ಕೋಟಿಯಷ್ಟು ವಸೂಲಿ ಮಾಡಿದ್ದ ಆಂತರಿಕ ಆದಾಯವನ್ನು ಗ್ರಾಮ ಪಂಚಾಯ್ತಿಗಳಿಗೆ ಜಮೆಯನ್ನೇ ಮಾಡಿಲ್ಲ.
ಬೆಂಗಳೂರು ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಪಂಚಾಯ್ತಿಯಲ್ಲಿ 70.34 ಲಕ್ಷ ರು., ಆನೇಕಲ್ ತಾಲೂಕಿನ ಹೆನ್ನಾಗರ ಪಂಚಾಯ್ತಿಲ್ಲಿ 54.17 ಲಕ್ಷ ರು., ತುಮಕೂರು ಹೆಗ್ಗೆರೆ ಪಂಚಾಯ್ತಿಯ 22.01 ಲಕ್ಷ ರು., ಮಂಡ್ಯದ ಇಂಡುವಾಳು ಪಂಚಾಯ್ತಿ ಯಲ್ಲಿ 13.42 ಲಕ್ಷ ರು ಜಮೆಯಾಗಿಲ್ಲ.

ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಬಾಪೂಜಿ ಸೇವಾ ಕೇಂದ್ರಕ್ಕೆ ನೇರವಾಗಿ ಆನ್ ಲೈನ್ ಮೂಲಕ ಪಾವತಿ ಮಾಡಲಾಗಿದೆ. ಬಾಪೂಜಿ ಸೇವಾ ಕೇಂದ್ರದ ಬ್ಯಾಂಕ್ ಪಾಸ್ ಬುಕ್ ಶೀಟ್ನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ 2.41 ಕೋಟಿ ರು ಜಮೆಯಾಗಿದೆ. ಆದರೆ ಪಂಚತಂತ್ರ ತಂತ್ರಾಂಶದಲ್ಲಿ 2023-24ನೇ ಸಾಲಿನಲ್ಲಿ 2.98 ಕೋಟಿ ರು ಮೊತ್ತ ರಸೀದಿಗಳನ್ನು ಸೃಜಿಸಿದೆ. ಹೀಗಾಗಿ 54.17 ಲಕ್ಷ ರು ವ್ಯತ್ಯಾಸ ಕಂಡು ಬಂದಿದೆ.
ಅದೇ ರೀತಿ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2023ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ ಒಟ್ಟು 92.03 ಲಕ್ಷ ರು ಬದಲಾಗಿ 70.01 ಲಕ್ಷ ರು ಜಮೆ ಮಾಡಲಾಗಿದೆ. ಕರ್ನಾಟಕ ಪಂಚಾಯತ್ರಾಜ್ ಆಯವ್ಯಯ ಮತ್ತು ಆದಾಯಗಳ ಸಂಗ್ರಹಣೆ ಕುರಿತಾದ ಪರಿಶೀಲನಾ ಸಭೆಗಳನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಡೆಸಿಲ್ಲ. ಹೀಗಾಗಿ 22.01 ಲಕ್ಷ ರು. ಪಂಚಾಯ್ತಿಗೆ ಜಮೆಯಾಗಿಲ್ಲ. ಈ ಹಣವನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿದ್ದಾರೆ.
57 ಪಂಚಾಯ್ತಿಗಳಲ್ಲಿ ಹಣ ದುರುಪಯೋಗ
ಕರ್ನಾಟಕ ಪಂಚಾಯತ್ರಾಜ್ 2006ರ ನಿಯಮಗಳು 30(5) ರ ಅನ್ವಯ ನೀಡಲಾದ ರಸೀದಿಗಳ ಕಚೇರಿ ಪ್ರತಿಗಳನ್ನು ಆಧರಿಸಿ ರಿಜಿಸ್ಟರ್ನಲ್ಲಿ ಸಂಬಂಧಪಟ್ಟ ಕಾಲಂ ಅಡಿಯಲ್ಲಿ ವಸೂಲಾತಿಗಳನ್ನು ಅದೇ ದಿನವೇ ನಮೂದಿಸಬೇಕು. ಈ ದಾಖಲೆ ಪುಸ್ತಕಗಳನ್ನು ಕಚೇರಿ ಸಿಬ್ಬಂದಿಯೇ ನಿರ್ವಹಣೆ ಮಾಡಬೇಕು. ತೆರಿಗೆದಾರರಿಂದ ಹಣ ವಸೂಲು ಮಾಡುವ ವ್ಯಕ್ತಿಗೆ ಯಾವ ಸಂದರ್ಭದಲ್ಲಿಯೂ ಈ ರಿಜಿಸ್ಟರ್ ನೀಡಕೂಡದು. ಆಧರೆ ಗ್ರಾಮ ಪಂಚಾಯ್ತಿಯು ವಸೂಲಿ ಮಾಡಿದ ಮೊತ್ತವನ್ನು ಡಿಸಿಬಿ ವಹಿಯಲ್ಲಿ ಕಡಿಮೆ, ಹೆಚ್ಚು ನಮೂದಿಸಿ ಆ ಮೂಲಕ ಹಣ ದುರುಪಯೋಗ ಮಾಡಿರುವ ಪ್ರಕರಣಗಳು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡು ಬಂದಿದೆ.

ಸಂಬಂಧಿತ ವ್ಯಕ್ತಿಯು ಸಂಸ್ಥೆಗೆ ಬರಬೇಕಾದಂತಹ ಆದಾಯ, ವರಮಾನವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡಿದೆ. ಅಂತಹಹವರನ್ನು ಸೇವಾ ನಿಯಮಗಳಿ ಅನ್ವಯ ಗುರುತರ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಇದು ಸಂಸ್ಥೆಯ ಆಡಳಿತ ವೈಫಲ್ಯ ಮತ್ತು ಆರ್ಥಿಕ ಶಿಸ್ತು ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.
ಕೊಪ್ಪಳದ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮ ಪಂಚಾಯ್ತಿಯಲ್ಲಿ 3.1 ಲಕ್ಷ ರು., ಕೊಪಪ್ಳದ ಬಹುದ್ದೂರ ಬಂಡಿ ಪಂಚಾಯ್ತಿಯಲ್ಲಿ 2.97 ಲಕ್ಷ ರು., ಚಿಕ್ಕಬಳ್ಳಾಪುರ ಕುಪ್ಪಹಳ್ಳಿಯಲ್ಲಿ 2.48 ಲಕ್ಷ ರು, ಕೋಲಾರ ಮಾಲೂರಿನ ಚಿಕ್ಕ ಕುಂತೂರು ಪಂಚಾಯ್ತಿಯಲ್ಲಿ 1.94 ಲಕ್ಷ ರು ಹೆಚ್ಚು ಮೊತ್ತ ಹೊಂದಿದೆ.

ಕೋಲಾರ ಜಿಲ್ಲೆಯ ಮಾಲೂರ ತಾಲೂಕಿನ ಚಿಕ್ಕ ಕುಂತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2023ರ ಏಪ್ರಿಲ್ ತಿಂಗಳಿನಿಂದ 2024ರ ಮಾರ್ಚ್ವರೆಗೆ ಒಟ್ಟು 16.16 ಲಕ್ಷ ರು ತೆರಿಗೆ ವಸೂಲಿಯಾಗಿದೆ. ಆದರೆ ಪಂಚಾಯ್ತಿ ನಿಧಿಗೆ 14.22 ಲಕ್ಷ ರು ಮಾತ್ರ ಜಮೆಯಾಗಿದೆ. ವ್ಯತ್ಯಾಸದ ಮೊತ್ತ 1.94 ಲಕ್ಷ ರು ಇದೆ. ಅಲ್ಲದೇ ಈ 1.94 ಲಕ್ಷ ರು ಗಳನ್ನು ವಿಳಂಬವಾಗಿ ಜಮೆ ಮಾಡಲಾಗಿದೆ. ಹೀಗಾಗಿ ಈ ಮೊತ್ತವನ್ನು ತಾತ್ಕಾಲಿಕವಾಗಿ ದುರುಪಯೋಗಪಡಿಸಿಕೊಂಡಿರುವುದು ಲೆಕ್ಕ ಪರಿಶೋಧನೆಯಿಂದ ಕಂಡು ಬಂದಿದೆ.




